ಇದು ಕನ್ನಡದ್ದೇ ವ್ಯಾಕರಣ
ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 945
ಅಚ್ಚು: ಮೊದಲನೇ ಅಚ್ಚು, 2025
ಹೊರಪಡಿಕೆ: ಡಾ. ಡಿ. ಏನ್. ಶಂಕರ ಬಟ್
ವಿವರಗಳು
ಸುಮಾರು ಇಪ್ಪತ್ತಯ್ದು ವರ್ಶ್ಗಳಷ್ಟು ಹಿಂದೆ, ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕವನ್ನು ನಾನು ಬರೆದುದ್ದು, ಆ ಸಮಯದಲ್ಲಿ ಬಳಕೆಯಲ್ಲಿದ್ದ ಕನ್ನಡ ವ್ಯಾಕರಣಗಳೆಲ್ಲ ಸಂಸ್ಕುತ ಇಲ್ಲವೇ ಇಂಗ್ಲಿಶ್ ನಂತಹ ಬೇರೆ ನುಡಿಗಳ ವ್ಯಾಕರಣವನ್ನು ಕನ್ನಡಕ್ಕೆ ಅಳವಡಿಸುವ ಪ್ರಯತ್ನಗಳಾಗಿದ್ದುವಲ್ಲದೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಬರೆಯುವ ಪ್ರಯತ್ನಗಳಾಗಿರಲಿಲ್ಲ ಎಂಬುದನ್ನು ಆ ಪುಸ್ತಕದಲ್ಲಿ ಹಲವಾರು ಎತ್ತುಗೆಗೆಳ ಮೂಲಕ ತೋರಿಸಿಕೊಟ್ಟಿದ್ದೆ. ಇದಲ್ಲದೆ, ಆಮೇಲೆ ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಕನ್ನಡ ಬರಹದ ಸೊಲ್ಲರಿಮೆ ಎಂಬ ಹೆಸರಿನ ಒಟ್ಟು ಏಳು ಹೊತ್ತಗೆಗಳಲ್ಲಿ ಬರೆದು ಪ್ರಕಟಿಸಿದ್ದೆ.
ಇದೀಗ ಆ ಏಳು ಹೊತ್ತಗೆಗಳನ್ನು ಒಟ್ಟು ಸೇರಿಸಿ ಒಂದೇ ಹೊತ್ತಗೆಯಲ್ಲಿ ಕೊಡುತ್ತಿದ್ದೇನೆ. ಹೀಗೆ ಮಾಡುವಾಗ, ಅದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದೇನೆ. ಎತ್ತುಗೆಗೆ, ಸೊಲ್ಲರಿಮೆ ಎಂಬ ಪದದ ಬದಲು ಕನ್ನಡಿಗರಿಗೆ ಹೆಚ್ಚು ಪರಿಚಿತವಾಗಿರುವ ವ್ಯಾಕರಣ ಎಂಬ ಪದವನ್ನು ಮತ್ತು ಸೊಲ್ಲು ಎಂಬ ಪದದ ಬದಲು ವಾಕ್ಯ ಎಂಬ ಪದವನ್ನು ಬಳಸಿದ್ದೇನೆ. ಇದಲ್ಲದೆ ಬೇರೆಯೂ ಕೆಲವು ಮಾರ್ಪಾಡುಗಳನ್ನು ಮಾಡಿದ್ದೇನೆ.
ಈ ಪುಸ್ತಕದಲ್ಲಿ ಕನ್ನಡದ್ದೇ ಆದ ವ್ಯಾಕರಣವನ್ನು ಒಟ್ಟು ಹತ್ತೊಂಬತ್ತು ಪಸುಗೆಗಳಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಪದಗಳನ್ನು ಮತ್ತು ಪದರೂಪಗಳನ್ನು ಹೇಗೆ ಕಟ್ಟಲಾಗುತ್ತದೆ, ಮತ್ತು ವಾಕ್ಯಗಳನ್ನು ಕಟ್ಟುವಲ್ಲಿ ಹೆಸರುಪದ (ನಾಮಪದ) ಮತ್ತು ಎಸಕಪದ (ಕ್ರಿಯಾಪದ)ಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಇದಲ್ಲದೆ, ಕನ್ನಡದಲ್ಲಿ ಬಳಕೆಯಾಗುವ ಹಲವು ಬಗೆಯ ವಾಕ್ಯಗಳ ನಡುವಿನ ಸಂಬಂದ ಎಂತಹದು, ಒಂದು ವಾಕ್ಯದಲ್ಲಿ ಇನ್ನೊಂದು ವಾಕ್ಯವನ್ನು ಇರಿಸುವ ಬಗೆ ಹೇಗೆ, ಮತ್ತು ಎರಡು ಇಲ್ಲವೇ ಹೆಚ್ಚು ವಾಕ್ಯಗಳನ್ನು ಜೋಡಿಸುವ ಬಗೆ ಹೇಗೆ ಎಂಬುದನ್ನೂ ಇದರಲ್ಲಿ ವಿವರಿಸಲಾಗಿದೆ.
ಇದಲ್ಲದೆ, ಕನ್ನಡದ ವಾಕ್ಯಗಳಲ್ಲಿ ಆಡುಪದ ಮತ್ತು ತೋರುಪದಗಳನ್ನು (ಸತ್ವನಾಮಗಳನ್ನು ಹೇಗೆ ಬಳಸಲಾಗುತ್ತದೆ, ಮತ್ತು ಕನ್ನಡದಲ್ಲಿ ಬಳಕೆಯಾಗುವ ಎಣಿಕೆಪದಗಳ ಒಳರಚನೆ ಎಂತಹದು ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಈ ಎಲ್ಲಾ ಕಡೆಗಳಲ್ಲೂ ಕನ್ನಡದ್ದೇ ಆದ ವ್ಯಾಕರಣ ಎಂತಹದು ಎಂಬುದನ್ನು ಈ ಪುಸ್ತಕ ತೋರಿಸಿಕೊಡುವುದರಿಂದ ಇದಕ್ಕೆ ಇದು ಕನ್ನಡದ್ದೇ ವ್ಯಾಕರಣ ಎಂಬ ಹೆಸರನ್ನು ಕೊಡಲಾಗಿದೆ.
ಕನ್ನಡ ಬರಹ ಮೇಲ್ವರಲ್ಲದವರದಾಗಿ ಮಾತ್ರವೇ ಉಳಿಯದೆ ಎಲ್ಲರದಾಗಬೇಕು, ಮತ್ತು ಹಾಗಾಗುವಂತೆ ಅದರಲ್ಲಿ ಕೆಲವು ಮಾರಾಡುಗಳನ್ನು ಮಾಡಿಕೊಳ್ಳಬೇಕು ಎಂಬುದು ನನ್ನ ನಿಲುವು. ಇದಕ್ಕೆ ನೆರವಾಗುವಂತೆ, ಕನ್ನಡ ಬರಹದಿಂದ ಕನ್ನಡಕ್ಕೆ ಬೇಕಿಲ್ಲದ, ಮತ್ತು ಸಂಸ್ಕುತ ಪದಗಳನ್ನು ಸಂಸ್ಕೃುತದಲ್ಲಿರುವ ಹಾಗೆಯೇ ಬರೆಯಲು ಮಾತ್ರವೇ ಬೇಕಾಗುವ, ಹಲವು ಬರಿಗೆ(ಅಕ್ಷರ)ಗಳನ್ನು ಬಳಸದಿರಬೇಕು ಎಂಬುದೂ ನನ್ನ ನಿಲುವು. ‘ಹೊಸಬರಹ’ವೆಂದು ಕರೆದಿರುವ ಈ ಬಗೆಯ ಬರಹವನ್ನು ನಾನು ನನ್ನ ಇತ್ತೀಚೆಗಿನ ಬೇರೆ ಹೊತ್ತಗೆಗಳ ಹಾಗೆ ಈ ಹೊತ್ತಗೆಯಲ್ಲೂ ಬಳಸಿದ್ದೇನೆ
