Posts Tagged ‘ಕೆಳವರ‍್ಗ’

ನುಡಿಯ ಕಲಿಕೆ ಮತ್ತು ಕಲಿಕೆನುಡಿ

ನುಡಿಯರಿಮೆಯ ಇಣುಕುನೋಟ – 9

ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ ಇವತ್ತು ಹೆಚ್ಚಿನ ಜನರಿಗೂ ಬೇಕಾಗಿರುವುದು ಇಂಗ್ಲಿಶ್ ನುಡಿಯ ಕಲಿಕೆಯಲ್ಲದೆ, ಅದನ್ನು ಕಲಿಕೆನುಡಿಯಾಗಿ ಬಳಸಬೇಕೆಂಬುದಲ್ಲ. ಆದರೆ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಲಾರದ ಜನರು ತಮ್ಮ ಮಕ್ಕಳನ್ನು ಎಶ್ಟೇ ಕಶ್ಟವಾದರೂ ಹೆದರದೆ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ‘ಇಂಗ್ಲಿಶ್ ಶಾಲೆ’ಗಳಿಗೆ ಕಳಿಸುತ್ತಿದ್ದಾರೆ.

ಆದರೆ, ಹೀಗೆ ಮಾಡುವುದರಿಂದ ಅವರಲ್ಲಿ ಹೆಚ್ಚಿನವರ ಆಸೆಯೂ ಕಯ್ಗೂಡುವುದಿಲ್ಲ. ಮೇಲ್ವರ‍್ಗದ ಮಕ್ಕಳು ಇಂತಹ ಶಾಲೆಗಳಿಗೆ ಹೋಗಿ ದೊಡ್ಡ ದೊಡ್ಡ ಕೆಲಸಗಳನ್ನು ಹಿಡಿದು ಲಕ್ಶ ಲಕ್ಶ ಸಂಪಾದಿಸುವುದನ್ನು ನೋಡಿ, ತಮ್ಮ ಮಕ್ಕಳೂ ಹಾಗೆಯೇ ಮುಂದೆ ಬರಬೇಕೆಂದು ಅವರು ಬಯಸುವುದು ಸಹಜ. ಆದರೆ, ಇಂಗ್ಲಿಶ್ ಶಾಲೆಗಳು ಅವರ ಈ ಬಯಕೆಯನ್ನು ಪೂರಯ್ಸಲಾರವು.

ಇದಕ್ಕೆ ಹಲವು ಕಾರಣಗಳಿವೆ: ಮೊದಲನೆಯದಾಗಿ, ಇಂಗ್ಲಿಶ್ ಶಾಲೆಗಳಲ್ಲೂ ಹಲವು ಬಗೆಗಳಿವೆ; ಇಂಗ್ಲಿಶ್ ನುಡಿಯನ್ನು ಮತ್ತು ಬೇರೆ ವಿಶಯಗಳನ್ನು ತುಂಬಾ ಚನ್ನಾಗಿ ಕಲಿಸಬಲ್ಲ ಶಾಲೆಗಳು ಕೆಲವಾದರೆ, ಯಾವುದನ್ನೂ ಸರಿಯಾಗಿ ಕಲಿಸಲಾಗದ ಶಾಲೆಗಳು ಹಲವು; ಕೆಳವರ‍್ಗದ ಮಕ್ಕಳಲ್ಲಿ ಹೆಚ್ಚಿನವರೂ ಇಂತಹ ಎರಡನೇ ಬಗೆಯ ಶಾಲೆಗಳಿಗೆ ಮಾತ್ರವೇ ಹೋಗಬಲ್ಲರಾದ ಕಾರಣ, ಅವರ ಕಲಿಕೆ ಅಲ್ಲಿಯೂ ಕುಂಟುತ್ತಲೇ ನಡೆಯುತ್ತದೆ.

ತಮಗೆ ಮಾತನಾಡಲು ತಿಳಿದಿರುವ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳು ತಮಗೆ ಸ್ವಲ್ಪವೂ ತಿಳಿಯದಿರುವ ಇಂಗ್ಲಿಶ್‌ನಂತಹ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳಿಗಿಂತ ಬೇಗನೆ ತಮ್ಮ ಕಲಿಕೆಯಲ್ಲಿ ಮುಂದೆ ಹೋಗಬಲ್ಲರೆಂಬುದನ್ನು ಎಲ್ಲಾ ಬಗೆಯ ಅರಕೆಗಳೂ ತೋರಿಸಿಕೊಟ್ಟಿವೆ; ಇಂಗ್ಲಿಶ್ ನುಡಿಯನ್ನು ಕಲಿಯುವಲ್ಲಿಯೂ ಅವರು ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳ ಮಕ್ಕಳಿಗಿಂತ ಬೇಗನೆ ಮುಂದೆ ಹೋಗಬಲ್ಲರು.

ದಕ್ಶಿಣ ಆಪ್ರಿಕಾದಲ್ಲಿ ಎಂಟನೇ ತರಗತಿಯ ವರೆಗೂ ಕಲಿಕೆನುಡಿಯಾಗಿ ತಾಯ್ನುಡಿಯನ್ನು ಬಳಸುತ್ತಿದ್ದ ಶಾಲೆಗಳಲ್ಲಿ ಮಕ್ಕಳು ಹನ್ನೆರಡನೇ ತರಗತಿಯಲ್ಲಿ ನೂರಕ್ಕೆ ೮೪ರಂತೆ ಪಾಸಾಗುತ್ತಿದ್ದರು. ತಾಯ್ತಂದೆಯವರ ಒತ್ತಾಯದ ಮೇಲೆ, ಅಯ್ದನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಲು 1976ರಲ್ಲಿ ತೊಡಗಲಾಯಿತು. 1992ರಲ್ಲಿ ಈ ಮಕ್ಕಳ ಕಲಿಕೆಯನ್ನು ಪರೀಕ್ಶಿಸಿದಾಗ, ಹನ್ನೆರಡನೇ ತರಗತಿಯ ಮಕ್ಕಳು ನೂರಕ್ಕೆ 44ರಂತೆ ಪಾಸಾಗುವ ಮಟ್ಟಕ್ಕೆ ಇಳಿದಿದ್ದುದು ಕಂಡುಬಂತು. ಇಂಗ್ಲಿಶ್ ನುಡಿಯ ಕಲಿಕೆಯಲ್ಲೂ ಪಾಸಾಗುವವರ ಎಣಿಕೆ ಅಶ್ಟೇ ಕೆಳಗೆ ಇಳಿದಿತ್ತು.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಿಯೂ ಮೇಲ್ವರ‍್ಗದ ಮಕ್ಕಳು ಇವತ್ತು ಮುಂದೆ ಬರುತ್ತಿರುವುದಕ್ಕೆ ಕಾರಣ ಬೇರೆಯೇ ಇದೆ. ಅವರಿಗೆ ಶಾಲೆಯ ಕಲಿಕೆ ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಕಲಿಕೆಗಳು ನೆರವು ನೀಡುತ್ತಿವೆ. ಇಂತಹ ನೆರವು ಕೆಳವರ‍್ಗದ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ಎಶ್ಟು ಪದಗಳ ಮೇಲೆ ಹತೋಟಿಯಿದೆ ಎಂಬುದರ ಮೇಲೆ ಅವರು ತಮ್ಮ ಕಲಿಕೆಯಲ್ಲಿ ಎಶ್ಟು ಮುಂದೆ ಹೋಗಬಲ್ಲರು ಎಂಬುದು ಅವಲಂಬಿಸಿರುತ್ತದೆ, ಮತ್ತು ಸಾಮಾನ್ಯವಾಗಿ, ಮಕ್ಕಳ ಹತೋಟಿಯಲ್ಲಿರುವ ಪದಗಳ ಎಣಿಕೆ ಅವರ ತಾಯ್ತಂದೆಯರು ಬರಹಬಲ್ಲವರೋ ಇಲ್ಲವೇ ಬರಹಬಾರದವರೋ ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ.

ಹೆಚ್ಚು ಪದಗಳ ಮೇಲೆ ಹತೋಟಿಯಿರುವ ಮಕ್ಕಳು ಹೆಚ್ಚು ಬರಹಗಳನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ಬಹಳ ಬೇಗನೆ ಹೆಚ್ಚುತ್ತಾ ಹೋಗುತ್ತದೆ; ಇದಕ್ಕೆ ಬದಲು, ಕಡಿಮೆ ಪದಗಳ ಮೇಲೆ ಹತೊಟಿಯಿರುವ ಮಕ್ಕಳು ಪಟ್ಯಪುಸ್ತಕಗಳನ್ನು ಬಿಟ್ಟು ಬೇರೆ ಬರಹಗಳನ್ನು ಓದಲು ಹೋಗುವುದಿಲ್ಲ, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ತುಂಬಾ ಮೆಲ್ಲಗೆ ಹೆಚ್ಚುತ್ತಿರುತ್ತದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ಕಲಿಯುವ ಮೇಲ್ವರ‍್ಗದವರ ಮಕ್ಕಳಿಗೆ ತಮ್ಮ ಹತೋಟಿಯಲ್ಲಿರುವ ಇಂಗ್ಲಿಶ್ ಪದಗಳನ್ನು ಹೆಚ್ಚಿಸಲು ಮನೆಯಲ್ಲಿಯೂ ನೆರವು ಸಿಗುತ್ತದೆ; ಆದರೆ, ಕೆಳವರ‍್ಗದ ಮಕ್ಕಳಿಗೆ ಇಂತಹ ಮನೆಯ ನೆರವು ಸಿಗುವುದಿಲ್ಲ. ಇದರಿಂದಾಗಿಯೂ ಅವರು ಇಂತಹ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.

ಇನ್ನೊಂದು ವಿಶಯವೇನೆಂದರೆ, ಎರಡು ಇಲ್ಲವೇ ಮೂರನೇ ತರಗತಿಯ ವರೆಗೆ ಮಕ್ಕಳು ಕಲಿಯುವುದು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನು. ತಮಗೆ ತಿಳಿಯದಿರುವ ಇಂಗ್ಲಿಶ್ ನುಡಿಯಲ್ಲಿ ಇದನ್ನು ನಡೆಸುವುದು ಅವರಿಗೆ ಅಶ್ಟೊಂದು ತೊಡಕಿನದಾಗಿರುವುದಿಲ್ಲ. ಆದರೆ, ಮೂರು ಇಲ್ಲವೇ ನಾಲ್ಕನೇ ತರಗತಿಯಿಂದ ಅವರು ತಮ್ಮ ಓದಿನ ಮೂಲಕ ಗಣಿತ, ವಿಜ್ನಾನ ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿದುಕೊಳ್ಳಲು ತೊಡಗಬೇಕಾಗುತ್ತದೆ; ಕಣ್ಣಿಗೆ ಕಾಣದ ಮತ್ತು ಕಿವಿಗೆ ಕೇಳಿಸದ ಪರಿಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ.

ಇಂತಹ ಕೆಲಸಗಳನ್ನು ನಡೆಸಲು ಇಂಗ್ಲಿಶ್ ನುಡಿಯನ್ನು ತುಂಬಾ ಚನ್ನಾಗಿ ಕಲಿಸುವ ಶಾಲೆಗಳಲ್ಲೂ ಮಕ್ಕಳಿಗೆ ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆಯೆಂದು ಕಂಡುಹಿಡಿಯಲಾಗಿದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವಲ್ಲಿ ಈ ಕೆಲಸಗಳನ್ನು ನಾಲ್ಕನೇ ತರಗತಿಯಿಂದಲೇ ನಡೆಸಬೇಕಾಗುತ್ತದೆಯಾದ ಕಾರಣ, ಹೆಚ್ಚಿನ ಮಕ್ಕಳೂ ಇದರಲ್ಲಿ ಸೋಲುತ್ತಾರೆ, ಮತ್ತು ಹಲವು ಮಂದಿ ಮಕ್ಕಳು ಈ ತೊಡಕನ್ನು ಎದುರಿಸಲಾಗದೆ ಶಾಲೆಯಿಂದ ಹೊರಬೀಳುತ್ತಾರೆ. ಇಲ್ಲಿಯೂ ಮೇಲ್ವರ‍್ಗದವರ ಮತ್ತು ಬಲ್ಲಿದರ ಮಕ್ಕಳಿಗಿಂತ ಕೆಳವರ‍್ಗದವರ ಮತ್ತು ಬಡವರ ಮಕ್ಕಳೇ ಹೆಚ್ಚು ಸೋಲುತ್ತಾರೆ.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳಿಗೆ ತಮ್ಮ ತಾಯ್ನುಡಿಯ ಮೇಲೆ, ಮತ್ತು ಅದನ್ನು ಬಳಸುವ ತಾಯ್ತಂದೆಯರು, ನೆಂಟರು, ನೆರೆಹೊರೆಯವರು ಮೊದಲಾದವರ ಮೇಲೆ ಕೀಳರಿಮೆ ಬೆಳೆಯುತ್ತದೆ; ತಮ್ಮ ಕಲಿಕೆ ಮುಂದುವರಿದಂತೆಲ್ಲ ಮಕ್ಕಳು ಇವರಿಂದ ದೂರವಾಗುತ್ತಾ ಹೋಗುತ್ತಾರೆ. ಈ ತೊಡಕು ಮೇಲ್ವರ‍್ಗದವರ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಯಾಕೆಂದರೆ, ಮೇಲ್ವರ‍್ಗದ ಮಕ್ಕಳ ತಾಯ್ತಂದೆಯರು, ನೆಂಟರು ಮತ್ತು ನೆರೆಹೊರೆಯವರು ಸಾಮಾನ್ಯವಾಗಿ ಇಂಗ್ಲಿಶ್ ತಿಳಿದಿರುತ್ತಾರೆ.

ಇಂತಹ ಹಲವು ಸಮಸ್ಯೆಗಳಿರುವುದರಿಂದಾಗಿ, ಕೆಳವರ‍್ಗದ ಮಕ್ಕಳು ಮೇಲೆ ಬರಬೇಕಿದ್ದಲ್ಲಿ, ಮತ್ತು ತಮ್ಮೊಂದಿಗೆ ತಮ್ಮ ಸಮಾಜವನ್ನೂ ಮೇಲೆ ತರಬೇಕಿದ್ದಲ್ಲಿ, ಅವರಿಗೆ ಕಲಿಕೆನುಡಿಯಾಗಿ ಕನ್ನಡವನ್ನೇ ಬಳಸುತ್ತಿರಬೇಕು. ಇದರೊಂದಿಗೆ ಇಂಗ್ಲಿಶ್ ನುಡಿಯನ್ನೂ ಒಂದು ವಿಶಯವಾಗಿ ಮಾತ್ರ ಕಲಿಸುತ್ತಿರಬೇಕಲ್ಲದೆ ಕಲಿಕೆನುಡಿಯಾಗಿ ಬಳಸಲು ಹೋಗಬಾರದು.

ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ಅವರು ಹಿಂದೆ ಬೀಳುತ್ತಿರುವುದಕ್ಕೆ ಅವರ ಕಲಿಕೆನುಡಿಯಾಗಿ ಕನ್ನಡವನ್ನು ಬಳಸುತ್ತಿರುವುದು ಕಾರಣವಲ್ಲ; ಇಂಗ್ಲಿಶ್ ನುಡಿಯನ್ನು ಅವರಿಗೆ ಶಾಲೆಯಲ್ಲಿ ಸರಿಯಾಗಿ ಕಲಿಸದಿರುವುದೇ ಕಾರಣ. ಹಾಗಾಗಿ, ಕಲಿಕೆನುಡಿಯನ್ನು ಬದಲಾಯಿಸುವುದರಿಂದ ಅವರು ಇಂಗ್ಲಿಶ್ ಕಲಿಕೆಯಲ್ಲಿ ಮುಂದೆ ಹೋಗುವ ಬದಲು, ಬೇರೆ ವಿಶಯಗಳ ಕಲಿಕೆಯಲ್ಲೂ ಹಿಂದೆ ಬೀಳಲು ತೊಡಗುತ್ತಾರೆ.

ಇವತ್ತು ಮುಂದೆ ಬಂದಿರುವ ಎಲ್ಲಾ ನಾಡುಗಳಲ್ಲೂ ಮಕ್ಕಳ ಕಲಿಕೆನುಡಿ ಅವರ ತಾಯ್ನುಡಿಯಾಗಿದೆ; ಇಂಗ್ಲಿಶ್‌ನಂತಹ ಬೇರೊಂದು ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಯಾವ ನಾಡೂ ಇದುವರೆಗೆ ಮುಂದೆ ಬಂದಿಲ್ಲ. ಇದಕ್ಕೆ ಕಾರಣವೇನೆಂದರೆ, ತಮ್ಮ ನಾಡಿನದಲ್ಲದ ಕಲಿಕೆನುಡಿಯಲ್ಲಿ ಕಲಿತವರು ನಾಡಿನ ಸಾಮಾನ್ಯ ಜನರಿಂದ ಬೇರಾಗಿಯೇ ಉಳಿಯುತ್ತಾರೆ, ಮತ್ತು ಅವರ ಕಲಿಕೆಯಿಂದ ಸಾಮಾನ್ಯ ಜನರಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ.

ಹಾಗಾಗಿ, ಕಲಿಯುವ ಮಕ್ಕಳ ವಯ್ಯಕ್ತಿಕ ಏಳಿಗೆಗೆ ಮಾತ್ರವಲ್ಲದೆ, ಅವರ ಸಮಾಜದ ಮತ್ತು ನಾಡಿನ ಏಳಿಗೆಗಾಗಿಯೂ ಕಲಿಕೆನುಡಿಯಾಗಿ ಅವರ ತಾಯ್ನುಡಿ ಇಲ್ಲವೇ ಪರಿಸರದ ನುಡಿಯನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ತಮಿಳರ ದಾರಿ ಮತ್ತು ನಮ್ಮ ದಾರಿ

ನುಡಿಯರಿಮೆಯ ಇಣುಕುನೋಟ – 7

ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಒಂದು ಮಿತಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬುದಾಗಿ ಹೇಳಿದಾಗ, ಇದು ತಮಿಳಿನ ದ್ರಾವಿಡ ಕಳಗಂ ಹಿಡಿದ ದಾರಿ ಎಂಬ ಮರುನುಡಿ ಕೇಳಿಬರುತ್ತದೆ.

ಆದರೆ, ಈ ಮರುನುಡಿ ಸರಿಯಲ್ಲ. ನಾವು ತಮಿಳರಿಂದಕಲಿಯಬಹುದಾದ ವಿಶಯಗಳೂ ಕೆಲವಿವೆ; ಆದರೆ ಹಾಗೆಂದು, ಎಲ್ಲಾ ವಿಶಯಗಳಲ್ಲೂ ಅವರನ್ನು ಕಣ್ಣುಮುಚ್ಚಿ ಹಿಂಬಾಲಿಸಬೇಕೆಂದೇನಿಲ್ಲ. ನಮಗೆ ಸರಿಯೆಂದು ಕಂಡುದನ್ನು ಅವರಿಂದ ಕಲಿಯೋಣ, ಮತ್ತು ಬೇರೆ ವಿಶಯಗಳಲ್ಲಿ ನಮ್ಮದೇ ಆದ ದಾರಿಯನ್ನೂ ಕಂಡುಕೊಳ್ಳೋಣ.

ತಮ್ಮ ನುಡಿಯ ಕುರಿತಾಗಿ ತಮಿಳರಿಗೆ ಎಲ್ಲೆಯಿಲ್ಲದ ಹೆಮ್ಮೆ ಮತ್ತು ಒಲುಮೆಗಳಿವೆ; ಆದರೆ, ಕನ್ನಡದ ತಿಳಿವಿಗರಿಗೆ ತಮ್ಮ ನುಡಿಯ ಕುರಿತು ಕೀಳರಿಮೆಯಿದೆ. ಎಂತಹ ಹೊಸ ಪದವನ್ನು ಬೇಕಿದ್ದರೂ ತಮ್ಮ ನುಡಿಯಲ್ಲಿ ಉಂಟುಮಾಡಲು ಬರುತ್ತದೆ ಎಂಬುದನ್ನು ತಮಿಳರು ಕಂಡುಕೊಂಡಿದ್ದಾರೆ, ಮತ್ತು ಅದನ್ನು ಬಳಕೆಗೂ ತಂದಿದ್ದಾರೆ; ಆದರೆ, ಕನ್ನಡದ ತಿಳಿವಿಗರು ಹೊಸ ಪದಗಳನ್ನುಂಟುಮಾಡಲು ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಕಯ್ಚೆಲ್ಲಿ ಕುಳಿತಿದ್ದಾರೆ.

ತಮಿಳಿನ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ತಮಿಳು ಪದಗಳಿವೆ; ಆದರೆ, ಕನ್ನಡದ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಹತ್ತರಶ್ಟೂ ಕನ್ನಡದ ಪದಗಳಿಲ್ಲ! ಇಂತಹ ಕೆಲವು ವಿಶಯಗಳಲ್ಲಿ ನಾವು ತಮಿಳರನ್ನು ಹಿಂಬಾಲಿಸಿದಲ್ಲಿ, ಅದು ನಮ್ಮ ನುಡಿಯ ಮತ್ತು ಸಮಾಜದ ಏಳಿಗೆಗೆ ನೆರವಾಗಬಲ್ಲುದು.

ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವರು ಹಿಡಿದ ದಾರಿ ನಮಗೆ ಬೇಕಿಲ್ಲ. ದ್ರಾವಿಡ ಕಳಗಗಳು ನಡೆಸಿದ ಚಳವಳಿಯಿಂದಾಗಿ, ತಮಿಳು ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳು ತುಂಬಾ ಕಡಿಮೆಯಾದುವೇನೋ ನಿಜ; ಆದರೆ, ಇದರಿಂದ ಬರಹದ ತಮಿಳಿಗೂ ತಮಿಳಿನ ಆಡುನುಡಿಗಳಿಗೂ ನಡುವಿದ್ದ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ಯಾಕೆಂದರೆ, ಬರಹದಿಂದ ತೆಗೆದು ಹಾಕಿದ ಸಂಸ್ಕ್ರುತ ಪದಗಳಿಗೆ ಬದಲಾಗಿ ಇವರು ಹಳೆತಮಿಳಿನ ಪದಗಳನ್ನೇ ಬಳಕೆಗೆ ತಂದಿದ್ದಾರೆ; ಇವು ಹೊಸತಮಿಳಿನ ಪದಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಇದಲ್ಲದೆ, ಹೆಚ್ಚುಕಡಿಮೆ ಹದಿಮೂರನೇ ಶತಮಾನದ ತಮಿಳನ್ನೇ ಬರಹಗಳಲ್ಲಿ ಬಳಸಲು ತೊಡಗಿದ್ದಾರೆ. ಇದು ಕನ್ನಡ ಬರಹಗಳಲ್ಲಿ ಇವತ್ತು ಹೊಸಗನ್ನಡದ ಬದಲು ಹಳೆಗನ್ನಡವನ್ನು ಬಳಸಲು ಹೊರಡುವ ಹಾಗೆ ಎನ್ನಬಹುದು.

ಇಂತಹ ತಮಿಳರ ದಾರಿ ನಮಗೆ ಬೇಕಾಗಿಲ್ಲ. ಕನ್ನಡ ಬರಹದಲ್ಲಿ ಯಾವ ಮಾರ‍್ಪಾಡನ್ನು ಮಾಡುವುದಿದ್ದರೂ ಅದಕ್ಕೆ ಕನ್ನಡ ಬರಹಕ್ಕೂ ಕನ್ನಡದ ಆಡುನುಡಿಗಳಿಗೂ ನಡುವಿರುವ ವ್ಯತ್ಯಾಸವನ್ನು ಕಡಿಮೆಮಾಡುವುದೇ ಮುಕ್ಯ ಗುರಿಯಾಗಿರಬೇಕು. ಕನ್ನಡಕ್ಕೆ ಬೇಕಿಲ್ಲದ ಮಹಾಪ್ರಾಣ, ಋಕಾರ, ಷಕಾರಗಳನ್ನು ಬರಹದಲ್ಲಿ ಬಳಸದಿರುವುದು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವುದು ಎಂಬ ಈ ಎರಡು ಮಾರ‍್ಪಾಡುಗಳಿಗೂ ಇದೇ ಮುಕ್ಯ ಗುರಿಯಾಗಿದೆ.

ಇನ್ನು ತಮಿಳು ಬರಹದಲ್ಲಿ ಮಹಾಪ್ರಾಣ, ಋಕಾರ, ಗಜಡದಬ ಮೊದಲಾದ ಕೆಲವು ಬರಿಗೆಗಳು ಬಳಕೆಯಾಗದಿರುವುದಕ್ಕೆ ದ್ರಾವಿಡ ಕಳಗಗಳು ಕಾರಣವಲ್ಲ. ಇತ್ತೀಚೆಗೆ ನಡೆಸಿದ ಯಾವ ಮಾರ‍್ಪಾಡೂ ಅದಕ್ಕೆ ಕಾರಣವಲ್ಲ. ಬ್ರಾಹ್ಮೀಲಿಪಿಯನ್ನು ತಮಿಳಿಗೆ ಅಳವಡಿಸುವ ಸಮಯದಲ್ಲೇನೇ, ಎಂದರೆ ಸುಮಾರು ಎರಡು ಸಾವಿರ ವರ‍್ಶಗಳಶ್ಟು ಹಿಂದೆಯೇ ತಮಿಳು ಬರಹದಲ್ಲಿ ಈ ಬರಿಗೆಗಳನ್ನು ಬಳಸದಿರಲು ತೀರ‍್ಮಾನಿಸಲಾಗಿತ್ತು.

ಆವತ್ತಿನ ತಮಿಳು ಓದಿಗೆ ಈ ಬರವಣಿಗೆ ಸರಿಯಾಗಿಯೂ ಇದ್ದಿರಬೇಕು; ಆದರೆ, ಆಮೇಲೆ ತಮಿಳು ನುಡಿಯಲ್ಲಿ ಹಲವಾರು ಮಾರ‍್ಪಾಡುಗಳು ನಡೆದಿದ್ದು, ಇದರಿಂದಾಗಿ ಇವತ್ತಿನ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದಿವೆ. ಈ ವ್ಯತ್ಯಾಸಗಳನ್ನನುಸರಿಸಿ ತಮಿಳು ಬರಹದಲ್ಲಿ ಹೆಚ್ಚಿನ ಮಾರ‍್ಪಾಡನ್ನೇನೂ ನಡೆಸಿಲ್ಲವಾದ ಕಾರಣ, ಅದರ ಬಳಕೆಯಲ್ಲಿ ಇವತ್ತು ಕೆಲವು ತೊಡಕುಗಳು ಕಾಣಿಸಿಕೊಳ್ಳುತ್ತಿವೆ.

ಸಂಸ್ಕ್ರುತ ಕಾವ್ಯಗಳನ್ನು ಇಲ್ಲವೇ ಬೇರೆ ಸಂಸ್ಕ್ರುತ ಬರಹಗಳನ್ನು ಬರೆಯಲು ಬೇಕಾಗುವ ಹಲವು ಹೆಚ್ಚಿನ ಬರಿಗೆಗಳನ್ನು ತಮಿಳು ಬರಹದಲ್ಲೇನೇ ಉಳಿಸಿಕೊಳ್ಳುವ ಬದಲು, ಅವರು ಗ್ರಂತ ಲಿಪಿಯೆಂಬ ಬೇರೆಯೇ ಒಂದು ಬಗೆಯ ಬರಹವನ್ನು ಬಳಕೆಗೆ ತಂದಿದ್ದರು. ಹಾಗಾಗಿ, ಈ ಬರಿಗೆಗಳ ತೊಡಕು ಅವರ ಬರಹವನ್ನು ತಟ್ಟಿಲ್ಲ.

ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ; ಈ ಬ್ರಾಹ್ಮಣರು ಆರ‍್ಯರಾಗಿದ್ದು, ಸಂಸ್ಕ್ರುತದ ಮೇಲೆ ಅವರಿಗೆ ಹೆಚ್ಚಿನ ಮಮತೆ ಮತ್ತು ಪೂಜ್ಯಬಾವವಿತ್ತು. ಹಾಗಾಗಿ, ಅವರು ಕನ್ನಡದ ಬರಹದಲ್ಲಿ ಸಂಸ್ಕ್ರುತ ಬರಹಕ್ಕೆ ಬೇಕಾಗುವ ಎಲ್ಲಾ ಬರಿಗೆಗಳನ್ನೂ, ಅವು ಕನ್ನಡಕ್ಕೆ ಬೇಡವಾಗಿದ್ದರೂ, ಉಳಿಸಿಕೊಂಡಿದ್ದರು, ಮತ್ತು ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು.

ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು; ಕೆಳವರ‍್ಗದ ಜನರು ಅದರಿಂದ ದೂರವೇ ಉಳಿದಿದ್ದರು. ತುಂಬಾ ಸಂಸ್ಕ್ರುತ ಪದಗಳನ್ನು ಬಳಸುವ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹಲವು ಬರಿಗೆಗಳನ್ನು ಬಳಸುವ ಈ ಬರಹವೂ ಅವರು ಈ ರೀತಿ ಅದರಿಂದ ದೂರ ಉಳಿಯಲು ಒಂದು ಕಾರಣವಾಗಿತ್ತು.

ಆದರೆ, ಇವತ್ತು ಬರಹಕ್ಕೆ ಕಳೆದ ಎರಡು ಸಾವಿರ ವರ‍್ಶಗಳಲ್ಲೂ ಇಲ್ಲದಿದ್ದಂತಹ ಮೇಲ್ಮೆ ದೊರೆತಿದೆ; ಇವತ್ತಿನ ಸಮಾಜದಲ್ಲಿ ಬರಹದ ಅರಿವಿಲ್ಲದವರು ಯಾರೂ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಂತಹ ಪರಿಸ್ತಿತಿಯುಂಟಾಗಿದೆ; ಇದಲ್ಲದೆ, ಎಲ್ಲಾ ಜನರೂ ಬರಹಬಲ್ಲವರಾಗದೆ ಇವತ್ತು ಯಾವ ಸಮಾಜವೂ ಏಳಿಗೆಹೊಂದಲಾರದು. ಹಾಗಾಗಿ, ಕನ್ನಡಿಗರ, ಅವರ ಸಮಾಜದ, ಮತ್ತು ಅವರ ಬರಹದ ಏಳಿಗೆಗಾಗಿ, ಇವತ್ತು ಕನ್ನಡ ಬರಹ ಎಲ್ಲರನ್ನೂ ತಲಪುವಂತೆ ಮಾಡಬೇಕಾಗಿದೆ, ಮತ್ತು ಇದಕ್ಕಾಗಿ ಕನ್ನಡಕ್ಕೆ ಬೇಕಿಲ್ಲದ ಹಲವು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ.

ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ: ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಬೇಕು ಎಂದು ಹೇಳಿದರೆ, ದ್ರಾವಿಡ ಕಳಗಂನವರು ಹೇಳುತ್ತಿದ್ದ ಹಾಗೆ, ಸಂಸ್ಕ್ರುತ ಪದಗಳನ್ನು ಬರಹಗಳಲ್ಲಿ ಬಳಸಲೇ ಕೂಡದು ಎಂದು ಹೇಳಿದ ಹಾಗಾಗುವುದಿಲ್ಲ. ನಿಜಕ್ಕೂ ಹಾಗೆ ಹೇಳಲಾಗಿದೆಯಾದರೆ, ಸಂಸ್ಕ್ರುತ ಎರವಲುಗಳನ್ನು ಕನ್ನಡದಲ್ಲಿ ಬರೆಯುವಾಗ ಮಹಾಪ್ರಾಣ, ಋಕಾರ ಮೊದಲಾದವುಗಳನ್ನು ಬಳಸಬೇಕಾಗಿಲ್ಲ ಎಂಬ ಇನ್ನೊಂದು ಹೇಳಿಕೆ ಬೇಕಾಗುವುದೇ ಇಲ್ಲ!

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾದಾಗಲೆಲ್ಲ, ಅದನ್ನು ಕಡಿಮೆ ಮಾಡಬೇಕೆಂಬುದಾಗಿ ಹಿಂದಿನಿಂದಲೂ ಕನ್ನಡದ ಬರಹಗಾರರು ಹೇಳುತ್ತಾ ಬಂದಿದ್ದಾರೆ. ಕವಿರಾಜಮಾರ‍್ಗಕಾರನಿಂದ ಹಿಡಿದು ಬಿಎಂಶ್ರೀಯವರ ವರೆಗೂ ಹಲವು ಮಂದಿ ಈ ವಿಶಯದಲ್ಲಿ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.

ಇವತ್ತು ಅರಿಮೆಯ (ವಿಜ್ನಾನದ) ಬರಹಗಳಿಗೆ ಬೇಕಾಗುವ ಹೊಸ ಪದಗಳನ್ನೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸದಾಗಿ ಉಂಟುಮಾಡಿಕೊಳ್ಳಲಾಗುತ್ತಿದೆ; ಕನ್ನಡದ ಪದ ಮತ್ತು ಒಟ್ಟುಗಳನ್ನು ತುಂಬಾ ಅಪರೂಪವಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ, ಅರಿಮೆಯ ಪದನೆರಕೆಗಳಲ್ಲಿ ಕನ್ನಡದವೇ ಆದ ಪದಗಳಿರುವುದು ತೀರಾ ಕಡಿಮೆ.

ಇಂತಹ ಪದನೆರಕೆಗಳನ್ನು ‘ಕನ್ನಡ’ದವೆಂದು ಹೇಳುವುದೇ ವಿಚಿತ್ರವಾಗಿ ಕಾಣಿಸುತ್ತದೆ. ನಿಜಕ್ಕೂ ಈ ರೀತಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಬದಲು, ಇಂಗ್ಲಿಶ್ ಪದಗಳನ್ನು ಹಾಗೆಯೇ ಎರವಲು ಪಡೆಯುವುದೇ ಕನ್ನಡಿಗರ ಮಟ್ಟಿಗೆ ಹೆಚ್ಚು ನೆರವಾಗಬಲ್ಲುದು; ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಲು ಅವರು ಇಂಗ್ಲಿಶ್ ಬರಹಗಳನ್ನು ಓದಬೇಕಾಗುತ್ತದೆಯಲ್ಲದೆ, ಸಂಸ್ಕ್ರುತದಲ್ಲಿ ಅವರಿಗೆ ಇವತ್ತಿನ ಅರಿಮೆಗಳ ಕುರಿತಾಗಿ ಎಂತಹ ಓದೂ ದೊರಕಲಾರದು.

ಆದರೆ, ಈ ವಿಶಯಗಳ ಕುರಿತಾಗಿ ಮಕ್ಕಳಿಗೆ ಅಡಿಕಲಿಕೆ ದೊರೆಯುವಂತೆ ಮಾಡಲು, ಮತ್ತು ಆಳವಾದ ತಿಳಿವು ದೊರೆಯುವಂತೆ ಮಾಡಲು, ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸುವ ಬದಲು ನಮ್ಮವೇ ಆದ ಕನ್ನಡ ಪದಗಳನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳನ್ನು ಓದುವ ಹಾಗೆಯೇ ಬರೆಯಬೇಕು

ನುಡಿಯರಿಮೆಯ ಇಣುಕುನೋಟ – 3

ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತೇವೆ: ವಿಶೇಶ ಎಂಬುದಾಗಿ ಓದಿದರೂ ವಿಶೇಷ ಎಂಬುದಾಗಿ ಬರೆಯುತ್ತೇವೆ, ಮತ್ತು ಅದಿಕಾರಿ ಎಂಬುದಾಗಿ ಓದಿದರೂ ಅಧಿಕಾರಿ ಎಂಬುದಾಗಿ ಬರೆಯುತ್ತೇವೆ.

ಸಂಸ್ಕ್ರುತವನ್ನು ಹೊರತುಪಡಿಸಿ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳನ್ನೆಲ್ಲ ಓದುವ ಹಾಗೆ ಬರೆಯುತ್ತೇವಲ್ಲದೆ, ಆ ನುಡಿಗಳಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ. ಇಂಗ್ಲಿಶ್‌ನ ವಯ್ಪರ್ ಮತ್ತು ವಯ್ರಸ್ ಪದಗಳ ಮೊದಲ ಬರೆಗೆಗಳು ಇಂಗ್ಲಿಶ್‌ನಲ್ಲಿ ಬೇರಾಗಿವೆ, ಆದರೆ ಕನ್ನಡದಲ್ಲಿ ವ ಎಂಬ ಒಂದೇ ಬರಿಗೆಯನ್ನು ಬಳಸಲಾಗುತ್ತದೆ. ಅವೆರಡನ್ನೂ ಒಂದೇ ರೀತಿ ಓದುತ್ತಿರುವುದೇ ಇದಕ್ಕೆ ಕಾರಣ.

ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಬರೆಯಬೇಕಾಗಿದೆಯಾದರೆ, ಅದು ಅಂತಹ ಬರಹವನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತದೆ; ಕನ್ನಡ ಬರಹದ ಈ ಸಂಪ್ರದಾಯ ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ತೊಡಕುಗಳನ್ನು ಕೊಡುತ್ತಿದೆ:

(೧) ಓದಲು ಮತ್ತು ಬರೆಯಲು ಕಲಿಯಹೊರಡುವ ಮಕ್ಕಳು ಅನವಶ್ಯಕವಾಗಿ ಹದಿನೇಳು ಹೆಚ್ಚಿನ ಬರಿಗೆ(ಅಕ್ಶರ)ಗಳನ್ನು ಕಲಿಯಬೇಕಾಗುತ್ತದೆ.

(೨) ಸರಿಯಾಗಿ ಮತ್ತು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ (ಎತ್ತುಗೆಗೆ, ಮನೆ ಎಂಬುದನ್ನು ಮ್, ಅ, ನ್ ಮತ್ತು ಎ ಎಂಬ ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ) ಎಂಬುದನ್ನು ಗಮನಿಸಬೇಕು, ಮತ್ತು ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬರಿಗೆಗಳನ್ನು ಬಳಸಲಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇವೆರಡನ್ನು ಗಮನಿಸಿದವರು ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗಲೂ ಅವನ್ನು ಸುಲಬವಾಗಿ ಓದಬಲ್ಲವರಾಗುತ್ತಾರೆ.

ಪದಗಳನ್ನು ಓದುವ ಹಾಗೆಯೇ ಬರೆದಿದೆಯಾದರೆ ಮಾತ್ರ, ಈ ರೀತಿ ಓದುವಾಗ ಬಳಸುವ ಉಲಿಗೂ ಬರಹದಲ್ಲಿ ಕಾಣಿಸುವ ಬರಿಗೆಗಳಿಗೂ ನಡುವೆ ಸಂಬಂದವಿದೆ ಎಂಬುದು ಓದಲು ಕಲಿಯುವವರ ಗಮನಕ್ಕೆ ಸುಲಬವಾಗಿ ಬರುತ್ತದೆ.

ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಪದಗಳನ್ನು ಬರೆದಿದೆಯಾದರೆ, ಅವುಗಳಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವೆ ಇಂತಹದೊಂದು ಸಂಬಂದವಿದೆಯೆಂಬುದು ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ, ಮತ್ತು ಇದರಿಂದಾಗಿ ಎಶ್ಟು ಕಲಿತರೂ ಅವರಿಗೆ ಸಲೀಸಾಗಿ ಓದಲು ಬರುವುದೇ ಇಲ್ಲ. ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗ ಅವನ್ನು ಹೇಗೆ ಓದಬೇಕೆಂಬುದು ಅವರಿಗೆ ಗೊತ್ತಾಗುವುದೂ ಇಲ್ಲ.

(೩) ಓದುವ ಹಾಗೆ ಬರೆಯುವ ಪದಗಳನ್ನು ಬರಹಗಳಲ್ಲಿ ಬಳಸುವುದು ಸುಲಬ; ಬೇರೆ ಬಗೆಯಲ್ಲಿ ಬರೆಯುವ ಒಂದೊಂದು ಪದವನ್ನೂ ಅದನ್ನು ಬರೆಯುವುದು ಹೇಗೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಮನೆ ಎಂಬ ಪದವನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಹೇಗೆ ಬರೆಯುವುದೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿಲ್ಲ.
ಆದರೆ, ವಿಶೇಷ ಎಂಬ ಪದವನ್ನು ಬರೆಯುವಾಗ ಎರಡನೆಯ ಮುಚ್ಚುಲಿಯನ್ನು ಶ್ ಎಂಬುದಾಗಿ, ಮತ್ತು ಮೂರನೆಯ ಮುಚ್ಚುಲಿಯನ್ನು ಷ್ ಎಂಬುದಾಗಿ ಬರೆಯಬೇಕೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಯಾಕೆಂದರೆ, ಅವೆರಡನ್ನೂ ಒಂದೇ ರೀತಿಯಲ್ಲಿ ಓದಲಾಗುತ್ತದೆ.ಇದನ್ನು ನೆನಪಿನಲ್ಲಿಟ್ಟುಕೊಳ್ಳಲಾರದವರು ಬರವಣಿಗೆಯಲ್ಲಿ ತಪ್ಪು ಮಾಡುತ್ತಾರೆ.

ಇವತ್ತು ದಿನಪತ್ರಿಕೆಗಳಲ್ಲಿ, ಕತೆ-ಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸುವುದು ಓದುವ ಹಾಗೆ ಬರೆಯದಿರುವ ಮಹಾಪ್ರಾಣಾಕ್ಶರ, ಷಕಾರ, ಋಕಾರ ಮೊದಲಾದ ಬರಿಗೆಗಳಿರುವ ಸಂಸ್ಕ್ರುತ ಪದಗಳ ಬಳಕೆಯಲ್ಲಿ ಎಂಬುದನ್ನು ಗಮನಿಸಬಹುದು.

(೪) ಸಾಮಾನ್ಯವಾಗಿ ಜನರು ಪದಕೋಶಗಳನ್ನು ನೋಡಲು ಹೋಗುವುದು ಹೊಸದಾಗಿ ಅವರ ಓದಿನಲ್ಲಿ ಕಾಣಿಸಿಕೊಳ್ಳುವ ಪದಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಾಗಿ; ಆದರೆ, ಓದುವ ಹಾಗೆ ಬರೆಯದಿರುವ ವಿಶೇಷ, ಅಧಿಕಾರಿ ಮೊದಲಾದ ಪದಗಳನ್ನು ಅವುಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಿಂತಲೂ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ ಪದಕೋಶಗಳನ್ನು ನೋಡಬೇಕಾಗುತ್ತದೆ. ಓದುವ ಹಾಗೆಯೇ ಬರೆಯುವ ಯಾವ ಪದವನ್ನೂ ಈ ರೀತಿ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯಲು ಪದಕೋಶವನ್ನು ನೋಡಬೇಕಾಗುವುದಿಲ್ಲ.

(೫) ಕೆಳವರ‍್ಗದ ಮಕ್ಕಳಲ್ಲಿ ಇಂತಹ ಪದಗಳ ಕಲಿಕೆ ಕೀಳರಿಮೆಯನ್ನು ಉಂಟುಮಾಡುತ್ತದೆ; ಅವು ಕೊಡುವ ತೊಂದರೆಯಿಂದಾಗಿ ಕೆಲವರು ಬರಹದ ಕಲಿಕೆಯನ್ನು ನಡುವಿನಲ್ಲೇ ನಿಲ್ಲಿಸಿಬಿಡುತ್ತಾರೆ. ಓದಲು ಕಲಿತವರೂ ಅದನ್ನು ತುಂಬಾ ಅಪರೂಪವಾಗಿ ಮಾತ್ರ ಬಳಸುತ್ತಾರೆ. ಯಾಕೆಂದರೆ, ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.
ಸಮಾಜಗಳಲ್ಲಿ ಹಲವಾರು ಬಗೆಯ ಸಂಪ್ರದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಬಳಕೆಗೆ ಬರುತ್ತವೆ, ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನಗಳೇನೂ ಇಲ್ಲದಿದ್ದರೂ, ಹೆಚ್ಚಿನ ತೊಂದರೆಯಿಲ್ಲವಾದಲ್ಲಿ ಅವು ಹಾಗೆಯೇ ವರ‍್ಶಗಟ್ಟಲೆ ಸಮಯ ಮುಂದುವರಿಯುತ್ತಿರುತ್ತವೆ.

ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬುದೂ ಇಂತಹದೇ ಒಂದು ಸಂಪ್ರದಾಯ. ಅದರಿಂದ ಕನ್ನಡ ಬರಹದ ಮಟ್ಟಿಗೆ ಯಾವ ಪ್ರಯೋಜನವೂ ಇಲ್ಲ. ಹಳೆಗನ್ನಡದ ಸಮಯದಲ್ಲಿ ಇಂತಹ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು, ಇಲ್ಲವೇ ಕನ್ನಡದ ಸೊಗಡನ್ನು ಕೆಡಿಸದಂತೆ ಅವನ್ನು ಮಾರ‍್ಪಡಿಸಿ ತದ್ಬವಗಳನ್ನಾಗಿ ಮಾಡಿಯೂ ಬಳಸಬಹುದಿತ್ತು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಅಂತಹ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ.

ಆದರೆ, ಇವತ್ತು ಹೊಸಗನ್ನಡದಲ್ಲಿ ಬರಹಗಾರರು ಈ ಆಯ್ಕೆಯನ್ನು ಕಳೆದುಕೊಂಡಿದ್ದಾರೆ. ಬಳಕೆಯಲ್ಲಿರುವ ಕೆಲವೇ ಕೆಲವು ತದ್ಬವ ಪದಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಸ್ಕ್ರುತ ಪದಗಳನ್ನೂ ಇವತ್ತು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿದೆ. ಅವುಗಳಲ್ಲಿ ಯಾವುದೇ ಬಗೆಯ ಮಾರ‍್ಪಾಡನ್ನು ನಡೆಸಿದರೂ ಅದನ್ನು ತಪ್ಪೆಂದು ತಿಳಿಯಲಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೂ ಈ ಸಂಪ್ರದಾಯ ಹೆಚ್ಚಿನ ತೊಂದರೆಯನ್ನೇನೂ ಕೊಡುತ್ತಿರಲಿಲ್ಲ. ಯಾಕೆಂದರೆ, ಸಮಾಜದಲ್ಲಿ ಮೇಲ್ವರ‍್ಗಕ್ಕೆ ಸೇರಿದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸಬೇಕಾಗಿತ್ತು, ಮತ್ತು ಅವರಲ್ಲಿ ಹೆಚ್ಚಿನವರೂ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು; ಹಾಗಾಗಿ, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡುಹೋಗುವುದು ಅವರಿಗೆ ತೊಡಕಿನದಾಗಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರು ಮತ್ತು ಎಲ್ಲರೂ ಬರಹವನ್ನು ಬಳಸಬೇಕಾಗಿದೆ. ಯಾಕೆಂದರೆ, ಇವತ್ತು ಸಮಾಜದಲ್ಲಿ ಬರಹಕ್ಕೆ ಅಂತಹದೊಂದು ಪ್ರಾಮುಕ್ಯತೆ ಬಂದಿದೆ. ಬರಹವನ್ನು ಬಳಸಲು ತಿಳಿಯದವರು ಮುಂದೆ ಬರಲು ಸಾದ್ಯವೇ ಇಲ್ಲ, ಮತ್ತು ಅಂತಹ ಹಲವು ಮಂದಿ ಜನರಿರುವ ಸಮಾಜ ಏಳಿಗೆಯಾಗಲೂ ಸಾದ್ಯವೇ ಇಲ್ಲ ಎಂಬ ಪರಿಸ್ತಿತಿ ಇವತ್ತಿನದಾಗಿದೆ.

ಈ ರೀತಿ ಕನ್ನಡ ಬರಹವನ್ನು ಬಳಸಲು ಕಲಿಯಲೇ ಬೇಕಾಗಿರುವ ಜನರಲ್ಲಿ ಹೆಚ್ಚಿನವರಿಗೂ ಸಂಸ್ಕ್ರುತದ ಅರಿವು ಬೇಕಾಗಿಲ್ಲ; ಅದಕ್ಕಿಂತಲೂ ಅವರಿಗೆ ಇಂಗ್ಲಿಶ್ ನುಡಿಯ ಅರಿವು ಹೆಚ್ಚಿನ ನೆರವು ನೀಡಬಲ್ಲುದು. ಹಾಗಾಗಿ, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಸಂಪ್ರದಾಯ ಒಂದು ಹೆಚ್ಚಿನ ತೊಡಕನ್ನು ಮಾತ್ರ ತಂದೊಡ್ಡುತ್ತದಲ್ಲದೆ, ಅದರಿಂದ ಅವರು ಪಡೆಯಬಹುದಾದ ಪ್ರಯೋಜನ ಯಾವುದೂ ಇಲ್ಲ.

ಈ ರೀತಿ ಕನ್ನಡದ ಮಟ್ಟಿಗೆ ಯಾವ ಪ್ರಯೋಜನವನ್ನೂ ನೀಡದ, ಹಲವು ಮಂದಿ ಕನ್ನಡಿಗರಿಗೆ ತೊಡಕನ್ನು ಮಾತ್ರವೇ ಕೊಡುವ, ಮತ್ತು ನಮ್ಮ ಸಮಾಜದ ಏಳಿಗೆಗೂ ತೊಡಕಾಗಿರುವ ಈ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಜಾಣತನ. ಇದು ಒಂದೂವರೆ-ಎರಡು ಸಾವಿರ ವರ‍್ಶದ ಹಿಂದಿನ ಸಮಾಜಕ್ಕಾಗಿ ಮಾಡಿಕೊಂಡಿದ್ದ ಸಂಪ್ರದಾಯ. ಇಂದಿನ ಸಮಾಜ ಆಗಿನದಕ್ಕಿಂತ ತೀರ ಬೇರೆಯಾಗಿದೆ. ಹೀಗಿರುವಾಗಲೂ ಆ ಹಳೆಯ ಸಂಪ್ರದಾಯವನ್ನು ತೊರೆಯಲು ಹಿಂಜರಿಯುವುದೆಂದರೆ, ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳುವ ಹಾಗೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹ ಕನ್ನಡ ಮತ್ತು ಆಡುಗನ್ನಡ

ನುಡಿಯರಿಮೆಯ ಇಣುಕುನೋಟ – 1

ಆಡುನುಡಿಯೆಂಬುದು ಜಾಗದಿಂದ ಜಾಗಕ್ಕೆ ಬದಲಾಗುವುದು ಸಹಜ. ನಮ್ಮ ನಲ್ಮೆಯ ಕನ್ನಡ ನುಡಿಗೂ ಈ ಮಾತು ಒಪ್ಪುತ್ತದೆ. ಬೇರೆ ಬೇರೆ ಊರುಗಳಲ್ಲಿರುವ ಕನ್ನಡಿಗರು ಬೇರೆ ಬೇರೆ ಆಡುಗನ್ನಡಗಳನ್ನು ಬಳಸುವುದು ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ. ಹಾಗೆಯೇ ಜಾತಿಯಿಂದ ಜಾತಿಗೂ ಆಡುಗನ್ನಡ ಬದಲಾಗುವುದನ್ನೂ ನಾವೆಲ್ಲರೂ ಕಂಡಿರುತ್ತೇವೆ. ಎತ್ತುಗೆಗಾಗಿ, ಮಯ್ಸೂರಿನ ಆಡುಗನ್ನಡಕ್ಕೂ ಹುಬ್ಬಳ್ಳಿಯ ಆಡುಗನ್ನಡಕ್ಕೂ ನಡುವೆ, ಮತ್ತು ಮಯ್ಸೂರಿನಲ್ಲೇನೇ ಬ್ರಾಹ್ಮಣರ ಆಡುಗನ್ನಡಕ್ಕೂ ಒಕ್ಕಲಿಗರ ಆಡುಗನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಆದರೆ, ಬರಹ ಕನ್ನಡ ಹೀಗೆ ಬೇರೆ ಬೇರೆಯಾಗಿ ಇರುವಂತಿಲ್ಲ. ಅದು ಎಲ್ಲರಿಗೂ ಸಮನಾಗಿದ್ದು, ‘ಎಲ್ಲರ ಕನ್ನಡ’ವಾಗಿರಬೇಕಾಗುತ್ತದೆ; ಯಾಕೆಂದರೆ, ಜಾಗ ಮತ್ತು ಜಾತಿಗಳ ಎಲ್ಲೆಗಳನ್ನು ಮೀರಿ ಜನರನ್ನು ಬೆಸೆಯುವ ಒಂದು ವಿಶೇಶವಾದ ಕೆಲಸ ಅದರದು. ಹಲವು ಬಗೆಯ ಆಡುಗನ್ನಡಗಳನ್ನು ಬಳಸುವ ಎಲ್ಲಾ ಕನ್ನಡಿಗರಿಗೂ ಸಮಾನವಾಗಿರಬೇಕಾದಂತಹ ಬರಹ ಕನ್ನಡ ಅವರೆಲ್ಲರ ಆಡುಗನ್ನಡಕ್ಕಿಂತಲೂ ಬೇರಾಗಿಯೇ ಇರಬೇಕಾಗುತ್ತದೆ ಎಂದು ಸುಲಬವಾಗಿ ಕಾಣಬಹುದು.

ಬರಹ ಕನ್ನಡ ಬೇರೆ ಬೇರೆ ಆಡುಗನ್ನಡಗಳಿಗಿಂತ ಬೇರಾಗಿರಬೇಕಾದುದು ಅನಿವಾರ‍್ಯ ಎಂದ ಮಾತ್ರಕ್ಕೆ ಅದು ಅವುಗಳಿಗಿಂತ ತುಂಬಾ ದೂರದಲ್ಲಿರುವುದೂ ಅನಿವಾರ‍್ಯ ಎಂದೇನಿಲ್ಲ; ಆದಶ್ಟು ಹತ್ತಿರವೂ ಇರಬಹುದು. ಅದು ನಮ್ಮೆಲ್ಲರಿಗಿಂತ ದೂರದಲ್ಲಿರಬೇಕೋ ಹತ್ತಿರದಲ್ಲಿರಬೇಕೋ ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ, ಯಾರೂ ‘ದೂರದಲ್ಲಿರಬೇಕು’ ಎಂಬ ಉತ್ತರವನ್ನು ಕೊಡಲಾರರು. ಬರಹ ಕನ್ನಡವನ್ನು ಎಲ್ಲಾ ಆಡುಗನ್ನಡಗಳಿಗೂ ಆದಶ್ಟು ಹತ್ತಿರವಿರುವಂತೆ ಮಾಡಿದಲ್ಲಿ, ಕನ್ನಡವನ್ನು ಓದಲು ಮತ್ತು ಬರೆಯಲು ಕಲಿಯುವ ಕೆಲಸ ಎಲ್ಲಾ ಕನ್ನಡಿಗರಿಗೂ ಸುಲಬವಾಗುತ್ತದೆ ಎಂದು ಯಾರಾದರೂ ಕಾಣಬಹುದು. ಆದುದರಿಂದ ಹಾಗೆ ಮಾಡಬೇಕಾಗಿರುವುದು ಕನ್ನಡದ ಮತ್ತು ಅದರ ಮೂಲಕ ಕನ್ನಡಿಗರ ಏಳಿಗೆಗೆ ಬಹಳ ಮುಕ್ಯವಾದ ಕೆಲಸ.

ಎಲ್ಲರಿಗೂ ಆದಶ್ಟು ಹತ್ತಿರವಿರುವ ಬರಹ ಕನ್ನಡದಲ್ಲಿ ಸಂಸ್ಕ್ರುತ, ಇಂಗ್ಲಿಶ್, ಹಿಂದಿ ಮೊದಲಾದ ಬೇರೆ ನುಡಿಗಳಿಂದ ಪಡೆಯುವ ಎರವಲು ಪದಗಳನ್ನು ಒಂದು ಮಿತಿಯಲ್ಲಿರಿಸಿಕೊಳ್ಳುವುದು ಅನಿವಾರ‍್ಯವೆಂದು ಹೇಳಬೇಕಾಗಿಯೇ ಇಲ್ಲ. ಜಾಗ ಮತ್ತು ಜಾತಿಯ ತಾರತಮ್ಯವಿಲ್ಲದೆ ಎಲ್ಲರೂ ಬರಹವನ್ನು ಬಳಸತೊಡಗಿದಾಗ, ಅಂತಹ ಎರವಲು ಪದಗಳು ಒಂದು ಮಿತಿಯಲ್ಲಿ ಇದ್ದೇ ಇರುತ್ತವೆ; ಬಹುಶಹ ನೂರಕ್ಕೆ ಅಯ್ದು ಇಲ್ಲವೇ ಹತ್ತಕ್ಕಿಂತ ಹೆಚ್ಚು ಇರಲಾರವು. ತನ್ನ ಸೊಗಡನ್ನು ಉಳಿಸಿಕೊಂಡಿರುವ ಅಂತಹ ಬರಹಗಳನ್ನು ಓದುವ ಮತ್ತು ಬರೆಯುವ ಕೆಲಸ ಕೆಲವರಿಗಶ್ಟೇ ಅಲ್ಲ, ಎಲ್ಲರಿಗೂ ಸುಲಬದ್ದಾಗುತ್ತದೆ.

ಹಲವು ಕಡೆ ಕನ್ನಡದ್ದೇ ಆದ ಪದಗಳನ್ನು ಬರಹ ಕನ್ನಡದಲ್ಲಿ ಬಳಸುವುದು ಒಳ್ಳೆಯ ಬರವಣಿಗೆಯ ಗುರುತಲ್ಲ ಎಂಬ ಒಂದು ವಿಚಿತ್ರವಾದ ಅನಿಸಿಕೆ ಕೆಲವರಲ್ಲಿದೆ; ಕನ್ನಡದ್ದೇ ಆದ ಪದಗಳ ಬದಲು ಸಂಸ್ಕ್ರುತದ ಎರವಲುಗಳನ್ನು ಬಳಸುವುದರಿಂದ ಬರಹ ಮೇಲ್ಮಟ್ಟದ್ದಾಗುತ್ತದೆಯೆಂಬ ಬ್ರಮೆ ಅದೇಕೋ ಅವರಲ್ಲಿದೆ. ‘ನಾಯಿ’ ಎಂದು ಬರೆಯುವ ಬದಲು ‘ಶ್ವಾನ’ ಎಂದು ಬರೆಯುವುದು, ‘ಕೂದಲು’ ಎಂಬುದರ ಬದಲು ‘ಕೇಶ’ ಎನ್ನುವುದು, ‘ಹಲ್ಲು’ ಎನ್ನುವ ಬದಲು ‘ದಂತ’ ಎನ್ನುವುದು, ‘ಕೂಡಿಸುವುದು’ ಎನ್ನುವ ಬದಲು ‘ಸಂಕಲನ’ ಎನ್ನುವುದು, ಇವೆಲ್ಲ ಮೇಲ್ಮಟ್ಟದ ಕನ್ನಡ ಬರವಣಿಗೆಯ ಗುರುತುಗಳು ಎಂದು ಹಲವರು ತಿಳಿದಿದ್ದಾರೆ. ಆದರೆ ಈ ರೀತಿಯ ಬಳಕೆಗಳು ಬರಹ ಕನ್ನಡವನ್ನು ಎಲ್ಲರಿಗೂ ಆದಶ್ಟು ಹತ್ತಿರವಾಗಿಸುವಂತವಲ್ಲ, ದೂರವಾಗಿಸುವಂತವು ಎಂದು ತಿಳಿದುಕೊಳ್ಳಲು ಕಶ್ಟವಿಲ್ಲ.

ಹೊಸ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲಂತೂ ಸಂಸ್ಕ್ರುತವನ್ನು ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂದು ಹೆಚ್ಚಿನ ಕನ್ನಡದ ಬರಹಗಾರರೂ ತಿಳಿದಿದ್ದಾರೆ. ಆದರೆ ಅಂತಹ ಪದಗಳನ್ನು ಬಳಸಿರುವ ಕನ್ನಡ ಬರಹ ಎಲ್ಲರಿಗೂ ಹತ್ತಿರವಾಗುವ ಬದಲು ದೂರ ಉಳಿಯುತ್ತದೆ, ಮತ್ತು ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚಿನ ಕನ್ನಡಿಗರಿಗೂ ತೊಡಕಿನದಾಗುತ್ತದೆ. ಹೊಸ ಪದಗಳನ್ನು ಉಂಟುಮಾಡುವುದರ ಗುರಿ ಕನ್ನಡಿಗರಿಗೆಲ್ಲ ಆ ಪದಗಳು ಸೂಚಿಸುವ ವಿಶಯ ಇಲ್ಲವೇ ವಸ್ತುವಿನ ಪರಿಚಯ ಮಾಡಿಸುವುದು ಎಂಬುದನ್ನು ನೆನಪಿನಲ್ಲಿಟ್ಟರೆ ಹೆಜ್ಜೆಹೆಜ್ಜೆಗೂ ಸಂಸ್ಕ್ರುತವನ್ನು ಮೊರೆಹೊಗುವುದು ತಾನೇ ನಿಲ್ಲುತ್ತದೆ.

ಹೊಸ ಪದಗಳನ್ನು ಉಂಟುಮಾಡಲು ಕನ್ನಡದ್ದೇ ಆದ ಪದಗಳನ್ನು ಮತ್ತು ಬೇರುಗಳನ್ನು ಬಳಸಬಹುದು; ಇವು ಹೊಸಗನ್ನಡದಲ್ಲಿ ಸಿಗದಿದ್ದರೆ ಹಳೆಗನ್ನಡದಿಂದ, ಇಲ್ಲವೇ ಆಡುಗನ್ನಡಗಳಿಂದ ಪಡೆದುಕೊಳ್ಳಬಹುದು. ಹೆಚ್ಚಿನವರೂ ಕೇಳಿಲ್ಲದ ಪದಗಳನ್ನು ಇಲ್ಲವೇ ಬೇರುಗಳನ್ನು ಅವು ಸಂಸ್ಕ್ರುತದವು ಎಂಬ ಒಂದೇ ಕಾರಣಕ್ಕಾಗಿ ಬಳಸಿ ಹೊಸ ಪದಗಳನ್ನು ಉಂಟುಮಾಡುವುದಕ್ಕಿಂತಲೂ, ಹೆಚ್ಚಿನವರೂ ಕೇಳಿರುವ ಪದಗಳನ್ನು ಇಲ್ಲವೇ ಬೇರುಗಳನ್ನು ಅವು ಯಾವ ನುಡಿಯವಾಗಿದ್ದರೂ (ಎತ್ತುಗೆಗೆ ಇಂಗ್ಲೀಶಿನವಾಗಿದ್ದರೂ) ಎರವಲಾಗಿ ಪಡೆದು ಬಳಸಿಕೊಳ್ಳಬಹುದು.

ಇವತ್ತು ಕನ್ನಡ ಬರಹದಲ್ಲಿ ಕನ್ನಡಕ್ಕೆ ನಿಜಕ್ಕೂ ಬೇಡದಿರುವ ಹಲವು ಬರಿಗೆಗಳನ್ನು (ಅಕ್ಶರಗಳನ್ನು) ಬಳಸಲಾಗುತ್ತದೆ; ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿ ಇರುವ ಹಾಗೆಯೇ ಬರೆಯಬೇಕು (ಕೆಲವು ಅಪವಾದಗಳನ್ನು ಹೊರತುಪಡಿಸಿ) ಎಂಬ ಕಟ್ಟಲೆಯೊಂದನ್ನು ಉಳಿಸಿಕೊಳ್ಳುವುದಕ್ಕಾಗಿ ಹತ್ತು ಮಹಾಪ್ರಾಣ ಬರಿಗೆಗಳು, ಋಕಾರ, ಷಕಾರ, ಐ, ಔ, ಙ, ಞ, ವಿಸರ‍್ಗ ಎಂಬಂತಹ ಒಟ್ಟು ಹದಿನೇಳು ಹೆಚ್ಚಿನ ಬರಿಗೆಗಳನ್ನು ಕನ್ನಡ ಬರಹದಲ್ಲಿ ಬಳಸಲಾಗುತ್ತಿದೆ. (ಇದಲ್ಲದೆ ರಕಾರಕ್ಕೆ ಎಂಬ ಒಂದು ಹೆಚ್ಚಿನ ರೂಪವನ್ನೂ ಬಳಸಲಾಗುತ್ತಿದೆ.)

ಇವುಗಳಲ್ಲಿ ಹೆಚ್ಚಿನವೂ ಕನ್ನಡ ಬರಹದ ಓದಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಓದಿನಲ್ಲಿಲ್ಲದ ಬರಿಗೆಗಳನ್ನು ಬರಹದಲ್ಲಿ ಕಾಣಿಸುವುದು ತುಂಬಾ ತೊಡಕಿನ ಕೆಲಸ; ಎಶ್ಟು ತೊಡಕಿನ ಕೆಲಸವೆಂಬುದು ಇವತ್ತಿನ ಕನ್ನಡ ಬರಹಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗುತ್ತದೆ: ಅವುಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸಿಕೊಳ್ಳುವುದು ಮಹಾಪ್ರಾಣದಂತಹ ಈ ಹೆಚ್ಚಿನ ಬರಿಗೆಗಳನ್ನು ಬಳಸುವುದರಲ್ಲೇ ಆಗಿದೆ.

ಬರಹದ ಕನ್ನಡವನ್ನು ಎಲ್ಲಾ ಆಡುಗನ್ನಡಗಳಿಗೆ ಹತ್ತಿರ ತರಲು ಬೇಡದ ಈ ಹದಿನೇಳು ಬರಿಗೆಗಳನ್ನು ಬಿಟ್ಟುಬಿಡುವುದೇ ಒಳಿತು. ಹಾಗೆಯೇ ಇಂಗ್ಲಿಶ್, ಹಿಂದಿ, ಮರಾಟಿ, ಉರ‍್ದು, ಮೊದಲಾದ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳ ಹಾಗೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನೂ ಹೆಚ್ಚಿನ ಕನ್ನಡಿಗರೂ ಓದುವ ಹಾಗೆಯೇ ಬರೆಯುವುದು ಒಳಿತು. ಅವನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬೇಕೆಂಬ ಕಟ್ಟಳೆಯನ್ನು ಉಳಿಸಿಕೊಳ್ಳಬೇಕಾಗಿಲ್ಲ.

ಹಳೆಗನ್ನಡದ ಸಮಯದಲ್ಲಿ ಕನ್ನಡಿಗರಿಗೆ ಇಂತಹದೊಂದು ಸ್ವಾತಂತ್ರ್ಯವಿತ್ತು; ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಅವರು ಸಂಸ್ಕ್ರುತದಲ್ಲಿರುವ ಹಾಗೆಯೇ ಬೇಕಿದ್ದರೂ ಬರೆಯಬಲ್ಲವರಾಗಿದ್ದರು; ಇಲ್ಲವೇ ಕನ್ನಡದ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಅದರಲ್ಲಿ ಮಾರ‍್ಪಾಡುಗಳನ್ನು ಮಾಡಿಯೂ ಬಳಸಬಲ್ಲವರಾಗಿದ್ದರು.
ಬರಹದ ಕನ್ನಡವನ್ನು ಎಲ್ಲರಿಗೂ ಆದಶ್ಟು ಹತ್ತಿರವಾಗಿಸಲು ಈಗ ಕನ್ನಡಿಗರು ಮಾಡಬೇಕಿರುವ ಮಾರ‍್ಪಾಡು ಇದಕ್ಕಿಂತ ಬೇರಾದುದೇನಲ್ಲ. ಮಿತಿಯಿಲ್ಲದೆ ಸಂಸ್ಕ್ರುತದಿಂದ ಎರವಲಾಗಿ ಪಡೆಯುವುದನ್ನು ಕಡಿಮೆ ಮಾಡುವುದು, ಮತ್ತು ಸಂಸ್ಕ್ರುತ ಬಲ್ಲವರು ಮಾತ್ರವಲ್ಲದೆ ಎಲ್ಲರೂ ಬರಹ ಕನ್ನಡದಿಂದ ಪಡೆಯುವುದನ್ನು ಪಡೆಯುವುದಶ್ಟೇ ಅಲ್ಲದೆ, ಬರಹ ಕನ್ನಡದ ಮೂಲಕ ಕೊಡುವುದನ್ನು ಎಲ್ಲರೂ ಕೊಡುವಂತೆಯೂ ಮಾಡುವುದು ಕನ್ನಡದ ಏಳಿಗೆಗೆ ಇಂದು ಅನಿವಾರ‍್ಯವಾಗಿದೆ.

ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಹಲವು ಮಂದಿ ಕನ್ನಡಿಗರು ಬರವಣಿಗೆಯ ಪ್ರಪಂಚದಲ್ಲಿ ಆಟಕ್ಕಶ್ಟೇ ಅಲ್ಲ, ಲೆಕ್ಕಕ್ಕೆ ಬರುವಂತೆಯೂ ಪಾಲ್ಗೊಳ್ಳಲು ಆಗದಿರಲು ಹಲವು ಬಗೆಯ ತೊಡಕುಗಳು ಕಾರಣವಾಗಿವೆ. ಎತ್ತುಗೆಗಾಗಿ, ಕೆಳವರ‍್ಗದ ಜನರ ಬಡತನ ಮತ್ತು ಅರಿಯಮೆಗಳು ಅವರ ಮಕ್ಕಳನ್ನು ಶಾಲೆಗಳಿಂದ ದೂರ ಇರಿಸುತ್ತವೆ. ಹಲವರಾದ ಅವರ ಕನ್ನಡಕ್ಕಿಂತ ಕೆಲವರಾದ ತಮ್ಮ ಕನ್ನಡಕ್ಕೆ ಹತ್ತಿರವಿರುವಂತೆಯೇ ಬರಹದ ಕನ್ನಡವನ್ನು ಇಟ್ಟುಕೊಳ್ಳಲು ಮೇಲ್ವರ‍್ಗದವರು ಬಯಸುವುದು ಇದಕ್ಕೆ ಒತ್ತಾಸೆಯಾಗಿರುತ್ತದೆ. ಕೆಳವರ‍್ಗದವರನ್ನು ಅವರಿರುವಲ್ಲಿಯೇ ಇರಲು ಬಿಡುವುದು ಮೇಲ್ವರ‍್ಗದವರ ಮನದಾಳದ ಬಯಕೆಯಾಗಿರಲಿಕ್ಕಿಲ್ಲ; ಕನ್ನಡಿಗರ ನೆತ್ತರಿನಲ್ಲಿ ಇಂತಹ ನಂಜಿಲ್ಲ. ಆದರೂ ಅವರು ಇರುವಲ್ಲೇ ಇರುವಂತೆ ಮಾಡುತ್ತಿರುವ ಕೆಲವು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿಕೊಳ್ಳುವುದು ಹಿರಿಮೆಯಾದೀತು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter