Posts Tagged ‘ನುಡಿಯರಿಮೆ’

ಅರಿಮೆಯ ಪದಗಳಿಗೆ ಕನ್ನಡವೇ ಮೇಲು

ನುಡಿಯರಿಮೆಯ ಇಣುಕುನೋಟ – 11

ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಹೆಚ್ಚಿನ ಅರಿವಿಗರೂ ಸಂಸ್ಕ್ರುತ ಪದಗಳನ್ನೇ ಆರಿಸಿಕೊಳ್ಳುತ್ತಾರೆ; ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವುದು ತುಂಬಾ ಅಪರೂಪ.

ಈ ಕಾರಣಕ್ಕಾಗಿ, ಕನ್ನಡದವೆಂದು ಹೇಳಲಾಗುವ ಹೆಚ್ಚಿನ ಅರಿಮೆಯ ಪದಕೋಶಗಳಲ್ಲೂ ಇವತ್ತು ನೂರಕ್ಕೆ ಎಂಬತ್ತರಶ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕ್ರುತ ಪದಗಳನ್ನು ಕಾಣಬಹುದು. ಕನ್ನಡ ಅರಿವಿಗರ ಈ ನಿಲುವಿನಿಂದಾಗಿ, ಇವತ್ತು ಕನ್ನಡದ ಅರಿಮೆಯ ಬರಹಗಳು ಸಂಸ್ಕ್ರುತ ಪದಗಳಿಂದ ತುಂಬಿ ತುಳುಕುತ್ತಿವೆ.

ಹಿಂದಿನ ಕಾಲದಲ್ಲಿ ಕನ್ನಡದಲ್ಲಿ ಬರೆಯುವವರಿಗೆ ಬೇಕಾಗಿರುವ ಹೆಚ್ಚಿನ ತಿಳಿವುಗಳೂ ಸಂಸ್ಕ್ರುತದಲ್ಲಿದ್ದುವು; ಹಾಗಾಗಿ, ಅವನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಅರಿಮೆಯ ಪದಗಳಲ್ಲಿ ಹೆಚ್ಚಿನವನ್ನೂ ಸಂಸ್ಕ್ರುತದಿಂದಲೇನೇ ಎರವಲು ಪಡೆಯಲಾಗುತ್ತಿತ್ತು, ಮತ್ತು ಆವತ್ತಿಗೆ ಅದು ಸರಿಯಾದ ದಾರಿಯಾಗಿತ್ತು.

ಆದರೆ, ಇವತ್ತು ಅರಿಮೆಯ (ವಿಜ್ನಾನದ) ಬರಹಗಾರರಿಗೆ ಬೇಕಾಗುವ ಹೆಚ್ಚಿನ ತಿಳಿವುಗಳೂ ಇಂಗ್ಲಿಶ್‌ನಲ್ಲಿವೆ; ಹಾಗಾಗಿ, ಅವನ್ನು ಇಂಗ್ಲಿಶ್‌ನಿಂದ ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಪದಗಳನ್ನು ಇಂಗ್ಲಿಶ್‌ನಿಂದ ಎರವಲು ಪಡೆಯುವುದು, ಇಲ್ಲವೇ ಕನ್ನಡದಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳುವುದು ಎಂಬ ಎರಡು ದಾರಿಗಳು ಇವತ್ತಿನ ಮಟ್ಟಿಗೆ ಸರಿಯಾದುವು.

ಹೀಗಿದ್ದರೂ, ಕನ್ನಡದ ಬರಹಗಾರರು ಇವತ್ತಿಗೂ ಅರಿಮೆಯ ಪದಗಳಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಹಳೆಯ ಸಂಪ್ರದಾಯವನ್ನೇ ಮುಂದುವರಿಸುತ್ತಿದ್ದಾರೆ; ತಮಗೆ ಬೇಕಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲವಾದರೆ, ಹೊಸ ಪದಗಳನ್ನು ಸಂಸ್ಕ್ರುತದಲ್ಲೇನೇ ಉಂಟುಮಾಡಿ ಕನ್ನಡಕ್ಕೆ ತರುವಂತಹ ಇನ್ನೊಂದು ವಿಚಿತ್ರವಾದ ಸಂಪ್ರದಾಯವನ್ನೂ ಅವರು ಹುಟ್ಟುಹಾಕಿಕೊಂಡಿದ್ದಾರೆ.

ಹೀಗೆ ಮಾಡುತ್ತಿರುವುದಕ್ಕಾಗಿ, ಅವರು ಕೆಲವು ನೆವಗಳನ್ನೂ ಕೊಡುತ್ತಿದ್ದಾರೆ: ಇಂಗ್ಲಿಶ್‌ನಲ್ಲಿ ಅರಿಮೆಯ ಪದಗಳಾಗಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸುವ ಹಾಗೆ ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸಲಾಗುತ್ತದೆಯೆಂಬುದು ಇವುಗಳಲ್ಲೊಂದು.

ಆದರೆ, ಇಂಗ್ಲಿಶ್‌ಗೆ ಲ್ಯಾಟಿನ್ ಇರುವ ಹಾಗೆ ಕನ್ನಡಕ್ಕೆ ಸಂಸ್ಕ್ರುತ ಅಲ್ಲ; ಯಾಕೆಂದರೆ, ಇಂಗ್ಲಿಶ್ ಮತ್ತು ಲ್ಯಾಟಿನ್‌ಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ, ಮತ್ತು ಕನ್ನಡ ಮತ್ತು ಸಂಸ್ಕ್ರುತಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಇಂಗ್ಲಿಶ್‌ಗೆ ಬೇಕಾಗುವ ಪದಗಳನ್ನು ಲ್ಯಾಟಿನ್‌ನಲ್ಲಿ ಉಂಟುಮಾಡಿದಾಗ ಹೆಚ್ಚಿನ ತೊಂದರೆಗಳೇನೂ ಎದುರಾಗುವುದಿಲ್ಲ; ಆದರೆ, ಕನ್ನಡಕ್ಕೆ ಬೇಕಾಗುವ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿದಾಗ ಹಲವು ತೊಂದರೆಗಳು ಎದುರಾಗುತ್ತವೆ:

ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ನವ್ನ್, ವರ‍್ಬ್, ಮತ್ತು ಎಜಕ್ಟಿವ್ ಎಂಬುದಾಗಿ ಮೂರು ಬಗೆಯ ಪದಗಳಿವೆ; ಕನ್ನಡದಲ್ಲೂ ಇಂತಹವೇ ಮೂರು ಬಗೆಯ ಪದಗಳಿವೆ. ಆದರೆ, ಸಂಸ್ಕ್ರುತದಲ್ಲಿ ಮುಕ್ಯವಾಗಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ಬಗೆಯ ಪದಗಳು ಮಾತ್ರ ಇವೆ.

ಹಾಗಾಗಿ, ಇಂಗ್ಲಿಶ್‌ನ ಅರಿಮೆಯ ಪದಗಳಿಗೆ ಸಮನಾದ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡಕ್ಕೆ ತರಹೋದರೆ, ನವ್ನ್ ಮತ್ತು ಎಜಕ್ಟಿವ್‌ಗಳ ನಡುವಿನ ವ್ಯತ್ಯಾಸವನ್ನು ಅವುಗಳಲ್ಲಿ ಸರಿಯಾಗಿ ತೋರಿಸಲು ಬರುವುದಿಲ್ಲ. ಈ ತೊಂದರೆಯಿಂದಾಗಿ, ಇವತ್ತು ಬಳಕೆಯಲ್ಲಿರುವ ಅರಿಮೆಯ ಪದಕೋಶಗಳಲ್ಲಿ ತುಂಬಾ ಗೊಂದಲವುಂಟಾಗಿರುವುದನ್ನು ಕಾಣಬಹುದು.

ಅರಿಮೆಯ ಬರಹಗಳಲ್ಲಿ ಕನ್ನಡ ಪದಗಳನ್ನು ಬಳಸಿದರೆ, ಅವು ಸಂಸ್ಕ್ರುತ ಪದಗಳ ಹಾಗೆ ಕಚಿತವಾದ ಹುರುಳನ್ನು ಕೊಡಲಾರವು ಎಂಬುದು ಇನ್ನೊಂದು ನೆವ; ಆದರೆ, ಸಂಸ್ಕ್ರುತ ಪದಗಳು ಕನ್ನಡದಲ್ಲಿ ಉಂಟುಮಾಡುತ್ತಿರುವ ಮೇಲಿನ ಗೊಂದಲವೇ ಇದನ್ನು ತಳ್ಳಿಹಾಕುತ್ತದೆ.

ಇವತ್ತು ಇಂಗ್ಲಿಶ್‌ನಲ್ಲಿ ಕಂಪ್ಯೂಟರ್‌ಗೆ ಸಂಬಂದಿಸಿದ ಹಲವು ಅರಿಮೆಯ ಪದಗಳನ್ನು ದಿನಬಳಕೆಯ ಪದಗಳನ್ನು ಬಳಸಿಯೇ ಉಂಟುಮಾಡಲಾಗುತ್ತಿದೆ; ಮವ್ಸ್ ‘ಇಲಿ’, ವಿಂಡೋಸ್ ‘ಕಿಟಿಕಿ’, ಟ್ರೀ ‘ಮರ’, ವೆಬ್ ‘ಬಲೆ’ ಎಂಬಂತಹ ಈ ಪದಗಳಿಂದಾಗಿ ಗೊಂದಲವೇನೂ ಉಂಟಾದ ಹಾಗೆ ಕಾಣಿಸುವುದಿಲ್ಲ.

ಹಾಗಾಗಿ, ಕನ್ನಡದ ಅರಿಮೆಯ ಪದಗಳಿಗಾಗಿ ಸಂಸ್ಕ್ರುತದ ಮೊರೆಹೊಗುವ ಇವತ್ತಿನ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಒಳ್ಳೆಯದು. ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಕನ್ನಡ ಪದಗಳ ಸೊಗಡನ್ನು ಕೆಡಿಸದಂತಹ ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಬಹುದು, ಮತ್ತು ಅದನ್ನು ಕೆಡಿಸುವಂತಹ ಪದಗಳ ಬದಲು ಕನ್ನಡದವೇ ಆದ ಪದಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಬಹುದು; ಇದೇ ಕನ್ನಡಕ್ಕೆ ಸರಿಯಾದ ದಾರಿ.

ಇಲ್ಲಿ ಇನ್ನೊಂದು ವಿಶಯವನ್ನೂ ಒತ್ತಿ ಹೇಳಬೇಕಾಗಿದೆ: ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಎರಡು ಮುಕ್ಯ ಗುರಿಗಳಿಗಾಗಿ ನಾವು ಅವುಗಳಲ್ಲಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಬಳಸಲು ಹೋಗುತ್ತೇವೆ: ಹಾಗೆ ಮಾಡುವ ಮೂಲಕ ಬರಹ ಏನನ್ನು ತಿಳಿಸುತ್ತದೆ ಎಂಬುದು ಕನ್ನಡಿಗರಿಗೆ ಸುಲಬವಾಗಿ ತಿಳಿಯುವಂತಾಗಬೇಕು ಎಂಬುದೊಂದು, ಮತ್ತು ಕನ್ನಡದ ಸೊಗಡು ಕೆಡದಂತೆ ಉಳಿಯಬೇಕು ಎಂಬುದಿನ್ನೊಂದು.

ಇತ್ತೀಚೆಗೆ ಕಂಪ್ಯೂಟರ್‌ಗಳಿಗೆ ಸಂಬಂದಿಸಿದ ಕೆಲವು ಕಯ್ಪಿಡಿಗಳಲ್ಲಿ ಹೆಚ್ಚಿನ ಇಂಗ್ಲಿಶ್ ಪದಗಳನ್ನೂ ಹಾಗೆಯೇ ಉಳಿಸಿರುವುದನ್ನು ಕಾಣಬಹುದು. ಇಂಗ್ಲಿಶ್ ಪದಗಳ ಹುರುಳು ಗೊತ್ತಿರುವವರು ಮಾತ್ರ ಅವನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಅವುಗಳಲ್ಲಿ ಕನ್ನಡದ ಸೊಗಡು ಪೂರ‍್ತಿ ಕೆಟ್ಟುಹೋಗಿರುತ್ತದೆ; ಎಂದರೆ, ಮೇಲಿನ ಎರಡು ಗುರಿಗಳನ್ನೂ ಅವು ತಲಪುವುದೇ ಇಲ್ಲ.

ಇಂತಹ ಕಯ್ಪಿಡಿಗಳಲ್ಲಿ ಬರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸಿದರೂ ಪರಿಣಾಮ ಒಂದೇ: ಅವನ್ನು ಓದಿ ತಿಳಿಯಲು ಇಂಗ್ಲಿಶ್ ಪದಗಳ ಬದಲು ಸಂಸ್ಕ್ರುತ ಪದಗಳ ಹುರುಳು ಗೊತ್ತಿರಬೇಕು, ಮತ್ತು ಅವು ಕನ್ನಡದ ಸೊಗಡನ್ನು ಕೆಡಿಸದಿರುವುದಿಲ್ಲ. ಎಂದರೆ, ಇಂತಹ ಬರಹಗಳೂ ಮೇಲಿನ ಎರಡು ಗುರಿಗಳನ್ನು ತಲಪುವುದೇ ಇಲ್ಲ.

ಹಲವು ಹೆಚ್ಚಿನ ಸಂಸ್ಕ್ರುತ ಪದಗಳ ಹುರುಳುಗಳನ್ನು ಕಲಿಯುವುದಕ್ಕಿಂತಲೂ ಮೂಲ ಬರಹದಲ್ಲಿದ್ದ ಇಂಗ್ಲಿಶ್ ಪದಗಳ ಹುರುಳುಗಳನ್ನು ಕಲಿಯುವುದೇ ಕನ್ನಡಿಗರ ಮಟ್ಟಿಗೆ ಒಳ್ಳೆಯದಲ್ಲವೇ? ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಬೇಕೆಂದಿರುವವರಿಗೆ ಇಂಗ್ಲಿಶ್ ಪದಗಳ ತಿಳಿವು ನೆರವಾಗಬಲ್ಲುದು; ಆದರೆ, ಸಂಸ್ಕ್ರುತ ಪದಗಳ ತಿಳಿವು ಯಾವ ನೆರವನ್ನೂ ನೀಡಲಾರವು.

ಅರಿಮೆಯ ಬರಹಗಳಿಂದ ತಿಳಿವನ್ನು ಪಡೆಯುವುದು ಮಾತ್ರವಲ್ಲದೆ, ಅದನ್ನು ಒರೆಗೆ ಹಚ್ಚುವ ಮತ್ತು ಅವುಗಳಲ್ಲಿಲ್ಲದ ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸವನ್ನೂ ನಾವಿಂದು ನಡೆಸಬೇಕಾಗಿದೆ. ಹೆಚ್ಚು ಹೆಚ್ಚು ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸಿರುವ ಬರಹಗಳನ್ನು ಕಶ್ಟಪಟ್ಟು ಅರಿಯುವುದರಲ್ಲಿಯೇ ನಮ್ಮ ಸಮಯವೆಲ್ಲ ಕಳೆದುಹೋಗುತ್ತದೆ. ಅವನ್ನು ಒರೆಗೆ ಹಚ್ಚುವ ಮತ್ತು ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸದಲ್ಲೂ ನಮ್ಮ ಕಲಿವಿಗರು ತೊಡಗಬೇಕಿದ್ದಲ್ಲಿ, ಅರಿಮೆಯ ಪದಗಳಲ್ಲಿ ಹೆಚ್ಚಿನವೂ ಕನ್ನಡದವೇ ಆಗಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಓದುವ ಹಾಗೆಯೇ ಬರೆಯುವುದು

ನುಡಿಯರಿಮೆಯ ಇಣುಕುನೋಟ – 10

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ ಎಲ್ಲರೂ ತಮಗೆ ಕುಶಿಬಂದ ಹಾಗೆ ಬರೆಯಬಹುದು ಎಂದು ಹೇಳಿದ ಹಾಗಾಗುವುದಿಲ್ಲ; ಅಂತಹ ಪ್ರತಿಕ್ರಿಯೆ ಬಾರದಂತೆ ನಾನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಬೇಕು ಎಂಬುದಾಗಿ ಬರೆದಿದ್ದೆ. ಈ ಪದಗಳನ್ನು ಇವತ್ತು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಿದ್ದಾರೆ ಎಂಬುದನ್ನು ತಿಳಿವಿಗರು ಕಂಡುಹಿಡಿಯಬೇಕು, ಮತ್ತು ಅದಕ್ಕೆ ಅನುಸಾರವಾಗಿ, ಅವನ್ನು ಹೇಗೆ ಬರೆಯಬೇಕು ಎಂಬುದನ್ನು ತೀರ‍್ಮಾನಿಸಬೇಕು.

ಬರಹದ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ, ಮತ್ತು ಬರಹ ರೂಪದಲ್ಲಿರುವ ಇನ್ನೊಬ್ಬರ ಅನಿಸಿಕೆಗಳನ್ನು ಓದಿನ ಮೂಲಕ ತಿಳಿದುಕೊಳ್ಳುತ್ತೇವೆ. ಈ ಎರಡು ಕೆಲಸಗಳೂ ಸರಿಯಾಗಿ ನಡೆಯಬೇಕಿದ್ದಲ್ಲಿ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವ ಮತ್ತು ಓದುವ ಕೆಲಸಗಳನ್ನು ನಡೆಸಬೇಕಾಗುತ್ತದೆ. ಈ ಕೆಲಸಗಳನ್ನು ಇವತ್ತು ಶಾಲೆಗಳಲ್ಲಿ ಕಲಿಸಲಾಗುತ್ತದೆಯಾದ ಕಾರಣ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವಂತೆ ಮತ್ತು ಓದುವಂತೆ ಮಾಡುವುದು ತೊಡಕಿನ ಕೆಲಸವೇನಲ್ಲ.

ಶಕಾರವನ್ನು ಹೆಚ್ಚಿನ ಕನ್ನಡಿಗರೂ ಶಕಾರವಾಗಿಯೇ ಓದುತ್ತಾರಲ್ಲದೆ ಸಕಾರವಾಗಿ ಬದಲಾಯಿಸಿ ಓದುವುದಿಲ್ಲ. ಆದರೆ, ಷಕಾರವನ್ನು ಹೆಚ್ಚಿನವರೂ ಶಕಾರವಾಗಿ ಬದಲಾಯಿಸಿ ಓದುತ್ತಾರೆ. ಹಾಗಾಗಿ, ಸಂಸ್ಕ್ರುತ ಎರವಲುಗಳಲ್ಲಿ ಬರುವ ಷಕಾರವನ್ನು ಶಕಾರವಾಗಿ ಬದಲಾಯಿಸಿ ಬರೆಯಬೇಕು, ಮತ್ತು ಶಕಾರವನ್ನು ಹಾಗೆಯೇ ಉಳಿಸಬೇಕು ಎಂಬ ತೀರ‍್ಮಾನಕ್ಕೆ ಬರಬೇಕಾಗುತ್ತದೆ.

ಇದೇ ರೀತಿಯಲ್ಲಿ, ಋಕಾರ, ಮಹಾಪ್ರಾಣ, ವಿಸರ‍್ಗ ಮೊದಲಾದ ಬೇರೆ ಕೆಲವು ಬರಿಗೆಗಳ ವಿಶಯದಲ್ಲೂ ಹೆಚ್ಚಿನ ಕನ್ನಡಿಗರ ಓದು ಹೇಗಿದೆಯೆಂಬುದನ್ನು ಕಂಡುಹಿಡಿದು, ಅದಕ್ಕನುಸಾರವಾಗಿ ಬರವಣಿಗೆಯನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು, ಮತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು.

ಹಳೆಗನ್ನಡದ ಱಕಾರ ಮತ್ತು ೞಕಾರಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಿ, ಹೊಸಗನ್ನಡವನ್ನು ಬರಹದಲ್ಲಿ ಬಳಸಲು ತೊಡಗಿದ ಕಾಲದಲ್ಲಿ ಅವನ್ನು ರಕಾರ ಮತ್ತು ಳಕಾರಗಳಾಗಿ ಬದಲಾಯಿಸಿ ಬರೆಯಲು ತೊಡಗಲಾಯಿತು. ಈ ಮಾರ‍್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು. ಸಂಸ್ಕ್ರುತ ಎರವಲುಗಳಲ್ಲಿ ಬರುವ ಬರಿಗೆಗಳನ್ನು ಓದುವ ಹಾಗೆ ಬರೆಯುವಂತೆ ಮಾರ‍್ಪಡಿಸುವುದೂ ಇಂತಹದೇ ಒಂದು ಕೆಲಸ ಎಂಬುದನ್ನು ಇಲ್ಲಿ ಗಮನಿಸಬೇಕು.

ಇಶ್ಟರ ವರೆಗೆ ಈ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುತ್ತಿದ್ದುದಕ್ಕೆ ಎರಡು ಮುಕ್ಯ ಕಾರಣಗಳಿದ್ದುವು: ಹಿಂದಿನ ಕಾಲದಲ್ಲಿ ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದವರೆಲ್ಲ ಅದನ್ನು ಸಂಸ್ಕ್ರುತದಲ್ಲಿ ಬರೆದಿರಿಸುತ್ತಿದ್ದರು; ಹಾಗಾಗಿ, ಯಾವುದೇ ಒಂದು ವಿಶಯದಲ್ಲಿ ಹೊಸ ತಿಳಿವನ್ನು ಪಡೆಯಬೇಕಿದ್ದರೂ ಸಂಸ್ಕ್ರುತದ ಮೊರೆಹೊಗಬೇಕಾಗಿತ್ತು.

ಇದರಿಂದಾಗಿ ಸಂಸ್ಕ್ರುತ ಬರಹಕ್ಕೆ ಒಂದು ಬಗೆಯ ಮೇಲ್ಮೆ ಬಂದಿತ್ತು; ಅದರ ಪದಗಳನ್ನು ಕನ್ನಡದಲ್ಲಿಯೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವುದರಿಂದ, ಮುಂದೆ ಸಂಸ್ಕ್ರುತ ಬರಹಗಳನ್ನು ಓದಲು ಕಲಿಯುವ ಕೆಲಸ ಕನ್ನಡಿಗರಿಗೆ ಸುಲಬವಾಗಬಹುದಾಗಿತ್ತು. ಕನ್ನಡ ಓದಿನ ಕಲಿಕೆ ಮುಂದೆ ನಡೆಸಲೇಬೇಕಾಗಿದ್ದ ಸಂಸ್ಕ್ರುತ ಓದಿಗೆ ಒಂದು ಮೆಟ್ಟಲಾಗಬಹುದಾಗಿತ್ತು. ಇದು ಒಂದು ಕಾರಣ.

ಆದರೆ, ಇವತ್ತು ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದಿರುವವರು ಯಾರೂ ಅದನ್ನು ಸಂಸ್ಕ್ರುತದಲ್ಲಿ ಬರೆಯಲು ಹೋಗುವುದಿಲ್ಲ; ಹಾಗಾಗಿ, ಹಿಂದಿನ ಕಾಲದಲ್ಲಿ ಅದಕ್ಕಿದ್ದ ಮೇಲ್ಮೆ ಇಂದು ಉಳಿದಿಲ್ಲ, ಮತ್ತು ಅದರ ಪದಗಳನ್ನು ಅದರ ಬರಹಗಳಲ್ಲಿರುವ ಹಾಗೆ ಬರೆಯಲು ಕಲಿಯುವ ಅವಶ್ಯಕತೆಯೂ ಇವತ್ತು ಕನ್ನಡಿಗರಿಗಿಲ್ಲ.

ಹಿಂದಿನ ಕಾಲದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸವನ್ನು ಮುಕ್ಯವಾಗಿ ಉತ್ತರದಿಂದ ವಲಸೆಬಂದ ಮೇಲ್ವರ‍್ಗದ ಜನರು ನಡೆಸುತ್ತಿದ್ದರು; ಆರ‍್ಯರಾಗಿದ್ದ ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಆದರ ಮತ್ತು ಪೂಜ್ಯಬಾವಗಳಿದ್ದುವು. ಹಾಗಾಗಿ, ಅದರ ಪದಗಳನ್ನು ಮಾರ‍್ಪಡಿಸದೆ ಉಳಿಸುವುದು ಅವರ ಮಟ್ಟಿಗೆ ಅವಶ್ಯವಾಗಿತ್ತು. ಇದು ಇನ್ನೊಂದು ಕಾರಣ.

ಆದರೆ, ಇವತ್ತು ಎಲ್ಲಾ ವರ‍್ಗಗಳಿಗೆ ಸೇರಿದ ಕನ್ನಡಿಗರೂ ಕನ್ನಡ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಇವರಲ್ಲಿ ಹೆಚ್ಚಿನವರೂ ದ್ರಾವಿಡ ಮೂಲದವರಾಗಿದ್ದು, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಮಾರ‍್ಪಡಿಸದೆ ಉಳಿಸಿಕೊಳ್ಳುವುದು ಅಂತಹ ಒಂದು ಪೂಜ್ಯವಾದ ವಿಶಯವೇ ಅಲ್ಲ; ಅದರಿಂದ ಅವರಿಗೆ ಬೇರೆ ಪ್ರಯೋಜನಗಳೂ ದೊರಕುವುದಿಲ್ಲ. ಹಾಗಾಗಿ, ಸಂಸ್ಕ್ರುತ ಎರವಲುಗಳನ್ನು ಕನ್ನಡದ ಸೊಗಡನ್ನು ಕೆಡಿಸದಂತೆ ಮಾರ‍್ಪಡಿಸುವುದಕ್ಕೆ ಹೆಚ್ಚಿನ ಕನ್ನಡಿಗರಿಂದಲೂ ವಿರೋದ ಬರಲಾರದು.

ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಯಾವ ನುಡಿಯಲ್ಲೂ ಆ ನುಡಿಯಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ; ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಸಂಸ್ಕ್ರುತ ಇಲ್ಲವೇ ಪ್ರಾಕ್ರುತ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯನ್ನು ಕನ್ನಡದಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಸಂಸ್ಕ್ರುತದ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಇದೇ ರೀತಿಯಲ್ಲಿ, ಅರೇಬಿಕ್ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಲಿಪಿಯನ್ನು ಟರ‍್ಕಿಶ್‌ನಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಅರೇಬಿಕ್ ಎರವಲುಗಳನ್ನು ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಅರೇಬಿಕ್ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಆದರೆ, ಎಲ್ಲಾ ನುಡಿಗಳೂ ಈ ರೀತಿ ಬೇರೊಂದು ನುಡಿಯ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವಾಗ ಆ ನುಡಿಯ ಪದಗಳನ್ನು ಅದರಲ್ಲಿರುವಂತೆ ಬರೆಯಲು ಬೇಕಾಗುವ ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಿಲ್ಲ; ಎತ್ತುಗೆಗಾಗಿ, ನಾಗರಿ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸುವಾಗ, ಷಕಾರ, ಋಕಾರ, ಹಲವು ಬಗೆಯ ಒತ್ತುಬರಿಗೆಗಳು ಮೊದಲಾದುವನ್ನು ಉಳಿಸಿಕೊಂಡಿಲ್ಲ; ಈ ಕಾರಣಕ್ಕಾಗಿ, ಸಂಸ್ಕ್ರುತ ಎರವಲು ಪದಗಳನ್ನು ಇವತ್ತು ಪಂಜಾಬಿ ಬರಹದಲ್ಲಿ ಓದುವ ಹಾಗೆ ಬರೆಯಲಾಗುತ್ತದೆಯಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.

ಮಲಯಾಳ ಬರಹದಲ್ಲೂ ಮೊದಲಿಗೆ ಮಹಾಪ್ರಾಣಾಕ್ಶರಗಳು, ಗಜಡದಬ ಮೊದಲಾದ ಆ ನುಡಿಗೆ ಬೇಡದಿರುವ ಹಲವು ಬರಿಗೆಗಳು ಇರಲಿಲ್ಲ; ಸಂಸ್ಕ್ರುತ ಬರಹಗಳನ್ನು ಬರೆಯಲು, ಮತ್ತು ಕೆಲವೊಮ್ಮೆ ಸಂಸ್ಕ್ರುತ ಪದಗಳನ್ನು ಮಲಯಾಳ ಬರಹಗಳಲ್ಲಿ ಬರೆಯಲು ಆ ಸಮಯದಲ್ಲಿ ಗ್ರಂತಲಿಪಿಯೆಂಬ ಬೇರೆಯೇ ಒಂದು ಲಿಪಿಯನ್ನು ಬಳಸಲಾಗುತ್ತಿತ್ತು.

ಆದರೆ, ಹದಿನೇಳನೇ ಶತಮಾನಕ್ಕಾಗುವಾಗ, ಮಲಯಾಳ ಸಾಹಿತ್ಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು; ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಒಲವಿದ್ದುದರಿಂದ, ಮತ್ತು ಇವರ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಪದಗಳು ಬಳಕೆಯಾಗುತ್ತಿದ್ದುದರಿಂದ, ಇವರು ತಮ್ಮ ಮಲಯಾಳ ಬರಹಗಳಲ್ಲೂ ಗ್ರಂತ ಲಿಪಿಯನ್ನೇ ಬಳಸಲು ತೊಡಗಿದರು. ಇದರಿಂದಾಗಿ, ಇವತ್ತಿನ ಮಲಯಾಳ ಬರಹ ಕನ್ನಡ ಬರಹದ ಹಾಗೆಯೇ ಅನವಶ್ಯಕವಾಗಿ ತೊಡಕಿನದಾಗಿದೆ.

ಎಲ್ಲಾ ಜನರೂ ಬರಹಬಲ್ಲವರಾಗಬೇಕಿರುವ ಇವತ್ತಿನ ದಿನಗಳಲ್ಲಿ ಈ ರೀತಿ ಒಂದು ನುಡಿಯ ಬರವಣಿಗೆಗೆ ಅವಶ್ಯವಿಲ್ಲದ ಬರಿಗೆಗಳನ್ನು ಎರವಲು ಪದಗಳ ಬರವಣಿಗೆಗಾಗಿ ಉಳಿಸಿಕೊಳ್ಳುವುದು ಜಾಣತನವಲ್ಲ; ಇದನ್ನು ಮನಗಂಡ ತಿಳಿವಿಗರು ಟರ‍್ಕಿ, ಇಂಡೊನೇಶಿಯಾ, ಮಲಯೇಶಿಯಾ ಮೊದಲಾದ ನಾಡುಗಳಲ್ಲಿ ಅರೇಬಿಕ್ ಮೂಲದ ಲಿಪಿಯನ್ನೇ ಬಿಟ್ಟುಕೊಟ್ಟು ರೋಮನ್ ಮೂಲದ ಲಿಪಿಯನ್ನು ತಮ್ಮ ಬರಹಕ್ಕೆ ಅಳವಡಿಸಿಕೊಂಡಿದ್ದಾರೆ.

ಕೊರಿಯಾದಂತಹ ಬೇರೆ ಕೆಲವು ನಾಡುಗಳಲ್ಲಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವ ಮೂಲಕ ಈ ತೊಡಕನ್ನು ನಿವಾರಿಸಿಕೊಳ್ಳಲಾಗಿದೆ. ಕನ್ನಡದಲ್ಲಿಯೂ ಇಂತಹದೇ ಮಾರ‍್ಪಾಡನ್ನು ನಾವು ಇವತ್ತು ನಡೆಸಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನುಡಿಯ ಕಲಿಕೆ ಮತ್ತು ಕಲಿಕೆನುಡಿ

ನುಡಿಯರಿಮೆಯ ಇಣುಕುನೋಟ – 9

ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ ಇವತ್ತು ಹೆಚ್ಚಿನ ಜನರಿಗೂ ಬೇಕಾಗಿರುವುದು ಇಂಗ್ಲಿಶ್ ನುಡಿಯ ಕಲಿಕೆಯಲ್ಲದೆ, ಅದನ್ನು ಕಲಿಕೆನುಡಿಯಾಗಿ ಬಳಸಬೇಕೆಂಬುದಲ್ಲ. ಆದರೆ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಲಾರದ ಜನರು ತಮ್ಮ ಮಕ್ಕಳನ್ನು ಎಶ್ಟೇ ಕಶ್ಟವಾದರೂ ಹೆದರದೆ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ‘ಇಂಗ್ಲಿಶ್ ಶಾಲೆ’ಗಳಿಗೆ ಕಳಿಸುತ್ತಿದ್ದಾರೆ.

ಆದರೆ, ಹೀಗೆ ಮಾಡುವುದರಿಂದ ಅವರಲ್ಲಿ ಹೆಚ್ಚಿನವರ ಆಸೆಯೂ ಕಯ್ಗೂಡುವುದಿಲ್ಲ. ಮೇಲ್ವರ‍್ಗದ ಮಕ್ಕಳು ಇಂತಹ ಶಾಲೆಗಳಿಗೆ ಹೋಗಿ ದೊಡ್ಡ ದೊಡ್ಡ ಕೆಲಸಗಳನ್ನು ಹಿಡಿದು ಲಕ್ಶ ಲಕ್ಶ ಸಂಪಾದಿಸುವುದನ್ನು ನೋಡಿ, ತಮ್ಮ ಮಕ್ಕಳೂ ಹಾಗೆಯೇ ಮುಂದೆ ಬರಬೇಕೆಂದು ಅವರು ಬಯಸುವುದು ಸಹಜ. ಆದರೆ, ಇಂಗ್ಲಿಶ್ ಶಾಲೆಗಳು ಅವರ ಈ ಬಯಕೆಯನ್ನು ಪೂರಯ್ಸಲಾರವು.

ಇದಕ್ಕೆ ಹಲವು ಕಾರಣಗಳಿವೆ: ಮೊದಲನೆಯದಾಗಿ, ಇಂಗ್ಲಿಶ್ ಶಾಲೆಗಳಲ್ಲೂ ಹಲವು ಬಗೆಗಳಿವೆ; ಇಂಗ್ಲಿಶ್ ನುಡಿಯನ್ನು ಮತ್ತು ಬೇರೆ ವಿಶಯಗಳನ್ನು ತುಂಬಾ ಚನ್ನಾಗಿ ಕಲಿಸಬಲ್ಲ ಶಾಲೆಗಳು ಕೆಲವಾದರೆ, ಯಾವುದನ್ನೂ ಸರಿಯಾಗಿ ಕಲಿಸಲಾಗದ ಶಾಲೆಗಳು ಹಲವು; ಕೆಳವರ‍್ಗದ ಮಕ್ಕಳಲ್ಲಿ ಹೆಚ್ಚಿನವರೂ ಇಂತಹ ಎರಡನೇ ಬಗೆಯ ಶಾಲೆಗಳಿಗೆ ಮಾತ್ರವೇ ಹೋಗಬಲ್ಲರಾದ ಕಾರಣ, ಅವರ ಕಲಿಕೆ ಅಲ್ಲಿಯೂ ಕುಂಟುತ್ತಲೇ ನಡೆಯುತ್ತದೆ.

ತಮಗೆ ಮಾತನಾಡಲು ತಿಳಿದಿರುವ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳು ತಮಗೆ ಸ್ವಲ್ಪವೂ ತಿಳಿಯದಿರುವ ಇಂಗ್ಲಿಶ್‌ನಂತಹ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳಿಗಿಂತ ಬೇಗನೆ ತಮ್ಮ ಕಲಿಕೆಯಲ್ಲಿ ಮುಂದೆ ಹೋಗಬಲ್ಲರೆಂಬುದನ್ನು ಎಲ್ಲಾ ಬಗೆಯ ಅರಕೆಗಳೂ ತೋರಿಸಿಕೊಟ್ಟಿವೆ; ಇಂಗ್ಲಿಶ್ ನುಡಿಯನ್ನು ಕಲಿಯುವಲ್ಲಿಯೂ ಅವರು ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳ ಮಕ್ಕಳಿಗಿಂತ ಬೇಗನೆ ಮುಂದೆ ಹೋಗಬಲ್ಲರು.

ದಕ್ಶಿಣ ಆಪ್ರಿಕಾದಲ್ಲಿ ಎಂಟನೇ ತರಗತಿಯ ವರೆಗೂ ಕಲಿಕೆನುಡಿಯಾಗಿ ತಾಯ್ನುಡಿಯನ್ನು ಬಳಸುತ್ತಿದ್ದ ಶಾಲೆಗಳಲ್ಲಿ ಮಕ್ಕಳು ಹನ್ನೆರಡನೇ ತರಗತಿಯಲ್ಲಿ ನೂರಕ್ಕೆ ೮೪ರಂತೆ ಪಾಸಾಗುತ್ತಿದ್ದರು. ತಾಯ್ತಂದೆಯವರ ಒತ್ತಾಯದ ಮೇಲೆ, ಅಯ್ದನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಲು 1976ರಲ್ಲಿ ತೊಡಗಲಾಯಿತು. 1992ರಲ್ಲಿ ಈ ಮಕ್ಕಳ ಕಲಿಕೆಯನ್ನು ಪರೀಕ್ಶಿಸಿದಾಗ, ಹನ್ನೆರಡನೇ ತರಗತಿಯ ಮಕ್ಕಳು ನೂರಕ್ಕೆ 44ರಂತೆ ಪಾಸಾಗುವ ಮಟ್ಟಕ್ಕೆ ಇಳಿದಿದ್ದುದು ಕಂಡುಬಂತು. ಇಂಗ್ಲಿಶ್ ನುಡಿಯ ಕಲಿಕೆಯಲ್ಲೂ ಪಾಸಾಗುವವರ ಎಣಿಕೆ ಅಶ್ಟೇ ಕೆಳಗೆ ಇಳಿದಿತ್ತು.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಿಯೂ ಮೇಲ್ವರ‍್ಗದ ಮಕ್ಕಳು ಇವತ್ತು ಮುಂದೆ ಬರುತ್ತಿರುವುದಕ್ಕೆ ಕಾರಣ ಬೇರೆಯೇ ಇದೆ. ಅವರಿಗೆ ಶಾಲೆಯ ಕಲಿಕೆ ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಕಲಿಕೆಗಳು ನೆರವು ನೀಡುತ್ತಿವೆ. ಇಂತಹ ನೆರವು ಕೆಳವರ‍್ಗದ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ಎಶ್ಟು ಪದಗಳ ಮೇಲೆ ಹತೋಟಿಯಿದೆ ಎಂಬುದರ ಮೇಲೆ ಅವರು ತಮ್ಮ ಕಲಿಕೆಯಲ್ಲಿ ಎಶ್ಟು ಮುಂದೆ ಹೋಗಬಲ್ಲರು ಎಂಬುದು ಅವಲಂಬಿಸಿರುತ್ತದೆ, ಮತ್ತು ಸಾಮಾನ್ಯವಾಗಿ, ಮಕ್ಕಳ ಹತೋಟಿಯಲ್ಲಿರುವ ಪದಗಳ ಎಣಿಕೆ ಅವರ ತಾಯ್ತಂದೆಯರು ಬರಹಬಲ್ಲವರೋ ಇಲ್ಲವೇ ಬರಹಬಾರದವರೋ ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ.

ಹೆಚ್ಚು ಪದಗಳ ಮೇಲೆ ಹತೋಟಿಯಿರುವ ಮಕ್ಕಳು ಹೆಚ್ಚು ಬರಹಗಳನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ಬಹಳ ಬೇಗನೆ ಹೆಚ್ಚುತ್ತಾ ಹೋಗುತ್ತದೆ; ಇದಕ್ಕೆ ಬದಲು, ಕಡಿಮೆ ಪದಗಳ ಮೇಲೆ ಹತೊಟಿಯಿರುವ ಮಕ್ಕಳು ಪಟ್ಯಪುಸ್ತಕಗಳನ್ನು ಬಿಟ್ಟು ಬೇರೆ ಬರಹಗಳನ್ನು ಓದಲು ಹೋಗುವುದಿಲ್ಲ, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ತುಂಬಾ ಮೆಲ್ಲಗೆ ಹೆಚ್ಚುತ್ತಿರುತ್ತದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ಕಲಿಯುವ ಮೇಲ್ವರ‍್ಗದವರ ಮಕ್ಕಳಿಗೆ ತಮ್ಮ ಹತೋಟಿಯಲ್ಲಿರುವ ಇಂಗ್ಲಿಶ್ ಪದಗಳನ್ನು ಹೆಚ್ಚಿಸಲು ಮನೆಯಲ್ಲಿಯೂ ನೆರವು ಸಿಗುತ್ತದೆ; ಆದರೆ, ಕೆಳವರ‍್ಗದ ಮಕ್ಕಳಿಗೆ ಇಂತಹ ಮನೆಯ ನೆರವು ಸಿಗುವುದಿಲ್ಲ. ಇದರಿಂದಾಗಿಯೂ ಅವರು ಇಂತಹ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.

ಇನ್ನೊಂದು ವಿಶಯವೇನೆಂದರೆ, ಎರಡು ಇಲ್ಲವೇ ಮೂರನೇ ತರಗತಿಯ ವರೆಗೆ ಮಕ್ಕಳು ಕಲಿಯುವುದು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನು. ತಮಗೆ ತಿಳಿಯದಿರುವ ಇಂಗ್ಲಿಶ್ ನುಡಿಯಲ್ಲಿ ಇದನ್ನು ನಡೆಸುವುದು ಅವರಿಗೆ ಅಶ್ಟೊಂದು ತೊಡಕಿನದಾಗಿರುವುದಿಲ್ಲ. ಆದರೆ, ಮೂರು ಇಲ್ಲವೇ ನಾಲ್ಕನೇ ತರಗತಿಯಿಂದ ಅವರು ತಮ್ಮ ಓದಿನ ಮೂಲಕ ಗಣಿತ, ವಿಜ್ನಾನ ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿದುಕೊಳ್ಳಲು ತೊಡಗಬೇಕಾಗುತ್ತದೆ; ಕಣ್ಣಿಗೆ ಕಾಣದ ಮತ್ತು ಕಿವಿಗೆ ಕೇಳಿಸದ ಪರಿಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ.

ಇಂತಹ ಕೆಲಸಗಳನ್ನು ನಡೆಸಲು ಇಂಗ್ಲಿಶ್ ನುಡಿಯನ್ನು ತುಂಬಾ ಚನ್ನಾಗಿ ಕಲಿಸುವ ಶಾಲೆಗಳಲ್ಲೂ ಮಕ್ಕಳಿಗೆ ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆಯೆಂದು ಕಂಡುಹಿಡಿಯಲಾಗಿದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವಲ್ಲಿ ಈ ಕೆಲಸಗಳನ್ನು ನಾಲ್ಕನೇ ತರಗತಿಯಿಂದಲೇ ನಡೆಸಬೇಕಾಗುತ್ತದೆಯಾದ ಕಾರಣ, ಹೆಚ್ಚಿನ ಮಕ್ಕಳೂ ಇದರಲ್ಲಿ ಸೋಲುತ್ತಾರೆ, ಮತ್ತು ಹಲವು ಮಂದಿ ಮಕ್ಕಳು ಈ ತೊಡಕನ್ನು ಎದುರಿಸಲಾಗದೆ ಶಾಲೆಯಿಂದ ಹೊರಬೀಳುತ್ತಾರೆ. ಇಲ್ಲಿಯೂ ಮೇಲ್ವರ‍್ಗದವರ ಮತ್ತು ಬಲ್ಲಿದರ ಮಕ್ಕಳಿಗಿಂತ ಕೆಳವರ‍್ಗದವರ ಮತ್ತು ಬಡವರ ಮಕ್ಕಳೇ ಹೆಚ್ಚು ಸೋಲುತ್ತಾರೆ.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳಿಗೆ ತಮ್ಮ ತಾಯ್ನುಡಿಯ ಮೇಲೆ, ಮತ್ತು ಅದನ್ನು ಬಳಸುವ ತಾಯ್ತಂದೆಯರು, ನೆಂಟರು, ನೆರೆಹೊರೆಯವರು ಮೊದಲಾದವರ ಮೇಲೆ ಕೀಳರಿಮೆ ಬೆಳೆಯುತ್ತದೆ; ತಮ್ಮ ಕಲಿಕೆ ಮುಂದುವರಿದಂತೆಲ್ಲ ಮಕ್ಕಳು ಇವರಿಂದ ದೂರವಾಗುತ್ತಾ ಹೋಗುತ್ತಾರೆ. ಈ ತೊಡಕು ಮೇಲ್ವರ‍್ಗದವರ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಯಾಕೆಂದರೆ, ಮೇಲ್ವರ‍್ಗದ ಮಕ್ಕಳ ತಾಯ್ತಂದೆಯರು, ನೆಂಟರು ಮತ್ತು ನೆರೆಹೊರೆಯವರು ಸಾಮಾನ್ಯವಾಗಿ ಇಂಗ್ಲಿಶ್ ತಿಳಿದಿರುತ್ತಾರೆ.

ಇಂತಹ ಹಲವು ಸಮಸ್ಯೆಗಳಿರುವುದರಿಂದಾಗಿ, ಕೆಳವರ‍್ಗದ ಮಕ್ಕಳು ಮೇಲೆ ಬರಬೇಕಿದ್ದಲ್ಲಿ, ಮತ್ತು ತಮ್ಮೊಂದಿಗೆ ತಮ್ಮ ಸಮಾಜವನ್ನೂ ಮೇಲೆ ತರಬೇಕಿದ್ದಲ್ಲಿ, ಅವರಿಗೆ ಕಲಿಕೆನುಡಿಯಾಗಿ ಕನ್ನಡವನ್ನೇ ಬಳಸುತ್ತಿರಬೇಕು. ಇದರೊಂದಿಗೆ ಇಂಗ್ಲಿಶ್ ನುಡಿಯನ್ನೂ ಒಂದು ವಿಶಯವಾಗಿ ಮಾತ್ರ ಕಲಿಸುತ್ತಿರಬೇಕಲ್ಲದೆ ಕಲಿಕೆನುಡಿಯಾಗಿ ಬಳಸಲು ಹೋಗಬಾರದು.

ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ಅವರು ಹಿಂದೆ ಬೀಳುತ್ತಿರುವುದಕ್ಕೆ ಅವರ ಕಲಿಕೆನುಡಿಯಾಗಿ ಕನ್ನಡವನ್ನು ಬಳಸುತ್ತಿರುವುದು ಕಾರಣವಲ್ಲ; ಇಂಗ್ಲಿಶ್ ನುಡಿಯನ್ನು ಅವರಿಗೆ ಶಾಲೆಯಲ್ಲಿ ಸರಿಯಾಗಿ ಕಲಿಸದಿರುವುದೇ ಕಾರಣ. ಹಾಗಾಗಿ, ಕಲಿಕೆನುಡಿಯನ್ನು ಬದಲಾಯಿಸುವುದರಿಂದ ಅವರು ಇಂಗ್ಲಿಶ್ ಕಲಿಕೆಯಲ್ಲಿ ಮುಂದೆ ಹೋಗುವ ಬದಲು, ಬೇರೆ ವಿಶಯಗಳ ಕಲಿಕೆಯಲ್ಲೂ ಹಿಂದೆ ಬೀಳಲು ತೊಡಗುತ್ತಾರೆ.

ಇವತ್ತು ಮುಂದೆ ಬಂದಿರುವ ಎಲ್ಲಾ ನಾಡುಗಳಲ್ಲೂ ಮಕ್ಕಳ ಕಲಿಕೆನುಡಿ ಅವರ ತಾಯ್ನುಡಿಯಾಗಿದೆ; ಇಂಗ್ಲಿಶ್‌ನಂತಹ ಬೇರೊಂದು ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಯಾವ ನಾಡೂ ಇದುವರೆಗೆ ಮುಂದೆ ಬಂದಿಲ್ಲ. ಇದಕ್ಕೆ ಕಾರಣವೇನೆಂದರೆ, ತಮ್ಮ ನಾಡಿನದಲ್ಲದ ಕಲಿಕೆನುಡಿಯಲ್ಲಿ ಕಲಿತವರು ನಾಡಿನ ಸಾಮಾನ್ಯ ಜನರಿಂದ ಬೇರಾಗಿಯೇ ಉಳಿಯುತ್ತಾರೆ, ಮತ್ತು ಅವರ ಕಲಿಕೆಯಿಂದ ಸಾಮಾನ್ಯ ಜನರಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ.

ಹಾಗಾಗಿ, ಕಲಿಯುವ ಮಕ್ಕಳ ವಯ್ಯಕ್ತಿಕ ಏಳಿಗೆಗೆ ಮಾತ್ರವಲ್ಲದೆ, ಅವರ ಸಮಾಜದ ಮತ್ತು ನಾಡಿನ ಏಳಿಗೆಗಾಗಿಯೂ ಕಲಿಕೆನುಡಿಯಾಗಿ ಅವರ ತಾಯ್ನುಡಿ ಇಲ್ಲವೇ ಪರಿಸರದ ನುಡಿಯನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹವನ್ನು ಮಾರ‍್ಪಡಿಸಿ ಗೆದ್ದವರು

ನುಡಿಯರಿಮೆಯ ಇಣುಕುನೋಟ – 8

ಜಗತ್ತಿನ ಹಲವು ನುಡಿಗಳಲ್ಲಿ ಇತ್ತೀಚೆಗೆ, ಎಂದರೆ ಕಳೆದ ನೂರು-ನೂರಯ್ವತ್ತು ವರ‍್ಶಗಳಲ್ಲಿ, ನೂರಾರು ವರ‍್ಶಗಳಿಂದ ಬಳಕೆಯಲ್ಲಿದ್ದ ಬರಹಗಳನ್ನು ಮಾರ‍್ಪಡಿಸಿ, ಅವುಗಳಲ್ಲಿ ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲಾಗಿದೆ, ಮತ್ತು ಇದರಿಂದಾಗಿ ಆ ನುಡಿಗಳನ್ನಾಡುವ ಜನರಲ್ಲಿ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆ.

ಜನರ ಜೀವನದಲ್ಲಿ ಇತ್ತೀಚೆಗೆ ಬರಹ ಹೆಚ್ಚು ಹೆಚ್ಚು ಮುಕ್ಯವಾಗುತ್ತಿರುವುದು, ಮತ್ತು ಒಂದು ನಾಡಿನಲ್ಲಿರುವ ಎಲ್ಲಾ ಜನರೂ ಬರಹಬಲ್ಲವರಾಗದೆ ಆ ನಾಡಿನ ಏಳಿಗೆಯಾಗಲಾರದೆಂಬ ಪರಿಸ್ತಿತಿ ಉಂಟಾಗಿರುವುದು ಅವರು ಇಂತಹ ಮಾರ‍್ಪಾಡುಗಳನ್ನು ನಡೆಸಲು ಮುಕ್ಯ ಕಾರಣ.

ಬರಹಗಳನ್ನು ಎರಡು ಬಗೆಗಳಲ್ಲಿ ಈ ಕಾರಣಕ್ಕಾಗಿ ಮಾರ‍್ಪಡಿಸಲಾಗಿದೆ: ಅವುಗಳ ಬರಿಗೆ(ಅಕ್ಶರ)ಗಳಲ್ಲಿ ಬೇಕಾದವುಗಳನ್ನು ಮಾತ್ರ ಉಳಿಸಿಕೊಂಡು ಬೇಡದವುಗಳನ್ನು ತೆಗೆದುಹಾಕಿರುವುದು ಒಂದು ಬಗೆಯ ಮಾರ‍್ಪಾಡು, ಮತ್ತು ಬಳಕೆಯಲ್ಲಿರುವ ಬರಿಗೆಗಳನ್ನೇ ಬಿಟ್ಟುಕೊಟ್ಟು, ಅವುಗಳ ಬದಲಿಗೆ ಬೇರೆ ಬಗೆಯ ಬರಿಗೆಗಳನ್ನು ಬಳಸತೊಡಗಿರುವುದು ಇನ್ನೊಂದು ಬಗೆಯ ಮಾರ‍್ಪಾಡು.

ಗ್ರೀಕ್ ಬರಹದಲ್ಲಿ ಪದಗಳನ್ನು ಹಿಂದಿನ ಕಾಲದಲ್ಲಿದ್ದಂತೆ ಬರೆಯಲು ಹಲವು ಹೆಚ್ಚಿನ ಬರಿಗೆಗಳನ್ನು ಬಳಸಲಾಗುತ್ತಿತ್ತು; ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡಲು, 1982ರಲ್ಲಿ ಬೇಡದಿರುವ ಬರಿಗೆಗಳನ್ನೆಲ್ಲ ಬಿಟ್ಟುಕೊಡಲಾಯಿತು. ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಬರಿಗೆಗಳ ಬಳಕೆಯಿಲ್ಲ; ಕೆಲವರು ಗ್ರೀಕ್ ಪಂಡಿತರು ಮಾತ್ರ ಅವನ್ನು ಬಳಸುತ್ತಿದ್ದಾರೆ.

ಜಪಾನೀಸ್ ಬರಹದ ಕನ ಬರಿಗೆಗಳು ಒಂಬತ್ತನೇ ಶತಮಾನದಲ್ಲಿ ಸರಿಯಾಗಿದ್ದುವು; ಆದರೆ, ಆಮೇಲೆ ಮಾತಿನಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಅವಕ್ಕೂ ಅವುಗಳ ಓದಿಗೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದುವು. 1946ರಲ್ಲಿ ಇವನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾರ‍್ಪಡಿಸಲಾಯಿತು, ಮತ್ತು ಓದಿನಲ್ಲಿಲ್ಲದ ಕೆಲವು ಬರಿಗೆಗಳನ್ನು ಬಿಟ್ಟುಕೊಡಲಾಯಿತು.

ಕೊರಿಯನ್ ಬರಹದಲ್ಲಿ ಅವರವೇ ಆದ ಪದಗಳನ್ನು ಬರೆಯಲು ಹಂಗುಲ್ ಎಂಬ ತುಂಬಾ ಚನ್ನಾಗಿರುವ ಬರಿಗೆಗಳನ್ನು ಬಳಸಲಾಗುತ್ತಿದೆ; ಆದರೆ, ಚಯ್ನೀಸ್‌ನಿಂದ ಎರವಲು ಪಡೆದ ಪದಗಳನ್ನು ಬರೆಯಲು ತೊಡಕು ತೊಡಕಾಗಿರುವ ಚಯ್ನೀಸ್ ಮೂಲದ ಹಂಜ ಎಂಬ ಬರಿಗೆಗಳನ್ನು ಬಳಸಲಾಗುತ್ತಿದೆ. 1949ರಲ್ಲಿ ಈ ಚಯ್ನೀಸ್ ಎರವಲು ಪದಗಳನ್ನೂ ಹಂಗುಲ್‌ನಲ್ಲಿಯೇ ಬರೆಯುವ ನಿರ‍್ದಾರವನ್ನು ಉತ್ತರ ಕೊರಿಯಾದಲ್ಲಿ ಮಾಡಲಾಯಿತು, ಮತ್ತು ಇದರಿಂದಾಗಿ ಆ ನಾಡಿನಲ್ಲಿ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಯಿತು.

ದಕ್ಶಿಣ ಕೊರಿಯಾದಲ್ಲೂ ಹಂಜ ಬರಿಗೆಗಳ ಎಣಿಕೆಯನ್ನು ಸಾಕಶ್ಟು ಕಡಿಮೆ ಮಾಡಲಾಗಿದೆ, ಮತ್ತು ಅವನ್ನು ಎಲಿಮೆಂಟರಿ ಶಾಲೆಗಳಲ್ಲಿ ಕಲಿಸದಿರುವಂತೆ, ಮತ್ತು ಮಕ್ಕಳ ಪುಸ್ತಕಗಳಲ್ಲಿ, ಮತ್ತು ಎಲ್ಲಾ ಜನರೂ ಓದಬೇಕಾಗಿರುವ ಬರಹಗಳಲ್ಲಿ ಬಳಸದಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡುವುದಕ್ಕಾಗಿ ಟರ‍್ಕಿ, ಇಂಡೊನೇಶ್ಯಾ, ಮಲಯೇಶ್ಯಾ, ಸೋಮಾಲಿಯಾ ಮೊದಲಾದೆಡೆಗಳಲ್ಲಿ, ಮತ್ತು ಸೋವಿಯಟ್ ಯೂನಿಯನ್‌ನ ಹಲವು ನಾಡುಗಳಲ್ಲಿ ಅರೇಬಿಕ್ ಮೂಲದ ಬರಿಗೆಗಳನ್ನು ಬಿಟ್ಟುಕೊಟ್ಟು ರೋಮನ್ ಮೂಲದ ಬರಿಗೆಗಳನ್ನು ಬಳಕೆಗೆ ತರಲಾಗಿದೆ. ಇದರಿಂದಾಗಿ ಈ ನಾಡುಗಳಲ್ಲಿಯೂ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತಿದೆ.

ಇದಕ್ಕೆ ಬದಲು, ಅರೇಬಿಕ್ ಬರಿಗೆಗಳನ್ನು ಬಳಸುತ್ತಿರುವ ಇರಾನ್, ಇರಾಕ್ ಮೊದಲಾದ ಹಲವು ನಾಡುಗಳಲ್ಲಿ ಇವತ್ತಿಗೂ ಬರಹ ಬಲ್ಲವರ ಎಣಿಕೆ ತುಂಬಾ ಕಡಿಮೆಯಿದೆ. ಇದಕ್ಕೆ ಕೆಲವು ಸಾಮಾಜಿಕ ತೊಡಕುಗಳೂ ಕಾರಣವಿರಬಹುದು; ಆದರೆ, ಬರಹಗಳಲ್ಲಿ ಪದಗಳನ್ನು ಓದುವ ಹಾಗೆ ಬರೆಯದಿರುವುದು, ಮತ್ತು ಇದರಿಂದಾಗಿ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿರುವುದೂ ಒಂದು ಕಾರಣವೆಂಬುದರಲ್ಲಿ ಸಂಶಯವಿಲ್ಲ.

ಪದಗಳನ್ನು ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲು ಇತ್ತೀಚೆಗೆ ಬೇರೆ ಹಲವಾರು ನುಡಿಗಳ ಬರಹಗಳಲ್ಲೂ ಮಾರ‍್ಪಾಡುಗಳನ್ನು ನಡೆಸಲಾಗಿದೆ. ವಿಯೆಟ್ನಾಮ್‌ನಲ್ಲಿ ಚಯ್ನೀಸ್ ಬರಿಗೆಗಳ ಬದಲು ರೋಮನ್ ಮೂಲದ ಬರಿಗೆಗಳನ್ನು ಬಳಸಲು ತೊಡಗಿದುದರಿಂದಾಗಿ ಇವತ್ತು ವಿಯೆಟ್ನಮೀಸ್ ಬರಹಗಳಲ್ಲಿ ಚಯ್ನೀಸ್ ಎರವಲುಗಳನ್ನೂ ಓದುವ ಹಾಗೆಯೇ ಬರೆಯಲು ಸಾದ್ಯವಾಗಿದೆ; ಈ ಮಾರ‍್ಪಾಡನ್ನು ನಡೆಸಿದ ಬಳಿಕ ಅಲ್ಲಿಯೂ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ.

ಯುರೋಪಿನ ಹಲವಾರು ನುಡಿಗಳಲ್ಲೂ ಇತ್ತೀಚೆಗೆ ಬರಹಗಳಲ್ಲಿ ಮಾರ‍್ಪಾಡುಗಳನ್ನು ನಡೆಸುವ ಮೂಲಕ ಓದಿಗೂ ಬರಹಕ್ಕೂ ನಡುವಿರುವ ಅಂತರವನ್ನು ಕಡಿಮೆ ಮಾಡಲಾಗಿದೆ. ಹೆಸರು(ನಾಮ)ಪದಗಳನ್ನು ಬರೆಯುವಾಗ ಅವುಗಳ ಮೊದಲಿಗೆ ದೊಡ್ಡ ಬರಿಗೆಯನ್ನು ಬಳಸಬೇಕೆಂಬ ಕಟ್ಟಲೆಯನ್ನು ಡೇನಿಶ್‌ನಲ್ಲಿ ಬಿಟ್ಟುಕೊಡಲಾಗಿದೆ; ಕೊಟ್ಟಹೆಸರುಗಳಲ್ಲಿ ಮಾತ್ರ ಈ ಕಟ್ಟಲೆಯನ್ನು ಉಳಿಸಿಕೊಳ್ಳಲಾಗಿದೆ.

ಜರ‍್ಮನಿ, ಆಸ್ಟ್ರಿಯಾ, ಮತ್ತು ಸ್ವಿಜರ್‌ಲೇಂಡ್‌ಗಳಲ್ಲಿಯೂ ಜರ‍್ಮನ್ ಬರಹಗಳಲ್ಲಿರುವ ಬರಿಗೆಗಳ ಬಳಕೆಯಲ್ಲಿ ಹಲವು ಮಾರ‍್ಪಾಡುಗಳನ್ನು ನಡೆಸಬೇಕೆಂಬ ತೀರ‍್ಮಾನಕ್ಕೆ ಇತ್ತೀಚೆಗೆ ಬರಲಾಗಿತ್ತು; ಪದಗಳನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯಬೇಕೆಂಬುದೇ ಈ ಮಾರ‍್ಪಾಡುಗಳ ಮುಕ್ಯ ಉದ್ದೇಶವಾಗಿತ್ತು. ಈ ತೀರ‍್ಮಾನವನ್ನು 1996ರಲ್ಲಿ ಬಳಕೆಗೆ ತರಲಾಯಿತು.
ಆದರೆ, ಇದನ್ನು ವಿರೋದಿಸುವವರೂ ಕೆಲವರಿದ್ದು, ಜರ‍್ಮನಿಯಲ್ಲಿ ಈ ಮಾರ‍್ಪಾಡುಗಳನ್ನು ಬಳಸುವುದು ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿದೆ. ಹೀಗಿದ್ದರೂ, ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಮಾರ‍್ಪಡಿಸಿದ ಬರಿಗೆಗಳೇ ಬಳಕೆಯಾಗುತ್ತಿವೆ; ಕೆಲವು ಪತ್ರಿಕೆಗಳು ಮತ್ತು ಪುಸ್ತಕಗಳು ಮಾತ್ರ ಹಳೇ ಬರಹಕ್ಕೆ ಜೋತುಬಿದ್ದಿವೆ.

ಪೋರ‍್ಚುಗೀಸ್ ಬರಹದಲ್ಲೂ ಅದನ್ನು ಬಳಸುವ ಹಲವು ನಾಡುಗಳು ಒಟ್ಟುಸೇರಿ ಇಂತಹದೇ ಮಾರ‍್ಪಾಡನ್ನು ಬಳಕೆಗೆ ತಂದಿವೆ; ಇದಕ್ಕೆ ಮೊದಲು, ಪದಗಳನ್ನು ಅವುಗಳ ಮೂಲರೂಪ ಎಂತಹದು ಎಂಬುದನ್ನು ಸೂಚಿಸುವಂತೆ ಬರೆಯಲಾಗುತ್ತಿತ್ತು; ಆದರೆ, ಈ ರೂಪಗಳಿಗೂ ಅವನ್ನು ಓದುವ ಬಗೆಗೂ ನಡುವೆ ಯಾವ ಹೊಂದಾಣಿಕೆಯೂ ಇರಲಿಲ್ಲ; ಹಾಗಾಗಿ, ಅವುಗಳ ಈ ಹಳೆಯ ರೂಪಗಳನ್ನು ಬಿಟ್ಟುಕೊಟ್ಟು, ಆದಶ್ಟು ಮಟ್ಟಿಗೆ ಇವತ್ತು ಅವನ್ನು ಹೇಗೆ ಓದಲಾಗುತ್ತದೆಯೋ ಹಾಗೆಯೇ ಬರೆಯುವಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಲಾಗಿದೆ.

ಒಂದು ನಾಡಿನಲ್ಲಿ ಓದು-ಬರಹ ಬಲ್ಲವರ ಎಣಿಕೆ ಎಶ್ಟಿದೆ ಎಂಬುದು ಆ ನಾಡಿನ ಬರಹಗಳಲ್ಲಿ ಬಳಕೆಯಾಗುತ್ತಿರುವ ಬರಿಗೆಗಳನ್ನು ಕಲಿಯಲು ಮತ್ತು ಬಳಸಲು ಎಶ್ಟು ಸುಲಬ ಎಂಬುದರ ಮೇಲೆ ಮಾತ್ರವಲ್ಲದೆ, ಅಲ್ಲಿನ ಜನರ ಮೇಲೆ ಓದಿನ ಕುರಿತಾಗಿ ಎಂತಹ ಆಳ್ವಿಕೆಯ ಒತ್ತಡ, ನೆರೆಹೊರೆಯ ಒತ್ತಡ, ಮತ್ತು ಮನೆಯವರ ಒತ್ತಡವಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ; ಹಾಗಾಗಿ, ಕನ್ನಡದ ಬರಿಗೆಗಳಲ್ಲಿ ಮಾರ‍್ಪಾಡುಗಳನ್ನು ಮಾಡದಿದ್ದರೂ ಬರಹ ಬಲ್ಲವರ ಎಣಿಕೆ ಹೆಚ್ಚಬಲ್ಲುದು ಎಂಬುದಾಗಿ ಕೆಲವರಿಗೆ ಅನಿಸಬಹುದು.

ಆದರೆ, ಬರಿಗೆಗಳ ತೊಡಕೂ ಬರಹ ಬಲ್ಲವರ ಎಣಿಕೆ ಕಡಿಮೆಯಿರಲು ಒಂದು ಕಾರಣ ಎಂಬುದನ್ನು ಕಂಡುಕೊಂಡು, ಮೇಲೆ ಕೊಟ್ಟಿರುವಂತಹ ಹಲವಾರು ನುಡಿಗಳ ಬರಹಗಳಲ್ಲಿ ಬರಿಗೆಗಳನ್ನು ಮಾರ‍್ಪಡಿಸಲಾಗಿದೆ, ಮತ್ತು ಹಾಗೆ ಮಾಡುವ ಮೂಲಕ ಬರಹ ಬಲ್ಲವರ ಎಣಿಕೆಯನ್ನು ಹೆಚ್ಚಿಸಿಕೊಳ್ಳಲಾಗಿದೆ ಎಂಬುದನ್ನು ಮರೆಯಬಾರದು.

ಇಂಗ್ಲಿಶ್‌ನಲ್ಲಿ ಉಲಿಕೆಗೂ ಬರಿಗೆಗೂ ನಡುವೆ ಹೊಂದಾಣಿಕೆ ತುಂಬಾ ಕಡಿಮೆಯಿದೆಯಾದರೂ ಅದನ್ನು ಕಲಿಯುವವರ ಎಣಿಕೆ ತುಂಬಾ ಹೆಚ್ಚಿದೆಯಲ್ಲ ಎಂದು ಕೆಲವರು ಹೇಳಬಹುದು. ಆದರೆ, ಇಂಗ್ಲಿಶ್ ಬರಹದ ಈ ಸ್ಪೆಲ್ಲಿಂಗ್ ತೊಡಕಿನಿಂದಾಗಿ, ಅದನ್ನು ಕಲಿಯುವ ಮಕ್ಕಳಿಗೆ ಬೇರೆ ಬರಹಗಳನ್ನು ಕಲಿಯಲು ಬೇಕಾಗುವ ಸಮಯದ ಮೂರು ಪಾಲಶ್ಟು ಸಮಯ ಬೇಕಾಗುತ್ತದೆ.

ಇದಲ್ಲದೆ, ಹಾಗೆ ಕಶ್ಟಪಟ್ಟು ಕಲಿತವರಲ್ಲಿಯೂ ಹಲವರಿಗೆ ಸರಿಯಾಗಿ ಓದುವುದು ಹೇಗೆ ಎಂಬುದೇ ಗೊತ್ತಾಗಿರುವುದಿಲ್ಲ, ಮತ್ತು ಇದರಿಂದಾಗಿ ಅವರು ಆದಶ್ಟು ಮಟ್ಟಿಗೆ ಓದಿನಿಂದ ದೂರವೇ ಉಳಿಯಲು ಬಯಸುತ್ತಾರೆ. ಅಮೆರಿಕಾದಂತಹ ಮುಂದುವರಿದ ನಾಡುಗಳಲ್ಲೂ ಈ ತೊಂದರೆಯಿದೆ.

ಕನ್ನಡದ ಮಕ್ಕಳು ಈ ರೀತಿ ಕನ್ನಡ ಬರಹಗಳನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ತೊಂದರೆಗೊಳಗಾಗದಂತೆ ಮಾಡಲು, ಮತ್ತು ಅವನ್ನು ಎಲ್ಲಾ ಮಕ್ಕಳೂ ಸುಲಬವಾಗಿ ಮತ್ತು ಸರಿಯಾಗಿ ಓದಲು ಸಾದ್ಯವಾಗುವಂತೆ ಮಾಡಲು ಋ, ಷ, ಮಹಾಪ್ರಾಣ ಮೊದಲಾದ ಕನ್ನಡದ ಮಟ್ಟಿಗೆ ಬೇಡದಿರುವ ಕೆಲವು ಬರಿಗೆಗಳನ್ನು ಇವತ್ತು ಬಿಟ್ಟುಕೊಡಬೇಕಾಗಿದೆ. ಕನ್ನಡಿಗರಿಗೆ ತಮ್ಮ ನುಡಿಯ ಮೇಲಿರುವ ಕೀಳರಿಮೆಯನ್ನು ಇಲ್ಲವಾಗಿಸುವಲ್ಲಿಯೂ ಇದು ನೆರವಾಗಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ತಮಿಳರ ದಾರಿ ಮತ್ತು ನಮ್ಮ ದಾರಿ

ನುಡಿಯರಿಮೆಯ ಇಣುಕುನೋಟ – 7

ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಒಂದು ಮಿತಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬುದಾಗಿ ಹೇಳಿದಾಗ, ಇದು ತಮಿಳಿನ ದ್ರಾವಿಡ ಕಳಗಂ ಹಿಡಿದ ದಾರಿ ಎಂಬ ಮರುನುಡಿ ಕೇಳಿಬರುತ್ತದೆ.

ಆದರೆ, ಈ ಮರುನುಡಿ ಸರಿಯಲ್ಲ. ನಾವು ತಮಿಳರಿಂದಕಲಿಯಬಹುದಾದ ವಿಶಯಗಳೂ ಕೆಲವಿವೆ; ಆದರೆ ಹಾಗೆಂದು, ಎಲ್ಲಾ ವಿಶಯಗಳಲ್ಲೂ ಅವರನ್ನು ಕಣ್ಣುಮುಚ್ಚಿ ಹಿಂಬಾಲಿಸಬೇಕೆಂದೇನಿಲ್ಲ. ನಮಗೆ ಸರಿಯೆಂದು ಕಂಡುದನ್ನು ಅವರಿಂದ ಕಲಿಯೋಣ, ಮತ್ತು ಬೇರೆ ವಿಶಯಗಳಲ್ಲಿ ನಮ್ಮದೇ ಆದ ದಾರಿಯನ್ನೂ ಕಂಡುಕೊಳ್ಳೋಣ.

ತಮ್ಮ ನುಡಿಯ ಕುರಿತಾಗಿ ತಮಿಳರಿಗೆ ಎಲ್ಲೆಯಿಲ್ಲದ ಹೆಮ್ಮೆ ಮತ್ತು ಒಲುಮೆಗಳಿವೆ; ಆದರೆ, ಕನ್ನಡದ ತಿಳಿವಿಗರಿಗೆ ತಮ್ಮ ನುಡಿಯ ಕುರಿತು ಕೀಳರಿಮೆಯಿದೆ. ಎಂತಹ ಹೊಸ ಪದವನ್ನು ಬೇಕಿದ್ದರೂ ತಮ್ಮ ನುಡಿಯಲ್ಲಿ ಉಂಟುಮಾಡಲು ಬರುತ್ತದೆ ಎಂಬುದನ್ನು ತಮಿಳರು ಕಂಡುಕೊಂಡಿದ್ದಾರೆ, ಮತ್ತು ಅದನ್ನು ಬಳಕೆಗೂ ತಂದಿದ್ದಾರೆ; ಆದರೆ, ಕನ್ನಡದ ತಿಳಿವಿಗರು ಹೊಸ ಪದಗಳನ್ನುಂಟುಮಾಡಲು ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಕಯ್ಚೆಲ್ಲಿ ಕುಳಿತಿದ್ದಾರೆ.

ತಮಿಳಿನ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ತಮಿಳು ಪದಗಳಿವೆ; ಆದರೆ, ಕನ್ನಡದ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಹತ್ತರಶ್ಟೂ ಕನ್ನಡದ ಪದಗಳಿಲ್ಲ! ಇಂತಹ ಕೆಲವು ವಿಶಯಗಳಲ್ಲಿ ನಾವು ತಮಿಳರನ್ನು ಹಿಂಬಾಲಿಸಿದಲ್ಲಿ, ಅದು ನಮ್ಮ ನುಡಿಯ ಮತ್ತು ಸಮಾಜದ ಏಳಿಗೆಗೆ ನೆರವಾಗಬಲ್ಲುದು.

ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವರು ಹಿಡಿದ ದಾರಿ ನಮಗೆ ಬೇಕಿಲ್ಲ. ದ್ರಾವಿಡ ಕಳಗಗಳು ನಡೆಸಿದ ಚಳವಳಿಯಿಂದಾಗಿ, ತಮಿಳು ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳು ತುಂಬಾ ಕಡಿಮೆಯಾದುವೇನೋ ನಿಜ; ಆದರೆ, ಇದರಿಂದ ಬರಹದ ತಮಿಳಿಗೂ ತಮಿಳಿನ ಆಡುನುಡಿಗಳಿಗೂ ನಡುವಿದ್ದ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ಯಾಕೆಂದರೆ, ಬರಹದಿಂದ ತೆಗೆದು ಹಾಕಿದ ಸಂಸ್ಕ್ರುತ ಪದಗಳಿಗೆ ಬದಲಾಗಿ ಇವರು ಹಳೆತಮಿಳಿನ ಪದಗಳನ್ನೇ ಬಳಕೆಗೆ ತಂದಿದ್ದಾರೆ; ಇವು ಹೊಸತಮಿಳಿನ ಪದಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಇದಲ್ಲದೆ, ಹೆಚ್ಚುಕಡಿಮೆ ಹದಿಮೂರನೇ ಶತಮಾನದ ತಮಿಳನ್ನೇ ಬರಹಗಳಲ್ಲಿ ಬಳಸಲು ತೊಡಗಿದ್ದಾರೆ. ಇದು ಕನ್ನಡ ಬರಹಗಳಲ್ಲಿ ಇವತ್ತು ಹೊಸಗನ್ನಡದ ಬದಲು ಹಳೆಗನ್ನಡವನ್ನು ಬಳಸಲು ಹೊರಡುವ ಹಾಗೆ ಎನ್ನಬಹುದು.

ಇಂತಹ ತಮಿಳರ ದಾರಿ ನಮಗೆ ಬೇಕಾಗಿಲ್ಲ. ಕನ್ನಡ ಬರಹದಲ್ಲಿ ಯಾವ ಮಾರ‍್ಪಾಡನ್ನು ಮಾಡುವುದಿದ್ದರೂ ಅದಕ್ಕೆ ಕನ್ನಡ ಬರಹಕ್ಕೂ ಕನ್ನಡದ ಆಡುನುಡಿಗಳಿಗೂ ನಡುವಿರುವ ವ್ಯತ್ಯಾಸವನ್ನು ಕಡಿಮೆಮಾಡುವುದೇ ಮುಕ್ಯ ಗುರಿಯಾಗಿರಬೇಕು. ಕನ್ನಡಕ್ಕೆ ಬೇಕಿಲ್ಲದ ಮಹಾಪ್ರಾಣ, ಋಕಾರ, ಷಕಾರಗಳನ್ನು ಬರಹದಲ್ಲಿ ಬಳಸದಿರುವುದು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವುದು ಎಂಬ ಈ ಎರಡು ಮಾರ‍್ಪಾಡುಗಳಿಗೂ ಇದೇ ಮುಕ್ಯ ಗುರಿಯಾಗಿದೆ.

ಇನ್ನು ತಮಿಳು ಬರಹದಲ್ಲಿ ಮಹಾಪ್ರಾಣ, ಋಕಾರ, ಗಜಡದಬ ಮೊದಲಾದ ಕೆಲವು ಬರಿಗೆಗಳು ಬಳಕೆಯಾಗದಿರುವುದಕ್ಕೆ ದ್ರಾವಿಡ ಕಳಗಗಳು ಕಾರಣವಲ್ಲ. ಇತ್ತೀಚೆಗೆ ನಡೆಸಿದ ಯಾವ ಮಾರ‍್ಪಾಡೂ ಅದಕ್ಕೆ ಕಾರಣವಲ್ಲ. ಬ್ರಾಹ್ಮೀಲಿಪಿಯನ್ನು ತಮಿಳಿಗೆ ಅಳವಡಿಸುವ ಸಮಯದಲ್ಲೇನೇ, ಎಂದರೆ ಸುಮಾರು ಎರಡು ಸಾವಿರ ವರ‍್ಶಗಳಶ್ಟು ಹಿಂದೆಯೇ ತಮಿಳು ಬರಹದಲ್ಲಿ ಈ ಬರಿಗೆಗಳನ್ನು ಬಳಸದಿರಲು ತೀರ‍್ಮಾನಿಸಲಾಗಿತ್ತು.

ಆವತ್ತಿನ ತಮಿಳು ಓದಿಗೆ ಈ ಬರವಣಿಗೆ ಸರಿಯಾಗಿಯೂ ಇದ್ದಿರಬೇಕು; ಆದರೆ, ಆಮೇಲೆ ತಮಿಳು ನುಡಿಯಲ್ಲಿ ಹಲವಾರು ಮಾರ‍್ಪಾಡುಗಳು ನಡೆದಿದ್ದು, ಇದರಿಂದಾಗಿ ಇವತ್ತಿನ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದಿವೆ. ಈ ವ್ಯತ್ಯಾಸಗಳನ್ನನುಸರಿಸಿ ತಮಿಳು ಬರಹದಲ್ಲಿ ಹೆಚ್ಚಿನ ಮಾರ‍್ಪಾಡನ್ನೇನೂ ನಡೆಸಿಲ್ಲವಾದ ಕಾರಣ, ಅದರ ಬಳಕೆಯಲ್ಲಿ ಇವತ್ತು ಕೆಲವು ತೊಡಕುಗಳು ಕಾಣಿಸಿಕೊಳ್ಳುತ್ತಿವೆ.

ಸಂಸ್ಕ್ರುತ ಕಾವ್ಯಗಳನ್ನು ಇಲ್ಲವೇ ಬೇರೆ ಸಂಸ್ಕ್ರುತ ಬರಹಗಳನ್ನು ಬರೆಯಲು ಬೇಕಾಗುವ ಹಲವು ಹೆಚ್ಚಿನ ಬರಿಗೆಗಳನ್ನು ತಮಿಳು ಬರಹದಲ್ಲೇನೇ ಉಳಿಸಿಕೊಳ್ಳುವ ಬದಲು, ಅವರು ಗ್ರಂತ ಲಿಪಿಯೆಂಬ ಬೇರೆಯೇ ಒಂದು ಬಗೆಯ ಬರಹವನ್ನು ಬಳಕೆಗೆ ತಂದಿದ್ದರು. ಹಾಗಾಗಿ, ಈ ಬರಿಗೆಗಳ ತೊಡಕು ಅವರ ಬರಹವನ್ನು ತಟ್ಟಿಲ್ಲ.

ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ; ಈ ಬ್ರಾಹ್ಮಣರು ಆರ‍್ಯರಾಗಿದ್ದು, ಸಂಸ್ಕ್ರುತದ ಮೇಲೆ ಅವರಿಗೆ ಹೆಚ್ಚಿನ ಮಮತೆ ಮತ್ತು ಪೂಜ್ಯಬಾವವಿತ್ತು. ಹಾಗಾಗಿ, ಅವರು ಕನ್ನಡದ ಬರಹದಲ್ಲಿ ಸಂಸ್ಕ್ರುತ ಬರಹಕ್ಕೆ ಬೇಕಾಗುವ ಎಲ್ಲಾ ಬರಿಗೆಗಳನ್ನೂ, ಅವು ಕನ್ನಡಕ್ಕೆ ಬೇಡವಾಗಿದ್ದರೂ, ಉಳಿಸಿಕೊಂಡಿದ್ದರು, ಮತ್ತು ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು.

ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು; ಕೆಳವರ‍್ಗದ ಜನರು ಅದರಿಂದ ದೂರವೇ ಉಳಿದಿದ್ದರು. ತುಂಬಾ ಸಂಸ್ಕ್ರುತ ಪದಗಳನ್ನು ಬಳಸುವ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹಲವು ಬರಿಗೆಗಳನ್ನು ಬಳಸುವ ಈ ಬರಹವೂ ಅವರು ಈ ರೀತಿ ಅದರಿಂದ ದೂರ ಉಳಿಯಲು ಒಂದು ಕಾರಣವಾಗಿತ್ತು.

ಆದರೆ, ಇವತ್ತು ಬರಹಕ್ಕೆ ಕಳೆದ ಎರಡು ಸಾವಿರ ವರ‍್ಶಗಳಲ್ಲೂ ಇಲ್ಲದಿದ್ದಂತಹ ಮೇಲ್ಮೆ ದೊರೆತಿದೆ; ಇವತ್ತಿನ ಸಮಾಜದಲ್ಲಿ ಬರಹದ ಅರಿವಿಲ್ಲದವರು ಯಾರೂ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಂತಹ ಪರಿಸ್ತಿತಿಯುಂಟಾಗಿದೆ; ಇದಲ್ಲದೆ, ಎಲ್ಲಾ ಜನರೂ ಬರಹಬಲ್ಲವರಾಗದೆ ಇವತ್ತು ಯಾವ ಸಮಾಜವೂ ಏಳಿಗೆಹೊಂದಲಾರದು. ಹಾಗಾಗಿ, ಕನ್ನಡಿಗರ, ಅವರ ಸಮಾಜದ, ಮತ್ತು ಅವರ ಬರಹದ ಏಳಿಗೆಗಾಗಿ, ಇವತ್ತು ಕನ್ನಡ ಬರಹ ಎಲ್ಲರನ್ನೂ ತಲಪುವಂತೆ ಮಾಡಬೇಕಾಗಿದೆ, ಮತ್ತು ಇದಕ್ಕಾಗಿ ಕನ್ನಡಕ್ಕೆ ಬೇಕಿಲ್ಲದ ಹಲವು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ.

ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ: ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಬೇಕು ಎಂದು ಹೇಳಿದರೆ, ದ್ರಾವಿಡ ಕಳಗಂನವರು ಹೇಳುತ್ತಿದ್ದ ಹಾಗೆ, ಸಂಸ್ಕ್ರುತ ಪದಗಳನ್ನು ಬರಹಗಳಲ್ಲಿ ಬಳಸಲೇ ಕೂಡದು ಎಂದು ಹೇಳಿದ ಹಾಗಾಗುವುದಿಲ್ಲ. ನಿಜಕ್ಕೂ ಹಾಗೆ ಹೇಳಲಾಗಿದೆಯಾದರೆ, ಸಂಸ್ಕ್ರುತ ಎರವಲುಗಳನ್ನು ಕನ್ನಡದಲ್ಲಿ ಬರೆಯುವಾಗ ಮಹಾಪ್ರಾಣ, ಋಕಾರ ಮೊದಲಾದವುಗಳನ್ನು ಬಳಸಬೇಕಾಗಿಲ್ಲ ಎಂಬ ಇನ್ನೊಂದು ಹೇಳಿಕೆ ಬೇಕಾಗುವುದೇ ಇಲ್ಲ!

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾದಾಗಲೆಲ್ಲ, ಅದನ್ನು ಕಡಿಮೆ ಮಾಡಬೇಕೆಂಬುದಾಗಿ ಹಿಂದಿನಿಂದಲೂ ಕನ್ನಡದ ಬರಹಗಾರರು ಹೇಳುತ್ತಾ ಬಂದಿದ್ದಾರೆ. ಕವಿರಾಜಮಾರ‍್ಗಕಾರನಿಂದ ಹಿಡಿದು ಬಿಎಂಶ್ರೀಯವರ ವರೆಗೂ ಹಲವು ಮಂದಿ ಈ ವಿಶಯದಲ್ಲಿ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.

ಇವತ್ತು ಅರಿಮೆಯ (ವಿಜ್ನಾನದ) ಬರಹಗಳಿಗೆ ಬೇಕಾಗುವ ಹೊಸ ಪದಗಳನ್ನೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸದಾಗಿ ಉಂಟುಮಾಡಿಕೊಳ್ಳಲಾಗುತ್ತಿದೆ; ಕನ್ನಡದ ಪದ ಮತ್ತು ಒಟ್ಟುಗಳನ್ನು ತುಂಬಾ ಅಪರೂಪವಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ, ಅರಿಮೆಯ ಪದನೆರಕೆಗಳಲ್ಲಿ ಕನ್ನಡದವೇ ಆದ ಪದಗಳಿರುವುದು ತೀರಾ ಕಡಿಮೆ.

ಇಂತಹ ಪದನೆರಕೆಗಳನ್ನು ‘ಕನ್ನಡ’ದವೆಂದು ಹೇಳುವುದೇ ವಿಚಿತ್ರವಾಗಿ ಕಾಣಿಸುತ್ತದೆ. ನಿಜಕ್ಕೂ ಈ ರೀತಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಬದಲು, ಇಂಗ್ಲಿಶ್ ಪದಗಳನ್ನು ಹಾಗೆಯೇ ಎರವಲು ಪಡೆಯುವುದೇ ಕನ್ನಡಿಗರ ಮಟ್ಟಿಗೆ ಹೆಚ್ಚು ನೆರವಾಗಬಲ್ಲುದು; ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಲು ಅವರು ಇಂಗ್ಲಿಶ್ ಬರಹಗಳನ್ನು ಓದಬೇಕಾಗುತ್ತದೆಯಲ್ಲದೆ, ಸಂಸ್ಕ್ರುತದಲ್ಲಿ ಅವರಿಗೆ ಇವತ್ತಿನ ಅರಿಮೆಗಳ ಕುರಿತಾಗಿ ಎಂತಹ ಓದೂ ದೊರಕಲಾರದು.

ಆದರೆ, ಈ ವಿಶಯಗಳ ಕುರಿತಾಗಿ ಮಕ್ಕಳಿಗೆ ಅಡಿಕಲಿಕೆ ದೊರೆಯುವಂತೆ ಮಾಡಲು, ಮತ್ತು ಆಳವಾದ ತಿಳಿವು ದೊರೆಯುವಂತೆ ಮಾಡಲು, ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸುವ ಬದಲು ನಮ್ಮವೇ ಆದ ಕನ್ನಡ ಪದಗಳನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ?

ನುಡಿಯರಿಮೆಯ ಇಣುಕುನೋಟ – 6

ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು ಬಳಸಲೇ ಕೂಡದು ಎಂಬ ಒಂದು ಕಟ್ಟಲೆಯನ್ನು ಮಾಡಿರುತ್ತಾರೆ. ಮಕ್ಕಳು ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಮಾತ್ರವೇ ಬಳಸುತ್ತಿದ್ದಲ್ಲಿ ಅವರಿಗೆ ಅದನ್ನು ಬೇಗನೆ ಮತ್ತು ತಪ್ಪಿಲ್ಲದೆ ಬಳಸಲು ಬರಬಹುದೆಂಬ ತಪ್ಪು ಅನಿಸಿಕೆಯೇ ಈ ಕಟ್ಟಲೆಗೆ ಕಾರಣ.

ಕೆಲವು ಮನೆಗಳಲ್ಲಿಯೂ ಇದೇ ಕಾರಣಕ್ಕಾಗಿ ಮಕ್ಕಳೊಂದಿಗೆ ಅವರ ತಾಯ್ತಂದೆಯರು ಇಂಗ್ಲಿಶ್ ನುಡಿಯನ್ನೇ ಬಳಸತೊಡಗುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮಕ್ಕಳು ಚಿಕ್ಕಂದಿನಲ್ಲಿ ಕಲಿತಿದ್ದ ಕನ್ನಡ ನುಡಿಯನ್ನು ಮರೆಯುತ್ತಾ ಹೋಗುತ್ತಾರೆ, ಮತ್ತು ಕೊನೆಗೆ ಅವರಿಗೆ ಅದರಲ್ಲಿ ಮಾತನಾಡಲು ಬರುವುದಿಲ್ಲವೆಂದೇ ಆಗುತ್ತದೆ.

ಮಕ್ಕಳ ಬೆಳವಣಿಗೆಯ ಮಟ್ಟಿಗೆ ಇದು ಸರಿಯೇ ಎಂಬುದನ್ನು ಈ ಶಾಲೆಗಳನ್ನು ನಡೆಸುವವರಾಗಲಿ, ಇಲ್ಲವೇ ಮಕ್ಕಳ ತಾಯಿತಂದೆಯರಾಗಲಿ ಪರಿಶೀಲಿಸಿದ ಹಾಗಿಲ್ಲ. ಇಂಗ್ಲಿಶ್ ಕಲಿಯುವ ಮಕ್ಕಳು ಅದರೊಂದಿಗೆ ತರಗತಿಯಲ್ಲಿ ತಮ್ಮ ತಾಯ್ನುಡಿಯನ್ನೂ ಬಳಸುತ್ತಿದ್ದರೆ ಅವರಿಗೆ ಸರಿಯಾಗಿ ಇಂಗ್ಲಿಶ್ ಕಲಿಯಲು ಬರುವುದಿಲ್ಲ ಎಂಬ ಅನಿಸಿಕೆ ಹಿಂದಿನ ಕಾಲದಲ್ಲಿತ್ತು; ಆದರೆ, ಕಳೆದ ಕೆಲವು ವರ‍್ಶಗಳಲ್ಲಿ, ಅದರಲ್ಲೂ ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಅರಕೆಗಳೆಲ್ಲವೂ ಇದು ತಪ್ಪು ಅನಿಸಿಕೆಯೆಂಬುದನ್ನು ತೋರಿಸಿಕೊಟ್ಟಿವೆ.

ಒಂದು ನುಡಿಯನ್ನು ಶಾಲೆಗೆ ಬರುವ ಮೊದಲೇ ಕಲಿತಿರುವ ಮಕ್ಕಳು ಎರಡನೇ ನುಡಿಯನ್ನು ಆ ನುಡಿಯ ಮೂಲಕವೇನೇ ಕಲಿಯಬೇಕಾಗುತ್ತದೆ; ಮೊದಲಿಗೆ ಅವರು ತಮ್ಮ ತಾಯ್ನುಡಿಯ ಪದಗಳನ್ನು ಮತ್ತು ಕಟ್ಟಲೆಗಳನ್ನು ಎರಡನೇ ನುಡಿಯ ಮಾತುಗಳಲ್ಲಿ ಸೇರಿಸಿ ಹೇಳಬಹುದು; ಆದರೆ, ಇದು ಅವರ ಕಲಿಕೆಯ ಒಂದು ಹಂತವನ್ನು ಸೂಚಿಸುತ್ತದೆಯಲ್ಲದೆ, ಅವರು ಕಲಿಕೆಯಲ್ಲಿ ಗೊಂದಲಗೊಂಡಿರುವುದನ್ನಾಗಲಿ, ತಪ್ಪು ದಾರಿ ಹಿಡಿದಿರುವುದನ್ನಾಗಲಿ ಸೂಚಿಸುವುದಿಲ್ಲ. ಕಲಿಕೆ ಮುಂದುವರಿದಂತೆಲ್ಲ ಅವರು ಈ ಎರಡು ನುಡಿಗಳ ಪದಗಳನ್ನು ಮತ್ತು ಕಟ್ಟಲೆಗಳನ್ನು ಬೇರೆ ಬೇರಾಗಿ ಇರಿಸಿಕೊಳ್ಳಲು ಕಲಿಯುತ್ತಾರೆ.

ಮೊದಲನೇ ನುಡಿಯನ್ನು ಅವರು ಶಾಲೆಯಲ್ಲಿ ಬಳಸಲೇಬಾರದೆಂಬುದಾಗಿ ಅವರ ಮೇಲೆ ಒತ್ತಾಯ ಹೇರಿದರೆ, ಅವರಿಗೆ ಅದರ ಮೇಲೆ ಕೀಳರಿಮೆಯುಂಟಾಗುತ್ತದೆ ಮಾತ್ರವಲ್ಲ, ಅವರ ಎರಡನೇ ನುಡಿಯ ಕಲಿಕೆಯೂ ತೊಡಕಿನದಾಗುತ್ತದೆ. ಮಕ್ಕಳಿಗೆ ಚನ್ನಾಗಿ ತಿಳಿದಿರುವ ನುಡಿಯನ್ನು ಉಳಿಸಿ, ಅದರ ಮೂಲಕ ಎರಡನೆಯ ನುಡಿಯನ್ನು ಕಲಿಸುವುದೇ ಸರಿಯಾದ ದಾರಿ.

ಇದಲ್ಲದೆ, ಈ ಎರಡು ನುಡಿಗಳ ಬಳಕೆಯಲ್ಲೂ ಮಕ್ಕಳು ಒಂದೇ ರೀತಿಯಲ್ಲಿ ಪಳಗುವಂತೆ ಮಾಡುವ ಮೂಲಕ, ಅವರು ಒಂದು ನುಡಿಯನ್ನು ಮಾತ್ರವೇ ಬಳಸಬಲ್ಲ ಮಕ್ಕಳಿಗಿಂತ ಜಾಣತನದಲ್ಲಿ, ಬುದ್ದಿವಂತಿಕೆಯಲ್ಲಿ, ಮತ್ತು ನುಡಿಯನ್ನು ಬಳಸಲು ಬೇಕಾಗುವ ಹಲವು ಬಗೆಯ ಚಳಕಗಳಲ್ಲಿ ಮುಂದೆ ಹೋಗುತ್ತಾರೆ ಎಂಬುದನ್ನು ಇತ್ತೀಚೆಗೆ ನಡೆಸಿದ ಹಲವು ಅರಕೆಗಳು ತೋರಿಸಿಕೊಟ್ಟಿವೆ.

ಎರಡು ನುಡಿಗಳನ್ನು ಬಳಸುವವರು ಎರಡು ಬಗೆಯ ಪದಗಳನ್ನು ಮತ್ತು ಕಟ್ಟಲೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅವುಗಳಲ್ಲಿ ಒಂದು ನುಡಿಯನ್ನು ಬಳಸುವಾಗ ಆ ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಮಾತ್ರ ಬಳಕೆಯಾಗುವಂತೆ, ಮತ್ತು ಇನ್ನೊಂದು ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಲ್ಲಿ ಪಳಗಿರುವ ಮಕ್ಕಳು ತಾವು ಕಲಿತ ಈ ಚಳಕವನ್ನು ಬೇರೆ ಕೆಲಸಗಳಲ್ಲೂ ಬಳಸಬಲ್ಲರು.

ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಈ ಮಕ್ಕಳು ಅದಕ್ಕೆ ಸಂಬಂದಿಸಿದ ವಿಶಯಗಳನ್ನು ಮಾತ್ರವೇ ಗಮನದಲ್ಲಿರಿಸಿಕೊಂಡು, ಅದಕ್ಕೆ ಸಂಬಂದಿಸದ ವಿಶಯಗಳನ್ನು ದೂರ ಇರಿಸಬಲ್ಲರು. ಹಾಗಾಗಿ, ತೊಡಕುಗಳನ್ನು ಬಗೆಹರಿಸುವಲ್ಲಿ ಅವರು ಒಂದು ನುಡಿಯಲ್ಲಿ ಮಾತ್ರವೇ ಪಳಗಿರುವ ಮಕ್ಕಳಿಗಿಂತ ಮುಂದಿರುತ್ತಾರೆ.

ಎರಡು ನುಡಿಗಳಲ್ಲಿ ಪಳಗಿರುವ ಮಕ್ಕಳು ಸಂದರ‍್ಬಕ್ಕನುಸಾರವಾಗಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬಲ್ಲರು; ಒಂದು ಮಾತನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಮಾತನ್ನು ಇನ್ನೊಂದು ನುಡಿಯಲ್ಲಿ ಹೇಳಬಲ್ಲರು; ಎಂದರೆ, ಒಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸುತ್ತಿರುವವರು ಒಡನೆಯೇ ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬಲ್ಲರು. ಯಾವ ಸಂದರ‍್ಬದಲ್ಲಿ ಯಾವ ನುಡಿಯನ್ನು ಬಳಸಬೇಕು ಎಂಬುದೂ ಅವರಿಗೆ ತಿಳಿದಿರುತ್ತದೆ.

ಎರಡು ನುಡಿಗಳಲ್ಲಿ ಪಳಗುತ್ತಿರುವಾಗ ಪಡೆದ ಈ ಚಳಕವನ್ನೂ ಅವರು ಬೇರೆ ಕೆಲಸಗಳನ್ನು ನಡೆಸುವಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಒಂದು ನುಡಿಯನ್ನು ಮಾತ್ರವೇ ತಿಳಿದಿರುವ ಮಕ್ಕಳ ಮನಸ್ಸಿಗಿಂತ ಅವರ ಮನಸ್ಸು ಹೊಸ ಹೊಸ ಸಂದರ‍್ಬಗಳಿಗೆ ಹೊಂದಿಕೊಳ್ಳುವಂತಹ ಗುಣವನ್ನು ಹೆಚ್ಚು ಪಡೆದಿರುತ್ತದೆ, ಮತ್ತು ಈ ಕಾರಣಕ್ಕಾಗಿ ಅವರಿಗೆ ಹೆಚ್ಚು ತಾಳ್ಮೆಯಿರುತ್ತದೆ.

ಬೇರ‍್ಪಡಿಸುವುದು ಮತ್ತು ಒಂದೆಡೆ ಸೇರಿಸುವುದು ಎಂಬುದಾಗಿ ಎರಡು ಬಗೆಯ ಬಗೆತಗಳಿವೆ: ಒಂದು ವಸ್ತುವಿಗೆ ಎಶ್ಟೆಲ್ಲಾ ಬಳಕೆಗಳಿವೆ ಎಂಬುದನ್ನು ಕಂಡುಕೊಳ್ಳುವುದು ಬೇರ‍್ಪಡಿಸುವ ಬಗೆತ, ಮತ್ತು ಒಂದು ತೊಡಕಿಗೆ ಸಂಬಂದಿಸಿದ ಹಲವಾರು ವಿಶಯಗಳನ್ನು ಒಟ್ಟು ಸೇರಿಸಿ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಒಂದೆಡೆ ಸೇರಿಸುವ ಬಗೆತ. ಈ ಎರಡು ಬಗೆಯ ಬಗೆತಗಳನ್ನೂ ಎರಡು ನುಡಿಗಳನ್ನು ತಿಳಿದಿರುವ ಮಕ್ಕಳು ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹೆಚ್ಚು ಚನ್ನಾಗಿ ನಡೆಸಬಲ್ಲರು.

ಒಂದೇ ನುಡಿಯನ್ನು ತಿಳಿದಿರುವ ಮಕ್ಕಳು ಓದುತ್ತಿರುವಾಗ, ಅವರ ಗಮನ ಪದಗಳ ಉಲಿಗಳ ಮೇಲಿರುತ್ತದೆ;  ಇದಕ್ಕೆ ಬದಲು, ಎರಡು ನುಡಿಗಳನ್ನು ಚನ್ನಾಗಿ ತಿಳಿದಿರುವ ಮಕ್ಕಳ ಗಮನ ಪದಗಳ ಹುರುಳಿನ ಮೇಲಿರುತ್ತದೆ. ಹಾಗಾಗಿ, ಈ ಮಕ್ಕಳು ಬರಹಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಎರಡು-ಮೂರು ತರಗತಿಗಳಶ್ಟು ಮುಂದಿರುತ್ತಾರೆ.

ಎರಡು ನುಡಿಗಳ ತಿಳಿವು ಮಕ್ಕಳ ಮುಂದೆ ಎರಡು ಸಂಸ್ಕ್ರುತಿಗಳನ್ನು ತೆರೆದಿಡುತ್ತದೆ; ಆ ಎರಡು ನುಡಿಗಳ ಬರಹಗಳನ್ನೂ ಓದಲು ಕಲಿತಲ್ಲಿ, ಎರಡು ಬಗೆಯ ಬರಹ ಸಂಸ್ಕ್ರುತಿಗಳೂ ಅವರದಾಗುತ್ತವೆ. ಈ ತಿಳಿವು ಮುಂದೆ ಜೀವನದುದ್ದಕ್ಕೂ ಅವರ ನೆರವಿಗೆ ಬರುತ್ತದೆ.

ತಮಗೆ ತಿಳಿದಿರುವ ನುಡಿಯಲ್ಲಿ ಮಕ್ಕಳು ಹೆಚ್ಚು ಸುಲಬವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು. ಹಾಗಾಗಿ, ಮಕ್ಕಳಿಗೆ ಮೊದಲು ಅವರಿಗೆ ತಿಳಿದಿರುವ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸಿ, ಆಮೇಲೆ ಇಂಗ್ಲಿಶ್‌ನಲ್ಲಿ ಕಲಿಸುವುದೇ ಸರಿಯಾದ ದಾರಿ. ಯಾಕೆಂದರೆ, ಮೊದಲನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಯುವಾಗ ಪಡೆದ ಚಳಕಗಳನ್ನು ಅವರು ಸುಲಬವಾಗಿ ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್‌ನಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆಯಿಂದಾಗಿ, ಅದರ ಪದಗಳ ಬರವಣಿಗೆಯಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿನಲ್ಲಿ ಬರುವ ಉಲಿಗಳಿಗೂ ನಡುವೆ ಸಂಬಂದವಿದೆಯೆಂಬುದು ಅದನ್ನು ಓದಲು ಕಲಿಯುವವರಲ್ಲಿ ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ. ಆದರೆ, ಇದನ್ನು ಗಮನಿಸಲು ಬಾರದಿರುವ ಮಕ್ಕಳಿಗೆ ಬರಹಗಳನ್ನು ಸಲೀಸಾಗಿ ಓದಲು ಬರುವುದಿಲ್ಲ.

ಕನ್ನಡ ಬರಹದಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ. ಸಂಸ್ಕ್ರುತದ ಎರವಲು ಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ. ಹಾಗಾಗಿ, ಮಕ್ಕಳಿಗೆ ಮೊದಲು ಕನ್ನಡದವೇ ಆದ ಪದಗಳು ಮಾತ್ರ ಇರುವ ಬರಹಗಳನ್ನು ಓದಲು ಕಲಿಸಿದಲ್ಲಿ, ಅವರು ಬಹಳ ಬೇಗನೆ ಅವನ್ನು ಸಲೀಸಾಗಿ ಓದುವುದು ಹೇಗೆಂಬುದನ್ನು ತಿಳಿದುಕೊಳ್ಳಬಲ್ಲರು.

ಅವರಿಗೆ ಇಂಗ್ಲಿಶ್ ಬರಹಗಳನ್ನು ಓದಲು ಆಮೇಲೆ ಕಲಿಸಿದಲ್ಲಿ, ಕನ್ನಡದ ಓದಿನಲ್ಲಿ ತಾವು ಪಡೆದ ಚಳಕವನ್ನು ಅವರು ಅಲ್ಲಿಯೂ ಬಳಸಿ ಹೆಚ್ಚು ಬೇಗನೆ ಅವನ್ನು ಸರಿಯಾಗಿ ಓದಲು ಕಲಿಯಬಲ್ಲರು.

ಬರೆಯುವ ಕೆಲಸವನ್ನೂ ಮಕ್ಕಳು ತಮಗೆ ಚನ್ನಾಗಿ ತಿಳಿದಿರುವ ಕನ್ನಡದಲ್ಲಿ ಹೆಚ್ಚು ಬೇಗನೆ ನಡೆಸಲು ಕಲಿಯಬಲ್ಲರು, ಮತ್ತು ಆಮೇಲೆ ಇಂಗ್ಲಿಶ್‌ನಲ್ಲಿ ಬರೆಯಬೇಕಾದಾಗ, ಆ ಚಳಕವನ್ನೇ ಅಲ್ಲಿಯೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್ ನುಡಿಯ ಮೇಲಿರುವ ವ್ಯಾಮೋಹದಿಂದಾಗಿ, ಕನ್ನಡ ನುಡಿ ಕೊಡಬಲ್ಲ ಈ ಎಲ್ಲಾ ಪ್ರಯೋಜನಗಳನ್ನೂ ಮಕ್ಕಳು ಕಳೆದುಕೊಳ್ಳುವಂತೆ ಮಾಡುವುದು ಹೆಡ್ಡತನವಲ್ಲವೇ?

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಯಾವುದು ಕನ್ನಡದ ಸೊಗಡು?

ನುಡಿಯರಿಮೆಯ ಇಣುಕುನೋಟ – 5

ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ, ನಿಜಕ್ಕೂ ಈ ಮಾರ‍್ಪಾಡು ಕನ್ನಡದ ಸೊಗಡನ್ನು ಉಳಿಸುತ್ತದೆಯಲ್ಲದೆ ಅಳಿಸುವುದಿಲ್ಲ.

ಕನ್ನಡ ಕಾವ್ಯಗಳಲ್ಲಿ ತುಂಬಾ ಸಂಸ್ಕ್ರುತ (ತತ್ಸಮ) ಪದಗಳನ್ನು ಬಳಸಿದೆವಾದರೆ ಅವು ಕಕ್ಕಸ(ಕರ‍್ಕಶ)ವಾಗುತ್ತವೆಯೆಂದು ಕವಿರಾಜಮಾರ‍್ಗದಲ್ಲಿ ಹೇಳಲಾಗಿದೆ; ಆ ರೀತಿ ಕಕ್ಕಸವಾಗದಂತೆ ತನ್ನ ಕಾವ್ಯಗಳಲ್ಲಿ ತದ್ಬವ ಪದಗಳನ್ನು ಮಾತ್ರವೇ ಬಳಸಿರುವ ಆಂಡಯ್ಯನಿಗೆ ‘ಕನ್ನಡದ ಕಾವ’ ಎಂದರೆ, ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಕಾಪಾಡಿದವನು ಎಂಬ ಬಿರುದನ್ನು ಕೊಡಲಾಗಿದೆ. ತತ್ಸಮ ಪದಗಳನ್ನು ಬಳಸದುದರಿಂದಾಗಿ ಆತನು ಕನ್ನಡದ ಸೊಗಡನ್ನು ಕಳೆದಿದ್ದಾನೆಂದು ಯಾರೂ ಆತನನ್ನು ದೂರಿಲ್ಲ.

ಸಂಸ್ಕ್ರುತ ಎರವಲುಗಳನ್ನು ಕನ್ನಡಿಗರು ಹೇಗೆ ಓದುತ್ತಾರೋ ಹಾಗೆಯೇ ಬರೆಯೋಣ ಎನ್ನುವುದೂ ಇದೇ ರೀತಿಯಲ್ಲಿ ಕನ್ನಡದ ಸೊಗಡನ್ನು ಉಳಿಸುವ ಪ್ರಯತ್ನವಲ್ಲದೆ ಅಳಿಸುವ ಪ್ರಯತ್ನವಲ್ಲ. ಯಾಕೆಂದರೆ, ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆದಲ್ಲಿ, ಅವು ತದ್ಬವ ಪದಗಳ ಹಾಗೆ ಕನ್ನಡದ ಸೊಗಡನ್ನು ಕಾಪಾಡುತ್ತವೆ.

ಸಂಸ್ಕ್ರುತ ಎರವಲುಗಳನ್ನು ತದ್ಬವರೂಪದಲ್ಲಿ ಬರೆಯುವಾಗ, ಅವುಗಳಲ್ಲಿರುವ ಶ-ಷಗಳ ನಡುವಿನ ವ್ಯತ್ಯಾಸ, ರು-ಋಗಳ ನಡುವಿನ ವ್ಯತ್ಯಾಸ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸಗಳು ಇಲ್ಲವಾಗುತ್ತವೆ; ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಓದುವ ಹಾಗೆ ಬರೆಯುವಾಗಲೂ ಇಂತಹವೇ ವ್ಯತ್ಯಾಸಗಳು ಇಲ್ಲವಾಗುತ್ತವೆ. ಹಾಗಾಗಿ, ತದ್ಬವ ಪದಗಳ ಬಳಕೆಯಿಂದ ಹೇಗೆ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲವೋ ಹಾಗೆಯೇ ಸಂಸ್ಕ್ರುತ ಎರವಲುಗಳನ್ನು ಓದುವ ಹಾಗೆ ಬರೆಯುವುದರಿಂದಲೂ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲ.

ಹೆಚ್ಚಿನ ಕನ್ನಡಿಗರೂ ಮಹಾಪ್ರಾಣ, ಷಕಾರ, ಋಕಾರ ಮೊದಲಾದುವನ್ನು ಮಾತನಾಡುವಾಗ ಇಲ್ಲವೇ ಓದುವಾಗ ಬಳಸುವುದಿಲ್ಲ ಎಂಬುದಾಗಿ ನಾನು ಹೇಳಿರುವುದು ಬರಿಯ ಊಹೆಯ ಮೇಲಲ್ಲ. ಅದಕ್ಕೆ ಸಾಕಶ್ಟು ಅರಕೆಯ ಆದಾರವಿದೆ: ಸುಮಾರು ಒಂದೂವರೆ ತಿಂಗಳು ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳ ಜನರ ಮಾತನ್ನು ಗಮನಿಸಿದ್ದೇನೆ. ಆಮೇಲೆ, ಅಂತಹದೇ ಅರಕೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ‍್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ.

ಇದಲ್ಲದೆ, ಹಲವು ಮಂದಿ ಸಂಸ್ಕ್ರುತ ಪಂಡಿತರ ಕನ್ನಡ ಮಾತನ್ನೂ ನಾನು ಗಮನಿಸಿದ್ದೇನೆ. ಬರಿಯ ಪದಗಳನ್ನು ಉಲಿದು ತೋರಿಸುವಾಗ ಅವರು ಈ ವ್ಯತ್ಯಾಸಗಳನ್ನು ಹೆಚ್ಚುಕಡಿಮೆ ಸರಿಯಾಗಿಯೇ ಉಳಿಸಿಕೊಳ್ಳುತ್ತಾರೆ; ಆದರೆ, ಅವನ್ನೇ ಮಾತಿನಲ್ಲಿ ಬಳಸುವಾಗ ಈ ಎಲ್ಲಾ ವ್ಯತ್ಯಾಸಗಳೂ ಇಲ್ಲವಾಗುತ್ತವೆ.

ನಿಜಕ್ಕೂ ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಈ ವ್ಯತ್ಯಾಸ ಕೇಳಿಸುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ಅಸ್ವಾಬಾವಿಕವೆಂದು ಅನಿಸುತ್ತದೆ.

ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿಲ್ಲದ ಈ ಸಂಸ್ಕ್ರುತ ಪದಗಳ ವ್ಯತ್ಯಾಸವನ್ನು ಕನ್ನಡ ಬರಹದಲ್ಲಿ ಸುಮಾರು ಒಂದೂವರೆ ಸಾವಿರ ವರ‍್ಶಗಳಿಂದಲೂ ಉಳಿಸಿಕೊಂಡು ಬರಲಾಗಿದೆ. ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹವನ್ನು ಮೇಲ್ವರ‍್ಗದ ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರಾದ ಕಾರಣ, ಇದು ಅಂತಹ ತೊಡಕಿನ ಸಂಗತಿಯೆಂದು ಯಾರಿಗೂ ಅನಿಸಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರೂ ಕನ್ನಡ ಬರಹವನ್ನು ಕಲಿತು ಬಳಸಲು ತೊಡಗಬೇಕಾಗಿದೆ; ಯಾಕೆಂದರೆ, ಬರಹವನ್ನು ಬಳಸಲಾರದವರು ತಮ್ಮ ಜೀವನದಲ್ಲಿ ಒಂದು ಅತ್ಯಮೂಲ್ಯವಾದ ಸಾದನದಿಂದ ವಂಚಿತರಾಗುತ್ತಾರೆ. ಒಂದು ನಾಡಿನಲ್ಲಿ ಅಂತಹ ಜನ ಹೆಚ್ಚು ಇದ್ದಶ್ಟೂ ಆ ನಾಡು ಹಿಂದೆಯೇ ಉಳಿದಿರುತ್ತದೆ. ಇವತ್ತು ಬರಹಕ್ಕೆ ಅಂತಹ ಪ್ರಾಮುಕ್ಯತೆ ಬಂದಿದೆ.

ಹಾಗಾಗಿ, ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಒಂದು ದೊಡ್ಡ ತೊಡಕಾಗಿರುವ ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡುವುದೇ ಇವತ್ತು ನಮ್ಮ ಮುಂದಿರುವ ಸರಿಯಾದ ದಾರಿ. ಹಾಗೆ ಮಾಡುವುದರಿಂದ ಕನ್ನಡ ಬರಹದ ಸೊಗಡು ಇಲ್ಲವೇ ಸಂಸ್ಕ್ರುತಿ ಉಳಿಯುತ್ತದೆಯಲ್ಲದೆ ಅಳಿಯುವುದಿಲ್ಲ; ಅದರ ಮೇಲೆ ಹೊರಿಸಲಾಗಿರುವ ಬೇರೊಂದು ಸಂಸ್ಕ್ರುತಿಯ ಹೊರೆ ಮಾತ್ರ ಇಲ್ಲವಾಗುತ್ತದೆ.

ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಮದ್ಯ-ಮಧ್ಯ, ದನ-ಧನ ಎಂಬಂತಹ ಹಲವು ಪದಗಳ ನಡುವಿನ ವ್ಯತ್ಯಾಸ ಇಲ್ಲವಾಗಿ, ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ; ಆದರೆ, ಈ ವಾದದಲ್ಲಿ ನಿಜಕ್ಕೂ ತಿರುಳಿಲ್ಲ. ಯಾಕೆಂದರೆ, ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿ, ಮೇಲೆ ವಿವರಿಸಿದ ಹಾಗೆ, ಈ ವ್ಯತ್ಯಾಸ ಹೇಗಿದ್ದರೂ ಇಲ್ಲ, ಮತ್ತು ಇದರಿಂದಾಗಿ ಯಾವ ಗೊಂದಲವೂ ಆಗುತ್ತಾ ಇಲ್ಲ.

ಇದಲ್ಲದೆ, ಯಾವುದೇ ಒಂದು ನುಡಿಯ ಪದನೆರಕೆಯನ್ನು ಬಿಡಿಸಿ ನೋಡಿದರೂ ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳಿರುವ ನೂರಾರು ಪದಗಳು ಕಾಣಲು ಸಿಗುತ್ತವೆ. ಸಂಸ್ಕ್ರುತದಲ್ಲಂತೂ ಇದು ಇನ್ನೂ ಹೆಚ್ಚು; ಅದರ ಹೆಚ್ಚಿನ ಪದಗಳಿಗೂ ಅಯ್ದು ಇಲ್ಲವೇ ಹೆಚ್ಚು ಹುರುಳುಗಳಿವೆಯೆಂದು ಹೇಳಲಾಗುತ್ತದೆ.

ಸಂಸ್ಕ್ರುತದ ಅರ್ಥ ಪದಕ್ಕೆ ‘ಹುರುಳು’ ಮತ್ತು ‘ಹಣ’ ಎಂಬವುಗಳು ಮಾತ್ರವಲ್ಲದೆ, ‘ಉದ್ದೇಶ’, ‘ಕಾರಣ’, ‘ವಸ್ತು’ ಮೊದಲಾದ ಬೇರೆಯೂ ಹಲವು ಹುರುಳುಗಳಿವೆ; ವಿಷ ಪದಕ್ಕೆ ‘ನಂಜು’ ಎಂಬ ಹುರುಳು ಮಾತ್ರವಲ್ಲದೆ, ‘ನೀರು’ ಮತ್ತು ‘ಸೇವಕ’ ಎಂಬ ಹುರುಳುಗಳೂ ಇವೆ (ಮೋನಿಯರ್ ವಿಲ್ಲಿಯಂಸ್ ಅವರ ಸಂಸ್ಕ್ರುತ-ಇಂಗ್ಲಿಶ್ ಡಿಕ್ಶ್‌ನರಿ ನೋಡಿ). ಆದರೆ, ಈ ರೀತಿ ಒಂದೇ ಪದಕ್ಕೆ ಹಲವು ಹುರುಳುಗಳಿರುವುದನ್ನು ಯಾರೂ ಸಂಸ್ಕ್ರುತದ ಕೊರತೆಯೆಂದು ಹೇಳುವುದಿಲ್ಲ; ಅದಕ್ಕೆ ಬದಲಾಗಿ, ಅದು ಸಂಸ್ಕ್ರುತದ ಶ್ರೀಮಂತಿಕೆಯೆಂದು ಹೇಳುತ್ತಾರೆ.

ಸಾಮಾನ್ಯವಾಗಿ ಪದಗಳನ್ನು ಬಳಸಿರುವ ಸಂದರ‍್ಬವೇ ಅವುಗಳನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಸುತ್ತದೆ; ‘ಹುಡುಗ ಮಾರ‍್ಗದ ಮದ್ಯದಲ್ಲಿ ನಿಂತಿದ್ದಾನೆ’ ಎಂದು ಬರೆದರೆ, ಅದರಲ್ಲಿ ಮದ್ಯದಲ್ಲಿ ಎಂಬುದನ್ನು ‘ನಡುವೆ’ ಎಂಬ ಹುರುಳಿನಲ್ಲಿ ಬಳಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ; ಇಲ್ಲಿ ಮದ್ಯ ಎಂಬುದಕ್ಕೆ ‘ಸಾರಾಯಿ’ ಎಂಬ ಹುರುಳಿರಬಹುದೆಂದು ಯಾರಿಗೂ ಅನಿಸುವುದಿಲ್ಲ. ಇದನ್ನು ಮಧ್ಯದಲ್ಲಿ ಎಂಬುದಾಗಿ ನೋಡಿ ಬಳಕೆಯಾದವರಿಗೆ ಮಾತ್ರ ಇದು ತಪ್ಪೆಂದು ಅನಿಸುತ್ತದೆ, ಅಶ್ಟೆ. ಹುರುಳಿನ ಗೊಂದಲವೇನೂ ಉಂಟಾಗುವುದಿಲ್ಲ.

ಎರಡು ಹುರುಳುಗಳಿರುವ ಪದಗಳನ್ನು ಅವುಗಳ ಎರಡು ಹುರುಳೂ ಒಟ್ಟಿಗೆ ಬರುವ ಹಾಗೆ ಬರೆಯುವುದು ಕವಿಗಳು, ಮತ್ತು ಬೇಕೆಂದೇ ತಮ್ಮ ಓದುಗರನ್ನು ಗೊಂದಲದಲ್ಲಿ ಸಿಲುಕಿಸಲು ಬಯಸುವವರು ಮಾತ್ರ. ಬಾಕಿ ಉಳಿದವರೆಲ್ಲ ಓದುಗರ ಗಮನಕ್ಕೆ ತಮ್ಮ ಮನಸ್ಸಿನಲ್ಲಿರುವ ಒಂದು ಹುರುಳು ಮಾತ್ರ ಬರುವ ಹಾಗೆ ಬರೆಯುತ್ತಾರೆ; ಈ ವಿಶಯದಲ್ಲಿ ಗೊಂದಲವೇನಾದರೂ ಉಂಟಾಗಬಹುದೆಂಬ ಸಂಶಯ ಅವರಿಗೆ ಇದೆಯಾದಲ್ಲಿ, ಅವರು ಬೇರೆಯೇ ಪದವನ್ನು ಬಳಸುತ್ತಾರೆ, ಇಲ್ಲವೇ ಗೊಂದಲವಾಗದಂತೆ ಸೊಲ್ಲನ್ನು ಮಾರ‍್ಪಡಿಸಿ ಬರೆಯುತ್ತಾರೆ.

ಇದಲ್ಲದೆ, ಸಾಮಾನ್ಯವಾಗಿ ಅಂತಹ ಪದಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಸಂದರ‍್ಬಕ್ಕೆ ಹೊಂದಿಕೆಯಾಗುವಂತಹ ಒಂದು ಹುರುಳು ಮಾತ್ರ ಓದುಗರ ಗಮನಕ್ಕೆ ಬರುತ್ತದೆ. ಅವಕ್ಕೆ ಇನ್ನೊಂದು ಹುರುಳೂ ಇದೆಯೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಕೆಲವೊಮ್ಮೆ ಈ ವಿಶಯವನ್ನು ಅವರ ಗಮನಕ್ಕೆ ತರಬೇಕಿದ್ದಲ್ಲಿ, ಆ ಪದಗಳನ್ನು ಅವುಗಳ ಇನ್ನೊಂದು ಹುರುಳಿಗೆ ಹೊಂದಿಕೆಯಾಗುವಂತಹ ಬೇರೊಂದು ಸೊಲ್ಲಿನಲ್ಲಿ ಬಳಸಿ ತೋರಿಸಬೇಕಾಗುತ್ತದೆ.

ಮಹಾಪ್ರಾಣ, ಷಕಾರ, ಋಕಾರ ಮೊದಲಾದವುಗಳನ್ನು ಬಳಸದಿದ್ದರೆ ಹುರುಳಿನ ಮಟ್ಟಿಗೆ ಯಾವ ಗೊಂದಲವೂ ಉಂಟಾಗುವುದಿಲ್ಲ ಎಂಬ ಈ ಮಾತನ್ನು ಬೆಂಬಲಿಸುವ ಇನ್ನೊಂದು ವಿಶಯವೇನೆಂದರೆ, 2006 ರ ಬಳಿಕ ನಾನು ಬರೆದ ಎಲ್ಲಾ ಒಂಬತ್ತು ಪುಸ್ತಕಗಳಲ್ಲೂ (ಒಟ್ಟು 2600 ಪುಟಗಳು) ಈ ಬರಿಗೆಗಳನ್ನು ಬಳಸಿಲ್ಲ; ಹಾಗಿದ್ದರೂ, ಇದುವರೆಗೆ ಅವನ್ನು ಓದಿದವರಲ್ಲಿ ಯಾರೊಬ್ಬರೂ ಅದರಿಂದಾಗಿ ವಿಶಯವನ್ನು ತಿಳಿದುಕೊಳ್ಳುವಲ್ಲಿ ತಮಗೆ ತೊಂದರೆಯಾಗಿದೆಯೆಂದು ಹೇಳಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಇಂಗ್ಲಿಶ್ ಕಲಿಕೆಗೆ ಕನ್ನಡದ ನೆರವು ಬೇಕು

ನುಡಿಯರಿಮೆಯ ಇಣುಕುನೋಟ – 4

ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಶ್ ಕಲಿಸುವುದನ್ನು ಯಾವ ತರಗತಿಯಲ್ಲಿ ತೊಡಗಬೇಕು ಎಂಬ ವಿಶಯದಲ್ಲಿ ಇವತ್ತು ಬಹಳಶ್ಟು ಚರ‍್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಮೊದಲನೇ ತರಗತಿಯಿಂದಲೇ ಕಲಿಸಲು ತೊಡಗಬೇಕೆಂದು ಕೆಲವರು ಹೇಳುತ್ತಾರೆ, ಮತ್ತು ಮೂರು ಇಲ್ಲವೇ ಅಯ್ದನೇ ತರಗತಿಯಿಂದ ಕಲಿಸಲು ತೊಡಗಿದರೆ ಸಾಕೆಂದು ಬೇರೆ ಕೆಲವರು ಹೇಳುತ್ತಾರೆ.

ಮೊದಲನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಸಲು ತೊಡಗಬೇಕೆಂದು ಹೇಳುವವರು ನಿಜಕ್ಕೂ ಕೆಲವು ತಪ್ಪು ಅನಿಸಿಕೆಗಳನ್ನಿರಿಸಿಕೊಂಡು ಹಾಗೆ ಹೇಳುತ್ತಿದ್ದಾರೆ. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ನುಡಿಯನ್ನು ಕಲಿತುಕೊಳ್ಳಬಲ್ಲರು; ಹಾಗಾಗಿ, ಚಿಕ್ಕವರಾಗಿರುವಾಗಲೇ ಇಂಗ್ಲಿಶ್ ಕಲಿಸಲು ತೊಡಗಿದರೆ, ಅವರು ಬೇಗನೆ ಮತ್ತು ಸುಲಬವಾಗಿ ಆ ನುಡಿಯನ್ನು ಕಲಿತುಕೊಳ್ಳಬಲ್ಲರೆಂಬುದು ಅವರ ಒಂದು ತಪ್ಪು ಅನಿಸಿಕೆ.

ಮೊದಲನೇ ತರಗತಿಯಿಂದಲೇ ಕಲಿಸತೊಡಗಿದರೆ, ಕಾಲೇಜಿಗೆ ಹೋಗುವಶ್ಟರ ಹೊತ್ತಿಗೆ ಅವರಿಗೆ ಹೆಚ್ಚು ಸಮಯದ ಇಂಗ್ಲಿಶ್ ಕಲಿಕೆ ದೊರೆಯುತ್ತದೆ; ಹಾಗಾಗಿ, ಆ ನುಡಿಯಲ್ಲಿ ಅವರಿಗೆ ಎಲ್ಲಾ ವಿಶಯಗಳನ್ನೂ ಇಂಗ್ಲಿಶ್‌ನಲ್ಲೇ ಕಲಿಯುತ್ತಿರುವ ಮಕ್ಕಳೊಂದಿಗೆ ಸೆಣಸಲು ಹೆಚ್ಚು ಅನುಕೂಲವಾಗುತ್ತದೆ ಎಂಬುದು ಇನ್ನೊಂದು ತಪ್ಪು ಅನಿಸಿಕೆ.

ಈ ಎರಡು ಅನಿಸಿಕೆಗಳೂ ತಪ್ಪೆಂಬುದಾಗಿ ಇದುವರೆಗೆ ನಡೆಸಿರುವ ಹಲವಾರು ಸಂಶೋದನೆಗಳು ತೋರಿಸಿಕೊಟ್ಟಿವೆ: ಶಾಲೆಯಲ್ಲಿ ಫ್ರೆಂಚ್ ನುಡಿಯನ್ನು ಕಲಿಯುತ್ತಿದ್ದ ಹದಿನೇಳು ಸಾವಿರ ಬ್ರಿಟಿಶ್ ಮಕ್ಕಳ ಕಲಿಕೆಯನ್ನು ಒಂದು ಅರಕೆಯಲ್ಲಿ ಗಮನಿಸಲಾಗಿತ್ತು. ಅವರಲ್ಲಿ ಕೆಲವು ಮಕ್ಕಳು ಈ ಕಲಿಕೆಯನ್ನು ಎಂಟನೇ ವರ‍್ಶದಲ್ಲೇನೇ ತೊಡಗಿದ್ದರು; ಆದರೆ, ಬೇರೆ ಕೆಲವು ಮಕ್ಕಳು ಈ ಕಲಿಕೆಯನ್ನು ತೊಡಗುವಾಗ ಹತ್ತು ಕಳೆದು ಹನ್ನೊಂದು ವರ‍್ಶವಾಗಿತ್ತು.

ಅಯ್ದು ವರ‍್ಶದ ಕಲಿಕೆಯ ಬಳಿಕ, ಎಂಟನೇ ವರ‍್ಶದಲ್ಲಿ ಕಲಿಯಲು ತೊಡಗಿದವರಿಗಿಂತಲೂ ಹನ್ನೊಂದನೇ ವರ‍್ಶದಲ್ಲಿ ಕಲಿಯಲು ತೊಡಗಿದವರೇ ಹೆಚ್ಚು ಚನ್ನಾಗಿ ಪ್ರೆಂಚ್ ಬಳಸಬಲ್ಲವರಾಗಿದ್ದರು. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ತಮ್ಮ ಎರಡನೇ ನುಡಿಯನ್ನು ಕಲಿಯಬಲ್ಲರೆಂಬ ಅನಿಸಿಕೆ ತಪ್ಪು ಎಂಬುದು ಇದರಿಂದ ಗೊತ್ತಾಗುತ್ತದೆ.

ಇಂಗ್ಲಿಶ್ ಕಲಿಯುವ ಸ್ವೀಡಿಶ್ ಮತ್ತು ಡೇನಿಶ್ ಮಕ್ಕಳ ಕಲಿಕೆಯನ್ನು ಮತ್ತು ಫ್ರೆಂಚ್ ಕಲಿಯುವ ಸ್ವಿಸ್ ಮಕ್ಕಳ ಕಲಿಕೆಯನ್ನು ಪರಿಶೀಲಿಸಿದಾಗಲೂ ಚಿಕ್ಕ ಮಕ್ಕಳಿಗಿಂತ ದೊಡ್ಡ ಮಕ್ಕಳೇ ತಮ್ಮ ಎರಡನೇ ನುಡಿಯನ್ನು ಹೆಚ್ಚು ಸುಲಬವಾಗಿ ಮತ್ತು ಬೇಗನೆ ಕಲಿಯಬಲ್ಲರೆಂದು ಕಂಡುಬಂದಿದೆ.

ಹಲವು ಜನರಲ್ಲಿರುವ ಈ ಮೊದಲನೇ ತಪ್ಪು ಅನಿಸಿಕೆಗೆ ಚಿಕ್ಕ ಮಕ್ಕಳು ತಮ್ಮ ತಾಯ್ನುಡಿಯನ್ನು ಬಹಳ ಬೇಗನೆ ಯಾರ ಸಹಾಯವೂ ಇಲ್ಲದೆ ಪಡೆಯಬಲ್ಲರೆಂಬುದೇ ಆದಾರವಾಗಿರಬೇಕು. ಆದರೆ ಮಕ್ಕಳು ತಮ್ಮ ಮೊದಲನೆಯ ತಾಯ್ನುಡಿಯನ್ನು ಪಡೆಯುವುದಕ್ಕೂ, ಆಮೇಲೆ ಶಾಲೆಯಲ್ಲಿ ತಮ್ಮ ಎರಡನೆಯ ನುಡಿಯನ್ನು ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ.

ಮೊದಲನೆಯ ನುಡಿಯನ್ನು ಪಡೆಯುವಾಗ ಮಕ್ಕಳಿಗೆ ಸಿಗುವಂತಹ ಹುಟ್ಟಿನಿಂದ ಬಂದ ಅಳವು ಎರಡನೆಯ ನುಡಿಯನ್ನು ಕಲಿಯುವಾಗ ದೊರಕುವುದಿಲ್ಲ. ಹಾಗಾಗಿ, ಎರಡನೆಯ ನುಡಿಯನ್ನು ಅವರು ಬೇರೆಯೇ ರೀತಿಯಲ್ಲಿ ಕಲಿಯಬೇಕಾಗುತ್ತದೆ.

ಇದಲ್ಲದೆ, ಎರಡನೆಯ ನುಡಿಯನ್ನು ಕಲಿಯುವ ಮಕ್ಕಳ ಮಿದುಳಿನಲ್ಲಿ ಮೊದಲನೆಯ ನುಡಿ ನೆಲೆನಿಂತಿರುತ್ತದೆ; ಹಾಗಾಗಿ, ಆ ನುಡಿಯ ಮೂಲಕವೇನೇ ಅವರು ಎರಡನೆಯ ನುಡಿಯನ್ನು ಕಲಿಯಬೇಕಾಗುತ್ತದೆ. ಮೊದಲನೆಯ ನುಡಿಯನ್ನು ಬಳಸುವಲ್ಲಿ ಸಾಕಶ್ಟು ಪಳಗುವ ಮೊದಲೇ ಎರಡನೆಯ ನುಡಿಯನ್ನು ಅವರ ಮೇಲೆ ಹೇರಿದಲ್ಲಿ, ಅವರು ತಡವರಿಸುತ್ತಾರೆ.  ಅದರಲ್ಲೂ ಮೊದಲನೆಯ ನುಡಿಯಲ್ಲಿ ಓದುವ ಮತ್ತು ಬರೆಯುವ ಕೆಲಸಗಳನ್ನು ನಡೆಸಲು ಕಲಿಯುವ ಮೊದಲೇ ಎರಡನೆಯ ನುಡಿಯಲ್ಲಿ ಅವನ್ನು ನಡೆಸುವಂತೆ ಮಾಡಿದಲ್ಲಿ, ಹೆಚ್ಚಿನ ಮಕ್ಕಳೂ ಹಿಂದೆ ಬೀಳುತ್ತಾರೆ.

ಇಂಗ್ಲಿಶ್ ಬಳಸಲು ಸಮಯ ಹೆಚ್ಚು ದೊರೆತಶ್ಟೂ ಮಕ್ಕಳು ಆ ನುಡಿಯನ್ನು ಹೆಚ್ಚು ಚನ್ನಾಗಿ ಕಲಿಯಬಲ್ಲರು ಎಂಬ ಎರಡನೆಯ ಅನಿಸಿಕೆಯೂ ತಪ್ಪು ಎಂಬುದಾಗಿ ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ: ಕೆಮರೂನ್‌ನ ಶಾಲೆಗಳಲ್ಲಿ ಇಂಗ್ಲಿಶ್ ಕಲಿಕೆನುಡಿಯಾಗಿರುವ ಮಕ್ಕಳು ವಾರಕ್ಕೆ ೨೨ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ, ಮತ್ತು ತಾಯ್ನುಡಿ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ವಾರಕ್ಕೆ ಬರೇ ೩ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ.

ಹೀಗಿದ್ದರೂ, ೧೨ ಇಂಗ್ಲಿಶ್ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವನ್ನು ೧೨ ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವಿನೊಂದಿಗೆ ಹೋಲಿಸಿ ನೋಡಿದಾಗ, ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳೇ ಮುಂದಿರುವುದು ಕಂಡುಬಂದಿದೆ. ಅಮೆರಿಕಾದಲ್ಲಿ ನಡೆಸಿದ ಇಂತಹದೇ ಇನ್ನೊಂದು ಅರಕೆ, ಮತ್ತು ಬೇರೆಯೂ ಕೆಲವು ಅರಕೆಗಳು ಇದೇ ತೀರ‍್ಮಾನಕ್ಕೆ ಬಂದಿವೆ.

ಇಲ್ಲಿ ಒಂದು ಮುಕ್ಯವಾದ ವಿಶಯವನ್ನು ನಾವು ಗಮನಿಸುವುದು ಅವಶ್ಯ. ನುಡಿಯ ಕಲಿಕೆಯೆಂಬುದು ನಿಜಕ್ಕೂ ಎರಡು ರೀತಿಯದು. ದಿನಬಳಕೆಗೆ ಬೇಕಾಗುವ ಮಾತುಗಳನ್ನು ಸಲೀಸಾಗಿ ನುಡಿಯಲು ಕಲಿಯುವುದು ಒಂದು ರೀತಿಯ ಕಲಿಕೆ; ಮತ್ತು ಗಣಿತ, ವಿಜ್ನಾನ ಮೊದಲಾದ ವಿಶಯಗಳನ್ನು ತಿಳಿಯುವುದಕ್ಕಾಗಿ, ಮತ್ತು ಹಾಗೆ ತಿಳಿದುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳುವುದಕ್ಕಾಗಿ, ನುಡಿಯನ್ನು ಬಳಸಲು ಕಲಿಯುವುದು ಇನ್ನೊಂದು ರೀತಿಯ ಕಲಿಕೆ.

ಒಂದು ನುಡಿಯಲ್ಲಿ ಸಲೀಸಾಗಿ ಮಾತನಾಡಲು ಎರಡರಿಂದ ಮೂರು ವರ‍್ಶಗಳ ಕಲಿಕೆ ಸಾಕಾಗುತ್ತದೆ; ಆದರೆ, ಅದರ ಮೂಲಕ ಸಿಕ್ಕಲು ಸಿಕ್ಕಲಾದ ವಿಶಯಗಳನ್ನು ತಿಳಿಯುವ, ಮತ್ತು ಇತರರಿಗೆ ಅವನ್ನು ತಿಳಿಸುವ ಅಳವನ್ನು ಪಡೆಯಲು ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆ. ಇಂಗ್ಲಿಶ್‌ನಲ್ಲಿ ಕಲಿಯುವ ಮಕ್ಕಳು ಮೊದಲನೆಯ ಕಲಿಕೆಯನ್ನು ಪಡೆಯುವಲ್ಲಿ ಇತರರಿಗಿಂತ ಮುಂದಿರುತ್ತಾರೆ; ಆದರೆ ಎರಡನೇ ರೀತಿಯ ಕಲಿಕೆಯನ್ನು ನಡೆಸಬೇಕಾದಾಗ, ಅವರು ಹಿಂದೆ ಬೀಳತೊಡಗುತ್ತಾರೆ, ಮತ್ತು ಆಮೇಲೆ ಅವರು ಮುಂದೆ ಹೋಗುವುದೇ ಇಲ್ಲ.

ಎರಡನೇ ರೀತಿಯ ಕಲಿಕೆಯನ್ನು ನಡೆಸಲು ಮಕ್ಕಳಿಗೆ ಅವರ ತಾಯ್ನುಡಿಯ ನೆರವು ಬೇಕಾಗುತ್ತದೆ ಎಂಬುದೇ ಇದಕ್ಕೆ ಕಾರಣ ಎಂಬುದನ್ನು ಕಂಡುಕೊಳ್ಳಲಾಗಿದೆ. ಸಾಮಾನ್ಯವಾಗಿ, ಇಂಗ್ಲಿಶ್ ಶಾಲೆಗಳಲ್ಲಿ ಮಕ್ಕಳಿಗೆ ಅವರ ತಾಯ್ನುಡಿಯ ಮೇಲೆ ಕೀಳರಿಮೆಯುಂಟಾಗುವ ಹಾಗೆ ಮಾಡಲಾಗುತ್ತದೆ; ಆ ನುಡಿಯ ಸಹಾಯವನ್ನು ಸ್ಪಲ್ಪವೂ ಪಡೆಯದೆ ಎರಡನೇ ನುಡಿಯನ್ನು ಕಲಿಯುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಅವರಿಗೆ ಇಂಗ್ಲಿಶ್‌ನಲ್ಲಿ ಎರಡನೇ ರೀತಿಯ ಕಲಿಕೆಯನ್ನು ನಡೆಸಲು ತುಂಬಾ ಕಶ್ಟವಾಗುತ್ತದೆ.

ತಾಯ್ನುಡಿಯಲ್ಲಿ ಮಾತನಾಡುವುದನ್ನು ಮಾತ್ರವಲ್ಲದೆ ಓದುವುದನ್ನು ಮತ್ತು ಬರೆಯುವುದನ್ನೂ ಕಲಿತಿರುವ ಮಕ್ಕಳಿಗೆ ಎರಡನೇ ನುಡಿಯಲ್ಲಿ ಅಂತಹದೇ ಕಲಿಕೆಯನ್ನು ನಡೆಸಲು ಆ ತಿಳಿವು ಒಂದು ಕೊಂಡಿಯಾಗಿ ಕೆಲಸ ಮಾಡುತ್ತದೆ. ಅಂತಹ ಕಲಿಕೆಯನ್ನು ನಡೆಸುವ ಮೊದಲೇ ಮಕ್ಕಳಿಂದ ಅವರ ತಾಯ್ನುಡಿಯನ್ನು ದೂರಮಾಡಿದಲ್ಲಿ ಅವರಿಗೆ ಈ ಕೊಂಡಿ ಸಿಗುವುದಿಲ್ಲ.

ಇದಲ್ಲದೆ, ಮಕ್ಕಳಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯಬೇಕಾದರೆ, ಅವರು ತಮ್ಮ ತಾಯ್ನುಡಿಯಲ್ಲಿ ತೊಡಗಿರುವಂತಹ ತಿಳಿವು ಪಡೆಯುವ ಕೆಲಸವನ್ನು ಅದರಲ್ಲೇನೇ ಮುಂದುವರಿಸಿಕೊಂಡು ಹೋಗುವ ಹಾಗೆ ಮಾಡುವುದು ಅವಶ್ಯ; ಅದನ್ನು ನಡುವೆಯೇ ನಿಲ್ಲಿಸಿ, ಆ ಕೆಲಸವನ್ನು ಬೇರೊಂದು ನುಡಿಯಲ್ಲಿ ನಡೆಸುವಂತೆ ಅವರ ಮೇಲೆ ಒತ್ತಡ ಹೇರಿದಲ್ಲಿ, ಹೆಚ್ಚಿನವರಲ್ಲೂ ಗೊಂದಲವುಂಟಾಗುತ್ತದೆ, ಮತ್ತು ಬಳಿಕ ಅವರಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯುವುದೇ ಇಲ್ಲ.

ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಎಲ್ಲಾ ಅರಕೆಗಳೂ ಮೇಲಿನ ತೀರ‍್ಮಾನಗಳನ್ನು ಬೆಂಬಲಿಸಿವೆ; ಶಾಲೆಗೆ ಬರುವ ಹೊತ್ತಿಗೆ ಚನ್ನಾಗಿ ಬಳಸಲು ತಿಳಿದಿರುವ ನುಡಿಯಲ್ಲಿ ಮಕ್ಕಳ ಕಲಿಕೆಯನ್ನು ಮುಂದುವರಿಸಿದಲ್ಲಿ ಮಾತ್ರ ಅವರು ಬೇರೊಂದು ನುಡಿಯ ಕಲಿಕೆಯನ್ನು ಚನ್ನಾಗಿ ನಡೆಸಬಲ್ಲರು. ಅದನ್ನು ಕಡೆಗಣಿಸುವಂತೆ ಮಾಡಿದಲ್ಲಿ, ಅವರು ಹಲವಾರು ತೊಡಕುಗಳಿಗೆ ಮತ್ತು ಗೊಂದಲಗಳಿಗೆ ಒಳಗಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳನ್ನು ಓದುವ ಹಾಗೆಯೇ ಬರೆಯಬೇಕು

ನುಡಿಯರಿಮೆಯ ಇಣುಕುನೋಟ – 3

ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತೇವೆ: ವಿಶೇಶ ಎಂಬುದಾಗಿ ಓದಿದರೂ ವಿಶೇಷ ಎಂಬುದಾಗಿ ಬರೆಯುತ್ತೇವೆ, ಮತ್ತು ಅದಿಕಾರಿ ಎಂಬುದಾಗಿ ಓದಿದರೂ ಅಧಿಕಾರಿ ಎಂಬುದಾಗಿ ಬರೆಯುತ್ತೇವೆ.

ಸಂಸ್ಕ್ರುತವನ್ನು ಹೊರತುಪಡಿಸಿ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳನ್ನೆಲ್ಲ ಓದುವ ಹಾಗೆ ಬರೆಯುತ್ತೇವಲ್ಲದೆ, ಆ ನುಡಿಗಳಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ. ಇಂಗ್ಲಿಶ್‌ನ ವಯ್ಪರ್ ಮತ್ತು ವಯ್ರಸ್ ಪದಗಳ ಮೊದಲ ಬರೆಗೆಗಳು ಇಂಗ್ಲಿಶ್‌ನಲ್ಲಿ ಬೇರಾಗಿವೆ, ಆದರೆ ಕನ್ನಡದಲ್ಲಿ ವ ಎಂಬ ಒಂದೇ ಬರಿಗೆಯನ್ನು ಬಳಸಲಾಗುತ್ತದೆ. ಅವೆರಡನ್ನೂ ಒಂದೇ ರೀತಿ ಓದುತ್ತಿರುವುದೇ ಇದಕ್ಕೆ ಕಾರಣ.

ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಬರೆಯಬೇಕಾಗಿದೆಯಾದರೆ, ಅದು ಅಂತಹ ಬರಹವನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತದೆ; ಕನ್ನಡ ಬರಹದ ಈ ಸಂಪ್ರದಾಯ ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ತೊಡಕುಗಳನ್ನು ಕೊಡುತ್ತಿದೆ:

(೧) ಓದಲು ಮತ್ತು ಬರೆಯಲು ಕಲಿಯಹೊರಡುವ ಮಕ್ಕಳು ಅನವಶ್ಯಕವಾಗಿ ಹದಿನೇಳು ಹೆಚ್ಚಿನ ಬರಿಗೆ(ಅಕ್ಶರ)ಗಳನ್ನು ಕಲಿಯಬೇಕಾಗುತ್ತದೆ.

(೨) ಸರಿಯಾಗಿ ಮತ್ತು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ (ಎತ್ತುಗೆಗೆ, ಮನೆ ಎಂಬುದನ್ನು ಮ್, ಅ, ನ್ ಮತ್ತು ಎ ಎಂಬ ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ) ಎಂಬುದನ್ನು ಗಮನಿಸಬೇಕು, ಮತ್ತು ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬರಿಗೆಗಳನ್ನು ಬಳಸಲಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇವೆರಡನ್ನು ಗಮನಿಸಿದವರು ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗಲೂ ಅವನ್ನು ಸುಲಬವಾಗಿ ಓದಬಲ್ಲವರಾಗುತ್ತಾರೆ.

ಪದಗಳನ್ನು ಓದುವ ಹಾಗೆಯೇ ಬರೆದಿದೆಯಾದರೆ ಮಾತ್ರ, ಈ ರೀತಿ ಓದುವಾಗ ಬಳಸುವ ಉಲಿಗೂ ಬರಹದಲ್ಲಿ ಕಾಣಿಸುವ ಬರಿಗೆಗಳಿಗೂ ನಡುವೆ ಸಂಬಂದವಿದೆ ಎಂಬುದು ಓದಲು ಕಲಿಯುವವರ ಗಮನಕ್ಕೆ ಸುಲಬವಾಗಿ ಬರುತ್ತದೆ.

ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಪದಗಳನ್ನು ಬರೆದಿದೆಯಾದರೆ, ಅವುಗಳಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವೆ ಇಂತಹದೊಂದು ಸಂಬಂದವಿದೆಯೆಂಬುದು ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ, ಮತ್ತು ಇದರಿಂದಾಗಿ ಎಶ್ಟು ಕಲಿತರೂ ಅವರಿಗೆ ಸಲೀಸಾಗಿ ಓದಲು ಬರುವುದೇ ಇಲ್ಲ. ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗ ಅವನ್ನು ಹೇಗೆ ಓದಬೇಕೆಂಬುದು ಅವರಿಗೆ ಗೊತ್ತಾಗುವುದೂ ಇಲ್ಲ.

(೩) ಓದುವ ಹಾಗೆ ಬರೆಯುವ ಪದಗಳನ್ನು ಬರಹಗಳಲ್ಲಿ ಬಳಸುವುದು ಸುಲಬ; ಬೇರೆ ಬಗೆಯಲ್ಲಿ ಬರೆಯುವ ಒಂದೊಂದು ಪದವನ್ನೂ ಅದನ್ನು ಬರೆಯುವುದು ಹೇಗೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಮನೆ ಎಂಬ ಪದವನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಹೇಗೆ ಬರೆಯುವುದೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿಲ್ಲ.
ಆದರೆ, ವಿಶೇಷ ಎಂಬ ಪದವನ್ನು ಬರೆಯುವಾಗ ಎರಡನೆಯ ಮುಚ್ಚುಲಿಯನ್ನು ಶ್ ಎಂಬುದಾಗಿ, ಮತ್ತು ಮೂರನೆಯ ಮುಚ್ಚುಲಿಯನ್ನು ಷ್ ಎಂಬುದಾಗಿ ಬರೆಯಬೇಕೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಯಾಕೆಂದರೆ, ಅವೆರಡನ್ನೂ ಒಂದೇ ರೀತಿಯಲ್ಲಿ ಓದಲಾಗುತ್ತದೆ.ಇದನ್ನು ನೆನಪಿನಲ್ಲಿಟ್ಟುಕೊಳ್ಳಲಾರದವರು ಬರವಣಿಗೆಯಲ್ಲಿ ತಪ್ಪು ಮಾಡುತ್ತಾರೆ.

ಇವತ್ತು ದಿನಪತ್ರಿಕೆಗಳಲ್ಲಿ, ಕತೆ-ಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸುವುದು ಓದುವ ಹಾಗೆ ಬರೆಯದಿರುವ ಮಹಾಪ್ರಾಣಾಕ್ಶರ, ಷಕಾರ, ಋಕಾರ ಮೊದಲಾದ ಬರಿಗೆಗಳಿರುವ ಸಂಸ್ಕ್ರುತ ಪದಗಳ ಬಳಕೆಯಲ್ಲಿ ಎಂಬುದನ್ನು ಗಮನಿಸಬಹುದು.

(೪) ಸಾಮಾನ್ಯವಾಗಿ ಜನರು ಪದಕೋಶಗಳನ್ನು ನೋಡಲು ಹೋಗುವುದು ಹೊಸದಾಗಿ ಅವರ ಓದಿನಲ್ಲಿ ಕಾಣಿಸಿಕೊಳ್ಳುವ ಪದಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಾಗಿ; ಆದರೆ, ಓದುವ ಹಾಗೆ ಬರೆಯದಿರುವ ವಿಶೇಷ, ಅಧಿಕಾರಿ ಮೊದಲಾದ ಪದಗಳನ್ನು ಅವುಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಿಂತಲೂ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ ಪದಕೋಶಗಳನ್ನು ನೋಡಬೇಕಾಗುತ್ತದೆ. ಓದುವ ಹಾಗೆಯೇ ಬರೆಯುವ ಯಾವ ಪದವನ್ನೂ ಈ ರೀತಿ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯಲು ಪದಕೋಶವನ್ನು ನೋಡಬೇಕಾಗುವುದಿಲ್ಲ.

(೫) ಕೆಳವರ‍್ಗದ ಮಕ್ಕಳಲ್ಲಿ ಇಂತಹ ಪದಗಳ ಕಲಿಕೆ ಕೀಳರಿಮೆಯನ್ನು ಉಂಟುಮಾಡುತ್ತದೆ; ಅವು ಕೊಡುವ ತೊಂದರೆಯಿಂದಾಗಿ ಕೆಲವರು ಬರಹದ ಕಲಿಕೆಯನ್ನು ನಡುವಿನಲ್ಲೇ ನಿಲ್ಲಿಸಿಬಿಡುತ್ತಾರೆ. ಓದಲು ಕಲಿತವರೂ ಅದನ್ನು ತುಂಬಾ ಅಪರೂಪವಾಗಿ ಮಾತ್ರ ಬಳಸುತ್ತಾರೆ. ಯಾಕೆಂದರೆ, ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.
ಸಮಾಜಗಳಲ್ಲಿ ಹಲವಾರು ಬಗೆಯ ಸಂಪ್ರದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಬಳಕೆಗೆ ಬರುತ್ತವೆ, ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನಗಳೇನೂ ಇಲ್ಲದಿದ್ದರೂ, ಹೆಚ್ಚಿನ ತೊಂದರೆಯಿಲ್ಲವಾದಲ್ಲಿ ಅವು ಹಾಗೆಯೇ ವರ‍್ಶಗಟ್ಟಲೆ ಸಮಯ ಮುಂದುವರಿಯುತ್ತಿರುತ್ತವೆ.

ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬುದೂ ಇಂತಹದೇ ಒಂದು ಸಂಪ್ರದಾಯ. ಅದರಿಂದ ಕನ್ನಡ ಬರಹದ ಮಟ್ಟಿಗೆ ಯಾವ ಪ್ರಯೋಜನವೂ ಇಲ್ಲ. ಹಳೆಗನ್ನಡದ ಸಮಯದಲ್ಲಿ ಇಂತಹ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು, ಇಲ್ಲವೇ ಕನ್ನಡದ ಸೊಗಡನ್ನು ಕೆಡಿಸದಂತೆ ಅವನ್ನು ಮಾರ‍್ಪಡಿಸಿ ತದ್ಬವಗಳನ್ನಾಗಿ ಮಾಡಿಯೂ ಬಳಸಬಹುದಿತ್ತು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಅಂತಹ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ.

ಆದರೆ, ಇವತ್ತು ಹೊಸಗನ್ನಡದಲ್ಲಿ ಬರಹಗಾರರು ಈ ಆಯ್ಕೆಯನ್ನು ಕಳೆದುಕೊಂಡಿದ್ದಾರೆ. ಬಳಕೆಯಲ್ಲಿರುವ ಕೆಲವೇ ಕೆಲವು ತದ್ಬವ ಪದಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಸ್ಕ್ರುತ ಪದಗಳನ್ನೂ ಇವತ್ತು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿದೆ. ಅವುಗಳಲ್ಲಿ ಯಾವುದೇ ಬಗೆಯ ಮಾರ‍್ಪಾಡನ್ನು ನಡೆಸಿದರೂ ಅದನ್ನು ತಪ್ಪೆಂದು ತಿಳಿಯಲಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೂ ಈ ಸಂಪ್ರದಾಯ ಹೆಚ್ಚಿನ ತೊಂದರೆಯನ್ನೇನೂ ಕೊಡುತ್ತಿರಲಿಲ್ಲ. ಯಾಕೆಂದರೆ, ಸಮಾಜದಲ್ಲಿ ಮೇಲ್ವರ‍್ಗಕ್ಕೆ ಸೇರಿದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸಬೇಕಾಗಿತ್ತು, ಮತ್ತು ಅವರಲ್ಲಿ ಹೆಚ್ಚಿನವರೂ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು; ಹಾಗಾಗಿ, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡುಹೋಗುವುದು ಅವರಿಗೆ ತೊಡಕಿನದಾಗಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರು ಮತ್ತು ಎಲ್ಲರೂ ಬರಹವನ್ನು ಬಳಸಬೇಕಾಗಿದೆ. ಯಾಕೆಂದರೆ, ಇವತ್ತು ಸಮಾಜದಲ್ಲಿ ಬರಹಕ್ಕೆ ಅಂತಹದೊಂದು ಪ್ರಾಮುಕ್ಯತೆ ಬಂದಿದೆ. ಬರಹವನ್ನು ಬಳಸಲು ತಿಳಿಯದವರು ಮುಂದೆ ಬರಲು ಸಾದ್ಯವೇ ಇಲ್ಲ, ಮತ್ತು ಅಂತಹ ಹಲವು ಮಂದಿ ಜನರಿರುವ ಸಮಾಜ ಏಳಿಗೆಯಾಗಲೂ ಸಾದ್ಯವೇ ಇಲ್ಲ ಎಂಬ ಪರಿಸ್ತಿತಿ ಇವತ್ತಿನದಾಗಿದೆ.

ಈ ರೀತಿ ಕನ್ನಡ ಬರಹವನ್ನು ಬಳಸಲು ಕಲಿಯಲೇ ಬೇಕಾಗಿರುವ ಜನರಲ್ಲಿ ಹೆಚ್ಚಿನವರಿಗೂ ಸಂಸ್ಕ್ರುತದ ಅರಿವು ಬೇಕಾಗಿಲ್ಲ; ಅದಕ್ಕಿಂತಲೂ ಅವರಿಗೆ ಇಂಗ್ಲಿಶ್ ನುಡಿಯ ಅರಿವು ಹೆಚ್ಚಿನ ನೆರವು ನೀಡಬಲ್ಲುದು. ಹಾಗಾಗಿ, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಸಂಪ್ರದಾಯ ಒಂದು ಹೆಚ್ಚಿನ ತೊಡಕನ್ನು ಮಾತ್ರ ತಂದೊಡ್ಡುತ್ತದಲ್ಲದೆ, ಅದರಿಂದ ಅವರು ಪಡೆಯಬಹುದಾದ ಪ್ರಯೋಜನ ಯಾವುದೂ ಇಲ್ಲ.

ಈ ರೀತಿ ಕನ್ನಡದ ಮಟ್ಟಿಗೆ ಯಾವ ಪ್ರಯೋಜನವನ್ನೂ ನೀಡದ, ಹಲವು ಮಂದಿ ಕನ್ನಡಿಗರಿಗೆ ತೊಡಕನ್ನು ಮಾತ್ರವೇ ಕೊಡುವ, ಮತ್ತು ನಮ್ಮ ಸಮಾಜದ ಏಳಿಗೆಗೂ ತೊಡಕಾಗಿರುವ ಈ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಜಾಣತನ. ಇದು ಒಂದೂವರೆ-ಎರಡು ಸಾವಿರ ವರ‍್ಶದ ಹಿಂದಿನ ಸಮಾಜಕ್ಕಾಗಿ ಮಾಡಿಕೊಂಡಿದ್ದ ಸಂಪ್ರದಾಯ. ಇಂದಿನ ಸಮಾಜ ಆಗಿನದಕ್ಕಿಂತ ತೀರ ಬೇರೆಯಾಗಿದೆ. ಹೀಗಿರುವಾಗಲೂ ಆ ಹಳೆಯ ಸಂಪ್ರದಾಯವನ್ನು ತೊರೆಯಲು ಹಿಂಜರಿಯುವುದೆಂದರೆ, ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳುವ ಹಾಗೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮನೆಯ ಹೊರಗಡೆ ಅಡಿಗೆಮನೆ ಪಾಕಶಾಲೆಯಾಗಬೇಕೇ?

ನುಡಿಯರಿಮೆಯ ಇಣುಕುನೋಟ – 2

ಕನ್ನಡಿಗರ ಪದಬಳಕೆಯ ವಿಶಯದಲ್ಲಿ ಒಂದು ಸೋಜಿಗದ ಸಂಗತಿಯಿದೆ. ಅದೇನೆಂದು ತಿಳಿಯಲು ಕೆಲವು ಎತ್ತುಗೆಗಳನ್ನು ತೆಗೆದುಕೊಳ್ಳೋಣ:

ಮನೆಯಲ್ಲಿ ಅಡಿಗೆಮನೆ, ಊಟದಕೋಣೆ ಎನ್ನುವ ನಾವು ಸಮ್ಮೇಳನಗಳಂತಹ ಸಂದರ‍್ಬಗಳಲ್ಲಿ ಅವುಗಳ ಬದಲಾಗಿ ಪಾಕಶಾಲೆ, ಬೋಜನಶಾಲೆ ಎನ್ನುತ್ತೇವೆ. ಬಟ್ಟೆಯಂಗಡಿಗೆ ಹೋಗುತ್ತೇನೆ ಎನ್ನುತ್ತೇವೆ; ಆದರೆ, ಅಂತಹ ಅಂಗಡಿಗಳಿಗೆ ಹೆಸರು ಕೊಡಬೇಕಾದಾಗ, ವಸ್ತ್ರಾಲಯ ಇಲ್ಲವೇ ವಸ್ತ್ರಬಂಡಾರ ಎಂಬ ಹೆಸರುಗಳಶ್ಟೇ ಹೊಳೆಯುತ್ತವೆ. ತಿಂಡಿಗಳನ್ನು ಮಾರುವ ಅಂಗಡಿ ತಿಂಡಿಮನೆಯಾಗಿಬಿಟ್ಟರೆ ಅದೇನೋ ಮುಜುಗರ, ಉಪಹಾರಗ್ರುಹವೇ ಆಗಬೇಕು.

ನಾಯಿಯ ಕುರಿತು ಬರೆದ ಬರಹದಲ್ಲಿ ಉದ್ದಕ್ಕೂ ನಾಯಿ ಎಂಬ ಪದವೇ ಬಳಕೆಯಾಗಿದೆಯಾದರೂ, ತಲೆಬರಹದಲ್ಲಿ ಮಾತ್ರ ಶ್ವಾನವಿದ್ದರಶ್ಟೇ ನೆಮ್ಮದಿ. ಮದುವೆಯ ಕರೆಯೋಲೆ ಕಳುಹಿಸುವ ಬದಲು ವಿವಾಹ ಆಮಂತ್ರಣ ಕಳಿಸಿದರೆ ಮಾತ್ರ ಮದುವೆಗೆ ಬರುತ್ತಾರೇನೋ ಎಂಬ ಅನಿಸಿಕೆ ನಮ್ಮಲ್ಲಿ ಹಲವರಲ್ಲಿದ್ದಂತಿದೆ.

ಹಾಗೆಯೇ, ಪುಸ್ತಕಗಳಿಗೆ ಹೆಸರು ಕೊಡುವಲ್ಲೂ ಬಳಕೆಯಲ್ಲಿರುವ ಪದಗಳಿಗಿಂತ ಬಳಕೆಯಲ್ಲಿಲ್ಲದ ಮತ್ತು ಹೆಚ್ಚು ಮಂದಿಗೆ ತಿಳಿಯದ ಪದಗಳೇ ಚಂದವೆಂದು ಹಲವು ಬರಹಗಾರರಿಗೆ ಅನಿಸುತ್ತದೆ. ಮನೆಗಳಿಗೆ, ಅಂಗಡಿಗಳಿಗೆ, ಕೂಟಗಳಿಗೆ, ಇಲ್ಲವೇ ಹಲವು ಬಗೆಯ ಹಮ್ಮುಗೆಗಳಿಗೆ ಹೆಸರು ಕೊಡಬೇಕಾಗಿರುವಲ್ಲೂ ನಮ್ಮ ಒಡಲಿನಿಂದ ನೇರವಾಗಿ ಬರುವ ಪದಗಳು ತಕ್ಕವೆಂದು ತೋರುವುದೇ ಇಲ್ಲ; ದೂರದರ‍್ಶನ, ದಿನಪತ್ರಿಕೆ, ಉಚ್ಚಶಿಕ್ಶಣ, ನಿರುದ್ಯೋಗ ಸಮಸ್ಯೆ, ಜನಗಣನೆ, ಲೋಕಾಯುಕ್ತ, ಪಟ್ಯಪುಸ್ತಕ ಮೊದಲಾದ ಹಲವು ಬಗೆಯ ಪದಗಳನ್ನು ಉಂಟುಮಾಡುವಲ್ಲಿ ಕೂಡ ಇದೇ ಸೋಜಿಗವನ್ನು ಕಾಣಬಹುದು.

ಇಂತಹ ಹಲವಾರು ‘ಮೇಲ್ಮಟ್ಟದ’ ಸನ್ನಿವೇಶಗಳಲ್ಲಿ ನಮ್ಮ ನಾಲಿಗೆಗಳಿಗೆ ತಂತಾನೇ ಬರುವ ಪದಗಳು – ಎಂದರೆ ಕನ್ನಡದವೇ ಆದ ಪದಗಳು – ಬಳಕೆಗೆ ತಕ್ಕವಲ್ಲ, ಮೇಲೆ ಕಾಣಿಸಿದಂತೆ ಸಂಸ್ಕ್ರುತದಿಂದ ಎರವಲು ಪಡೆದ ಪದಗಳೇ ತಕ್ಕವು ಎಂಬ ಕೀಳರಿಮೆ ನಮ್ಮಲ್ಲಿ ಹೆಚ್ಚಿನವರಲ್ಲಿದೆ. ಇದೊಂದು ಸೋಜಿಗವಲ್ಲದೆ ಮತ್ತೇನು?

ಹಿಂದಿನ ಕಾಲದಲ್ಲಿ ಕನ್ನಡ ನುಡಿ ಸಂಸ್ಕ್ರುತದ ಕಳೆಗೆಟ್ಟ ರೂಪ ಎಂಬ ಅನಿಸಿಕೆ ಹಲವು ಕನ್ನಡ ಪಂಡಿತರಲ್ಲಿತ್ತು; ಕನ್ನಡ ಪದಗಳಿಗಿಂತ ಸಂಸ್ಕ್ರುತ ಪದಗಳು ಮೇಲ್ಮಟ್ಟದವು ಎಂಬುದಾಗಿ ಅವರು ತಿಳಿಯುತ್ತಿದ್ದುದಕ್ಕೆ ಈ ತಪ್ಪು ಅನಿಸಿಕೆ ಕಾರಣವಾಗಿತ್ತು; ಆದರೆ, ನಿಜಕ್ಕೂ ಕನ್ನಡ ಸಂಸ್ಕ್ರುತದ ಕಳೆಗೆಟ್ಟ ರೂಪ ಅಲ್ಲ, ಅದಕ್ಕಿಂತ ತೀರ ಬೇರಾಗಿರುವ ಒಂದು ಸ್ವತಂತ್ರವಾದ ನುಡಿ ಎಂಬುದನ್ನು ಇವತ್ತು ನಾವು ಕಂಡುಕೊಂಡಿದ್ದೇವೆ. ಹಾಗಾಗಿ, ಇವತ್ತಿಗೂ ಸಂಸ್ಕ್ರುತ ಪದಗಳು ಕನ್ನಡ ಪದಗಳಿಂದ ಮೇಲ್ಮಟ್ಟದವು ಎಂದು ಬಾವಿಸುವುದಕ್ಕೆ ಯಾವ ಆದಾರವೂ ಇಲ್ಲ.

ಈ ರೀತಿ ಹೊಸಪದಗಳನ್ನು ಉಂಟುಮಾಡಬೇಕಾಗಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸದಿರುವುದಕ್ಕೆ ಅವುಗಳ ಕುರಿತಾಗಿ ಕೀಳರಿಮೆ ಇರುವುದು ಒಂದು ಕಾರಣವಾದರೆ, ತಮಗೆ ಬೇಕಾಗಿರುವ ಹೊಸ ಪದಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿಲ್ಲ ಎಂಬ ತಪ್ಪು ಕಲ್ಪನೆ ಇನ್ನೊಂದು ಕಾರಣ. ಸಂಸ್ಕ್ರುತದಲ್ಲಿರುವಶ್ಟು ಒಟ್ಟು(ಪ್ರತ್ಯಯ)ಗಳು ಮತ್ತು ಪದಗಳು ಕನ್ನಡದಲ್ಲಿಲ್ಲ; ಹಾಗಾಗಿ, ಹಲವು ಬಗೆಯ ಪದಗಳನ್ನು ಹೊಸದಾಗಿ ಉಂಟುಮಾಡುವಲ್ಲಿ ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬ ಅನಿಸಿಕೆ ಹಲವರಲ್ಲಿದೆ.

ಆದರೆ, ಇದು ತಪ್ಪು ಅನಿಸಿಕೆ. ಎಂತಹ ವಿಶಯವನ್ನು ಬೇಕಿದ್ದರೂ ತಿಳಿಸಲು ಬೇಕಾಗುವಂತಹ ಪದಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿದೆ. ಎಲ್ಲಾ ಸ್ವಾಬಾವಿಕವಾಗಿ ಬೆಳೆದುಬಂದ ನುಡಿಗಳಿಗೂ ಇಂತಹ ಅಳವು ಇರುತ್ತದೆ. ಕನ್ನಡದ ಈ ಅಳವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡು, ಅದನ್ನು ಬಳಸಿ, ಕನ್ನಡಕ್ಕೆ ಬೇಕಾಗಿರುವ ಹೊಸ ಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಅಂತಹ ಹೊಸ ಪದಗಳಿರುವ ಬರವಣಿಗೆಯನ್ನು ಹೆಚ್ಚು ಹೆಚ್ಚು ಕನ್ನಡಿಗರು ಸುಲಬವಾಗಿ ಓದಿ ತಿಳಿದುಕೊಳ್ಳಬಲ್ಲರು, ಮತ್ತು ಬರವಣಿಗೆಯ ಮೂಲಕ ನಡೆಯುವ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೂ ಬಲ್ಲರು. ಬರವಣಿಗೆಯ ಗುರಿಯೇ ಇದಲ್ಲವೆ?

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಪದಗಳ ಸೊಗಡು ಎಂಬುದಿರುತ್ತದೆ; ಕನ್ನಡ ಪದಗಳ ಸೊಗಡು ಸಂಸ್ಕ್ರುತ ಪದಗಳ ಸೊಗಡಿಗಿಂತ ತೀರ ಬೇರಾಗಿದೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿದಂತೆಲ್ಲ, ಅದರ ಪದಗಳ ಸೊಗಡು ಮರೆಯಾಗುತ್ತಾ ಹೋಗುತ್ತದೆ, ಮತ್ತು ಅದನ್ನು ಓದಿ ತಿಳಿಯುವ ಕೆಲಸ ಕನ್ನಡಿಗರಿಗೆ ಹೆಚ್ಚು ಹೆಚ್ಚು ತೊಡಕಿನದಾಗುತ್ತಾ ಹೋಗುತ್ತದೆ.

ಹಾಗಾಗಿ, ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಎರವಲು ಪದಗಳನ್ನು ಬಳಸಹೋಗದೆ, ಅದರ ಪದಗಳ ಸೊಗಡನ್ನು ಉಳಿಸಿಕೊಳ್ಳಬೇಕು ಎನ್ನುವುದು ಬರಿಯ ಅಬಿಮಾನದ ಪ್ರಶ್ನೆ ಮಾತ್ರ ಅಲ್ಲ; ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪಬೇಕು ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಬರಬೇಕೆಂಬ ಮುಕ್ಯವಾದ ಗುರಿಯನ್ನು ಮುಟ್ಟುವ ಪ್ರಶ್ನೆಯೂ ಹೌದು.

ಇತ್ತೀಚೆಗೆ ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವವರು ಈ ವಿಶಯವನ್ನು ಪೂರ‍್ತಿ ಮರೆತಿರುವಂತೆ ಕಾಣುತ್ತದೆ. ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಕಾಣಿಸದೆ ಹೋಗುತ್ತಿವೆ. ಅವರು ಉಂಟುಮಾಡಿರುವ ಪದಕೋಶಗಳಲ್ಲಿ ನೂರಕ್ಕೆ ತೊಂಬತ್ತರಶ್ಟು ಸಂಸ್ಕ್ರುತದಿಂದ ಎರವಲು ಪಡೆದ, ಇಲ್ಲವೇ ಸಂಸ್ಕ್ರುತದಲ್ಲಿ ಹೊಸದಾಗಿ ಉಂಟುಮಾಡಿ ಕನ್ನಡಕ್ಕೆ ಎರವಲು ತಂದ ಪದಗಳೇ ಕಾಣಿಸಿಕೊಳ್ಳುತ್ತವೆ; ಇಂತಹ ಪದಕೋಶಗಳನ್ನು ಕನ್ನಡ ಪದಕೋಶಗಳೆಂದು ಕರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ವಿಶಯವಾಗಿದೆ!

ಇಂಗ್ಲಿಶ್‌ನಲ್ಲಿರುವ ಹಲವು ಅರಿಮೆಯ ಪದಗಳು ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿ ಕಾಣಿಸಿಕೊಳ್ಳುತ್ತವೆ, ಮತ್ತು ಅವನ್ನು ಓದಿ ತಿಳಿದುಕೊಳ್ಳುವ ಕೆಲಸ ಕನ್ನಡಿಗರಿಗೆ ತುಂಬಾ ತೊಡಕಿನದಾಗುತ್ತದೆ. ಹಾಗಾಗಿ, ನಾವು ಅವುಗಳ ಬದಲು ಬೇರೆ ಕನ್ನಡದವೇ ಆದ ಅರಿಮೆಯ ಪದಗಳನ್ನು ಉಂಟುಮಾಡಲು ಹೋಗುತ್ತೇವೆ.

ಆದರೆ, ಹಾಗೆ ಪದಗಳನ್ನು ಉಂಟುಮಾಡಬೇಕಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಪದಗಳನ್ನು ಬಳಸಿದೆವಾದರೆ, ನಮ್ಮವೇ ಆದ ಪದಗಳನ್ನು ಉಂಟುಮಾಡುವುದರ ಹಿಂದಿರುವ ಮುಕ್ಯವಾದ ಗುರಿಯನ್ನು ನಾವು ತಲಪುವುದೇ ಇಲ್ಲ. ಯಾಕೆಂದರೆ, ಇಂಗ್ಲಿಶ್ ಎರವಲುಗಳ ಹಾಗೆ ಹಲವು ಸಂಸ್ಕ್ರುತ ಎರವಲುಗಳೂ ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಮತ್ತು ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿಯೇ ಉಳಿಯುತ್ತವೆ. ಅವನ್ನು ಓದಿ, ಅವು ತಿಳಿಸುವ ವಿಶಯಗಳನ್ನು ತಿಳಿದುಕೊಳ್ಳುವ ಕೆಲಸವೂ ತುಂಬಾ ತೊಡಕಿನದಾಗಿಯೇ ಉಳಿಯುತ್ತದೆ.

ಸಂಸ್ಕ್ರುತ ಪದಗಳನ್ನು ಬಳಸಿ ಪಳಗಿರುವ ಕನ್ನಡ ಬರಹಗಾರರಿಗೆ ಮತ್ತು ಓದುಗರಿಗೆ ತುಂಬಾ ಸಂಸ್ಕ್ರುತ ಪದಗಳನ್ನು ಬಳಸಿರುವ ಬರಹಗಳೂ ಅಶ್ಟೊಂದು ತೊಡಕಿನವೆಂದು ಅನಿಸದಿರಬಹುದು. ಇದಕ್ಕೆ ಕಾರಣವೇನೆಂದರೆ, ಅವರು ಕನ್ನಡ ಪದಗಳ ಸೊಗಡನ್ನು ಮಾತ್ರವಲ್ಲದೆ ಸಂಸ್ಕ್ರುತ ಪದಗಳ ಸೊಗಡನ್ನೂ ತಮ್ಮದಾಗಿಸಿಕೊಂಡಿರುತ್ತಾರೆ.

ಆದರೆ, ಹೆಚ್ಚಿನ ಕನ್ನಡಿಗರಿಗೂ ಅಂತಹ ಬರಹಗಳು ತೊಡಕಿನವಾಗಿ ಕಾಣಿಸುತ್ತವೆ; ಅವರ ಆಡುನುಡಿಗಳಲ್ಲಿ ತುಂಬಾ ಕಡಿಮೆ ಸಂಸ್ಕ್ರುತ ಎರವಲುಗಳು ಬಳಕೆಯಾಗುತ್ತಿರುವುದು, ಮತ್ತು ಹಾಗೆ ಬಳಕೆಯಾಗುತ್ತಿರುವವೂ ಕನ್ನಡ ಪದಗಳ ಸೊಗಡಿಗೆ ಹೊಂದಿಕೆಯಾಗುವಂತೆ ಮಾರ‍್ಪಟ್ಟಿರುವುದು ಇದಕ್ಕೆ ಕಾರಣ.

ಹಾಗಾಗಿ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪಬೇಕಿದ್ದಲ್ಲಿ, ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಹೊಮ್ಮಬೇಕಿದ್ದಲ್ಲಿ, ಅವುಗಳಲ್ಲಿ ಬಳಕೆಯಾಗುವ ಎರವಲು ಪದಗಳನ್ನು, ಅವು ಸಂಸ್ಕ್ರುತದವಿರಲಿ ಇಲ್ಲವೇ ಇಂಗ್ಲಿಶಿನವಿರಲಿ, ಆದಶ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು, ಮತ್ತು ಬಳಸಲೇಬೇಕೆಂದಿರುವವು ಕನ್ನಡದ ಸೊಗಡನ್ನು ಕೆಡಿಸದಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಿಕೊಳ್ಳಬೇಕು.

ಎಲ್ಲಾ ಮಟ್ಟದ ಬಳಕೆಗಳಿಗೂ ಕನ್ನಡ ಪದಗಳು ತಕ್ಕುದಾದುವು ಎಂಬುದನ್ನು ಕನ್ನಡದ ಬರಹಗಾರರು ಮತ್ತು ಕನ್ನಡದಲ್ಲಿ ಹೊಸ ಪದಗಳನ್ನು ಉಂಟುಮಾಡುವವರು ಮನಗಾಣಬೇಕು, ಮತ್ತು ಮೇಲ್ಮಟ್ಟದ ಬಳಕೆಗಳಿಗೆ ಕನ್ನಡದವೇ ಆದ ಪದಗಳನ್ನು ಬಳಸುವುದು ಹೆಮ್ಮೆಯ ವಿಶಯವಶ್ಟೇ ಅಲ್ಲ, ಬರವಣಿಗೆಯ ಮುಕ್ಯ ಗುರಿಯನ್ನು ಮುಟ್ಟುವ ಬಗೆಯೂ ಹೌದೆಂಬ ಅನಿಸಿಕೆ ಅವರಲ್ಲಿ ಬೆಳೆದುಬರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

1 3 4 5 6