Posts Tagged ‘ಎಲ್ಲರ ಕನ್ನಡ ಸರಣಿ’

ಬಗೆತದ ಮೇಲೆ ನುಡಿಯ ಹತೋಟಿ

ನುಡಿಯರಿಮೆಯ ಇಣುಕುನೋಟ – 36

ನಾವು ಯಾವ ರೀತಿಯಲ್ಲಿ ಬಗೆಯಬಲ್ಲೆವು (ಆಲೋಚಿಸಬಲ್ಲೆವು) ಎಂಬುದರ ಮೇಲೆ ನಮ್ಮ ತಾಯ್ನುಡಿಯ ಹತೋಟಿಯಿದೆಯೇ, ಇದ್ದರೆ ಅದು ಎಶ್ಟರ ಮಟ್ಟಿಗೆ ಇದೆ ಎಂಬುದರ ಕುರಿತಾಗಿ ಹಲವು ಮಂದಿ ತಿಳಿವಿಗರು ಅರಕೆಗಳನ್ನು ನಡೆಸುತ್ತಿದ್ದಾರೆ. ಪ್ರಯತ್ನಪಟ್ಟರೆ ನಾವು ಯಾವ ರೀತಿಯಲ್ಲಿ ಬೇಕಿದ್ದರೂ ಬಗೆಯಬಲ್ಲೆವು; ಆದರೆ, ಸಾಮಾನ್ಯವಾಗಿ ನಮ್ಮ ಬಗೆತದಲ್ಲಿ ಎಂತಹ ವಿಶಯಗಳ ಮೇಲೆ ಒತ್ತು ಬೀಳುತ್ತದೆ, ಮತ್ತು ಎಂತಹ ವಿಶಯಗಳನ್ನು ನಾವು ಕಡೆಗಣಿಸುತ್ತೇವೆ ಎಂಬುದು ನಮ್ಮ ತಾಯ್ನುಡಿಯನ್ನು ಅವಲಂಬಿಸಿರುತ್ತದೆ ಎಂಬ ತೀರ್‍ಮಾನಕ್ಕೆ ಹೆಚ್ಚಿನವರೂ ಬಂದಿರುವ ಹಾಗೆ ಕಾಣಿಸುತ್ತದೆ.

ಎತ್ತುಗೆಗಾಗಿ, ಕನ್ನಡದಲ್ಲಿ ಮನುಶ್ಯರನ್ನು ಹೆಸರಿಸುವ ಪದಗಳ ಬಳಕೆಯಲ್ಲಿ ಮಾತ್ರ ಹೆಣ್ಣು-ಗಂಡು ವ್ಯತ್ಯಾಸವನ್ನು ಕಾಣುತ್ತೇವೆ; ಮರ, ಮೇಜು, ಪೆನ್ನು, ಗಾಡಿ, ತಿಳಿವು ಮೊದಲಾದ ಉಳಿದ ಪದಗಳ ಬಳಕೆಯಲ್ಲಿ ಇಂತಹ ವ್ಯತ್ಯಾಸವಿಲ್ಲ. ಆದರೆ, ಸಂಸ್ಕ್ರುತ, ಹಿಂದಿ ಮೊದಲಾದ ನುಡಿಗಳಲ್ಲಿ, ಮತ್ತು ಅವುಗಳೊಂದಿಗೆ ನಂಟಿರುವ ಜರ್‍ಮನ್, ಸ್ಪಾನಿಶ್ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಎಲ್ಲಾ ಬಗೆಯ ಪದಗಳಲ್ಲೂ ಪುಲ್ಲಿಂಗ-ಸ್ತ್ರೀಲಿಂಗ ವ್ಯತ್ಯಾಸವನ್ನು ಕಾಣಲಾಗುತ್ತದೆ. ಈ ವ್ಯತ್ಯಾಸ ಇವನ್ನು ತಾಯ್ನುಡಿಯಾಗಿ ಪಡೆದಿರುವ ಜನರ ಬಗೆತದ ಮೇಲೂ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ.

ಸೇತುವೆಯನ್ನು ಹೆಸರಿಸುವ ಪದ ಜರ್‍ಮನ್ ನುಡಿಯಲ್ಲಿ ಸ್ತ್ರೀಲಿಂಗದಲ್ಲಿದೆ, ಮತ್ತು ಪ್ರೆಂಚ್ ನುಡಿಯಲ್ಲಿ ಪುಲ್ಲಿಂಗದಲ್ಲಿದೆ; ಜರ್‍ಮನರು ಒಂದು ಹೊಸ ಸೇತುವೆಯನ್ನು ಬಣ್ಣಿಸುವಾಗ ಅದರ ಅಂದ, ಮಾಟ, ಹಗುರತನ ಮೊದಲಾದ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ; ಅದನ್ನೇ ಪ್ರೆಂಚರು ಬಣ್ಣಿಸುವಾಗ ಅದು ಎಶ್ಟು ದೊಡ್ಡದು, ಎಶ್ಟೊಂದು ಗಟ್ಟಿಯಾಗಿದೆ, ಹೇಗೆ ಒಂದು ದಯ್ತ್ಯ ರಕ್ಕಸನ ಹಾಗೆ ಕಾಣಿಸುತ್ತದೆ ಎಂಬುದಾಗಿ ಅದರ ಬೇರೆಯೇ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ. ಸೇತುವೆ ಎಂಬ ಪದಕ್ಕೆ ಲಿಂಗವನ್ನು ಕೊಡುವಲ್ಲಿ ಅವರ ನುಡಿಗಳ ನಡುವಿರುವ ವ್ಯತ್ಯಾಸವೇ ಈ ರೀತಿ ಅದನ್ನು ಅವರು ಬೇರೆ ಬೇರೆ ಬಗೆಗಳಲ್ಲಿ ಬಣ್ಣಿಸುವ ಹಾಗೆ ಮಾಡಿದೆ.

ನುಡಿಗಳ ನಡುವೆ ಕಾಣಿಸುವ ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಅವುಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರಬಲ್ಲುವು ಎಂಬುದನ್ನು ಅರಕೆಗಳು ತೋರಿಸಿಕೊಟ್ಟಿವೆ. ಎತ್ತುಗೆಗಾಗಿ, ಒಂದು ವಸ್ತು ಎಲ್ಲಿದೆ ಎಂಬುದನ್ನು ಅದಕ್ಕೂ ನಮಗೂ (ಇಲ್ಲವೇ ಇನ್ನೊಂದು ವಸ್ತುವಿಗೂ) ನಡುವಿರುವ ಸಂಬಂದ ಎಂತಹದು ಎಂಬುದರ ಮೇಲೆ ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ಎದುರಿಗಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಎಡಕ್ಕಿದೆ’ ಎಂದು ಹೇಳುವಲ್ಲಿ ನಾವು ಈ ರೀತಿ ಮನೆಗೂ ಮರಕ್ಕೂ ನಡುವಿರುವ ಸಂಬಂದವನ್ನು ಬಳಸುತ್ತೇವೆ; ಇದಕ್ಕೆ ಬದಲು, ಮೂಡ, ತೆಂಕ, ಪಡು, ಬಡಗ ಎಂಬ ನೆಲದರಿಮೆಯ ಪದಗಳನ್ನು ಬಳಸಿಯೂ ಈ ವಿಶಯವನ್ನು ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ತೆಂಕಕ್ಕಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಪಡುವಕ್ಕಿದೆ’ ಎಂದು ಹೇಳುವಲ್ಲಿ ಇಂತಹ ನೆಲದರಿಮೆಯ ಪದಗಳನ್ನು ಬಳಸಲಾಗುತ್ತದೆ.

ಜಗತ್ತಿನಲ್ಲಿರುವ ಹೆಚ್ಚಿನ ನುಡಿಗಳಲ್ಲೂ ವಸ್ತುಗಳ ಜಾಗವನ್ನು ತಿಳಿಸಬೇಕಾದಾಗ ಅವುಗಳ ನಡುವಿರುವ ಸಂಬಂದವನ್ನು ಇಲ್ಲವೇ ಆಡುಗನಿಗೂ ಅವಕ್ಕೂ ನಡುವಿರುವ ಸಂಬಂದವನ್ನು ತಿಳಿಸುವ ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಎಂಬಂತಹ ಪದಗಳನ್ನು ಬಳಸುವುದೇ ಹೆಚ್ಚು. ಆದರೆ, ನೆಲದರಿಮೆಯ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನೇ ಜಾಗವನ್ನು ತಿಳಿಸಬೇಕಾಗುವ ಹೆಚ್ಚಿನ ಕಡೆಗಳಲ್ಲೂ ಬಳಸುವ ನುಡಿಗಳೂ ಹಲವಿವೆ. ಆಸ್ಟ್ರೇಲಿಯಾದ ಗೂಗು ಯಿಮ್ದಿರ್‍ನಂತಹ ಕೆಲವು ಬುಡಕಟ್ಟಿನ ನುಡಿಗಳು, ತೆಂಕು ಮೆಹಿಕೋದ ತ್ಸೆಲ್ತಲ್, ಮತ್ತು ಬೇರೆಯೂ ಹಲವು ನುಡಿಗಳು ಇಂತಹವು.

ಈ ನುಡಿಗಳಲ್ಲಿ ಚಿಕ್ಕ ಚಿಕ್ಕ ವಸ್ತುಗಳ ಜಾಗವನ್ನು ತಿಳಿಸುವಾಗಲೂ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನು ಬಳಸಲಾಗುತ್ತದೆ; ಒಂದು ಚಿತ್ರದಲ್ಲಿ ಕಾಣಿಸುವ ಇಬ್ಬರು ವ್ಯಕ್ತಿಗಳ ಜಾಗವನ್ನು ಬಣ್ಣಿಸುವಲ್ಲೂ ಒಬ್ಬನು ಇನ್ನೊಬ್ಬನ ಮೂಡಕ್ಕಿದ್ದಾನೆ ಎನ್ನಲಾಗುತ್ತದೆ; ಚಿತ್ರವನ್ನು ತುಸು ತಿರುಗಿಸಿ ಹಿಡಿದರೆ, ಅವರ ಜಾಗ ಬದಲಾಗುತ್ತದೆ, ಮತ್ತು ಅದಕ್ಕೆ ಸರಿಯಾಗಿ ಮಾತನ್ನೂ ಬದಲಿಸಬೇಕಾಗುತ್ತದೆ (ಮೂಡಕ್ಕಿದ್ದಾನೆ ಎನ್ನುವ ಬದಲು ಪಡುವಕ್ಕಿದ್ದಾನೆ ಇಲ್ಲವೇ ತೆಂಕಕ್ಕಿದ್ದಾನೆ ಎನ್ನಬೇಕಾದೀತು). ಆದರೆ, ಈ ರೀತಿ ಎಲ್ಲೆಡೆಗಳಲ್ಲೂ ನೆಲದರಿಮೆಯ ಪದಗಳನ್ನು ಬಳಸಬೇಕಿದ್ದಲ್ಲಿ, ಈ ನುಡಿಗಳನ್ನಾಡುವವರಿಗೆ ಯಾವಾಗಲೂ ತಮ್ಮ ಮೂಡ ಯಾವುದು, ಪಡು ಯಾವುದು ಎಂಬುದು ಕಚಿತವಾಗಿ ಗೊತ್ತಿರಬೇಕು. ಆಸ್ಟೇಲಿಯಾದ ಮರಳುಗಾಡುಗಳಲ್ಲಿ ನೆಲೆಸಿರುವ ಬುಡಕಟ್ಟಿನ ಜನರಿಗೆ, ಇಲ್ಲವೇ ತೆಂಕು ಅಮೆರಿಕಾದ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವ ಜನರಿಗೆ ಈ ರೀತಿ ಯಾವಾಗಲೂ ದಿಕ್ಕುಗಳ ಅರಿವಿರುವುದು ತುಂಬಾ ಉಪಯುಕ್ತವಾಗಿದೆ.

ನುಡಿಗಳ ನಡುವೆ ಎಣಿಕೆಪದಗಳ ಬಳಕೆಯಲ್ಲಿ ಕಾಣಿಸುವ ವ್ಯತ್ಯಾಸಗಳೂ ಆ ನುಡಿಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ. ಪಿರಹ ಎಂಬ ನುಡಿಯೊಂದನ್ನು ಆಡುವ ಜನಾಂಗ ಅಮೆಜೋನ್ ಕಾಡುಗಳಲ್ಲಿ ನೆಲೆಸಿದೆ; ಈ ನುಡಿಯಲ್ಲಿ ಮೂರು ಎಣಿಕೆಪದಗಳು ಮಾತ್ರ ಬಳಕೆಯಲ್ಲಿವೆ: ಒಂದೆರಡು ವಸ್ತುಗಳ ಎಣಿಕೆಯನ್ನು ತಿಳಿಸುವ ಪದವೊಂದು; ತುಸು ಹೆಚ್ಚು ಎಣಿಕೆಯಲ್ಲಿರುವ ವಸ್ತುಗಳನ್ನು ಬಣ್ಣಿಸುವ ಪದ ಇನ್ನೊಂದು; ಮತ್ತು ತುಂಬಾ ಹೆಚ್ಚು ಎಣಿಕೆಯ ವಸ್ತುಗಳನ್ನು ಬಣ್ಣಿಸುವ ಪದ ಮತ್ತೊಂದು. ಇಂತಹ ಮೂರು ಪದಗಳು ಮಾತ್ರ ಈ ನುಡಿಯಲ್ಲಿ ಇರುವ ಕಾರಣ, ಅದರ ಆಡುಗರು ಯಾವುದೇ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಯನ್ನು ಕಚಿತವಾಗಿ ತಿಳಿಸಲಾರರು.

ಹಾಗಾಗಿ, ಈ ನುಡಿಯನ್ನಾಡುವ ಜನರಿಗೆ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆ ಇನ್ನೊಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಗಿಂತ ಹೆಚ್ಚಿದೆಯೇ ಇಲ್ಲವೇ ಕಡಿಮೆಯಿದೆಯೇ ಎಂಬುದನ್ನು ಆ ಎರಡು ಗುಂಪುಗಳನ್ನು ಬೇರೆ ಬೇರಾಗಿ ನೋಡಿ ಕಚಿತವಾಗಿ ಹೇಳಲು ಬರುವುದಿಲ್ಲ. ಅವುಗಳಲ್ಲಿ ಒಂದು ಗುಂಪಿನಲ್ಲಿರುವ ಒಂದೊಂದು ವಸ್ತುವನ್ನೂ ಇನ್ನೊಂದು ಗುಂಪಿನ ವಸ್ತುಗಳ ಎದುರಿಗಿರಿಸಿ ಅದನ್ನು ತಿಳಿಯಬೇಕಾಗುತ್ತದೆ. ಇದೇ ರೀತಿಯಲ್ಲಿ, ಒಂದು ಗುಂಪಿನಲ್ಲಿ ಹತ್ತು ಚೆಂಡುಗಳನ್ನಿರಿಸಿ, ಅಶ್ಟೇ ಹಣ್ಣುಗಳಿರುವ ಇನ್ನೊಂದು ಗುಂಪನ್ನು ಉಂಟುಮಾಡಲು ಹೇಳಿದರೆ, ಮೊದಲನೇ ಗುಂಪಿನಲ್ಲಿರುವ ಒಂದೊಂದು ಚೆಂಡನ್ನೂ ಎತ್ತಿಹಿಡಿದು, ಅವುಗಳೆದುರು ಒಂದೊಂದು ಹಣ್ಣನ್ನು ಇರಿಸಿ ಎರಡನೆಯ ಗುಂಪನ್ನು ಅವರು ಉಂಟುಮಾಡಬೇಕಾಗುತ್ತದೆ. ಹಾಗೆ ಮಾಡದೆ ನೇರವಾಗಿ ಹತ್ತು ಹಣ್ಣುಗಳ ಒಂದು ಗುಂಪನ್ನು ಮಾಡಲು ಅವರಿಗೆ ಬರುವುದಿಲ್ಲ.
ಒಂದು ನುಡಿಯಲ್ಲಿ ಹೊತ್ತಿನ ವ್ಯತ್ಯಾಸಗಳನ್ನು ತಿಳಿಸಲು ಎಂತಹ ಪದಗಳನ್ನು ಬಳಸಲಾಗುತ್ತದೆ ಎಂಬುದೂ ಅದರ ಆಡುಗರ ಬಗೆತದ ಮೇಲೆ ಪರಿಣಾಮ ಬೀರುವ ಹಾಗೆ ಕಾಣಿಸುತ್ತದೆ. ಇಂಗ್ಲಿಶ್ನಲ್ಲಿ ಹೊತ್ತನ್ನು ತಿಳಿಸಲು ಹೆಚ್ಚಿನೆಡೆಗಳಲ್ಲೂ ಹಿಂದೆ ಮತ್ತು ಮುಂದೆ ಎಂಬ ಪದಗಳನ್ನು ಬಳಸಲಾಗುತ್ತದೆ (ಕನ್ನಡದಲ್ಲೂ ಹೀಗೆಯೇ); ‘ಅವನು ಹಿಂದೆ ಏನು ಮಾಡುತ್ತಿದ್ದ? ಮುಂದೆ ಏನು ಮಾಡಲಿದ್ದಾನೆ?’ ಎಂಬಂತಹ ಮಾತುಗಳಲ್ಲಿ ಈ ಬಳಕೆಯನ್ನು ಕಾಣಬಹುದು; ಇದಕ್ಕೆ ಬದಲು, ಚಯ್ನೀಸ್ನಲ್ಲಿ ಹೆಚ್ಚಾಗಿ ಮೇಲೆ ಮತ್ತು ಕೆಳಗೆ ಎಂಬ ಪದಗಳನ್ನು ಬಳಸಲಾಗುತ್ತದೆ.

ಹೊತ್ತಿನ ಕುರಿತಾಗಿರುವ ಕೇಳ್ವಿಗಳಿಗೆ ಒಂದರ ಬಲಕ್ಕೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಇಂಗ್ಲಿಶ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು, ಮತ್ತು ಒಂದರ ಕೆಳಗೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಚಯ್ನೀಸ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು; ಈ ವ್ಯತ್ಯಾಸಕ್ಕೆ ಮೇಲೆ ತಿಳಿಸಿದ ಹೊತ್ತಿನ ಪದಗಳ ನಡುವಿನ ವ್ಯತ್ಯಾಸವೇ ಕಾರಣವಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ದ್ರಾವಿಡ ನುಡಿಗಳು ಅಯ್ದಲ್ಲ, ಇಪ್ಪತ್ತಾರು!

ನುಡಿಯರಿಮೆಯ ಇಣುಕುನೋಟ – 35

ಕನ್ನಡ, ತಮಿಳು, ಮಲಯಾಳ, ತೆಲುಗು ಮತ್ತು ತುಳು ಎಂಬುದಾಗಿ ಒಟ್ಟು ದ್ರಾವಿಡ ನುಡಿಗಳ ಎಣಿಕೆ ಅಯ್ದು ಮಾತ್ರ (ಪಂಚದ್ರಾವಿಡ) ಎಂಬ ಅನಿಸಿಕೆ ಇವತ್ತಿಗೂ ಹಲವು ಜನರಲ್ಲಿದೆ. ಕೆಲವರು ಈ ಪಟ್ಟಿಯಲ್ಲಿ ತುಳುವಿನ ಬದಲು ಮರಾಟಿಯನ್ನು ಸೇರಿಸುತ್ತಾರೆ; ಆದರೆ, ಮರಾಟಿ ದ್ರಾವಿಡ ನುಡಿಯಲ್ಲ, ಇಂಡೋ-ಆರ‍್ಯನ್ ನುಡಿ.

ಕರ‍್ನಾಟಕದಲ್ಲೇನೇ ಕೊಡಗು ಎಂಬ ಇನ್ನೊಂದು ದ್ರಾವಿಡ ನುಡಿ ಇರುವುದನ್ನು ಈ ದ್ರಾವಿಡ ನುಡಿಗಳ ಪಟ್ಟಿಯನ್ನು ಕೊಡುವವರು ಮರೆತಂತಿದೆ. ದಕ್ಶಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗ ಎಂಬ ಮತ್ತೊಂದು ದ್ರಾವಿಡ ನುಡಿಯೂ ಬಳಕೆಯಲ್ಲಿದೆ. ಇದಲ್ಲದೆ, ನೀಲಗಿರಿಯ ಗುಡ್ಡಕಾಡುಗಳಲ್ಲಿ ತೊದ, ಕೋತ, ಕುರುಂಬ, ಮತ್ತು ಇರುಳ ಎಂಬ ಬೇರೆಯೂ ನಾಲ್ಕು ದ್ರಾವಿಡ ನುಡಿಗಳು ಬಳಕೆಯಲ್ಲಿವೆ.

ಮೇಲಿನ ಈ ಹನ್ನೊಂದು ನುಡಿಗಳಲ್ಲಿ ತೆಲುಗು ನುಡಿಯೊಂದನ್ನು ಬಿಟ್ಟು ಉಳಿದ ಹತ್ತು ನುಡಿಗಳನ್ನು ತೆಂಕುದ್ರಾವಿಡ ಎಂಬ ನುಡಿಗುಂಪಿನಲ್ಲಿ ಸೇರಿಸಿ ಹೇಳಲಾಗುತ್ತದೆ, ಮತ್ತು ತೆಲುಗು ನುಡಿಯನ್ನು ಬೇರೆ ಏಳು ನುಡಿಗಳೊಂದಿಗೆ ಸೇರಿಸಿ ತೆಂಕು-ನಡುದ್ರಾವಿಡವೆಂಬ ಬೇರೊಂದು ನುಡಿಗುಂಪನ್ನು ಮಾಡಲಾಗುತ್ತದೆ. ಈ ತೆಂಕು-ನಡುದ್ರಾವಿಡ ಗುಂಪಿನಲ್ಲಿ ತೆಲುಗು ನುಡಿಯಲ್ಲದೆ ಸುಮಾರು 24 ಲಕ್ಶ ಜನರ ಮಾತಾಗಿರುವ ಗೋಂಡಿ ಮತ್ತು ಆರೂವರೆ ಲಕ್ಶ ಜನರ ಮಾತಾಗಿರುವ ಕೂಯಿ ನುಡಿಗಳು ಬರುತ್ತವೆ. ಉಳಿದಂತೆ, ಕುವಿ, ಕೊಂಡ, ಪೆಂಗೊ, ಮತ್ತು ಮಂಡ ಎಂಬ ನುಡಿಗಳೂ ಈ ಗುಂಪಿನಲ್ಲಿ ಸೇರುತ್ತವೆ.

ಕೋಲಾಮಿ, ನಾಯ್ಕಿ, ಪಾರ‍್ಜಿ, ಒಲ್ಲಾರಿ, ಮತ್ತು ಗದಬ ಎಂಬ ಅಯ್ದು ನುಡಿಗಳನ್ನು ನಡುದ್ರಾವಿಡವೆಂಬ ಬೇರೆಯೇ ಒಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ನುಡಿಗಳನ್ನಾಡುವವರು ಮುಕ್ಯವಾಗಿ ಆಂದ್ರಪ್ರದೇಶ, ಮದ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ನೆಲೆಸಿದ್ದಾರೆ. ಇದಲ್ಲದೆ, ಕುಡುಕ್, ಮಾಲ್ಟೋ, ಮತ್ತು ಬ್ರಾಹುಯೀ ಎಂಬ ಬೇರೆ ಮೂರು ನುಡಿಗಳನ್ನು ಬಡಗುದ್ರಾವಿಡವೆಂಬ ಇನ್ನೊಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ಮೂರು ನುಡಿಗಳಲ್ಲಿ ಕುಡುಕ್ ನುಡಿಯನ್ನು ಸುಮಾರು 20 ಲಕ್ಶ ಮಂದಿ ಆಡುತ್ತಿದ್ದು, ಇವರು ಮುಕ್ಯವಾಗಿ ಒರಿಸ್ಸಾದಲ್ಲಿ ನೆಲೆಸಿದ್ದಾರೆ; ನೇಪಾಳದ ದನಗರ‍್ ಜನಾಂಗದವರೂ ಇದೇ ನುಡಿಯನ್ನಾಡುತ್ತಾರೆ. ಮಾಲ್ಟೋ ನುಡಿಯನ್ನಾಡುವ ಒಂದು ಲಕ್ಶ ಮಂದಿ ಬಿಹಾರದ ರಾಜಮಹಲ್ ಗುಡ್ಡಗಳಲ್ಲಿ ನೆಲೆಸಿದ್ದಾರೆ, ಮತ್ತು ಬ್ರಾಹುಯೀ ನುಡಿಯನ್ನಾಡುವ 20 ಲಕ್ಶ ಮಂದಿ ಮುಕ್ಯವಾಗಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನೆಲೆಸಿದ್ದಾರೆ; ಅಪ್ಗಾನಿಸ್ತಾನ ಮತ್ತು ಇರಾನ್ನಲ್ಲೂ ಬ್ರಾಹುಯೀ ನುಡಿಯನ್ನಾಡುವವರು ಹಲವರಿದ್ದಾರೆ.

ಈ ರೀತಿ, ನಾಲ್ಕು ಮುಕ್ಯ ಗುಂಪುಗಳಲ್ಲಿ ಸೇರುವ ದ್ರಾವಿಡ ನುಡಿಗಳ ಒಟ್ಟು ಎಣಿಕೆ ಇಪ್ಪತ್ತಾರು ಎಂದು ಹೇಳಬಹುದು. ಆದರೆ, ಹಲವೆಡೆಗಳಲ್ಲಿ ಯಾವುದನ್ನು ಒಂದು ನುಡಿ ಎಂದು ಕರೆಯಬೇಕು, ಮತ್ತು ಯಾವುದನ್ನು ಬರಿಯ ಒಳನುಡಿ ಎಂದು ತಿಳಿಯಬೇಕು ಎಂಬುದನ್ನು ಕಚಿತವಾಗಿ ತೀರ‍್ಮಾನಿಸಲು ಬರುವುದಿಲ್ಲ. ಎತ್ತುಗೆಗಾಗಿ, ನೀಲಗಿರಿಯಲ್ಲಿ ಬಳಕೆಯಲ್ಲಿರುವ ಬಡಗ ಜನರ ಮಾತನ್ನು ಕೆಲವರು ಕನ್ನಡದ ಒಳನುಡಿಯೆಂದು ಕರೆಯುತ್ತಾರೆ, ಮತ್ತು ಬೇರೆ ಕೆಲವರು ಅದೊಂದು ಬೇರೆಯೇ ನುಡಿಯೆಂದೂ ಹೇಳುತ್ತಾರೆ. ಹಾಗಾಗಿ, ಒಟ್ಟು ದ್ರಾವಿಡ ನುಡಿಗಳು ಎಶ್ಟಿವೆ ಎಂಬುದನ್ನು ಕಚಿತವಾಗಿ ಹೇಳಲು ಬರುವುದಿಲ್ಲ; ಹಾಗಿದ್ದರೂ, ಅದು ಅಯ್ದಕ್ಕಿಂತ ಹೆಚ್ಚು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಹಿಂದಿನ ಒಂದು ಕಾಲದಲ್ಲಿ ದ್ರಾವಿಡರು ಬಾರತದಲ್ಲಿ ಎಲ್ಲೆಡೆಗಳಲ್ಲೂ ನೆಲೆಸಿದ್ದಿರಬೇಕು, ಮತ್ತು ಇಂಡೋ-ಆರ‍್ಯನ್ ನುಡಿಗಳನ್ನಾಡುವ ಜನರು ಬಡಗು ನಾಡುಗಳಿಂದ ಬಾರತಕ್ಕೆ ವಲಸೆ ಬಂದ ಮೇಲೆ, ಹಲವಾರು ಮಂದಿ ದ್ರಾವಿಡ ನುಡಿಗಳನ್ನಾಡುವ ಜನರು ತಮ್ಮ ನುಡಿಗಳನ್ನು ಕಳೆದುಕೊಂಡು ಮರಾಟಿ, ಗುಜರಾತಿ, ಒಡಿಯಾ, ಹಿಂದಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನಾಡುವಂತಾಗಿರಬೇಕೆಂದು ಹಲವು ಮಂದಿ ಅರಿವಿಗರು ತೀರ‍್ಮಾನಕ್ಕೆ ಬಂದಿದ್ದಾರೆ. ಬಾರತದಲ್ಲಿ ಬಳಕೆಯಲ್ಲಿರುವ ಈ ಇಂಡೋ-ಆರ‍್ಯನ್ ನುಡಿಗಳು ಹಲವು ವಿಶಯಗಳಲ್ಲಿ ದ್ರಾವಿಡ ನುಡಿಗಳನ್ನು ಹೋಲುತ್ತಿರುವುದಕ್ಕೆ ಅವುಗಳ ಆಡುಗರು ಮೊದಲಿಗೆ ದ್ರಾವಿಡ ನುಡಿಗಳನ್ನಾಡುತ್ತಿದ್ದುದೇ ಕಾರಣವಿರಬೇಕೆಂದೂ ತಿಳಿಯಲಾಗುತ್ತಿದೆ.

ಬಾರತದಲ್ಲಿ ಬಳಕೆಯಲ್ಲಿರುವ ಹಿಂದಿ, ಮರಾಟಿ, ಗುಜರಾತಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನು ಯುರೋಪಿನ ಇಂಗ್ಲಿಶ್, ಜರ‍್ಮನ್, ಸ್ಪೇನಿಶ್, ಇಟೇಲಿಯನ್ ಮೊದಲಾದ ನುಡಿಗಳೊಂದಿಗೆ ಸಂಬಂದಿಸಲು ಸಾದ್ಯವಾಗಿದೆ; ಆದರೆ, ದ್ರಾವಿಡ ನುಡಿಗಳನ್ನು ಆ ರೀತಿ ಬೇರೆ ಯಾವ ನುಡಿಗಳೊಂದಿಗೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಇದುವರೆಗೆ ಸಂಬಂದಿಸಲು ಸಾದ್ಯವಾಗಿಲ್ಲ. ಹಾಗಾಗಿ, ಇಂಡೋ-ಆರ‍್ಯನ್ ನುಡಿಗಳು ಬಾರತಕ್ಕೆ ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವಂತೆ ದ್ರಾವಿಡ ನುಡಿಗಳು ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವುದಿಲ್ಲ.

ನುಡಿಗಳ ಎಣಿಕೆಯ ಕುರಿತು ಮಾತನಾಡುವಾಗ ಇನ್ನೊಂದು ಸಂಶಯವೂ ಹಲವರನ್ನು ಕಾಡುತ್ತದೆ; ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಎಂಬ ನಾಲ್ಕು ನುಡಿಗಳಿಗೆ ಅವುಗಳದೇ ಆದ ಲಿಪಿಯಿದೆ; ಆದರೆ, ಉಳಿದವುಗಳಲ್ಲಿ ಯಾವುದಕ್ಕೂ ಅದರದೇ ಆದ ಲಿಪಿಯಿಲ್ಲ (ಇತ್ತೀಚೆಗೆ ಅವುಗಳಲ್ಲಿ ಕೆಲವಕ್ಕೆ ಲಿಪಿಗಳನ್ನು ಅಳವಡಿಸಲಾಗಿದೆ). ಲಿಪಿಯಿಲ್ಲದ ನುಡಿಗಳನ್ನು ಲಿಪಿಯಿರುವವುಗಳೊಂದಿಗೆ ಸರಿದೂಗಿಸಬಹುದೇ ಎಂಬುದೇ ಈ ಸಂಶಯ. ಅಯ್ದನೆಯ ದ್ರಾವಿಡ ನುಡಿಯಾಗಿ ಕೆಲವರು ತುಳುವಿನ ಬದಲು ಮರಾಟಿಯನ್ನು ಹೆಸರಿಸುತ್ತಿರುವುದಕ್ಕೆ ಇದೇ ಕಾರಣವಿರಬಹುದು.

ಆದರೆ, ನುಡಿಗಳ ಎಣಿಕೆಗೂ ಅವಕ್ಕೆ ಲಿಪಿಯಿದೆಯೇ, ಎಂದರೆ ಅವನ್ನು ಬರಹಕ್ಕೆ ಇಳಿಸಲಾಗಿದೆಯೇ ಎಂಬುದಕ್ಕೂ ನಡುವೆ ಯಾವ ಸಂಬಂದವೂ ಇಲ್ಲ. ಮುಕ್ಯವಾಗಿ, ಎರಡು ನುಡಿಗಳ ನಡುವೆ ವ್ಯತ್ಯಾಸ ಎಶ್ಟಿದೆ ಎಂಬುದರ ಮೇಲೆ ಅವೆರಡು ಒಂದೇ ನುಡಿಯ ಒಳನುಡಿಗಳೇ ಇಲ್ಲವೇ ಬೇರೆ ಬೇರೆ ನುಡಿಗಳೇ ಎಂಬುದನ್ನು ತೀರ‍್ಮಾನಿಸಲಾಗುತ್ತದೆ. ಇದಲ್ಲದೆ, ಇಂಡೋ-ಆರ‍್ಯನ್, ದ್ರಾವಿಡ ಎಂಬಂತಹ ನುಡಿಗಳ ಗುಂಪಿಸುವಿಕೆಗೂ ಅವು ಬಳಸುವ ಲಿಪಿಗಳಿಗೂ ನಡುವೆ ಯಾವ ಸಂಬಂದವೂ ಇಲ್ಲ. ನಿಜಕ್ಕೂ ಬಾರತದ ನುಡಿಗಳು ಬಳಸುವ ಲಿಪಿಗಳಲ್ಲಿ ಹೆಚ್ಚಿನವೂ ಬ್ರಾಹ್ಮೀ ಲಿಪಿ ಎಂಬ ಒಂದೇ ಮೂಲದಿಂದ ಬಂದಿವೆ.

ಹಲವು ನುಡಿಗಳು ಒಂದೇ ಲಿಪಿಯನ್ನು ಬಳಸುತ್ತಿರಬಲ್ಲುವು, ಮತ್ತು ಒಂದೇ ನುಡಿ ಹಲವು ಲಿಪಿಗಳನ್ನು ಬಳಸುತ್ತಿರಬಲ್ಲುದು: ಮರಾಟಿ, ಹಿಂದಿ, ಮತ್ತು ನೇಪಾಲಿ ನುಡಿಗಳು ಬಳಸುವ ಲಿಪಿಗಳ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ, ಮತ್ತು ತೆಲುಗು ಹಾಗೂ ಕನ್ನಡ ಲಿಪಿಗಳು ಹದಿನೆಂಟನೇ ಶತಮಾನದ ವರೆಗೆ ಒಂದೇ ಲಿಪಿಯಾಗಿದ್ದುವು. ಕೊಂಕಣಿ ನುಡಿ ರೋಮನ್, ನಾಗರಿ, ಮತ್ತು ಕನ್ನಡ ಲಿಪಿಗಳನ್ನು ಬಳಸುತ್ತಿದೆ, ಮತ್ತು ಸಿಂದಿ ನುಡಿ ನಾಗರಿ ಮತ್ತು ಪರ‍್ಸೋ-ಅರೇಬಿಕ್ ಲಿಪಿಗಳನ್ನು ಬಳಸುತ್ತಿದೆ. ಇದಲ್ಲದೆ, ಮಣಿಪುರಿ, ಮಲಯಾಳ ಮೊದಲಾದ ಬೇರೆ ಕೆಲವು ನುಡಿಗಳು ತಮ್ಮಲ್ಲಿ ಬಳಕೆಯಲ್ಲಿದ್ದ ಲಿಪಿಯನ್ನು ಬಿಟ್ಟುಕೊಟ್ಟು ಬೇರೆ ಲಿಪಿಯನ್ನು ಬಳಸತೊಡಗಿವೆ. ಹಾಗಾಗಿ, ನುಡಿಗಳು ಲಿಪಿಯನ್ನು ಬಳಸುವುದು ಒಂದು ಮಟ್ಟಿಗೆ ಜನರು ಉಡುಪನ್ನು ಬಳಸುವ ಹಾಗೆ ಎನ್ನಬಹುದು.

ಆದರೆ, ದ್ರಾವಿಡ ಮತ್ತು ಇಂಡೋ-ಆರ‍್ಯನ್ ಎಂಬ ನುಡಿಗಳ ವಿಂಗಡನೆಗೆ ಅವುಗಳ ನಡುವಿನ ವ್ಯತ್ಯಾಸವೇ ಮುಕ್ಯ ಆದಾರವಾಗಿದೆ: ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಬೇಕಿದ್ದಲ್ಲಿ, ಅವೆರಡರ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಅವುಗಳ ಹಿನ್ನಡವಳಿಯಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಮೂಡಿಬಂದಿವೆಯೆಂಬುದನ್ನು ತೋರಿಸಿಕೊಡಲು ಸಾದ್ಯವಾಗಬೇಕು. ಮೇಲೆ ಪಟ್ಟಿಮಾಡಿದ ಇಪ್ಪತ್ತಾರು ದ್ರಾವಿಡ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಈ ರೀತಿ ಅವುಗಳ ಹಿನ್ನಡವಳಿಯಲ್ಲಿ ನಡೆದಿವೆಯೆಂದು ಹೇಳಹುದಾದ ಮಾರ‍್ಪಾಡುಗಳ ಮೂಲಕ ವಿವರಿಸಲು ಸಾದ್ಯವಾಗಿದೆ. ಹಾಗಾಗಿ, ಅವನ್ನೆಲ್ಲ ಒಟ್ಟಿಗೆ ಒಂದೇ ನುಡಿಕುಟುಂಬದಲ್ಲಿ ಗುಂಪಿಸಲಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನುಡಿಮಾರಲು ಎಣ್ಣುಕಗಳ ಬಳಕೆ

ನುಡಿಯರಿಮೆಯ ಇಣುಕುನೋಟ – 34

ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ; ಗಂಟೆಗೆ ಅಯ್ದಾರು ಪುಟಗಳನ್ನಶ್ಟೇ ನುಡಿಮಾರಲು ಬರುತ್ತದೆ. ಕೆಲವು ಬಗೆಯ ಬರಹಗಳನ್ನು ತುಸು ಬೇಗನೆ ನುಡಿಮಾರಬಹುದು, ಆದರೆ ಬೇರೆ ಕೆಲವು ಬಗೆಯ ಬರಹಗಳನ್ನು ನುಡಿಮಾರಲು ಇನ್ನಶ್ಟು ಹೊತ್ತು ತಗಲಬಹುದು. ಇವತ್ತು ನುಡಿಮಾರಬೇಕಾಗಿರುವ ಬರಹಗಳ ಎಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಂಗ್ಲಿಶ್ನಂತಹ ನುಡಿಗಳಿಂದ ಸಾವಿರಾರು ಬರಹಗಳನ್ನು ನುಡಿಮಾರುತ್ತಲೇ ಇರಬೇಕಾಗುತ್ತದೆ. ಕೊನೆಯಿಲ್ಲದ ಈ ಕೆಲಸಕ್ಕೆ ಎಶ್ಟು ಮಂದಿ ನುಡಿಮಾರುಗರಿದ್ದರೂ ಸಾಕಾಗುವುದಿಲ್ಲ.

ಹಾಗಾಗಿ, ಎಣ್ಣುಕ(ಕಂಪ್ಯೂಟರ್)ಗಳನ್ನು ಬಳಸಿ ಈ ಕೆಲಸವನ್ನು ಹೆಚ್ಚು ಬೇಗನೆ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಬಹುದಲ್ಲವೇ ಎಂಬುದಾಗಿ ಹಲವರಲ್ಲಿ ಆಸಕ್ತಿ ಮೂಡಿದ್ದು, ಕಳೆದ ಅಯ್ವತ್ತು ವರ್ಶಗಳಿಂದ ಈ ವಿಶಯದಲ್ಲಿ ಅರಕೆಗಳು ನಡೆಯುತ್ತಿವೆ. ಗಂಟೆಗೆ ನೂರಿನ್ನೂರು ಪುಟಗಳಶ್ಟು ಬರಹಗಳನ್ನು ಇವತ್ತಿನ ಎಣ್ಣುಕಗಳು ನುಡಿಮಾರಿಕೊಡಬಲ್ಲುವು. ಆದರೆ, ಅವು ನುಡಿಮಾರಿದ ಈ ಬರಹಗಳಲ್ಲಿ ಹಲವು ತಪ್ಪುಗಳೂ ಉಳಿದಿರುತ್ತವೆ, ಮತ್ತು ಈ ತಪ್ಪುಗಳನ್ನೆಲ್ಲ ಕಯ್ಯಿಂದಲೇ ತಿದ್ದಿ ಸರಿಪಡಿಸಬೇಕಾಗುತ್ತದೆ. ಯಾಕೆಂದರೆ, ನುಡಿಮಾರುವ ಸಮಯದಲ್ಲಿ ನಾವು ನಡೆಸಬೇಕಾಗಿರುವ ಹಲವು ಕೆಲಸಗಳಲ್ಲಿ ಕೆಲವನ್ನು ನಡೆಸಲು ಎಣ್ಣುಕಗಳಿಗೆ ಸಾದ್ಯವೇ ಆಗುವುದಿಲ್ಲ, ಮತ್ತು ಅಂತಹ ವಿಶಯಗಳಲ್ಲಿ ಅವು ಹಲವು ತಪ್ಪುಗಳನ್ನು ಮಾಡುತ್ತವೆ. ಕೆಲವು ಬಗೆಯ ಬರಹಗಳ ಮಟ್ಟಿಗಂತೂ ಈ ರೀತಿ ಎಣ್ಣುಕಗಳು ಕೊಡುವ ನುಡಿಮಾರಿಕೆಯನ್ನು ತಿದ್ದಲು ಹೋಗುವುದಕ್ಕಿಂತಲೂ ಎಣ್ಣುಕಗಳ ನೆರವಿಲ್ಲದೆ ನೇರವಾಗಿ ನುಡಿಮಾರುವುದೇ ಸುಳುವಾದ ಕೆಲಸವೆಂದು ಅನಿಸಬಲ್ಲುದು.

ಎಣ್ಣುಕಗಳು ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಹಲವು ಬಗೆಯ ಅರಿವುಗಳು ಬೇಕಾಗುತ್ತವೆ. ಬರಹದಲ್ಲಿ ಬಳಕೆಯಾಗುವ ಪದಗಳಿಗೆ ಎಂತಹ ಹುರುಳುಗಳೆಲ್ಲ ಇವೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದಕ್ಕಾಗಿ ಅವುಗಳಲ್ಲಿ ಪದನೆರಕೆಗಳಿರಬೇಕು. ಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ, ಮತ್ತು ಅವುಗಳ ಹಲವು ಹುರುಳುಗಳಲ್ಲಿ ಒಂದು ಹುರುಳು ಹೇಗೆ ಆಯ್ಕೆಗೊಳ್ಳುತ್ತದೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದನ್ನು ಅವಕ್ಕೆ ತಿಳಿಸಬಲ್ಲ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಲೆಗಳು ಅವುಗಳಲ್ಲಿ ಇರಬೇಕು. ಬರಹಗಳಲ್ಲಿ ಬರುವ ಪದಗಳ ಹುರುಳು ಅವನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದ ಮೇಲೂ ಅವಲಂಬಿಸಿರುತ್ತದೆ. ಮಾನವನ ಮಿದುಳು ಈ ವ್ಯತ್ಯಾಸವನ್ನು ಸುಳುವಾಗಿ ಅರಿತುಕೊಂಡು, ಕುಳ್ಳಿಹಕ್ಕೆ ಹೊಂದಿಕೆಯಾಗುವಂತಹ ಹುರುಳನ್ನು ಆಯ್ದುಕೊಳ್ಳಬಲ್ಲುದು. ಆದರೆ, ಈ ಕೆಲಸವನ್ನು ನಡೆಸಲು ಬೇಕಾಗುವ ಅರಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಹಾಗಾಗಿ, ಈ ವಿಶಯದಲ್ಲಿ ಎಣ್ಣುಕಗಳು ತುಂಬಾ ತಪ್ಪು ಮಾಡುತ್ತಿವೆ.

ಇವತ್ತು ನುಡಿಮಾರುವ ಕೆಲಸಕ್ಕಾಗಿ ಎಣ್ಣುಕಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲಾಗುತ್ತದೆ. ಇವನ್ನು ಮಾರೆಡೆ ಹಮ್ಮುಗೆ ಮತ್ತು ಎಡೆನುಡಿ ಹಮ್ಮುಗೆ ಎಂಬುದಾಗಿ ಕರೆಯಬಹುದು. ಇವುಗಳಲ್ಲಿ ಮೊದಲನೆಯದನ್ನು ಬಳಸುವವರು ತಿಳಿವನ್ನು ನೇರವಾಗಿ ಮೂಲನುಡಿಯಿಂದ ಈಡುನುಡಿಗೆ ಮಾರೆಡೆಗೊಳಿಸು(ವರ್ಗಾಯಿಸು)ತ್ತಾರೆ, ಮತ್ತು ಎರಡನೆಯದನ್ನು ಬಳಸುವವರು ತಿಳಿವನ್ನು ಮೊದಲಿಗೆ ಒಂದು ಕಲ್ಪಿತವಾಗಿರುವ ಎಡೆನುಡಿಗೆ ಮಾರೆಡೆಗೊಳಿಸಿ, ಅಲ್ಲಿಂದ ಈಡುನುಡಿಗೆ ಮಾರೆಡೆಗೊಳಿಸುತ್ತಾರೆ.

ಮಾರೆಡೆ ಹಮ್ಮುಗೆಯಲ್ಲಿ ಮೂರು ಹಂತಗಳಿರುತ್ತವೆ: ಮೊದಲನೆಯ ಹಂತದಲ್ಲಿ ಮೂಲ ಬರಹದ ಹುರುಳೇನು ಎಂಬುದನ್ನು ಕಂಡುಹಿಡಿದು, ಅದನ್ನು ಮೂಲನುಡಿಯದೇ ಆದ ಒಂದು ಕಲ್ಪಿತ ರೂಪಕ್ಕೆ ಬದಲಾಯಿಸಲಾಗುತ್ತದೆ; ಎರಡನೆಯ ಹಂತದಲ್ಲಿ ಅದನ್ನು ಅಂತಹದೇ ಆದ ಒಂದು ಈಡುನುಡಿಯ ಕಲ್ಪಿತ ರೂಪಕ್ಕೆ ಮಾರೆಡೆಗೊಳಿಸಲಾಗುತ್ತದೆ; ಮತ್ತು ಮೂರನೆಯ ಹಂತದಲ್ಲಿ ಈಡುನುಡಿಯ ಈ ಕಲ್ಪಿತ ರೂಪವನ್ನು ಅದರ ಬರಹರೂಪಕ್ಕೆ ಮಾರ್ಪಡಿಸಲಾಗುತ್ತದೆ.

ಮಾರೆಡೆ ಹಮ್ಮುಗೆಗಿಂತ ಎಡೆನುಡಿ ಹಮ್ಮುಗೆ ಸೊಲ್ಲುಗಳಿಗೆ ಕಲ್ಪಿತ ರೂಪವನ್ನು ಕೊಡುವಲ್ಲಿ ಮಾತ್ರ ಬೇರಾಗಿರುತ್ತದೆ. ಮೂಲನುಡಿಯ ಬರಹವನ್ನು ಅದರದೇ ಆದ ಕಲ್ಪಿತ ರೂಪಕ್ಕೆ ಮಾರ್ಪಡಿಸುವ ಬದಲು, ಈ ಹಮ್ಮುಗೆಯಲ್ಲಿ ಅದನ್ನು ಒಂದು ಎಡೆನುಡಿಗೆ (ಕಲ್ಪಿತವಾಗಿರುವ ನುಡಿಗೆ) ಮಾರ್ಪಡಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನವೇನೆಂದರೆ, ಆಮೇಲೆ ಈ ಎಡೆನುಡಿಯಿಂದ ಬೇರೆ ಯಾವ ನುಡಿಗೆ ಬೇಕಿದ್ದರೂ ಬರಹವನ್ನು ನುಡಿಮಾರಬಹುದು. ಎತ್ತುಗೆಗಾಗಿ, ಕನ್ನಡದ ಒಂದು ಬರಹವನ್ನು ಎಡೆನುಡಿಯ ಬರಹವಾಗಿ ಮಾರ್ಪಡಿಸಿದಲ್ಲಿ, ಆಮೇಲೆ ಅದನ್ನು ನೇರವಾಗಿ ತಮಿಳು, ತೆಲುಗು, ಮಲಯಾಳ, ಹಿಂದಿ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಯಾವುದರ ಬರಹವಾಗಿ ಬೇಕಿದ್ದರೂ ಮಾರ್ಪಡಿಸಿಕೊಳ್ಳಬಹುದು.

ಇದಕ್ಕೆ ಬದಲು, ಮಾರೆಡೆ ಹಮ್ಮುಗೆಯಲ್ಲಿ ಒಂದೊಂದು ನುಡಿಜೋಡಿಗೂ ನುಡಿಮಾರಲು ಬೇಕಾಗುವ ಕೆಲಸಗಳನ್ನೆಲ್ಲ ಬೇರೆ ಬೇರಾಗಿ ಮಾಡಿಕೊಳ್ಳಬೇಕಾಗುತ್ತದೆ. ಜಗತ್ತಿನ ಎಲ್ಲಾ ನುಡಿಗಳಿಗೂ ಸಮಾನವಾಗಬಹುದಾದಂತಹ, ಎಂದರೆ ಯಾವುದೇ ಒಂದು ನುಡಿಯ ಪರಿಚೆಯನ್ನೂ ಬಳಸದಿರುವಂತಹ ಎಡೆನುಡಿಯೊಂದನ್ನು ಉಂಟುಮಾಡಬಲ್ಲೆವು ಎಂಬ ಹುಚ್ಚು ಉತ್ಸಾಹ ಈ ಎಡೆನುಡಿ ಹಮ್ಮುಗೆಯನ್ನು ಹಮ್ಮಿಕೊಳ್ಳಲು ಹೊರಟಿದ್ದ ತಿಳಿವಿಗರಲ್ಲಿತ್ತು. ಆದರೆ ಸಮಯ ಕಳೆದಂತೆಲ್ಲ, ಇದು ತಲಪಲಾಗದ ಗುರಿ ಎಂಬುದು ಸ್ಪಶ್ಟವಾಗುತ್ತಿದೆ.

ಮೇಲಿನ ಎರಡು ಬಗೆಯ ಹಮ್ಮುಗೆಗಳಿಂತ ತೀರ ಬೇರಾಗಿರುವ ಇನ್ನೊಂದು ಬಗೆಯ ಹಮ್ಮುಗೆಯನ್ನೂ ಕೆಲವರು ತಿಳಿವಿಗರು ಬಳಕೆಗೆ ತಂದಿದ್ದಾರೆ. ಇದರಲ್ಲಿ ಈಗಾಗಲೇ ಉಂಟುಮಾಡಿರುವ ನುಡಿಮಾರಿಕೆಗಳನ್ನು ಬಳಸಿಕೊಳ್ಳುವಂತಹ ಅಳವನ್ನು ಎಣ್ಣುಕಗಳಿಗೆ ಕೊಡಿಸಲಾಗುತ್ತದೆ. ಈ ಅಳವಿನ ನೆರವಿನಿಂದ, ಎಣ್ಣುಕಗಳು ಎರಡು ನುಡಿಗಳ ನಡುವೆ ಈಗಾಗಲೇ ನಡೆಸಿರುವ ನುಡಿಮಾರಿಕೆಗಳಲ್ಲಿ ಒಂದು ನುಡಿಯ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳಿಗೆ ಬದಲಾಗಿ ಇನ್ನೊಂದು ನುಡಿಯಲ್ಲಿ ಯಾವ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳನ್ನು ಹೆಚ್ಚಿನೆಡೆಗಳಲ್ಲೂ ಬಳಸಲಾಗಿದೆ ಎಂಬುದನ್ನು ಕಂಡುಕೊಳ್ಳುತ್ತವೆ, ಮತ್ತು ಈ ವಿಶಯವನ್ನು ನೆನಪಿನಲ್ಲಿರಿಸಿಕೊಂಡು, ಅಂತಹವೇ ಆದ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವನ್ನು ಬೇಕಾದಾಗ ಬಳಸುವ ಅಳವನ್ನು ತಾವೇ ಉಂಟುಮಾಡಿಕೊಳ್ಳುತ್ತವೆ.

ಎತ್ತುಗೆಗಾಗಿ, ಇಂಗ್ಲಿಶ್ ಮತ್ತು ಫ಼್ರೆಂಚ್ ನುಡಿಗಳ ನಡುವೆ ಹಲವಾರು ಬರಹಗಳನ್ನು ಈಗಾಗಲೇ ನುಡಿಮಾರಲಾಗಿದೆ. ಈ ಬರಹಗಳಲ್ಲಿ ಯಾವ ಇಂಗ್ಲಿಶ್ ಪದಗಳಿಗೆ ಬದಲಾಗಿ ಯಾವ ಫ಼್ರೆಂಚ್ ಪದಗಳು ಅತಿ ಹೆಚ್ಚು ಕಡೆಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಎಣ್ಣುಕಗಳು ಗಮನಿಸಿಕೊಳ್ಳುತ್ತವೆ. ಹೊಸದಾಗಿ ಬರಹವೊಂದನ್ನು ಇಂಗ್ಲಿಶ್ನಿಂದ ಫ಼್ರೆಂಚ್ ನುಡಿಗೆ ಇಲ್ಲವೇ ಫ಼್ರೆಂಚ್ನಿಂದ ಇಂಗ್ಲಿಶ್ ನುಡಿಗೆ ನುಡಿಮಾರಬೇಕಾದಾಗ, ಈ ಎಣ್ಣುಕಗಳು ಒಂದೊಂದು ಪದಕ್ಕೂ ಸಮನಾಗಿರುವ ಪದಗಳಲ್ಲಿ ಆ ರೀತಿ ತುಂಬಾ ಹೆಚ್ಚು ಬಾರಿ ಬಳಕೆಯಾಗಿರುವ ಪದವನ್ನೇ ಆರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ, ಅವು ನಡೆಸುವ ನುಡಿಮಾರಿಕೆ ಓದುಗರಿಗೆ ಹೆಚ್ಚು ಮೆಚ್ಚುಗೆಯಾಗುವ ಹಾಗಾಗುತ್ತದೆ.

ಎಣ್ಣುಕಗಳು ನುಡಿಮಾರಿರುವ ಬರಹಗಳನ್ನು ಅರಿವಿಗರು ತಿದ್ದುತ್ತಿರುವಂತೆ, ಅವು ತಮ್ಮ ನುಡಿಮಾರಿಕೆಯ ಅಳವನ್ನು ಹೆಚ್ಚಿಸಿಕೊಳ್ಳುವಂತಹ ಹಮ್ಮುಗೆಯನ್ನೂ ಉಂಟುಮಾಡಲಾಗಿದೆ. ಇದರಿಂದಾಗಿ, ಹೆಚ್ಚು ಹೆಚ್ಚು ಬರಹಗಳನ್ನು ಎಣ್ಣುಕಗಳ ನೆರವಿನಿಂದ ನುಡಿಮಾರಿದಂತೆ, ಮತ್ತು ಅಂತಹ ಹೆಚ್ಚು ಹೆಚ್ಚು ಬರಹಗಳನ್ನು ಸರಿಪಡಿಸಿದಂತೆ, ಹೆಚ್ಚು ಹೆಚ್ಚು ಚನ್ನಾಗಿರುವ ನುಡಿಮಾರಿಕೆಯನ್ನು ಅವು ನಡೆಸುವಂತಾಗುತ್ತದೆ. ಗೂಗಲ್ನಂತಹ ಸರ್ವರ್ಗಳಲ್ಲಿ ಇಂತಹ ನುಡಿಮಾರಿಕೆಗಳನ್ನು ಅಳವಡಿಸಲಾಗಿದೆ. ಕನ್ನಡಕ್ಕೆ ಹೆಚ್ಚು ಚನ್ನಾಗಿರುವ ಎಣ್ಣುಕದ ನುಡಿಮಾರಿಕೆ ದೊರಕಲು ಇವನ್ನು ನಾವು ಹೆಚ್ಚು ಹೆಚ್ಚು ಬಳಸುತ್ತಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಕನ್ನಡ ನುಡಿಯ ಸೊಗಡು

ನುಡಿಯರಿಮೆಯ ಇಣುಕುನೋಟ – 33

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡುಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ, ಮತ್ತು ಸಾಮಾನ್ಯ ಜನರಿಂದ ದೂರವಾಗುತ್ತವೆ. ಅಂತಹ ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಆ ನುಡಿಯನ್ನಾಡುವ ಜನರಿಗೆ ತುಂಬಾ ತೊಡಕಿನದಾಗುತ್ತದೆ. ನುಡಿಗಳಿಗಿರುವ ಈ ಸೊಗಡು ಅವುಗಳ ಪದಗಳಲ್ಲಿ ಬರುವ ಉಲಿಗಳಲ್ಲಿ, ಉಲಿಗಳ ಓರಣಗಳಲ್ಲಿ, ಪದಗಳಿಗೆ ಒಟ್ಟು(ಪ್ರತ್ಯಯ)ಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸಿದಾಗ ಅವುಗಳ ಉಲಿಗಳಲ್ಲಿ ನಡೆಯುವ ಮಾರ್ಪಾಡುಗಳಲ್ಲಿ, ಪದಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡುವ ಬಗೆಗಳಲ್ಲಿ, ಮತ್ತು ಪದಗಳಿಂದ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಕನ್ನಡಕ್ಕೂ ಇಂತಹ ತನ್ನದೇ ಆದ ಒಂದು ಸೊಗಡಿದೆ, ಮತ್ತು ಅದು ಸಂಸ್ಕ್ರುತ, ಹಿಂದಿ, ಇಂಗ್ಲಿಶ್ ಮೊದಲಾದ ಬೇರೆ ನುಡಿಗಳಿಗಿರುವ ಸೊಗಡಿಗಿಂತ ತೀರ ಬೇರಾಗಿದೆ; ಕನ್ನಡದ ಉಲಿಗಳು, ಅವುಗಳ ಓರಣಗಳು, ಅವುಗಳ ಸೇರಿಕೆಯ ಮಾರ್ಪಾಡುಗಳು, ಕನ್ನಡದಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳು ಮೊದಲಾದುವನ್ನು ಸಂಸ್ಕ್ರುತದಂತಹ ಬೇರೆ ನುಡಿಗಳಲ್ಲಿ ಕಾಣಿಸುವ ಬಗೆಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಕನ್ನಡದ ಸೊಗಡು ಎಂತಹದು ಎಂಬುದು ಗೊತ್ತಾಗುತ್ತದೆ.

(1) ಸಂಸ್ಕ್ರುತ ಪದಗಳಲ್ಲಿ ಬಳಕೆಯಾಗುವ ಖಛಠಥಫ ಮತ್ತು ಘಝಢಧಭಗಳೆಂಬ ಒತ್ತುಸಿರಿನ ಬರಿಗೆಗಳು (ಮಹಾಪ್ರಾಣಾಕ್ಶರಗಳು) ಕನ್ನಡ ಪದಗಳಲ್ಲಿಲ್ಲ; ಆದರೆ, ಸಂಸ್ಕ್ರುತ ಪದಗಳಲ್ಲಿ ಕಾಣಿಸದಿರುವ ಗಿಡ್ಡ ಎಕಾರ ಮತ್ತು ಒಕಾರಗಳು ಕನ್ನಡ ಪದಗಳಲ್ಲಿವೆ. ಸಂಸ್ಕ್ರುತದಲ್ಲಿರುವ ಋಕಾರ ಮತ್ತು ಷಕಾರಗಳು ಕನ್ನಡದಲ್ಲಿಲ್ಲ; ಆದರೆ, ಸಂಸ್ಕ್ರುತದಲ್ಲಿಲ್ಲದ ಎಯ್, ಒಯ್, ಉಯ್, ಆಯ್, ಒವ್, ಇವ್ ಮೊದಲಾದ ಹಲವು ಸ್ವರ ಮತ್ತು ಯಕಾರ ಇಲ್ಲವೇ ವಕಾರಗಳ ಜೋಡಿಗಳು ಕನ್ನಡದಲ್ಲಿವೆ.

(2) ಈ ಎರಡು ನುಡಿಗಳಿಗೂ ಸಮಾನವಾಗಿರುವ ಅಕ್ಶರಗಳು ಹಲವಿವೆಯಾದರೂ ಅವು ಒಂದೇ ರೀತಿಯಾಗಿ ಬಳಕೆಯಾಗುವುದಿಲ್ಲ. ಸಂಸ್ಕ್ರುತದಲ್ಲಿ ಒತ್ತಕ್ಶರಗಳಿಂದ ಮೊದಲಾಗುವ ಪದಗಳು ಸಾಕಶ್ಟಿವೆ (ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೇಚ್ಛ). ಆದರೆ ಕನ್ನಡದವೇ ಆದ ಪದಗಳಲ್ಲಿ ಆ ರೀತಿ ಒತ್ತಕ್ಶರಗಳು ಪದಗಳ ಮೊದಲಿಗೆ ಬರುವುದಿಲ್ಲ. ಪದಗಳ ನಡುವೆ ಬರಬಲ್ಲ ಒತ್ತಕ್ಶರಗಳಲ್ಲೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯತ್ಯಾಸವಿದೆ. ಸಂಸ್ಕ್ರುತದ ಭಕ್ತ, ಅಜ್ಞಾನ, ವತ್ಸ, ಮತ್ಸ್ಯ ಮೊದಲಾದ ಪದಗಳಲ್ಲಿ ನಡುವೆ ಬಂದಿರುವ ಕ್ತ್, ಜ್ಞ್, ತ್ಸ್, ತ್ಸ್ಯ್ ಮೊದಲಾದ ಹಲವು ಬಗೆಯ ಒತ್ತಕ್ಶರಗಳು ಕನ್ನಡ ಪದಗಳಲ್ಲಿ ಕಾಣಿಸುವುದಿಲ್ಲ.

(3) ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟುಸೇರಿಸಿ ಹೊಸ ಪದಗಳನ್ನು ತಯಾರಿಸುವ ಹೊಲಬುಗಳು ಈ ಎರಡು ನುಡಿಗಳಲ್ಲಿ ಬೇರೆ ಬೇರಾಗಿವೆ. ಸಂಸ್ಕ್ರುತದಲ್ಲಿ ಸಾಮಾನ್ಯವಾಗಿ ಹೆಸರುಪದಗಳನ್ನು ಮಾತ್ರ ಇಂತಹ ರಚನೆಗಳಲ್ಲಿ ಬಳಸಲಾಗುತ್ತದೆ; ಆದರೆ, ಕನ್ನಡದಲ್ಲಿ ಹೆಸರುಪದ (ತಲೆಗೂದಲು, ಬಯಲಾಟ), ಎಸಕಪದ (ಚುಚ್ಚುಮದ್ದು, ಕಡೆಗೋಲು) ಮತ್ತು ಪರಿಚೆಪದಗಳೆಂಬ (ದೊಡ್ಡಮ್ಮ, ಬಿಸಿನೀರು) ಮೂರು ಬಗೆಯ ಪದಗಳನ್ನೂ ಇಂತಹ ರಚನೆಗಳಲ್ಲಿ ಬಳಸಲು ಬರುತ್ತದೆ.

(4) ಕನ್ನಡದಲ್ಲಿ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಪದಗಳನ್ನು ಈ ರೀತಿ ಜೋಡಿಸುವುದು ಅಪರೂಪ; ಆದರೆ, ಸಂಸ್ಕ್ರುತದಲ್ಲಿ ಮೂರು-ನಾಲ್ಕು ಪದಗಳನ್ನು ಸೇರಿಸಿ ರಚಿಸಿರುವ ಜೋಡುಪದಗಳೂ ಬೇಕಾದಶ್ಟಿವೆ (ಪೂರ್ವಜನ್ಮಕೃತಂ, ಮತ್ತಮಾತಂಗಗಾಮಿ, ಸಕಲನೀತಿಶಾಸ್ತ್ರತತ್ವಜ್ಞಃ).

(5) ಒಟ್ಟು(ಪ್ರತ್ಯಯ)ಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಶಯದಲ್ಲೂ ಕನ್ನಡ ಸಂಸ್ಕ್ರುತಕ್ಕಿಂತ ಬೇರಾಗಿದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒಟ್ಟುಗಳನ್ನು ಸೇರಿಸಿ ರಚಿಸಿರುವ ಪದಗಳು ತುಂಬಾ ಕಡಿಮೆ; ಆದರೆ, ಸಂಸ್ಕ್ರುತದ ಹೆಚ್ಚಿನ ಪದಗಳಲ್ಲೂ ಎರಡು ಇಲ್ಲವೇ ಹೆಚ್ಚು ಒಟ್ಟುಗಳು ಸೇರಿರುವುದನ್ನು ಕಾಣಬಹುದು (ಅ-ಜ್ಞಾನ್-ಇ, ಕರ್-ತೃ-ತ್ವ). ಕನ್ನಡದಲ್ಲಿ ಒಟ್ಟುಗಳನ್ನು ಪದಗಳ ಕೊನೆಯಲ್ಲಿ ಮಾತ್ರ ಬಳಸಲು ಬರುತ್ತದೆ; ಆದರೆ, ಸಂಸ್ಕ್ರುತದಲ್ಲಿ ಅವನ್ನು ಪದಗಳ ಮೊದಲಿಗೂ ಬಳಸಬಹುದು (ಸತ್ಯ-ಅಸತ್ಯ, ಸ್ವಾಗತ-ಸುಸ್ವಾಗತ, ಜೀವಿ-ನಿರ್ಜೀವಿ, ರಕ್ಷಣೆ-ಸಂರಕ್ಷಣೆ).

(6) ಪದಕ್ಕೆ ಪದ ಸೇರಿದಾಗ, ಇಲ್ಲವೇ ಪದಕ್ಕೆ ಒಟ್ಟು ಸೇರಿದಾಗ, ಅವುಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು ಕನ್ನಡ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಬೇರೆ ಬೇರಾಗಿವೆ: ಇಕಾರದ ಅನಂತರ ಅಕಾರ ಬಂದಾಗ, ಕನ್ನಡದಲ್ಲಿ ಇಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಅಲ್ಲಿ+ಅಲ್ಲಿ=ಅಲ್ಲಲ್ಲಿ); ಆದರೆ, ಸಂಸ್ಕ್ರುತದಲ್ಲಿ ಇಕಾರ ಯಕಾರವಾಗುತ್ತದೆ (ಅತಿ+ಅಲ್ಪ=ಅತ್ಯಲ್ಪ). ಅಕಾರದ ಅನಂತರ ಇಕಾರ ಬಂದರೂ ಕನ್ನಡದಲ್ಲಿ ಇಂತಹದೇ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುತ್ತದೆ (ಅಲ್ಲಿಂದ+ಇಳಿದು=ಅಲ್ಲಿಂದಿಳಿದು); ಆದರೆ, ಸಂಸ್ಕ್ರುತದಲ್ಲಿ ಅವೆರಡೂ ಬಿದ್ದುಹೋಗಿ ಹೊಸದೊಂದು ಸ್ವರ (ಏಕಾರ) ಬಂದುಸೇರುತ್ತದೆ (ರಾಜ+ಇಂದ್ರ=ರಾಜೇಂದ್ರ).

(7) ಒಟ್ಟುಗಳನ್ನು ಸೇರಿಸಿ ಹೊಸಪದಗಳನ್ನು ರಚಿಸುವಲ್ಲಿ ಕನ್ನಡ ಮತ್ತು ಸಂಸ್ಕ್ರುತಗಳ ನಡುವೆ ಹಲವು ಮುಕ್ಯವಾದ ವ್ಯತ್ಯಾಸಗಳಿವೆ: ಸಂಸ್ಕ್ರುತ ಪದಗಳಿಗೆ ಯ ಇಲ್ಲವೇ ಇಕ ಒಟ್ಟನ್ನು ಸೇರಿಸಿದಾಗ, ಹಲವು ತೊಡಕಾದ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಪದಗಳ ಮೊದಲಿಗೆ ಬರುವ ಗಿಡ್ಡ ಅಕಾರ ಉದ್ದ ಆ ಎಂದಾಗುವುದು (ಚಪಲ-ಚಾಪಲ್ಯ, ಪ್ರಮಾಣ-ಪ್ರಾಮಾಣಿಕ), ಇ, ಈ ಮತ್ತು ಏ ಸ್ವರಗಳು ಐ ಎಂದಾಗುವುದು (ನಿಸರ್ಗ-ನೈಸರ್ಗಿಕ, ದೀನ-ದೈನ್ಯ, ಚೇತನ-ಚೈತನ್ಯ), ಉ, ಊ ಮತ್ತು ಓ ಸ್ವರಗಳು ಔ ಎಂದಾಗುವುದು (ಸುಖ-ಸೌಖ್ಯ, ಪೂರ್ವಾಹ್ನ-ಪೌರ್ವಾಹ್ನಿಕ, ಲೋಕ-ಲೌಕಿಕ) ಮೊದಲಾದವು ಇಂತಹ ಕೆಲವು ಸಂಸ್ಕ್ರುತದ ನಿಯಮಗಳು.

ಆದರೆ, ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿ ಪದಗಳನ್ನು ರಚಿಸುವಲ್ಲಿ ಇವಕ್ಕಿಂತ ತೀರ ಬೇರಾಗಿರುವ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಇವು (ಕನ್ನಡಿಗರ ಮಟ್ಟಿಗೆ) ಸಂಸ್ಕ್ರುತದ ಸೇರಿಕೆಯ ನಿಯಮಗಳಶ್ಟು ತೊಡಕಿನವಾಗಿಲ್ಲ. ಕನ್ನಡ ಪದಗಳಿಗೆ ಇಕೆ ಒಟ್ಟನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಬಳಲು-ಬಳಲಿಕೆ, ಹೊಗಳು-ಹೊಗಳಿಕೆ, ಅಂಜು-ಅಂಜಿಕೆ) ಮತ್ತು ಪದಗಳ ಕೊನೆಯ ಇಕಾರ ಹಾಗೆಯೇ ಉಳಿದು ಇಕೆ ಒಟ್ಟಿನ ಮೊದಲ ಸ್ವರ ಬಿದ್ದುಹೋಗುತ್ತದೆ (ಇರಿ-ಇರಿಕೆ, ತಿರಿ-ತಿರಿಕೆ, ಇಳಿ-ಇಳಿಕೆ).

ಕನ್ನಡದ ಸೊಗಡು ಸಂಸ್ಕ್ರುತದ ಸೊಗಡಿಗಿಂತ ತೀರ ಬೇರಾದುದು ಎಂಬುದನ್ನು ಅವು ಬಳಸುವ ಪದಗಳ ಸ್ವರೂಪದಲ್ಲಿ ಕಾಣಿಸುವಂತಹ ಈ ವ್ಯತ್ಯಾಸಗಳು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತವೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆಯನ್ನು ಮಾಡದೆ ಬಳಸಿದಲ್ಲಿ ಅಂತಹ ಬರಹ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಳ್ಳುತ್ತದೆ. ಈ ರೀತಿ ತನ್ನ ಹುಟ್ಟುಸೊಗಡನ್ನು ಕಳೆದುಕೊಳ್ಳುವ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತದೆ, ಮತ್ತು ಅದರ ಜೀವಂತಿಕೆ ನಶ್ಟವಾಗಿ ಅದರಲ್ಲಿ ಕ್ರುತಕತೆ ತುಂಬಿಕೊಳ್ಳುತ್ತದೆ. ಇದಲ್ಲದೆ, ಅಂತಹ ಬರಹಕ್ಕೂ ಹೆಚ್ಚಿನ ಕನ್ನಡಿಗರ ಮಾತಿಗೂ ನಡುವೆ ದೊಡ್ಡ ಕಂದಕವೇರ್ಪಟ್ಟು, ಅದು ಅವರೆಲ್ಲರಿಂದಲೂ ದೂರವಾಗುತ್ತದೆ. ಯಾಕೆಂದರೆ, ಬರಹ ಆ ರೀತಿ ಬದಲಾದಾಗಲೂ ಜನರ ಆಡುನುಡಿ ಅದಕ್ಕನುಗುಣವಾಗಿ ಬದಲಾಗುವುದಿಲ್ಲ. ಅದು ತನ್ನ ಪದಸ್ವರೂಪವನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.

ಇದಕ್ಕೆ ಕಾರಣವೇನೆಂದರೆ, ಆಡುನುಡಿಯನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ; ಅದನ್ನು ಮಕ್ಕಳಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಹಾಗಾಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾರೆಡೆಗೊಳ್ಳುವಾಗ, ಅದು ತಿರುತಿರುಗಿ ಹೊಸತನವನ್ನು ಮತ್ತು ಜೀವಂತಿಕೆಯನ್ನು ಪಡೆಯುತ್ತಿರುತ್ತದೆ. ಆದರೆ, ಬರಹವನ್ನು ಮಕ್ಕಳು ಶಾಲೆಯಲ್ಲಿ ದೊಡ್ಡವರ ನೆರವಿನಿಂದ ಕಲಿಯಬೇಕಾಗುತ್ತದೆ; ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ.

ಹಾಗಾಗಿ, ಬರಹಗಾರರು ಕಾಲದಿಂದ ಕಾಲಕ್ಕೆ ಅದನ್ನು ಹೊಸದಾಗಿಸಿಕೊಳ್ಳದಿದ್ದರೆ, ಮತ್ತು ಆಡುನುಡಿಗೆ ಹತ್ತಿರವಾಗುವಂತೆ ಮಾರ್ಪಡಿಸಿಕೊಳ್ಳದಿದ್ದರೆ, ಅದು ಕ್ರುತಕವಾಗುತ್ತಾ ಹೋಗಿ ತನ್ನ ಹುಟ್ಟುಸೊಗಡನ್ನು ಮತ್ತು ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಕನ್ನಡದಲ್ಲಿ ಕತೆ-ಕಾದಂಬರಿಗಳನ್ನು ಬರೆಯುವವರು ತಮ್ಮ ಬರಹ ಈ ರೀತಿ ಕ್ರುತಕವಾಗದಂತೆ ನೋಡಿಕೊಳ್ಳುತ್ತಾರೆ; ಆದರೆ, ಬೇರೆ ಬಗೆಯ ಬರಹಗಳನ್ನು ಬರೆಯುವವರು ಇದನ್ನು ಮಾಡಲು ಹೋಗದುದರಿಂದಾಗಿ ಇವತ್ತು ಅಂತಹ ಬರಹಗಳು ತುಂಬಾ ಕ್ರುತಕವಾಗಿದ್ದು ಸಾಮಾನ್ಯ ಜನರಿಗೆ ತಿಳಿಯದ ಹಾಗಾಗಿವೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಕನ್ನಡ ಬರಹಗಳಲ್ಲಿ ‘ಕರಣ’ದ ಹಾವಳಿ

ನುಡಿಯರಿಮೆಯ ಇಣುಕುನೋಟ – 32

ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತದ ‘ಕರಣ’ ಎಂಬ ಪದದ ಬಳಕೆ ತುಂಬಾ ಹೆಚ್ಚಾಗುತ್ತಿದೆ; ಅದನ್ನು ಬಳಸುವವರು ನಿಜಕ್ಕೂ ಅದು ಬೇಕೇ ಇಲ್ಲವೇ ಬೇಡವೇ ಎಂಬುದನ್ನು ಗಮನಿಸುವುದೇ ಇಲ್ಲ. ಹಲವೆಡೆಗಳಲ್ಲಿ ಅದಕ್ಕೆ ಬದಲು ಕನ್ನಡದ್ದೇ ಆದ ‘ಇಸು’ ಒಟ್ಟನ್ನು ಬಳಸುವುದೇ ಕನ್ನಡದ ಮಟ್ಟಿಗೆ ಒಳ್ಳೆಯದು. ಯಾಕೆಂದರೆ, ‘ಕರಣ’ ಪದದ ಬಳಕೆಯಿಂದಾಗಿ ಮೂಡುವ ಹಲವು ಬಗೆಯ ಗೊಂದಲಗಳು ‘ಇಸು’ ಒಟ್ಟಿನ ಬಳಕೆಯಲ್ಲಿ ಕಾಣಿಸುವುದಿಲ್ಲ. ಇದಲ್ಲದೆ, ಕನ್ನಡದ್ದೇ ಆದ ‘ಇಸು’ ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುತ್ತವೆ; ಹಾಗಾಗಿ, ‘ಕರಣ’ ಪದದ ಬಳಕೆಯ ಹಾಗೆ ಹೊಸ ಕಟ್ಟಲೆಗಳನ್ನು ಅವರು ಕಲಿಯಬೇಕಾಗುವುದಿಲ್ಲ.

ಸಂಸ್ಕ್ರುತದ ಎರವಲುಗಳೊಂದಿಗೆ ಮಾತ್ರವಲ್ಲದೆ ಇಂಗ್ಲಿಶ್, ಪರ್ಶಿಯನ್ ಮೊದಲಾದ ಬೇರೆ ಎರವಲು ಪದಗಳೊಂದಿಗೆ, ಮತ್ತು ಕನ್ನಡದವೇ ಆದ ಪದಗಳೊಂದಿಗೂ ಈ ‘ಕರಣ’ ಎಂಬುದನ್ನು ಬಳಸಲಾಗುತ್ತದೆ; ಸಬಲೀಕರಣ, ಉದಾರೀಕರಣ, ಪ್ರಮಾಣೀಕರಣ ಎಂಬ ಪದಗಳ ಹಾಗೆ, ಡಿಜಿಟಲೀಕರಣ, ಅಯಾನೀಕರಣ, ಕಾಸಗೀಕರಣ, ದಾಕಲೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ.

ಕನ್ನಡದ ಹಸಿರು ಪದದಿಂದ ಹಸಿರೀಕರಣ, ಅಗಲ ಪದದಿಂದ ಅಗಲೀಕರಣ, ಮತ್ತು ಕಯ್ಗಾರಿಕೆ ಪದದಿಂದ ಕಯ್ಗಾರಿಕೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ. ಇಂತಹ ಹಲವು ಕಡೆಗಳಲ್ಲಿ ಸಬಲಿಸು, ಪ್ರಮಾಣಿಸು, ಡಿಜಿಟಲಿಸು, ಅಯಾನಿಸು, ದಾಕಲಿಸು, ಹಸಿರಿಸು, ಅಗಲಿಸು ಎಂಬಂತಹ ಪದಗಳನ್ನು ಮತ್ತು ಅವುಗಳ ಹೆಸರುರೂಪಗಳಾದ ಪ್ರಮಾಣಿಸುವಿಕೆ, ದಾಕಲಿಸುವಿಕೆ, ಅಯಾನಿಸುವಿಕೆ, ಹಸಿರಿಸುವಿಕೆ ಎಂಬಂತಹ ಪದಗಳನ್ನೂ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ.

‘ಕರಣ’ ಎಂಬುದನ್ನು ಬಳಸುವವರಲ್ಲಿ ಹಲವರಿಗೆ ಅದರೊಂದಿಗೆ ಬರುವ ಹೆಸರುಪದದಲ್ಲಿ ಎಂತಹ ಮಾರ್ಪಾಡುಗಳನ್ನೆಲ್ಲ ಮಾಡಬೇಕು ಎಂಬ ವಿಶಯದಲ್ಲೂ ಗೊಂದಲಗಳಿವೆ; ಕೆಲವರು ಆದುನಿಕೀಕರಣ, ಜಾಗತಿಕೀಕರಣ, ಯಾಂತ್ರಿಕೀಕರಣ ಎಂದು ಬರೆದರೆ, ಇನ್ನು ಕೆಲವರು ಆದುನೀಕರಣ, ಜಗತೀಕರಣ, ಯಾಂತ್ರೀಕರಣ ಎಂಬುದಾಗಿ ಬರೆಯುತ್ತಾರೆ. ಸಾಮಾಜೀಕರಣವೂ ಇದೆ, ಸಮಾಜೀಕರಣವೂ ಇದೆ; ಸಾದ್ರುಶೀಕರಣವೂ ಇದೆ, ತುರ್ತುಕರಣವೂ ಇದೆ. ಮೇಲಿನ ಪದಗಳಲ್ಲಿ ಬಳಕೆಯಾಗಿರುವ ಮಹಾಪ್ರಾಣಾಕ್ಶರಗಳನ್ನು ಈ ಅಂಕಣದಲ್ಲಿ ಕಯ್ಬಿಡಲಾಗಿದೆ; ಆದರೆ, ಅದರ ಬಳಕೆಯಲ್ಲೂ ಸಾಕಶ್ಟು ಗೊಂದಲಗಳಿವೆ.

‘ಕರಣ’ ಪದವನ್ನು ಬಳಸುವವರೂ ಆ ಪದಗಳಿಂದ ಎಸಕ(ಕ್ರಿಯಾ)ಪದಗಳನ್ನು ಉಂಟುಮಾಡಬೇಕಿದ್ದಲ್ಲಿ ಕನ್ನಡದ ‘ಇಸು’ ಒಟ್ಟನ್ನು ಬಳಸಲೇಬೇಕಾಗುತ್ತದೆ; ಸಬಲೀಕರಣ, ದಾಕಲೀಕರಣ, ಡಿಜಿಟಲೀಕರಣ ಎಂಬಂತಹ ಪದಗಳನ್ನು ಬಳಸುವವರು ಅವುಗಳಿಂದ ಎಸಕಪದವನ್ನು ಪಡೆಯಬೇಕಿದ್ದಲ್ಲಿ ಸಬಲೀಕರಿಸು, ದಾಕಲೀಕರಿಸು, ಡಿಜಿಟಲೀಕರಿಸು ಎಂಬುದಾಗಿ ಇಸು ಒಟ್ಟನ್ನು ಸೇರಿಸಿಯೇ ಹೇಳಬೇಕಾಗುತ್ತದೆ; ಇದಕ್ಕೆ ಬದಲು ಸಬಲಿಸು, ದಾಕಲಿಸು, ಡಿಜಿಟಲಿಸು ಎಂದಶ್ಟೇ ಹೇಳಿದರೆ ಸಾಕಾಗುವುದಿಲ್ಲವೇ? ಅವುಗಳ ನಡುವೆ ಕರಣವನ್ನು ಯಾಕೆ ತಂದುಹಾಕಬೇಕು? ಸ್ತಿರೀಕರಣಗೊಳ್ಳು ಎಂಬುದೂ ಇಂತಹದೇ ಇನ್ನೊಂದು ಅನವಶ್ಯಕವಾದ ಕರಣ ಪದವನ್ನು ಸೇರಿಸಿರುವ ಪದರೂಪ; ಸ್ತಿರಗೊಳ್ಳು ಎಂಬುದು ಹೆಚ್ಚು ಅಡಕವಾಗಿ ಅದೇ ಹುರುಳನ್ನು ಕೊಡಬಲ್ಲುದು.

ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವಲ್ಲೂ ಕನ್ನಡದ ಅರಿವಿಗರು ಈ ‘ಕರಣ’ ಪದವನ್ನು ಹಲವೆಡೆಗಳಲ್ಲಿ ಬಳಸಿದ್ದಾರೆ; ಕಾರ್ಬನೀಕರಣ, ನಯ್ಟ್ರೀಕರಣ, ಪಾಲಿಮರೀಕರಣ ಎಂಬಂತಹ ಈ ಪದಗಳನ್ನು ಬಳಸಿದಲ್ಲಿ, ಅವಕ್ಕೆ ಸಂಬಂದಿಸಿದಂತೆ ಕರಿಸು (ಅಯಾನೀಕರಿಸು), ಕ್ರುತ (ಅಯಾನೀಕ್ರುತ), ಕಾರಕ (ಅಯಾನೀಕಾರಕ), ಕಾರಿ (ಅಯಾನೀಕಾರಿ) ಎಂಬಂತಹ ಕರಣ ಪದಕ್ಕೆ ಸಂಬಂದಿಸಿದಂತಹ ಬೇರೆ ಕೆಲವು ಪದಗಳನ್ನೂ ಬಳಸಬೇಕಾಗುತ್ತದೆ, ಮತ್ತು ಅವು ಕನ್ನಡದ್ದಲ್ಲವಾದ ಕಾರಣ, ಅವನ್ನು ಬಳಸುವಲ್ಲಿ ಹಲವಾರು ತಪ್ಪುಗಳೂ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದಲ್ಲಿ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಮತ್ತು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಇಸುವಿಕೆ (ಅಯಾನಿಸುವಿಕೆ), ಇಸಿದ (ಅಯಾನಿಸಿದ), ಇಸುವ (ಅಯಾನಿಸುವ) ಎಂಬಂತಹ ರೂಪಗಳನ್ನು ಬಳಸಲು ಬರುತ್ತದೆ.

ಇಂತಹ ಕಡೆಗಳಲ್ಲಿ ಅರಿವಿಗರು ಇನ್ನೂ ಒಂದು ತೊಡಕನ್ನು ಎದುರಿಸಬೇಕಾಗುತ್ತದೆ: ಇಂಗ್ಲಿಶ್ನ ಅಯ್ಸ್ ಎಂಬ ಒಟ್ಟು ಬಂದಿರುವಲ್ಲಿ ಕರಿಸು ಎಂಬುದನ್ನು ಬಳಸುವ (ಪೋಲರಯ್ಸ್ – ದ್ರುವೀಕರಿಸು, ಅನೊಡಯ್ಸ್ – ಅನೊಡೀಕರಿಸು) ಈ ಅರಿವಿಗರು ಇಂಗ್ಲಿಶ್ನ ಅಯ್ಸ್ ಎಂಬುದಕ್ಕಿರುವ ಮಾಡುವಿಕೆ ಮತ್ತು ಆಗುವಿಕೆ ಎಂಬ ಎರಡು ಹುರುಳುಗಳಲ್ಲಿ ಒಂದನ್ನು ಮಾತ್ರ ತಿಳಿಸಬಲ್ಲರು; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದರೆ ಆ ಎರಡು ಹುರುಳುಗಳನ್ನೂ ತಿಳಿಸಬಲ್ಲರು. ಯಾಕೆಂದರೆ, ಕರಣ ಎಂಬುದಕ್ಕೆ ಆಗುವಿಕೆ ಎಂಬ ಹುರುಳು ಸಿಗಲಾರದು; ಆದರೆ, ಇಸು ಎಂಬುದನ್ನು ಬಳಸಿರುವ ಅನೋಡಿಸು, ಅಲ್ಯೂಮಿನಿಸು ಎಂಬುವಕ್ಕೆ ಆಗುವಿಕೆಯ ಹುರುಳೂ ಸಿಗಬಲ್ಲುದು.

ಅರಿಮೆಯ (ಪಾರಿಬಾಶಿಕ)ಪದಗಳನ್ನು ಉಂಟುಮಾಡುವಲ್ಲಿ ಆತ್ಮಕ ಎಂಬುದನ್ನು ಬಳಸುವುದೂ ಇಂತಹದೇ ಒಂದು ಬೇಕಿಲ್ಲದ ಚಾಳಿ. ನುಡಿಯರಿಮೆಯ ಒಂದು ಪದನೆರಕೆಯಲ್ಲಿ ಈ ರೀತಿ ಆತ್ಮಕ ಎಂಬುದನ್ನು ಬಳಸಿರುವ ಇನ್ನೂರಯ್ವತ್ತಕ್ಕಿಂತಲೂ ಹೆಚ್ಚು (ಎಂದರೆ, ಸುಮಾರು ನೂರಕ್ಕೆ ಹದಿಮೂರರಶ್ಟು) ಪದಗಳಿವೆ! ಇವುಗಳಲ್ಲಿ ಹೆಚ್ಚಿನವುಗಳಲ್ಲಿಯೂ ಆತ್ಮಕ ಎಂಬುದನ್ನು ಬಳಸಬೇಕಾಗಿಯೇ ಇಲ್ಲ (ವ್ಯಾಕರಣಾತ್ಮಕ ನಿಯಮ – ವ್ಯಾಕರಣ ನಿಯಮ, ದ್ವನ್ಯಾತ್ಮಕ ರಚನೆ – ದ್ವನಿರಚನೆ, ಪ್ರೇರಣಾತ್ಮಕ ವಾಕ್ಯ – ಪ್ರೇರಣ ವಾಕ್ಯ). ಅರಿಮೆಯ ಪದಗಳು ಸಿಕ್ಕಲಾಗಿದ್ದಶ್ಟೂ ಒಳ್ಳೆಯದು ಎಂಬ ಅನಿಸಿಕೆ ಈ ಪದಗಳನ್ನು ಉಂಟುಮಾಡಿರುವ ಅರಿವಿಗರಲ್ಲಿರುವ ಹಾಗೆ ಕಾಣಿಸುತ್ತದೆ.

ಇದಲ್ಲದೆ, ತಮ್ಮ ಬರಹಗಳಲ್ಲಿ ಎಲ್ಲರಿಗೂ ಗೊತ್ತಾಗುವ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಿಸಿದರೆ ಅವುಗಳ ಮಟ್ಟ ಮೇಲೇರುತ್ತದೆಯೆಂದು ಕೆಲವರು ತಿಳಿದ ಹಾಗಿದೆ. ಆದರೆ, ಹಲವು ಮಂದಿ ಹೀಗೆ ಮಾಡುವಲ್ಲಿ ಹಲವು ಬಗೆಯ ತಪ್ಪುಗಳನ್ನೂ ಮಾಡಿ ನಗುವಿಗೆ ಎಡೆಮಾಡಿಕೊಡುತ್ತಾರೆ. ‘ಕಾರಣ’ ಎಂಬ ಪದದ ಬದಲು ಹಲವು ಮಂದಿ ‘ಸಕಾರಣ’ ಎಂಬ ಪದವನ್ನು ಬಳಸುತ್ತಾರೆ; ಆದರೆ, ಇವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಸಕಾರಣ ಎಂಬುದಕ್ಕೆ ‘ಕಾರಣವಿರುವ’ ಎಂಬ ಹುರುಳಿದೆ. ಇದನ್ನು ಗಮನಿಸದ ಕೆಲವರ ಬರಹಗಳಲ್ಲಿ ಸಕಾರಣವಿಲ್ಲದೆ, ಸಕಾರಣ ನೀಡದೆ, ಸಕಾರಣಗಳಿರಲಿಲ್ಲ ಎಂಬಂತಹ ಬಳಕೆಗಳನ್ನು ಕಾಣಬಹುದು! ಆದರೆ, ಇಂತಹದೇ ಬಳಕೆ ಮುಂದುವರಿದರೆ, ಸಕಾರಣ ಎಂಬುದಕ್ಕೆ ಕನ್ನಡದಲ್ಲಿ ಬರಿಯ ಕಾರಣ ಎಂಬುದರ ಹುರುಳೇ ಇರುವಂತಾದೀತು.

ಇಹಲೋಕ ಮತ್ತು ಪರಲೋಕ ಎಂಬ ಬೇರೆ ಎರಡು ಸಂಸ್ಕ್ರುತ ಎರವಲುಗಳ ಬಳಕೆಯೂ ಇಂತಹದೇ. ಅವುಗಳ ನಿಜವಾದ ಹುರುಳು ಏನೆಂದು ತಿಳಿಯದಿದ್ದರೂ ಬಳಸುವ ಆಸೆ. ಆತನನ್ನು ಕಚ್ಚಿದ ಹಾವೇ ಸತ್ತುಹೋಯಿತು ಎಂಬುದನ್ನು ಹೇಳಬೇಕಿರುವಲ್ಲಿ ಕಚ್ಚಿದ ಹಾವೇ ಇಹಲೋಕಕ್ಕೆ ಹೋಯಿತು ಎಂಬುದಾಗಿ ಬರೆದಿರುವುದನ್ನು ಕಾಣಬಹುದು! ಇಹಲೋಕ ಮತ್ತು ಪರಲೋಕಗಳೆಂಬ ಈ ಪದಗಳ ಬದಲು ಈ ಲೋಕ ಮತ್ತು ಬೇರೆ ಲೋಕ ಎಂಬ ಎಲ್ಲರಿಗೂ ಗೊತ್ತಾಗುವ ಪದಕಂತೆಗಳನ್ನು ಬಳಸಿದ್ದರೆ, ಇಂತಹ ತಪ್ಪು ಮಾಡಿ ನಗೆಪಾಟಲಾಗುವ ಹಾಗಾಗುತ್ತಿರಲಿಲ್ಲ.

ದಿನಪತ್ರಿಕೆಗಳಲ್ಲಿ ತಲೆಬರಹವನ್ನು ಬರೆಯುವವರೂ ಇಂತಹದೇ ಕೀಳರಿಮೆಯಿಂದ ಬಳಲುತ್ತಿರುವ ಹಾಗೆ ಕಾಣಿಸುತ್ತದೆ. ಒಂದು ಬರಹದಲ್ಲಿ ಉದ್ದಕ್ಕೂ ನಾಯಿ, ಬೆಕ್ಕು, ಕೋಳಿ, ಮೀನು ಎಂಬಂತಹ ಕನ್ನಡದವೇ ಆದ ಪದಗಳನ್ನು ಬರುತ್ತವೆ; ಆದರೆ, ತಲೆಬರಹದಲ್ಲಿ ಮಾತ್ರ ಶ್ವಾನ, ಮಾರ್ಜಾಲ, ಕುಕ್ಕುಟ, ಮತ್ಸ್ಯ ಎಂಬಂತಹ ಸಂಸ್ಕ್ರುತ ಎರವಲುಗಳು ಬರುತ್ತವೆ. ತಲೆಬರಹದಲ್ಲಿ ಎಲ್ಲರಿಗೂ ಗೊತ್ತಿರುವ ನಾಯಿ, ಬೆಕ್ಕು, ಮೀನು ಮೊದಲಾದ ಕನ್ನಡ ಪದಗಳು ಬಂದರೆ ದಿನಪತ್ರಿಕೆಯ ತಕ್ಕಮೆ ಇಲ್ಲವಾಗಬಹುದೆಂಬ ಹೆದರಿಕೆ ಅವರಿಗಿರುವಂತೆ ತೋರುತ್ತದೆ. ತನ್ನ ಮುದಿ ತಂದೆಯನ್ನು ಅಪ್ಪ ಎನ್ನಲು ಹಿಂಜರಿಯುವ ದೊಡ್ಡ ಅದಿಕಾರಿಯ ಕೀಳು ಸಂಸ್ಕ್ರುತಿಯಿದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ

ನುಡಿಯರಿಮೆಯ ಇಣುಕುನೋಟ – 31

ಕೆಲಸ ಮಾಡಿದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ, ಇಲ್ಲವೇ ‘ಕೆಲಸ ಮಾಡದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ? ಕೆಲವರು ಮೊದಲನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ, ಮತ್ತು ಬೇರೆ ಕೆಲವರು ಎರಡನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ. ಇಲ್ಲಿ ‘ಹಣ ಕೊಡುವುದು’ ಎಂಬ ಒಂದು ಎಸಕಕ್ಕೆ (ಕ್ರಿಯೆಗೆ) ‘ಕೆಲಸ ಮಾಡುವುದು’ ಎಂಬ ಇನ್ನೊಂದು ಎಸಕವನ್ನು ಬೇಡಿಕೆಯಾಗಿ ಮಾಡಲಾಗಿದೆ. ಇದನ್ನೇ ‘ಕೆಲಸ ಮಾಡದಿದ್ದರೆ ಹಣ ಸಿಗುವುದಿಲ್ಲ’ ಎಂಬುದಾಗಿ ಇನ್ನೊಂದು ಬಗೆಯಲ್ಲೂ ಹೇಳಲು ಬರುತ್ತದೆ.

ಈ ಎರಡನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದೆ (ಇದ್ದರೆ)’ ಎಂಬ ಪದವನ್ನೇ ಬಳಸಬೇಕಾಗುತ್ತದೆ; ಆದರೆ, ಅದರೊಂದಿಗೆ ‘ಹೊರತು’ ಎಂಬುದನ್ನು ಬಳಸಿರುವ ಮೊದಲನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದ’ ಎಂಬುದನ್ನು ಬಳಸಬೇಕೇ, ಇಲ್ಲವೇ ‘ಮಾಡಿದ’ ಎಂಬುದನ್ನು ಬಳಸಬೇಕೇ ಎಂಬುದೇ ಇಲ್ಲಿ ನಮ್ಮ ಮುಂದಿರುವ ಕೇಳ್ವಿ.

‘ಹೊರತು’ ಎಂಬ ಪದಕ್ಕೆ ಅಲ್ಲಗಳೆಯುವ ಹುರುಳಿದೆ; ಹಾಗಾಗಿ, ಅದರೊಂದಿಗೆ ‘ಮಾಡದ’ ಎಂಬ ಇನ್ನೊಂದು ಅಲ್ಲಗಳೆಯುವ ಹುರುಳಿರುವ ಪದವನ್ನು ಬಳಸಿದಲ್ಲಿ, ಒಂದು ಅಲ್ಲಗಳೆತ ಇನ್ನೊಂದು ಅಲ್ಲಗಳೆತವನ್ನು ಹೊಡೆದು ಹಾಕುವುದರಿಂದ, ಒಟ್ಟಾರೆಯಾಗಿ ಅಲ್ಲಗಳೆಯುವ ಹುರುಳು ಇಲ್ಲವಾಗುತ್ತದೆ, ಮತ್ತು ಈ ಕಾರಣಕ್ಕಾಗಿ ‘ಮಾಡದ ಹೊರತು’ ಎಂಬುದರ ಬಳಕೆ ಸರಿಯಲ್ಲ ಎಂಬುದಾಗಿ ಮೊದಲನೆಯ ಸೊಲ್ಲೇ ಸರಿ ಎಂದು ಹೇಳುವವರು ಅದಕ್ಕೆ ಉನ್ನೋಜೆಯ (ತರ‍್ಕದ) ಬೆಂಬಲವನ್ನು ಕೊಡಬಹುದು.

ಆದರೆ, ಇಲ್ಲಿ ತೊಡಕೇನೆಂದರೆ, ಸೊಲ್ಲರಿಮೆಯ ಕಟ್ಟಲೆಗಳು ಉನ್ನೋಜೆಯ ಕಟ್ಟಲೆಗಳಿಗೆ ಬೆಲೆ ಕೊಡಲೇ ಬೇಕೆಂದೇನೂ ಇಲ್ಲ. ಒಂದು ನುಡಿಯಲ್ಲಿ ಎಂತಹ ಸೊಲ್ಲು ಸರಿ ಎಂಬುದು ಎಂತಹದು ಬಳಕೆಯಲ್ಲಿದೆ ಎಂಬುದರ ಮೇಲೆ ಮಾತ್ರ ಅವಲಂಬಿಸಿರುತ್ತದೆ. ಕಿಟ್ಟೆಲ್ ಡಿಕ್ಶನರಿಯಲ್ಲಿ ಈ ಎರಡು ಬಗೆಯ ಸೊಲ್ಲುಗಳನ್ನೂ ಕೊಡಲಾಗಿದೆ; ಎಂದರೆ, ಈ ಎರಡು ಬಗೆಯ ಸೊಲ್ಲುಗಳೂ ಕನ್ನಡದಲ್ಲಿ ಬಳಕೆಯಲ್ಲಿವೆ. ಹಾಗಾಗಿ, ಎರಡೂ ಸರಿಯೆಂದೇ ಹೇಳಬೇಕಾಗುತ್ತದೆ.

ಉನ್ನೋಜೆಯ ಕಟ್ಟಲೆಗಳಿಗೂ ಸೊಲ್ಲರಿಮೆಯ ಕಟ್ಟಲೆಗಳಿಗೂ ನಡುವೆ ಹೊಂದಾಣಿಕೆಯಿಲ್ಲದಿರುವುದನ್ನು ಹಲವಾರು ಕಡೆಗಳಲ್ಲಿ ಕಾಣಬಹುದು. ‘ನಾನು ಅವನಿಗೆ ಹೊಡೆದಿದ್ದೇನೆ’ ಎಂಬುದೂ ‘ನಾನು ಅವನಿಗೆ ಹೊಡೆಯಲಿಲ್ಲವೆಂದಿಲ್ಲ’ ಎಂಬುದೂ ಉನ್ನೋಜೆಯ ಮಟ್ಟಿಗೆ ಒಂದೇ; ಆದರೆ, ಮಾತಿನಲ್ಲಿ ಅವು ಒಂದೇ ಅಲ್ಲ; ಯಾಕೆಂದರೆ, ಆ ಎರಡು ಸೊಲ್ಲುಗಳ ಹುರುಳಿನಲ್ಲಿ ವ್ಯತ್ಯಾಸವಿದೆ: ಅವುಗಳಲ್ಲಿ ಎರಡನೆಯ ಸೊಲ್ಲಿಗೆ ಮೊದಲನೆಯದು ತಿಳಿಸದಂತಹ ಕೆಲವು ಹೆಚ್ಚಿನ ಹುರುಳುಗಳಿವೆ; ‘ಹೊಡೆದಿದ್ದೇನೆ; ಆದರೆ, ಅದು ಅವನ ಒಳ್ಳೆಯದಕ್ಕೆ’ ಎಂಬುದು ಇಂತಹ ಒಂದು ಹೆಚ್ಚಿನ ಹುರುಳು.

ಅಲ್ಲಗಳೆತವನ್ನು ಒತ್ತಿಹೇಳುವುದಕ್ಕಾಗಿಯೂ ಎರಡು ಅಲ್ಲಗಳೆತಗಳನ್ನು ಒಟ್ಟಿಗೆ ಬಳಸಲಾಗುತ್ತದೆ; ‘ಬೇಡ ಬೇಡ’ ಇಲ್ಲವೇ ‘ಬೇಡವೇ ಬೇಡ’ ಎನ್ನುವುದಕ್ಕೆ ‘ಬೇಕು’ ಎಂಬ ಹುರುಳಿಲ್ಲ; ‘ಬೇಡ’ ಎಂಬುದನ್ನೇ ಒತ್ತಿಹೇಳುವ ಹುರುಳಿದೆ. ‘ಮಾಡದ ಹೊರತು’ ಎಂಬುದರ ಬಳಕೆಯಲ್ಲಿಯೂ ಇಂತಹದೇ ಎರಡು ಅಲ್ಲಗಳೆತಗಳ ಕೂಡಿಕೆ ನಡೆದಿರಬಹುದಲ್ಲವೇ?

ಹಿಂದೆ, ಈಗ, ಮತ್ತು ಮುಂದೆ ಎಂಬುದಾಗಿ ಮೂರು ಹೊತ್ತುಗಳನ್ನು ತಿಳಿಸುವ ಎಸಕ(ಕ್ರಿಯಾ)ರೂಪಗಳು ನುಡಿಗಳಲ್ಲಿರಬೇಕು ಎಂಬುದಾಗಿ ಹಿಂದಿನ ಸೊಲ್ಲರಿಗರು ಒಂದು ಉನ್ನೋಜೆಯ ಕಟ್ಟಲೆಯನ್ನು ತಮ್ಮ ಮುಂದಿರಿಸಿಕೊಂಡಿರುವ ಹಾಗೆ ಕಾಣಿಸುತ್ತದೆ; ಆದರೆ, ಕನ್ನಡದಲ್ಲಿ ‘ಇರು’ ಎಂಬ ಒಂದು ಎಸಕಪದಕ್ಕೆ ಮಾತ್ರ ‘ಇದ್ದ’, ‘ಇದ್ದಾನೆ’, ಮತ್ತು ‘ಇರುತ್ತಾನೆ’ ಎಂಬುದಾಗಿ ಮೂರು ಬಗೆಯ ಹೊತ್ತುಗಳನ್ನು ತಿಳಿಸುವ ರೂಪಗಳಿವೆ.

ಉಳಿದ ಎಸಕಪದಗಳಿಗೆಲ್ಲ ಹಿಂದಿನ ಮತ್ತು ಮುಂದಿನ ಎಸಕಗಳನ್ನು ತಿಳಿಸಬಲ್ಲ ‘ಬಂದ’ ಮತ್ತು ‘ಬರುತ್ತಾನೆ’ ಇಲ್ಲವೇ ‘ಹೋದ’ ಮತ್ತು ‘ಹೋಗುತ್ತಾನೆ’ ಎಂಬಂತಹ ಎರಡೆರಡು ಹೊತ್ತಿನ ರೂಪಗಳು ಮಾತ್ರ ಇವೆ. ಇವುಗಳಲ್ಲಿ ಎರಡನೆಯ ರೂಪಕ್ಕೆ ಈಗಿನ ಎಸಕವನ್ನು ಮಾತ್ರವಲ್ಲದೆ ಮುಂದಿನ ಎಸಕವನ್ನು ತಿಳಿಸುವ ಹುರುಳೂ ಇದೆ; ‘ನನಗೆ ಆ ರೀತಿ ಅನಿಸುತ್ತದೆ’ ಎಂಬ ಸೊಲ್ಲಿನಲ್ಲಿ ಅದು ನನ್ನಲ್ಲಿ ಈಗ ಇರುವ ಅನಿಸಿಕೆಯನ್ನು ತಿಳಿಸುತ್ತದೆ, ಮತ್ತು ‘ಅವನು ನಾಳೆ ಬರುತ್ತಾನೆ’ ಎಂಬ ಸೊಲ್ಲಿನಲ್ಲಿ ಅದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ.

ನುಡಿಯಲ್ಲಿಲ್ಲದಿರುವ ಮೂರು ಹೊತ್ತುಗಳನ್ನು ಕನ್ನಡದ ಎಸಕಪದಗಳಲ್ಲಿ ಕಾಣಿಸುವುದಕ್ಕಾಗಿ ಸೊಲ್ಲರಿಗರು ‘ಬರುತ್ತಾನೆ’ ಎಂಬುದು ಈಗ ನಡೆಯುವ ಎಸಕವನ್ನು ತಿಳಿಸುತ್ತದೆ, ಮತ್ತು ‘ಬರುವನು’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ ಎಂಬಂತಹ ಕಲ್ಪನೆಗೆ ಮೊರೆಹೋಗಿದ್ದಾರೆ. ಆದರೆ, ಉನ್ನೋಜೆಯ ಕಟ್ಟಲೆಯನ್ನು ನುಡಿಯ ಮೇಲೆ ಹೊರಿಸಲು ಹೊರಟಿರುವ ಈ ಪ್ರಯತ್ನ ನಿಜಕ್ಕೂ ತಪ್ಪಾಗಿದೆ. ಯಾಕೆಂದರೆ, ‘ಬರುತ್ತಾನೆ’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸಬಲ್ಲುದು, ಮತ್ತು ‘ಬರುವನು’ ಎಂಬುದನ್ನು ಕನ್ನಡ ಬರಹಗಳಲ್ಲಿ ತುಂಬಾ ಅಪರೂಪವಾಗಿ ಬಳಸಲಾಗುತ್ತಿದ್ದು, ಅದರ ಹುರುಳಿಗೂ ‘ಬರುತ್ತಾನೆ’ ಎಂಬುದರ ಹುರುಳಿಗೂ ನಡುವಿರುವ ವ್ಯತ್ಯಾಸ ಹೊತ್ತಿನ ವ್ಯತ್ಯಾಸವೇ ಅಲ್ಲ. ಕೆಲವೆಡೆಗಳಲ್ಲಿ ಬರುವನು ಎಂಬುದಕ್ಕೆ ಬಳಕೆಯ ಹುರುಳಿದೆ.

‘ಅಕ್ಕ’ ಎಂಬ ಪದವನ್ನು ಬರಹದಲ್ಲಿ ಬಳಸುವಾಗ ‘ಅಕ್ಕಳನ್ನು’, ‘ಅಕ್ಕಳಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಇಲ್ಲವೇ ‘ಅಕ್ಕನನ್ನು’, ‘ಅಕ್ಕನಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಎಂಬ ವಿಶಯದಲ್ಲಿಯೂ ಹಲವರಿಗೆ ಗೊಂದಲವಿರುವ ಹಾಗೆ ಕಾಣಿಸುತ್ತದೆ; ‘ಅಕ್ಕ’ ಎಂಬ ಪದ ಒಬ್ಬ ಹೆಂಗುಸನ್ನು ಗುರುತಿಸುವ ಕಾರಣ, ಅದರ ಬಳಿಕ ನಕಾರದ ಬದಲು ಳಕಾರವನ್ನು ಬಳಸಬೇಕೆಂಬ ಅನಿಸಿಕೆಯೇ ಈ ಗೊಂದಲಕ್ಕೆ ಕಾರಣ. ಅಕಾರದಲ್ಲಿ ಕೊನೆಗೊಳ್ಳುವ ‘ಕಿರಣ’, ‘ರಮ್ಯ’ ಮೊದಲಾದ ಹೆಣ್ಣುಗುರ‍್ತಿನ ಇಂತಹ ಬೇರೆ ಪದಗಳನ್ನು ಬಳಸುವಲ್ಲೂ ಇಂತಹದೇ ಗೊಂದಲ ಕಾಣಿಸುತ್ತದೆ. ಆದರೆ, ‘ಅಮ್ಮ’ ಎಂಬ ಇನ್ನೊಂದು ಪದವನ್ನು ಬಳಸುವಲ್ಲಿ ಗೊಂದಲವಿರುವ ಹಾಗೆ ಕಾಣಿಸುವುದಿಲ್ಲ; ಯಾಕೆಂದರೆ, ಯಾರೂ ‘ಅಮ್ಮಳನ್ನು’ ಇಲ್ಲವೇ ‘ಅಮ್ಮಳಿಗೆ’ ಎಂಬಂತಹ ರೂಪಗಳನ್ನು ಬಳಸಿದ ಹಾಗೆ ಕಾಣಿಸುವುದಿಲ್ಲ.

ಅಕಾರದಲ್ಲಿ ಕೊನೆಗೊಳ್ಳುವ ಕೊಟ್ಟಹೆಸರುಗಳ ಬಳಕೆಯಲ್ಲಿ ಇಂತಹ ಗೊಂದಲ ಕಾಣಿಸಿಕೊಳ್ಳಲು ಬೇರೊಂದು ಕಾರಣವೂ ಇದೆ: ಇಂತಹ ಕೆಲವು ಹೆಸರುಗಳು ಹುಡುಗಿಯರನ್ನು ಮಾತ್ರವಲ್ಲದೆ ಹುಡುಗರನ್ನು ಗುರುತಿಸುವಲ್ಲೂ ಬಳಕೆಯಾಗುತ್ತಿದ್ದು, ‘ಕಿರಣನನ್ನು’ ಎಂಬುದು ಹುಡುಗರನ್ನು ಗುರುತಿಸಬಲ್ಲುದಾಗಿದ್ದು, ಹುಡುಗಿಯರನ್ನು ಗುರುತಿಸುವಲ್ಲಿ ಅದಕ್ಕಿಂತ ಬೇರಾಗಿರುವ ‘ಕಿರಣಳನ್ನು’ ಎಂಬುದನ್ನು ಬಳಸುವುದೇ ಸರಿಯೆಂದು ಕೆಲವರಿಗೆ ಅನಿಸಬಹುದು.

‘ಅವನನ್ನು’ ಮತ್ತು ‘ಅವಳನ್ನು’ ಎಂಬ ಪದಗಳ ನಡುವಿರುವ ವ್ಯತ್ಯಾಸವೇ ಇಂತಹ ಪದಗಳ ನಡುವೆಯೂ ಇರಬೇಕೆಂಬ ಅನಿಸಿಕೆಯೂ ಈ ರೀತಿ ‘ಅಕ್ಕಳನ್ನು’, ‘ರಮ್ಯಳನ್ನು’ ಎಂಬಂತಹ ರೂಪಗಳನ್ನು ಬಳಸುವುದಕ್ಕೆ ಕಾರಣವಿರಬಹುದು. ಆದರೆ, ಕನ್ನಡದಲ್ಲಿ ‘ಅನ್ನು’ ಎಂಬ ಪತ್ತುಗೆ (ವಿಬಕ್ತಿ) ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆ ಬೇರೆಯೇ ಇದೆ: ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಗಂಡುಗುರ‍್ತ(ಪುಲ್ಲಿಂಗ)ದವಾಗಲಿ, ಹೆಣ್ಣುಗುರ‍್ತ(ಸ್ತ್ರೀಲಿಂಗ)ದವಾಗಲಿ ಅವುಗಳ ಬಳಿಕ ‘ಅನ್ನು’ ಒಟ್ಟು ಸೇರುವ ಮೊದಲು ನಕಾರವೇ ಬರುತ್ತದಲ್ಲದೆ ಳಕಾರ ಬರುವುದಿಲ್ಲ.

ಹಲವೆಣಿಕೆಯ (ಬಹುವಚನದ) ‘ರು’ ಒಟ್ಟು ಮನುಶ್ಯರನ್ನು ಗುರುತಿಸುವ ಹುಡುಗ, ಹುಡುಗಿ, ಕುರುಡ, ಕುರುಡಿ, ಮುದುಕ ಮೊದಲಾದ ಪದಗಳೊಂದಿಗೆ ಬರುತ್ತದೆ, ಮತ್ತು ‘ಗಳು’ ಒಟ್ಟು ಮನುಶ್ಯರಿಗಿಂತ ಬೇರಾಗಿರುವ ಮರ, ಕಲ್ಲು, ಮನೆ, ಎಮ್ಮೆ, ಹಕ್ಕಿ ಮೊದಲಾದವುಗಳೊಂದಿಗೆ ಬರುತ್ತದೆ; ಆದರೆ, ಇಂತಹದೊಂದು ಕಟ್ಟಲೆಗೂ ಹೊರಪಡಿಕೆಗಳಿವೆ: ಇಕಾರ ಇಲ್ಲವೇ ಉಕಾರದಲ್ಲಿ ಕೊನೆಗೊಳ್ಳುವ ಗಂಡುಗುರ‍್ತದ ಪದಗಳ ಬಳಿಕ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ಹೆಣ್ಣುಗುರ‍್ತದ ಪದಗಳ ಬಳಿಕ ‘ಗಳು’ ಎಂಬುದೇ ಬರುತ್ತದೆ (ಕಿಡಿಗೇಡಿಗಳು, ಎದುರಾಳಿಗಳು, ಗುರುಗಳು, ಮುಂದಾಳುಗಳು; ಹೆಣ್ಣಾಳುಗಳು, ಹೆಣ್ಣುಗಳು). ಇಲ್ಲಿಯೂ ಕೂಡ, ಉನ್ನೋಜೆಯ ಕಟ್ಟಲೆಗಳಿಗೆ ಎಡೆಯಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳ ಹುರುಳು ಮತ್ತು ತಿಳಿವು

ನುಡಿಯರಿಮೆಯ ಇಣುಕುನೋಟ – 30

ಒಂದು ಪದವನ್ನು ಕೇಳಿದಾಗ ಅದರ ಅರ‍್ತವೇನೆಂದು ನಮಗೆ ಗೊತ್ತಾಗುತ್ತದೆ; ಆದರೆ, ನಿಜಕ್ಕೂ ಈ ‘ಅರ‍್ತ’ ಎಂದರೇನು? ಪದನೆರಕೆ(ಪದಕೋಶ)ಗಳಲ್ಲಿ ಪದಗಳ ಅರ‍್ತವೇನೆಂದು ಕೊಡಲಾಗುತ್ತದೆ; ಆದರೆ ಅವು ಇದಕ್ಕಾಗಿ ಒಂದು ಪದದ ಬದಲು ಅದೇ ಅರ‍್ತದ ಇಲ್ಲವೇ ಅದಕ್ಕೆ ಹತ್ತಿರದ ಅರ‍್ತದ ಬೇರೊಂದು ಪದವನ್ನು ಕೊಡುತ್ತವೆ. ‘ಎಲ್ಲೆ’ ಎಂಬ ಪದಕ್ಕೆ ಕನ್ನಡದ ಒಂದು ಪದಕೋಶ ‘ಗಡಿ’ ಎಂಬ ಇನ್ನೊಂದು ಪದವನ್ನು ಅದರ ಅರ‍್ತವೆಂದು ಕೊಡಬಹುದು.

ಆದರೆ ‘ಗಡಿ’ ಎಂಬುದೂ ಕನ್ನಡದಲ್ಲಿ ಬಳಕೆಯಾಗುವ ಒಂದು ಪದವಾದ ಕಾರಣ, ಅದಕ್ಕೂ ಅದರದೇ ಆದ ಅರ‍್ತ ಇದೆ. ಹಾಗಾಗಿ, ನಿಜಕ್ಕೂ ಅದು ‘ಎಲ್ಲೆ’ ಪದದ ಅರ‍್ತ ಏನು ಎಂಬುದನ್ನು ನಮಗೆ ತಿಳಿಸುವುದಿಲ್ಲ. ಆ ಎರಡು ಪದಗಳ ಅರ‍್ತ ಒಂದೇ ಎಂದಶ್ಟೇ ಅದು ತಿಳಿಸುತ್ತದೆ. ಹಾಗಾಗಿ, ‘ಎಲ್ಲೆ’ ಎಂಬುದಕ್ಕೆ ‘ಗಡಿ’ ಎಂಬ ಅರ‍್ತವನ್ನು ಕೊಡುವ ಪದನೆರಕೆ ‘ಗಡಿ’ ಎಂಬುದಕ್ಕೆ ‘ಎಲ್ಲೆ’ ಎಂಬ ಅರ‍್ತವನ್ನೂ ಕೊಟ್ಟಿರಬಹುದು!

ಕನ್ನಡ ಪದಕ್ಕೆ ಇಂಗ್ಲಿಶ್ ಪದ ಇಲ್ಲವೇ ಪದಕಂತೆಯ ಮೂಲಕವಾಗಲಿ ಇಲ್ಲವೇ ಬೇರೊಂದು ನುಡಿಯ ಪದದ ಮೂಲಕವಾಗಲಿ ಅರ‍್ತ ಹೇಳುವ ಪದನೆರಕೆಗಳೂ ಇವೆ. ಆದರೆ, ಇಂತಹ ಪದನೆರಕೆಗಳೂ ಎರಡು ಪದಗಳ ಅರ‍್ತ ಹೆಚ್ಚುಕಡಿಮೆ ಒಂದೇ ಎಂಬುದಾಗಿ ತಿಳಿಸುತ್ತವಲ್ಲದೆ ನಿಜಕ್ಕೂ ಆ ಅರ‍್ತ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ನಾನು ಹೇಳಿದ್ದು ಅರ‍್ತವಾಯಿತೋ? ಎಂದು ಯಾರಾದರೂ ಕೇಳಿದರೆ ನಾವು ಅರ‍್ತವಾಯಿತು ಎಂದು ಹೇಳಬಹುದು. ಆದರೆ ಏನು ಅರ‍್ತವಾಯಿತು? ಎಂದು ಕೇಳಿದರೆ ಅಂತಹದೇ ಇನ್ನೊಂದು ಮಾತನ್ನು ಹೇಳಬಲ್ಲೆವಲ್ಲದೆ ಬೇರೇನೂ ಮಾಡಲಾರೆವು.

ಒಂದು ಮಾತನ್ನು ಕೇಳಿದ ಮೇಲೆ ನಾವು ಏನು ಮಾಡುತ್ತೇವೆ ಎಂಬುದರಿಂದ ನಮಗೆ ಆ ಮಾತು ಅರ‍್ತವಾಗಿದೆಯೋ ಇಲ್ಲವೋ ಎಂಬುದು ತಿಳಿದೀತು. ‘ಕುಳಿತುಕೊಳ್ಳಿ’ ಎಂದು ಹೇಳಿದಾಗ ಎದುರಿಗಿದ್ದವನು ಕುಳಿತುಕೊಂಡನಾದರೆ ಅವನಿಗೆ ಆ ಮಾತು ಅರ‍್ತವಾಗಿದೆಯೆಂದು ಹೇಳಬಹುದು. ಆದರೆ, ಆತ ಕುಳಿತುಕೊಳ್ಳದಿದ್ದರೂ ಆ ಮಾತು ಅವನಿಗೆ ಅರ‍್ತವಾಗಿಲ್ಲವೆಂದು ಹೇಳಲು ಬರುವುದಿಲ್ಲ. ಇದಲ್ಲದೆ ಹಾಗೆ ಮಾಡಬೇಕೆಂಬುದು ಆ ಮಾತಿನ ಅರ‍್ತವಲ್ಲದೆ ಹಾಗೆ ಮಾಡುವುದು ಅದರ ‘ಅರ‍್ತ’ವಲ್ಲ.

ಮೇಲಿನಿಂದ ಮೇಲೆ ನೋಡುವಾಗ ತೀರ ಸುಲಬವೆಂದು ಕಾಣಿಸಿದರೂ ವಿವರಿಸಹೊರಟಾಗ ತೀರ ತೊಡಕಿನದಾಗುವ ಈ ‘ಅರ‍್ತ’ ಎಂಬುದರ ಕುರಿತು ಹಲವಾರು ಮಂದಿ ತತ್ವಜ್ನಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿ ನಮಗೆದುರಾಗುವ ಈ ತೊಡಕಿಗೆ ಮುಕ್ಯ ಕಾರಣವೇನೆಂದರೆ, ನಾವು ಬಳಸುವ ‘ಅರ‍್ತ’ ಇಲ್ಲವೇ ‘meaning’ ಎಂಬ ಪದ ಎರಡು ತೀರ ಬೇರಾಗಿರುವ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಒಂದು ಮಾತನ್ನು ಕೇಳಿದಾಗ ನಮಗೆ ಅದು ಅರ‍್ತವಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವ ಅರ‍್ತ.

ಈ ರೀತಿ ನಾವು ಮಾಡಿಕೊಂಡಿರುವ ಅರ‍್ತವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂದಿದ್ದಲ್ಲಿ ಅದನ್ನು ಬೇರೊಂದು ರೀತಿಯ ಮಾತಿನ ಮೂಲಕವಾಗಲಿ ಇಲ್ಲವೇ ಸನ್ನೆ, ಚಿತ್ರ ಮೊದಲಾದವುಗಳ ಮೂಲಕವಾಗಲೀ ಸೂಚಿಸಬೇಕಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕುವ ರೂಪದಲ್ಲಿರುವ ಅರ‍್ತ. ಈ ರೀತಿ ‘ಅರಿವಿಗೆ ಎಟಕದಿರುವ ಅರ‍್ತ’ ಮತ್ತು ‘ಅರಿವಿಗೆ ಎಟಕುವ ಅರ‍್ತ’ ಎಂಬುದಾಗಿ ಎರಡು ರೀತಿಯ ‘ಅರ‍್ತ’ಗಳು ಪದಗಳಿಗಿವೆ.

ಪದನೆರಕೆಗಳು ಕೊಡುವುದು ಅರಿವಿಗೆ ಎಟಕುವ ಅರ‍್ತಗಳನ್ನು ಮಾತ್ರ. ಅರಿವಿಗೆ ಎಟಕದ ಅರ‍್ತಗಳು ಅವಕ್ಕೂ ಎಟಕಲಾರವು. ಈ ಎರಡು ರೀತಿಯ ‘ಅರ‍್ತ’ಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿದ್ದು ಅವನ್ನು ಸರಿಯಾಗಿ ತಿಳಿದುಕೊಳ್ಳದುದರಿಂದಾಗಿ ಅರಿವಿಗರು ಹಲವು ಬಗೆಯ ಗೊಂದಲಗಳಿಗೆ ಒಳಗಾಗಿದ್ದಾರೆ. ಅರಿವಿಗೆ ಎಟಕದ ಅರ‍್ತವನ್ನು ‘ತಿಳಿವು’ ಎಂಬುದಾಗಿ, ಮತ್ತು ಅರಿವಿಗೆ ಎಟಕುವ ಅರ‍್ತವನ್ನು ‘ಹುರುಳು’ ಎಂಬುದಾಗಿ ಹೆಸರಿಸಿದಲ್ಲಿ ಈ ಗೊಂದಲ ತಾನಾಗಿಯೇ ಇಲ್ಲವಾಗುತ್ತದೆ.

ಪದಗಳ ‘ತಿಳಿವು’ ಎನ್ನುವುದು ಅವನ್ನು ತಿಳಿದಿರುವವರ ಮಿದುಳಿನಲ್ಲಿ ಕೆಲವು ವಿಶಿಶ್ಟವಾದ ನರಗಳ ವಿನ್ಯಾಸಗಳಾಗಿ ಉಂಟಾಗಿರುತ್ತವೆ. ಯಾರಾದರೊಬ್ಬ ಆಡುಗನು ಒಂದು ಪದವನ್ನು ಬಳಸಿದಾಗ ಕೇಳುಗನ ಮಿದುಳಿನಲ್ಲಿ ಆ ಪದಕ್ಕಿರುವ ನರಗಳ ವಿನ್ಯಾಸ ಜೀವಂತವಾಗುತ್ತದೆ; ಎಂದರೆ ಅದು ಮಿಂಚುತ್ತದೆ. ನರಗಳ ವಿನ್ಯಾಸವೊಂದು ಈ ರೀತಿ ಮಿಂಚಿದಾಗ ಆತನಿಗೆ ತನಗೆ ತಿಳಿದಿರುವ ಪದವೊಂದನ್ನು ಕೇಳಿದಹಾಗಾಗುತ್ತದೆ.

ಒಂದು ನುಡಿಯನ್ನು ಕಲಿಯುವುದೆಂದರೆ ಮಿದುಳಿನಲ್ಲಿ ಇಂತಹ ಹಲವಾರು ನರಗಳ ವಿನ್ಯಾಸಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುವುದಲ್ಲದೆ ಬೇರೇನಲ್ಲ. ಒಬ್ಬ ವ್ಯಕ್ತಿ ಕಲಿಯದಿರುವ ನುಡಿಯ ಪದಗಳನ್ನು ಕೇಳಿದಾಗ ಅವನ ಮಿದುಳಿನಲ್ಲಿರುವ ನರಗಳ ವಿನ್ಯಾಸಗಳಲ್ಲಿ ಯಾವುದೂ ಮಿಂಚುವುದಿಲ್ಲ. ಅಂತಹ ಪದಗಳಿಗೆ ಮಿಂಚಬಲ್ಲ ನರಗಳ ವಿನ್ಯಾಸಗಳು ಆತನ ಮಿದುಳಿನಲ್ಲಿ ಉಂಟಾಗಿಲ್ಲವೆಂಬುದೇ ಇದಕ್ಕೆ ಕಾರಣ.

ಒಂದು ಪದದ ಹುರುಳು ಇದಕ್ಕಿಂತ ತೀರ ಬೇರಾದುದು. ‘ಎಲ್ಲೆ’ ಎಂಬ ಪದದ ಹುರುಳನ್ನು ‘ಗಡಿ’ ಎಂಬುದಾಗಿ ಕೊಡಬಹುದು. ಇಲ್ಲಿ ಎರಡು ಪದಗಳಿವೆ; ಅವುಗಳಲ್ಲಿ ಒಂದು ಇನ್ನೊಂದರ ಹುರುಳು. ಎರಡೂ ಪದಗಳೇ. ಆದರೆ ಅವುಗಳಲ್ಲಿ ಒಂದು ಪದದ (‘ಗಡಿ’ ಎಂಬುದರ) ತಿಳಿವು ಕೇಳುಗನಲ್ಲಿದೆ ಮತ್ತು ಇನ್ನೊಂದರ (‘ಎಲ್ಲೆ’ ಎಂಬುದರ) ತಿಳಿವು ಆತನಲ್ಲಿಲ್ಲ ಎಂಬ ಕಾರಣಕ್ಕಾಗಿ ಒಂದನ್ನು ಇನ್ನೊಂದರ ಹುರುಳು ಎಂಬುದಾಗಿ ಪರಿಗಣಿಸಲಾಗಿದೆ.

ಕೇಳುಗನಲ್ಲಿ ತಿಳಿವಿಲ್ಲದಿರುವ ಪದಕ್ಕೆ ಆತನಲ್ಲಿ ತಿಳಿವಿರುವ ಪದದ ಮೂಲಕ ಪದನೆರಕೆಗಳು ತಿಳಿವನ್ನು ಕೊಡಲು ಪ್ರಯತ್ನಿಸುತ್ತವೆ. ‘ಎಲ್ಲೆ’ ಪದದ ತಿಳಿವಿಲ್ಲದವರು ಮಾತ್ರವೇ ಪದನೆರಕೆಗಳಲ್ಲಿ ಅದರ ಅರ‍್ತವನ್ನು ಹುಡುಕಲು ಹೋಗುತ್ತಾರೆ. ಹಾಗೆ ಹುಡುಕುವವರಿಗೆ ‘ಗಡಿ’ ಎಂಬುದರ ತಿಳಿವು ಇರಬಹುದು ಎಂಬುದಾಗಿ ಪದನೆರಕೆಯನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಇದಕ್ಕೆ ಬದಲು, ‘ಗಡಿ’ ಪದದ ತಿಳಿವಿಲ್ಲದವರು ಆ ಪದದ ಅರ‍್ತವನ್ನು ಪದನೆರಕೆಗಳಲ್ಲಿ ಹುಡುಕುತ್ತಾರೆ ಮತ್ತು ಅವರಿಗೆ ‘ಎಲ್ಲೆ’ ಎಂಬ ಪದದ ತಿಳಿವಿರಬಹುದೆಂದು ಪದನೆರಕೆಗಳನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಎರಡರ ತಿಳಿವೂ ಇಲ್ಲದವರಿಗೆ ಅಂತಹ ಪದನೆರಕೆ ಯಾವ ನೆರವನ್ನೂ ನೀಡಲಾರದು.

ತಿಳಿವು ಮತ್ತು ಹುರುಳುಗಳ ನಡುವಿರುವ ಈ ವ್ಯತ್ಯಾಸ ಹುರುಳುಗಳ ನಡುವಿನ ಸಂಬಂದವೆಂತಹದು ಎಂಬುದನ್ನು ತಿಳಿಯುವಲ್ಲಿ ಬಹಳ ಪ್ರಯೋಜನಕ್ಕೆ ಬರುತ್ತದೆ. ಎರಡು ಪದಗಳಿಗೆ (‘ಎಲ್ಲೆ’ ಮತ್ತು ‘ಗಡಿ’ ಎಂಬವುಗಳಿಗೆ) ಒಂದೇ ಅರ‍್ತವಿದೆ ಎಂದು ಹೇಳುವಾಗ ನಾವು ಅವುಗಳಲ್ಲಿ ಒಂದನ್ನು ಇನ್ನೊಂದರ ಹುರುಳಾಗಿ ಬಳಸಬಲ್ಲೆವು ಎಂದಶ್ಟೇ ಹೇಳುತ್ತೇವಲ್ಲದೆ ನಿಜಕ್ಕೂ ಆ ಎರಡು ಪದಗಳಿಗೆ ನಮ್ಮಲ್ಲಿ ಒಂದೇ ರೀತಿಯ ತಿಳಿವಿದೆ ಎಂದೇನೂ ಹೇಳುವುದಿಲ್ಲ. ಯಾಕೆಂದರೆ, ಒಂದು ಪದದ ತಿಳಿವಿಗೆ ಹಲವು ಆಯಾಮಗಳಿದ್ದು ಅವೆಲ್ಲವುಗಳಲ್ಲೂ ಅದು ಇನ್ನೊಂದು ಪದದ ಹಾಗೆಯೇ ಇರಲು ಸಾದ್ಯವೇ ಇಲ್ಲ. ಎತ್ತುಗೆಗಾಗಿ, ‘ಗಡಿ’ ಪದವನ್ನು ಹೊತ್ತಿಗೆ ಸಂಬಂದಿಸಿದಂತೆಯೂ ‘ಗಡಿ’ ಇಲ್ಲವೇ ‘ಗಡುವು’ ಎಂಬ ರೂಪದಲ್ಲಿ ಬಳಸಲು ಬರುತ್ತದೆ; ಆದರೆ, ‘ಎಲ್ಲೆ’ ಎಂಬ ಪದಕ್ಕೆ ಅಂತಹ ಹೊತ್ತಿಗೆ ಸಂಬಂದಿಸಿದ ಬಳಕೆಯಿಲ್ಲ. ಇವೆರಡರೊಳಗೆ ಇಂತಹ ಇನ್ನೂ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಅವೆರಡರ ಅರ‍್ತ ಒಂದೇ ಎನ್ನುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲದೆ ತಿಳಿವಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲ.

ಒಂದು ಪದದ ಹುರುಳನ್ನು ಪದಕಂತೆ ಇಲ್ಲವೇ ಸೊಲ್ಲಿನ ಮೂಲಕ ವಿವರಿಸುವಲ್ಲೂ ಇಂತಹದೇ ಸಮಸ್ಯೆ ನಮ್ಮೆದುರಿಗಿದೆ. ನಾವು ಕೊಡುವ ಪದಕಂತೆ ಇಲ್ಲವೇ ಸೊಲ್ಲು ಆ ಪದದ ತಿಳಿವಿನ ಕೆಲವು ಅಂಶಗಳನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ ಎಲ್ಲಾ ಅಂಶಗಳನ್ನೂ ಸೂಚಿಸಲಾರದು. ಕೆಲವು ಪದಗಳ ಹಿಂದಿರುವ ತಿಳಿವನ್ನು ಸರಿಯಾಗಿ ತಿಳಿಸಬೇಕಿದ್ದಲ್ಲಿ ಒಂದು ದೊಡ್ಡ ಪ್ರಬಂದವನ್ನೇ ಬರೆಯಬೇಕಾದೀತು. ಹಾಗಾಗಿ, ಇಲ್ಲೂ ನಮ್ಮೆದುರಿಗಿರುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯೇ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

ನುಡಿಯರಿಮೆಯ ಇಣುಕುನೋಟ – 29

ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.

ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.

ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.

ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್‍ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್‍ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್‍ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್‍ಪಡಿಸಬಹುದು. ಇಂತಹ ಹಲವು ಬಗೆಯ ಮಾರ್‍ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.

ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್‍ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್‍ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್‍ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳು ನಡೆದಿವೆ.

ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ‍್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್‍ಪಾಡುಗಳು.

ಇವು ಉಲಿಗಳ ಮಾರ್‍ಪಾಡುಗಳಲ್ಲದೆ ಪದಗಳ ಮಾರ್‍ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್‍ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್‍ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್‍ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್‍ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್‍ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್‍ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್‍ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್‍ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.

ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ‍್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್‍ಪಾಡುಗಳಲ್ಲಿ ಉಲಿಗಳ ಮಾರ್‍ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್‍ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್‍ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್‍ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.

ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್‍ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.

ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್‍ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.

ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್‍ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್‍ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.

ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಎಣಿಕೆಯಲ್ಲೂ ಹಲವು ಬಗೆಗಳಿವೆ

ನುಡಿಯರಿಮೆಯ ಇಣುಕುನೋಟ – 28

ಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಒಂದು ಎಣಿಕೆಪದವನ್ನು ನೇರವಾಗಿ ಇನ್ನೊಂದು ಎಣಿಕೆಪದದೊಂದಿಗೆ ಸೇರಿಸಿ ಹೇಳುವುದು ಒಂದು ಹೊಲಬು; ಇದನ್ನು ಇಪ್ಪತ್ತು (ಎರಡು+ಹತ್ತು), ಇನ್ನೂರು (ಎರಡು+ನೂರು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು. ಒಂದು ಎಣಿಕೆಪದದ ಪತ್ತುಗೆ(ಸಂಬಂದ)ರೂಪವನ್ನು ಇನ್ನೊಂದು ಎಣಿಕೆಪದಕ್ಕೆ ಸೇರಿಸಿ ಹೇಳುವುದು ಇನ್ನೊಂದು ಹೊಲಬು; ಇದನ್ನು ಇಪ್ಪತ್ತಾರು (ಇಪ್ಪತ್ತರ+ಆರು), ನೂರ ಹತ್ತು (ನೂರರ+ಹತ್ತು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು.

ಇವುಗಳಲ್ಲಿ ಮೊದಲನೆಯದನ್ನು ಪೆಚ್ಚಿಸುವ (ಗುಣಿಸುವ) ಹುರುಳಿನಲ್ಲೂ, ಎರಡನೆಯದನ್ನು ಕೂಡಿಸುವ ಹುರುಳಿನಲ್ಲೂ ಬಳಸಲಾಗುತ್ತದೆ. ಆದರೆ, ಈ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಒಂಬತ್ತು (ಒಂದು+ಹತ್ತು) ಎಂಬುದರಲ್ಲಿ ಮೊದಲನೆಯ ಹೊಲಬು ಬಳಕೆಯಾಗಿದೆಯಾದರೂ ಅದಕ್ಕೆ ‘ಹತ್ತರಿಂದ ಒಂದು ಕಡಿಮೆ’ ಎಂಬ ಕಳೆತದ ಹುರುಳಿದೆ.

ಒಂದರಿಂದ ಎಂಟರ ವರೆಗಿನ ಎಣಿಕೆಪದಗಳು, ಮತ್ತು ಹತ್ತು, ನೂರು ಎಂಬ ಪದಗಳು ಒತ್ತೆ ಪದಗಳು; ಹನ್ನೊಂದರಿಂದ ಹತ್ತೊಂಬತ್ತರ ವರೆಗಿನ ಪದಗಳಲ್ಲಿ ಹತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರವರೆಗಿನ ಪದಗಳನ್ನು ಸೇರಿಸಲಾಗಿದೆ. ಅದಕ್ಕೆ ಮೇಲೆ, ಇಪ್ಪತ್ತು ಎಂಬುದರಲ್ಲಿ ಎರಡು (ಇಪ್) ಪದಕ್ಕೆ ಹತ್ತು (ಪತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ. ಇದೇ ರೀತಿಯಲ್ಲಿ, ಮುಂದೆಯೂ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಪದಗಳಲ್ಲಿ ಇಪ್ಪತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರ ವರೆಗಿನ ಪದಗಳನ್ನು ಸೇರಿಸಲಾಗಿದೆ (ಇಪ್ಪತ್ತೊಂದು, ಇಪ್ಪತ್ತೆರಡು), ಮತ್ತು ಮೂವತ್ತು ಪದದಲ್ಲಿ ಮೂರು ಪದಕ್ಕೆ ಹತ್ತು (ವತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ.

ಮುಂದೆ ತೊಂಬತ್ತೊಂಬತ್ತರ ವರೆಗೂ ಇದೇ ರೀತಿಯಲ್ಲಿ ಈ ಎರಡು ಹೊಲಬುಗಳ ಬಳಕೆಯಾಗಿದೆ: ಮೊದಲ ಒಂಬತ್ತು ಎಣಿಕೆಪದಗಳನ್ನು ಪತ್ತುಗೆರೂಪದ ಮೂಲಕ ಉಂಟುಮಾಡಲಾಗಿದೆ, ಮತ್ತು ಹತ್ತನೆಯ ಪದವನ್ನು ನಾಲ್ಕು, ಅಯ್ದು, ಆರು ಮೊದಲಾದ ಪದಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ಉಂಟುಮಾಡಲಾಗಿದೆ. ನೂರು ಎಂಬುದನ್ನು ತಿಳಿಸಲು ಮಾತ್ರ ಒತ್ತೆ ಪದದ ಬಳಕೆಯಾಗಿದೆ.

ನೂರರ ಬಳಿಕವೂ ಇವೇ ಎರಡು ಹೊಲಬುಗಳನ್ನು ಬಳಸಲಾಗಿದೆ: ನೂರ ಒಂದು, ನೂರ ಎರಡು, … ನೂರ ಹತ್ತು, … ನೂರ ಮೂವತ್ತೆಂಟು … ಎಂಬುದಾಗಿ ಒಟ್ಟು ನೂರು ಎಣಿಕೆಗಳನ್ನು ನೂರು ಎಂಬ ಪದದ ಪತ್ತುಗೆ ರೂಪಕ್ಕೆ ಒಂದರಿಂದ ತೊಂಬತ್ತೊಂಬತ್ತರ ವರೆಗಿನ ಪದಗಳನ್ನು ಸೇರಿಸಿ ಹೇಳಲಾಗಿದೆ, ಮತ್ತು ಮುಂದಿನ ಎಣಿಕೆಪದಗಳನ್ನು ಎರಡು, ಮೂರು ಮೊದಲಾದ ಒಂಬತ್ತು ಪದಗಳಿಗೆ ನೇರವಾಗಿ ನೂರು ಪದವನ್ನು ಸೇರಿಸಿ ಇನ್ನೂರು, ಮುನ್ನೂರು ಮೊದಲಾದ ಪದಗಳನ್ನು ಉಂಟುಮಾಡಲಾಗಿದೆ. ಇದು ಕನ್ನಡತಮಿಳುತೆಲುಗು ಮೊದಲಾದ ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬಾಗಿದೆ.

ಈ ಎಣಿಕೆಪದಗಳಲ್ಲಿ ಬರುವ ಪದಗಳ ಓರಣ ಅಂಕೆಗಳಲ್ಲಿ ಕಾಣಿಸುವ ಓರಣವನ್ನೇ ಹೋಲುತ್ತದೆ; ಎತ್ತುಗೆಗಾಗಿ, ‘ಮೂವತ್ತೆಂಟು’ ಎಂಬುದರಲ್ಲಿ ‘3(ಹತ್ತು)8’ ಎಂಬ ಓರಣವಿದೆ, ಮತ್ತು ಅದನ್ನು 38 ಎಂಬುದಾಗಿ ಅಂಕೆಯಲ್ಲಿ ಬರೆಯುವಾಗಲೂ 3 ಮೊದಲು ಬರುತ್ತದೆ, ಮತ್ತು 8 ಬಳಿಕ ಬರುತ್ತದೆ. ಇದೇ ರೀತಿಯಲ್ಲಿ, ‘ಎರಡು ಸಾವಿರದ ಮುನ್ನೂರ ನಲುವತ್ತಾರು’ ಎಂಬುದರಲ್ಲಿ ಕಾಣಿಸುವ ‘2(ಸಾವಿರ)3(ನೂರು)4(ಹತ್ತು)6’ ಎಂಬ ಓರಣವೇ 2346 ಎಂಬ ಅಂಕೆಯಲ್ಲೂ ಕಾಣಿಸುತ್ತದೆ.

ಆದರೆ, ಸಂಸ್ಕ್ರುತದಲ್ಲಿ ಮತ್ತು ಅದರಿಂದ ಬೆಳೆದು ಬಂದಿರುವ ಹಿಂದಿಮರಾಟಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳಲ್ಲಿ ಎಣಿಕೆಯ ಪದಗಳನ್ನು ಬೇರೆಯೇ ಬಗೆಯಲ್ಲಿ ಕಟ್ಟಲಾಗಿದ್ದು, ಅವಕ್ಕೂ ಅಂಕೆಗಳಿಗೂ ನಡುವೆ ಇಂತಹ ಹೊಂದಾಣಿಕೆ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಹಿಂದಿಯಲ್ಲಿ ‘ಅಡ್ತೀಸ್’ ಎಂಬ ಎಣಿಕೆಪದದಲ್ಲಿ ‘8-3(ಹತ್ತು)’ ಎಂಬ ಓರಣವಿದೆ; ಈ ಓರಣ 38 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ; ಸಂಸ್ಕ್ರುತದಲ್ಲೂ ಎಪ್ಪತ್ತಯ್ದು ಎಂಬ ಹುರುಳನ್ನು ಕೊಡುವ ‘ಪಂಚಸಪ್ತತಿ’ ಎಂಬ ಎಣಿಕೆಪದದಲ್ಲಿ 5-7(ಹತ್ತು) ಎಂಬ ಓರಣವಿದ್ದು, ಅದು 75 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ.

ಕನ್ನಡ ಮತ್ತು ಸಂಸ್ಕ್ರುತಗಳೆರಡರಲ್ಲೂ ಹತ್ತರ ಹೊಲಬು ಬಳಕೆಯಲ್ಲಿದೆ. ಆದರೆ, ಬೇರೆ ಕೆಲವು ನುಡಿಗಳಲ್ಲಿ ಬೇರೆಯೇ ಬಗೆಯ ಹೊಲಬುಗಳು ಬಳಕೆಯಾಗುತ್ತವೆ. ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೋಡೊ (ಇಲ್ಲವೇ ಬೋರೊ) ಎಂಬ ನುಡಿಯಲ್ಲಿ ಎಣಿಕೆಯನ್ನು ನಾಲ್ಕರ ಗುಂಪುಗಳಲ್ಲಿ ಮಾಡಲಾಗುತ್ತದೆ. ಈ ನುಡಿಯಲ್ಲಿ ಒಂದರಿಂದ ನಾಲ್ಕರ ವರೆಗೆ ಎಣಿಸಿ, ಮುಂದಕ್ಕೆ ಒಂದ್ನಾಲ್ಕು ಒಂದು (ಎಂದರೆ ಐದು), ಒಂದ್ನಾಲ್ಕು ಎರಡು (ಎಂದರೆ ಆರು), ಒಂದ್ನಾಲ್ಕು ಮೂರು (ಎಂದರೆ ಏಳು), ಎರಡ್ನಾಲ್ಕು (ಎಂದರೆ ಎಂಟು) ಎಂಬುದಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ನುಡಿಯಲ್ಲಿ ಎರಡ್ನಾಲ್ಕು ಮೂರು ಎನ್ನಬೇಕು, ಮತ್ತು ಹದಿನಾಲ್ಕು ಎನ್ನಲು ಮೂರ್ನಾಲ್ಕು ಎರಡು ಎನ್ನಬೇಕು.

ಬೋಡೊ ನುಡಿಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಹೊಲಬಿನಲ್ಲಿ ಇಪ್ಪತ್ತರವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಹೊಲಬು ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಹೊಲಬಿರುವಂತೆ, ಬೋಡೊ ನುಡಿಯಲ್ಲಿ ಇಪ್ಪತ್ತರ ಹೊಲಬಿದೆ. ಈ ಹೊಲಬಿನಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕು ಎರಡು’ ಎನ್ನಬೇಕು, ಮತ್ತು ಎಪ್ಪತ್ತಮೂರು ಎನ್ನಲು ‘ಮೂರಿಪ್ಪತ್ತು ಮೂರ್ನಾಲ್ಕು ಒಂದು’ (3 x 20) + (3 x 4) + 1 ಎನ್ನಬೇಕು. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೊ ನುಡಿಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಹೊಲಬಿಗಿಂತ ಅವರ ನಾಲ್ಕರ ಹೊಲಬೇ ಒಳ್ಳೆಯದೆಂದು ಅನಿಸದಿರದು.

ನಮ್ಮಲ್ಲಿ ಎಣಿಕೆಯ ಪದಗಳನ್ನು ಉಂಟುಮಾಡುವಲ್ಲಿ ಹತ್ತರ ಹೊಲಬು ಬಳಕೆಯಲ್ಲಿದೆಯಾದ ಕಾರಣ, ಅದೇ ಹತ್ತರ ಹೊಲಬಿನಲ್ಲಿ ಉಂಟುಮಾಡಿರುವ ಲೀಟರ್, ರುಪಾಯಿ, ಗ್ರಾಮ್ ಮೊದಲಾದ ಅಳತೆಪದಗಳ ಬಳಕೆ ಮೊದಲಿಗಿದ್ದ ರಾತಲು, ಸೇರು, ಅಡಿ ಮೊದಲಾದವುಗಳಿಗಿಂತ ಒಳ್ಳೆಯವೆಂದು ಅನಿಸುತ್ತದೆ; ಆದರೆ, ನಾಲ್ಕರ ಹೊಲಬನ್ನು ಬಳಸುವವರಿಗೆ ಅವು ಹಿಂದಿನವಕ್ಕಿಂತ ಒಳ್ಳೆಯವೆಂದೇನೂ ಅನಿಸಬೇಕಾಗಿಲ್ಲ.

ಎಣಿಕೆಪದಗಳ ಬಳಕೆಯಲ್ಲೂ ನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳನ್ನು ಕಾಣಬಹುದು: ಕನ್ನಡದಲ್ಲಿ ಎಣಿಕೆಪದಗಳನ್ನು ಮರ, ಮನೆ, ಹುಡುಗ, ಚೆಂಡು ಮೊದಲಾದ ಪದಗಳಿಗೆ ನೇರವಾಗಿ ಸೇರಿಸಲು ಬರುತ್ತದೆ (ಮೂರು ಮನೆಗಳು, ಇಪ್ಪತ್ತೊಂದು ಚೆಂಡುಗಳು); ಆದರೆ, ನೀರು, ಅಕ್ಕಿ, ಎಣ್ಣೆ, ಹಾಲು ಮೊದಲಾದ ಪದಗಳಿಗೆ ಎಣಿಕೆಪದಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಅವಕ್ಕೆ ಅಳತೆಯನ್ನು ತಿಳಿಸುವ ಪದಗಳನ್ನು ಸೇರಿಸಬೇಕಾಗುತ್ತದೆ (ಮೂರು ಕಿಲೋ ಅಕ್ಕಿ, ಎರಡು ಲೀಟರ್ ಹಾಲು). ಇದಕ್ಕೆ ಬದಲು, ಬೋಡೊ ನುಡಿಯಲ್ಲಿ ಯಾವ ಪದಕ್ಕೂ ಎಣಿಕೆಪದಗಳನ್ನು ನೇರವಾಗಿ ಸೇರಿಸಲು ಬರುವುದಿಲ್ಲ; ಒಂದು ಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತು ಎಂತಹದು ಎಂಬುದನ್ನು ಅಡಕವಾಗಿ ತಿಳಿಸುವ ಪದವನ್ನು ಅದಕ್ಕೆ ಮೊದಲು ಸೇರಿಸಿ, ಆಮೇಲೆ ಎಣಿಕೆ ಪದಗಳನ್ನು ಸೇರಿಸಬೇಕಾಗುತ್ತದೆ.

ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬುಗಳ ನಡುವೆ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಎಣಿಕೆಯನ್ನು ಬಳಸುವಲ್ಲಿ ಮಾನವನು ಕಂಡುಕೊಂಡಿರುವ ಜಾಣ್ಮೆಯ ಹೊಲಬುಗಳೆಂದು ಹೇಳಬಹುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದ ಮತ್ತು ಅದರ ಹುರುಳು

ನುಡಿಯರಿಮೆಯ ಇಣುಕುನೋಟ – 27

ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.

ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.

ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.

ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.

ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.

ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.

ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.

ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.

ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter