Posts Tagged ‘ಬರಹಗನ್ನಡ’

ಬರಹಕ್ಕೆ ಮೇಲ್ಮೆ ಬಂದುದು ಹೇಗೆ?

ನುಡಿಯರಿಮೆಯ ಇಣುಕುನೋಟ – 14

ಮೊನ್ನೆ ಮೊನ್ನೆಯ ವರೆಗೂ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತರೆ ಸಾಕಿತ್ತು; ಉಳಿದವರೆಲ್ಲ ಅದರಿಂದ ದೂರವೇ ಉಳಿಯಬಹುದಿತ್ತು, ಮತ್ತು ಹೀಗೆ ಬರಹದಿಂದ ದೂರ ಉಳಿದುದರಿಂದಾಗಿ ಅವರಿಗೆ ಜೀವನದಲ್ಲಿ ಯಾವ ತೊಂದರೆಯೂ ಉಂಟಾಗುತ್ತಿರಲಿಲ್ಲ.

ಆದರೆ, ಇವತ್ತು ಎಲ್ಲಾ ಜನರೂ ಬರಹವನ್ನು ಕಲಿಯಬೇಕಾಗಿದೆ, ಮತ್ತು ಕಲಿತು ಬಳಸುತ್ತಿರಬೇಕಾಗಿದೆ. ಯಾಕೆಂದರೆ, ಹಾಗೆ ಮಾಡದವರಲ್ಲಿ ಹೆಚ್ಚಿನವರೂ ಇವತ್ತು ತಮ್ಮ ಜೀವನದಲ್ಲಿ ಸೋತುಹೋಗುತ್ತಿದ್ದಾರೆ. ಒಂದು ಸಮಾಜದ ಏಳಿಗೆಯಾಗಬೇಕಿದ್ದರೂ ಅದಕ್ಕೆ ಸೇರಿದ ಜನರೆಲ್ಲ ಬರಹವನ್ನು ಕಲಿಯುವುದು ಮತ್ತು ಬಳಸುವುದು ಇವತ್ತಿನ ಮಟ್ಟಿಗೆ ಅತ್ಯವಶ್ಯವಾಗಿದೆ.

ಇದುವರೆಗೂ ಇಲ್ಲದಿದ್ದ ಈ ಮೇಲ್ಮೆ ಬರಹಕ್ಕೆ ಬಂದುದು ಹೇಗೆ? ಮಿಲಿಯಗಟ್ಟಲೆ ವರ‍್ಶಗಳಿಂದಲೂ ಜನರ ನಡುವಿನ ಸಂಪರ‍್ಕಕ್ಕೆ ಕೊಂಡಿಯಾಗಿ, ಮತ್ತು ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ಬೇರೆಯವರಿಗೆ ತಿಳಿಸಲು ಬೇಕಾಗುವ ಒಯ್ಯುಗೆಯಾಗಿ ಮಾತನ್ನೇ ಬಳಸಲಾಗುತ್ತಿತ್ತು. ಆದರೆ, ಸುಮಾರು ನಾಲ್ಕಯ್ದು ಸಾವಿರ ವರ‍್ಶಗಳಶ್ಟು ಹಿಂದೆ, ಮಾತನ್ನು ಬರಹಕ್ಕಿಳಿಸುವ ಬಗೆಯನ್ನು ಕಂಡುಹಿಡಿಯಲಾಯಿತು. ಮೊದಲಿಗೆ ಇದನ್ನು ನೆನಪಿಗೆ ನೆರವಾಗುವಂತಹ ಕೆಲಸಗಳಲ್ಲಿ ತೊಡಗಿಸಲಾಯಿತು; ಆದರೆ ಆಮೇಲೆ, ದೂರ ಇರುವವರನ್ನು ಸಂಪರ‍್ಕಿಸುವುದಕ್ಕಾಗಿಯೂ ಇದನ್ನು ಬಳಸಲು ತೊಡಗಲಾಯಿತು.

ಹೀಗಿದ್ದರೂ, ಬರಹವೆಂಬುದು ಮೊನ್ನೆ ಮೊನ್ನೆಯ ವರೆಗೂ ಕೆಲವೇ ಕೆಲವು ಜನರ ಸೊತ್ತಾಗಿ ಮಾತ್ರ ಉಳಿದಿತ್ತು, ಮತ್ತು ಕೆಲವೇ ಕೆಲವು ನುಡಿಗಳನ್ನು ಆಡುವವರಲ್ಲಿ ಮಾತ್ರ ಅದು ಬಳಕೆಯಲ್ಲಿತ್ತು. ಸುಮಾರು ಮುನ್ನೂರು-ನಾನ್ನೂರು ವರ‍್ಶಗಳಶ್ಟು ಹಿಂದೆ ಬರಹಗಳನ್ನು ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ವಿಶಯದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿತು; ಅದರಲ್ಲೂ ಬರಹದಲ್ಲಿ ಬರುವ ಒಂದೊಂದು ಬರಿಗೆಗೂ ಒಂದೊಂದು ಮೊಳೆಯನ್ನು ಬಳಸಿ ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ಕ್ರಾಂತಿ ಇನ್ನಶ್ಟು ವೇಗವಾಗಿ ಹಲವಾರು ನುಡಿಗಳನ್ನು ಆವರಿಸುವ ಹಾಗೆ ಮಾಡಿತು.

ಈ ಕ್ರಾಂತಿ ನಡೆಯುವ ಮೊದಲು, ಬರಹಗಳನ್ನು ಕಯ್ಯಲ್ಲಿ ನಕಲುಮಾಡಬೇಕಾಗಿತ್ತು; ಇದು ತುಂಬಾ ತೊಡಕಿನ ಮತ್ತು ತುಂಬಾ ಸಮಯ ತಗಲುವ ಕೆಲಸವಾಗಿತ್ತು; ಕೆಲವು ಮಂದಿ ಮಾತ್ರ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು, ಮತ್ತು ಇದರಿಂದಾಗಿ, ಬರಹವನ್ನು ಬಳಸುವವರ ಎಣಿಕೆ ತುಂಬಾ ಕಡಿಮೆಯಾಗಿಯೇ ಉಳಿದಿತ್ತು.

ಆದರೆ, ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಮತ್ತು ಅದಕ್ಕಾಗಿ ತೊಗಲು, ತೊಗಟೆ ಮೊದಲಾದವುಗಳನ್ನು ಬಳಸುವ ಬದಲು ಕಾಗದವನ್ನು ಬಳಸಲು ತೊಡಗಿದುದರಿಂದಾಗಿ, ಅವನ್ನು ತುಂಬಾ ಕಡಿಮೆ ಬೆಲೆಗೆ ಉಂಟುಮಾಡಲು, ಮತ್ತು ತುಂಬಾ ಸುಲಬವಾಗಿ ಉಂಟುಮಾಡಲು ಸಾದ್ಯವಾಯಿತು. ಇದರಿಂದಾಗಿ, ಅವುಗಳ ಪ್ರತಿಗಳನ್ನು ಒಮ್ಮೆಗೇನೇ ಸಾವಿರಾರು ಜನರಿಗೆ ತಲುಪಿಸಲು ಸಾದ್ಯವಾಯಿತು. ಇದಲ್ಲದೆ, ಅವನ್ನು ಬಳಸುವ ಕೆಲಸವೂ ತುಂಬಾ ಸುಲಬವಾಯಿತು.

ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಬರಹಗಳಲ್ಲಿ ಬಳಕೆಯಾಗುವ ಬರಿಗೆ(ಅಕ್ಶರ)ಗಳು, ಪದಗಳು, ಸೊಲ್ಲುಗಳು ಮೊದಲಾದುವೆಲ್ಲ ಎಲ್ಲಾ ಕಡೆಗಳಲ್ಲೂ ಹೆಚ್ಚುಕಡಿಮೆ ಒಂದೇ ರೂಪದಲ್ಲಿ ಉಳಿಯುವಂತಾಯಿತು, ಮತ್ತು ಇದರಿಂದಾಗಿ, ನಾಡಿನ ಒಂದು ಮೂಲೆಯಲ್ಲಿ ಉಂಟುಮಾಡಿದ ಬರಹವನ್ನು ಎಲ್ಲಾ ಕಡೆಗಳಲ್ಲಿರುವ ಜನರೂ ಸುಲಬವಾಗಿ ಓದಿ ತಿಳಿದುಕೊಳ್ಳುವಂತೆ ಮಾಡಲು ಸಾದ್ಯವಾಯಿತು.

ಹಿಂದಿನ ಕಾಲದಲ್ಲಿ ಬರಹಗಳನ್ನು ಯಾರಾದರೂ ಒಬ್ಬರು ದೊಡ್ಡದಾಗಿ ಓದುತ್ತಿದ್ದರು, ಮತ್ತು ಉಳಿದವರು ಅವರ ಸುತ್ತಲೂ ಕುಳಿತು ಅದನ್ನು ಕೇಳುತ್ತಿದ್ದರು; ಎಲ್ಲರಿಗೂ ತಮ್ಮವೇ ಆದ ಬರಹಗಳ ಪ್ರತಿಗಳು ದೊರೆಯತೊಡಗಿದ ಮೇಲೆ, ಅವನ್ನು ಗಟ್ಟಿಯಾಗಿ ಓದುವ ಬದಲು ಮನಸ್ಸಿನಲ್ಲೇನೇ ಓದುವ ಬಗೆ ಬಳಕೆಗೆ ಬಂತು. ಇದಕ್ಕನುಗುಣವಾಗಿ, ಬರಹಗಳ ಬಗೆಗಳಲ್ಲೂ ಹಲವು ಮಾರ‍್ಪಾಡುಗಳು ನಡೆದುವು.

ದಿನಪತ್ರಿಕೆ, ವಾರಪತ್ರಿಕೆ ಮೊದಲಾದುವನ್ನು ಅಚ್ಚುಹಾಕಿಸಿ, ಅವು ಒಮ್ಮೆಗೇನೇ ಲಕ್ಶಾಂತರ ಜನರನ್ನು ತಲಪುವ ಹಾಗೆ ಮಾಡಲಾಯಿತು, ಮತ್ತು ಬರಹವನ್ನು ಕಲಿಯುವವರಿಗೆಲ್ಲ ಅವರದೇ ಆದ ಕಲಿಕೆಯ ಪುಸ್ತಕಗಳು ಸಿಗುವಂತೆ ಮಾಡಲಾಯಿತು. ಬರಹದ ಬಳಕೆಯಲ್ಲಿ ಮತ್ತು ಕಲಿಕೆಯಲ್ಲಿ ಇಂತಹ ಹಲವಾರು ಮಾರ‍್ಪಾಡುಗಳು ಅವನ್ನು ಕಾಗದದಲ್ಲಿ ಅಚ್ಚುಹಾಕಲು ತೊಡಗಿದ ಮೇಲೆ ನಡೆದುಹೋಗಿವೆ. ಹಲವಾರು ಒಳನುಡಿಗಳನ್ನಾಡುವ ಜನರ ನಡುವೆ ಒಂದೇ ಬಗೆಯ ಬರಹದ ನುಡಿ ಬಳಕೆಗೆ ಬಂದಿರುವುದಕ್ಕೂ ಈ ರೀತಿ ಬರಹಗಳನ್ನು ಅಚ್ಚುಹಾಕಲು ತೊಡಗಿದುದೇ ಕಾರಣವಾಗಿದೆ.

ಬರಹಕ್ಕೆ ಈ ರೀತಿ ಹೆಚ್ಚು ಹೆಚ್ಚು ಮೇಲ್ಮೆ ಸಿಗುತ್ತಿದ್ದಂತೆ, ಜನರ ನಡವಳಿಕೆಗಳಲ್ಲೂ ಹಲವು ಬಗೆಯ ಮಾರ‍್ಪಾಡುಗಳು ಉಂಟಾಗತೊಡಗಿದುವು: ಜನರು ತಿಳಿವನ್ನು ಕೂಡಿಡುವ ಬಗೆ ಬೇರಾಯಿತು; ಮೊದಲಿಗೆ ಎಲ್ಲವನ್ನೂ ನೆನಪಿನಲ್ಲಿಯೇ ಉಳಿಸಿಕೊಳ್ಳಬೇಕಾಗಿತ್ತು; ಆದರೆ ಬರಹ ಹೆಚ್ಚು ಹೆಚ್ಚು ಬಳಕೆಗೆ ಬಂದಂತೆ, ತಿಳಿವನ್ನು ಹಲವು ಬಗೆಯ ಬರಹಗಳಲ್ಲಿ ಮತ್ತು ಪುಸ್ತಕಗಳಲ್ಲಿ ಕೂಡಿಡಲಾಯಿತು.

ಗಾದೆಗಳು, ಹಾಡುಗಳು, ಸೂತ್ರಗಳು, ನೀತಿಕತೆಗಳು ಮೊದಲಾದುವೆಲ್ಲ ತಿಳಿವನ್ನು ನೆನಪಿನಲ್ಲಿ ಕೂಡಿಡಲು ಬೇಕಾಗುವಂತಹ ಬಗೆಗಳು; ಬರಹಗಳಲ್ಲಿ ಕೂಡಿಡುವುದಕ್ಕೆ ಇಂತಹ ನೆನಪಿಸಲು ನೆರವಾಗುವ ಬಗೆಗಳು ಬೇಕಾಗುವುದಿಲ್ಲ. ಇದಕ್ಕೆ ಬದಲು, ಪುಸ್ತಕಗಳಲ್ಲಿ ಕಾಣಿಸುವಂತಹ ತಲೆಬರಹಗಳು, ಪಸುಗೆಗಳು, ದಪ್ಪಬರಿಗೆ, ತೆಳುಬರಿಗೆ ಮೊದಲಾದ ಬರಿಗೆರೂಪಗಳು, ಪಟ್ಟಿಗಳು, ಸುಟ್ಟಗೆಗಳು ಮೊದಲಾದ ಓದುವಲ್ಲಿ ನೆರವಾಗುವ ಬೇರೆಯೇ ಹಲವು ಬಗೆಗಳನ್ನು ಬಳಕೆಗೆ ತರಬೇಕಾಯಿತು.

ತಿಳಿವನ್ನು ಕೂಡಿಡುವ ಬಗೆಯಲ್ಲಿ ಮಾರ‍್ಪಾಡಾದುದರಿಂದಾಗಿ, ತಿಳಿವಿಗೂ ವಯಸ್ಸಿಗೂ ನಡುವಿದ್ದ ಸಂಬಂದ ಇಲ್ಲವಾಯಿತು; ಯಾವ ವಿಶಯದಲ್ಲಿ ಬೇಕಿದ್ದರೂ ಪುಸ್ತಕಗಳನ್ನು ಓದುವ ಮೂಲಕ, ದೊಡ್ಡವರಿಗಿಂತ ಹೆಚ್ಚು ತಿಳಿವನ್ನು ಚಿಕ್ಕವರು ಪಡೆಯಬಲ್ಲವರಾದರು. ಇದಲ್ಲದೆ, ಎಶ್ಟು ತಿಳಿವನ್ನು ಮತ್ತು ಎಶ್ಟು ಬಗೆಯ ತಿಳಿವನ್ನು ಪುಸ್ತಕಗಳಲ್ಲಿ ಕೂಡಿಡಬಲ್ಲೆವು ಎಂಬುದಕ್ಕೆ ಒಂದು ಮಿತಿಯೇ ಇಲ್ಲದಿರುವ ಹಾಗಾಯಿತು. ಹೊಸ ಹೊಸ ತಿಳಿವುಗಳನ್ನು ಪಡೆಯುತ್ತಿರುವಾಗಲೂ ಹಳೆಯವನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳಲು ಸಾದ್ಯವಾಯಿತು.

ತಿಳಿವನ್ನು ಬರಹರೂಪದಲ್ಲಿ ಉಳಿಸಿಕೊಳ್ಳಲು ತೊಡಗಿದುದರಿಂದಾಗಿ ಜನರು ಅದನ್ನೊಂದು ವಸ್ತುವಿನ ಹಾಗೆ ಕಾಣಲು ತೊಡಗಿದರು, ಮತ್ತು ಅದನ್ನು ಕಂಡುಹಿಡಿದವರು ಅದರ ಮೇಲೆ ತಮ್ಮ ಒಡೆತನವನ್ನು ಹೇರಲು ತೊಡಗಿದರು. ತಾವು ಕಂಡುಹಿಡಿದ ತಿಳಿವನ್ನು ಒಂದು ಪುಸ್ತಕದ ರೂಪದಲ್ಲಿ ಅಚ್ಚುಹಾಕಿಸಿ, ಅದನ್ನು ಸಾವಿರಾರು ಜನರಿಗೆ ತಲಪಿಸುವ ಮೂಲಕ, ಕೆಲವರು ಸಾಕಶ್ಟು ಹಣವನ್ನೂ ಕಲೆಹಾಕಿದರು.

ತಿಳಿವು ಎಂಬುದು ಬರಹವನ್ನು ಬಳಸಲು ತಿಳಿಯದವರಲ್ಲಿ ಅವರು ಮಾಡುವ ಕೆಲಸದ ಅಂಗವಾಗಿರುತ್ತದೆ; ಕೆಲಸ ಮಾಡಿದ ಅನುಬವವೇ ಅವರಲ್ಲಿ ತಿಳಿವಿನ ರೂಪದಲ್ಲಿರುತ್ತದೆ; ಅದನ್ನು ಅವರು ಆ ಕೆಲಸದಿಂದ ಬೇರ‍್ಪಡಿಸಿ ಪರಿಶೀಲಿಸಲಾರರು; ಅದರ ಕುರಿತಾಗಿ ಅವರು ಆಡಬಲ್ಲ ಮಾತುಗಳೂ ಅದನ್ನು ಬಳಸಿ ನಡೆಸಬಲ್ಲ ಕೆಲಸದೊಂದಿಗೆ ಹೆಣೆದುಕೊಂಡಿರುತ್ತವೆ.

ಇದಕ್ಕೆ ಬದಲು, ಕಾಗದದಲ್ಲಿ ಬರೆದ ಇಲ್ಲವೇ ಅಚ್ಚುಹಾಕಿದ ತಿಳಿವು ಅದನ್ನು ಬಳಸಿ ನಡೆಸುವ ಕೆಲಸಕ್ಕಿಂತ ಬೇರಾಗಿ ಉಳಿಯುತ್ತದೆ; ಅದನ್ನು ತಿರುತಿರುಗಿ ಓದಿ, ಆ ತಿಳಿವು ಸರಿಯೋ ತಪ್ಪೋ ಎಂದು ವಿಮರ‍್ಶಿಸಲು ಬರುತ್ತದೆ. ಹಾಗಾಗಿ, ಬರಹವನ್ನು ಬಳಸುವವರಿಗೂ ಅವನ್ನು ಬಳಸದವರಿಗೂ ನಡುವೆ ಅವರು ಆಲೋಚಿಸುವ ಬಗೆಯಲ್ಲೇ ಹಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.

ನಿಜಕ್ಕೂ ಬರಹ ಬಾರದವರು ಬರಹ ಬಲ್ಲವರಿಗಿಂತ ಜಾಣ್ಮೆಯಲ್ಲಾಗಲಿ, ಬುದ್ದಿವಂತಿಕೆಯಲ್ಲಾಗಲಿ ಕಡಿಮೆಯೇನಲ್ಲ; ಬರಹ ಬಲ್ಲವರಶ್ಟೇ ಜಾಣ್ಮೆಯಿಂದ ಮತ್ತು ಅವರಶ್ಟೇ ಚನ್ನಾಗಿ ಬರಹ ಬಾರದವರೂ ತಮ್ಮ ಜೀವನವನ್ನು ನಡೆಸಬಲ್ಲರು. ಆದರೆ, ಈ ಎರಡು ಬಗೆಯ ಜನರೂ ಒಂದೇ ನಾಡಿನಲ್ಲಿ ನೆಲೆಸಿದ್ದು, ಆ ನಾಡಿನ ಆಡಳಿತವನ್ನು ನಡೆಸುವ ಮತ್ತು ಅದರ ಕುರಿತಾಗಿ ತೀರ‍್ಮಾನಗಳನ್ನು ಕಯ್ಗೊಳ್ಳುವ ಮಂದಿಯೆಲ್ಲ ಬರಹಬಲ್ಲವರಾಗಿದ್ದಲ್ಲಿ, ಆ ನಾಡಿನಲ್ಲಿರುವ ಬರಹ ಬಾರದ ಜನರಲ್ಲಿ ಹೆಚ್ಚಿನವರೂ ತಮ್ಮ ಜೀವನದಲ್ಲಿ ಸೋತುಹೋಗುತ್ತಲೇ ಇರಬೇಕಾಗುತ್ತದೆ.

ಅದರಲ್ಲೂ ನಮ್ಮ ನಾಡಿನಲ್ಲಿರುವ ಹಾಗೆ ಆಡಳಿತವು ಮಂದಿಯಾಳ್ವಿಕೆಯದಾಗಿದ್ದಲ್ಲಿ, ಎಲ್ಲಾ ಮಂದಿಯೂ ಅದರಲ್ಲಿ ಸರಿಯಾಗಿ ತಮ್ಮ ಹೊಣೆಯನ್ನರಿತು ಪಾಲ್ಗೊಳ್ಳಬೇಕಾಗುತ್ತದೆ; ಹಾಗಾಗಿ, ಒಂದು ನಾಡಿನ ಮಂದಿಯಾಳ್ವಿಕೆ (ಪ್ರಜಾಪ್ರಬುತ್ವ) ಚನ್ನಾಗಿ ನಡೆಯಬೇಕಿದ್ದಲ್ಲಿ, ಎಲ್ಲರಿಗೂ ಬರಹದ ತಿಳಿವಿರುವುದು ಅತ್ಯವಶ್ಯ. ಇಲ್ಲವಾದರೆ, ಆ ನಾಡಿನಲ್ಲಿರುವ ಬರಹ ಬಾರದವರು ತಮ್ಮ ಏಳಿಗೆಗೆ ಮಾತ್ರವಲ್ಲದೆ ಇಡೀ ನಾಡಿನ ಏಳಿಗೆಗೂ ತೊಡಕಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಯಾವುದು ಕನ್ನಡದ ಸೊಗಡು?

ನುಡಿಯರಿಮೆಯ ಇಣುಕುನೋಟ – 5

ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ, ನಿಜಕ್ಕೂ ಈ ಮಾರ‍್ಪಾಡು ಕನ್ನಡದ ಸೊಗಡನ್ನು ಉಳಿಸುತ್ತದೆಯಲ್ಲದೆ ಅಳಿಸುವುದಿಲ್ಲ.

ಕನ್ನಡ ಕಾವ್ಯಗಳಲ್ಲಿ ತುಂಬಾ ಸಂಸ್ಕ್ರುತ (ತತ್ಸಮ) ಪದಗಳನ್ನು ಬಳಸಿದೆವಾದರೆ ಅವು ಕಕ್ಕಸ(ಕರ‍್ಕಶ)ವಾಗುತ್ತವೆಯೆಂದು ಕವಿರಾಜಮಾರ‍್ಗದಲ್ಲಿ ಹೇಳಲಾಗಿದೆ; ಆ ರೀತಿ ಕಕ್ಕಸವಾಗದಂತೆ ತನ್ನ ಕಾವ್ಯಗಳಲ್ಲಿ ತದ್ಬವ ಪದಗಳನ್ನು ಮಾತ್ರವೇ ಬಳಸಿರುವ ಆಂಡಯ್ಯನಿಗೆ ‘ಕನ್ನಡದ ಕಾವ’ ಎಂದರೆ, ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಕಾಪಾಡಿದವನು ಎಂಬ ಬಿರುದನ್ನು ಕೊಡಲಾಗಿದೆ. ತತ್ಸಮ ಪದಗಳನ್ನು ಬಳಸದುದರಿಂದಾಗಿ ಆತನು ಕನ್ನಡದ ಸೊಗಡನ್ನು ಕಳೆದಿದ್ದಾನೆಂದು ಯಾರೂ ಆತನನ್ನು ದೂರಿಲ್ಲ.

ಸಂಸ್ಕ್ರುತ ಎರವಲುಗಳನ್ನು ಕನ್ನಡಿಗರು ಹೇಗೆ ಓದುತ್ತಾರೋ ಹಾಗೆಯೇ ಬರೆಯೋಣ ಎನ್ನುವುದೂ ಇದೇ ರೀತಿಯಲ್ಲಿ ಕನ್ನಡದ ಸೊಗಡನ್ನು ಉಳಿಸುವ ಪ್ರಯತ್ನವಲ್ಲದೆ ಅಳಿಸುವ ಪ್ರಯತ್ನವಲ್ಲ. ಯಾಕೆಂದರೆ, ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆದಲ್ಲಿ, ಅವು ತದ್ಬವ ಪದಗಳ ಹಾಗೆ ಕನ್ನಡದ ಸೊಗಡನ್ನು ಕಾಪಾಡುತ್ತವೆ.

ಸಂಸ್ಕ್ರುತ ಎರವಲುಗಳನ್ನು ತದ್ಬವರೂಪದಲ್ಲಿ ಬರೆಯುವಾಗ, ಅವುಗಳಲ್ಲಿರುವ ಶ-ಷಗಳ ನಡುವಿನ ವ್ಯತ್ಯಾಸ, ರು-ಋಗಳ ನಡುವಿನ ವ್ಯತ್ಯಾಸ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸಗಳು ಇಲ್ಲವಾಗುತ್ತವೆ; ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಓದುವ ಹಾಗೆ ಬರೆಯುವಾಗಲೂ ಇಂತಹವೇ ವ್ಯತ್ಯಾಸಗಳು ಇಲ್ಲವಾಗುತ್ತವೆ. ಹಾಗಾಗಿ, ತದ್ಬವ ಪದಗಳ ಬಳಕೆಯಿಂದ ಹೇಗೆ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲವೋ ಹಾಗೆಯೇ ಸಂಸ್ಕ್ರುತ ಎರವಲುಗಳನ್ನು ಓದುವ ಹಾಗೆ ಬರೆಯುವುದರಿಂದಲೂ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲ.

ಹೆಚ್ಚಿನ ಕನ್ನಡಿಗರೂ ಮಹಾಪ್ರಾಣ, ಷಕಾರ, ಋಕಾರ ಮೊದಲಾದುವನ್ನು ಮಾತನಾಡುವಾಗ ಇಲ್ಲವೇ ಓದುವಾಗ ಬಳಸುವುದಿಲ್ಲ ಎಂಬುದಾಗಿ ನಾನು ಹೇಳಿರುವುದು ಬರಿಯ ಊಹೆಯ ಮೇಲಲ್ಲ. ಅದಕ್ಕೆ ಸಾಕಶ್ಟು ಅರಕೆಯ ಆದಾರವಿದೆ: ಸುಮಾರು ಒಂದೂವರೆ ತಿಂಗಳು ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳ ಜನರ ಮಾತನ್ನು ಗಮನಿಸಿದ್ದೇನೆ. ಆಮೇಲೆ, ಅಂತಹದೇ ಅರಕೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ‍್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ.

ಇದಲ್ಲದೆ, ಹಲವು ಮಂದಿ ಸಂಸ್ಕ್ರುತ ಪಂಡಿತರ ಕನ್ನಡ ಮಾತನ್ನೂ ನಾನು ಗಮನಿಸಿದ್ದೇನೆ. ಬರಿಯ ಪದಗಳನ್ನು ಉಲಿದು ತೋರಿಸುವಾಗ ಅವರು ಈ ವ್ಯತ್ಯಾಸಗಳನ್ನು ಹೆಚ್ಚುಕಡಿಮೆ ಸರಿಯಾಗಿಯೇ ಉಳಿಸಿಕೊಳ್ಳುತ್ತಾರೆ; ಆದರೆ, ಅವನ್ನೇ ಮಾತಿನಲ್ಲಿ ಬಳಸುವಾಗ ಈ ಎಲ್ಲಾ ವ್ಯತ್ಯಾಸಗಳೂ ಇಲ್ಲವಾಗುತ್ತವೆ.

ನಿಜಕ್ಕೂ ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಈ ವ್ಯತ್ಯಾಸ ಕೇಳಿಸುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ಅಸ್ವಾಬಾವಿಕವೆಂದು ಅನಿಸುತ್ತದೆ.

ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿಲ್ಲದ ಈ ಸಂಸ್ಕ್ರುತ ಪದಗಳ ವ್ಯತ್ಯಾಸವನ್ನು ಕನ್ನಡ ಬರಹದಲ್ಲಿ ಸುಮಾರು ಒಂದೂವರೆ ಸಾವಿರ ವರ‍್ಶಗಳಿಂದಲೂ ಉಳಿಸಿಕೊಂಡು ಬರಲಾಗಿದೆ. ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹವನ್ನು ಮೇಲ್ವರ‍್ಗದ ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರಾದ ಕಾರಣ, ಇದು ಅಂತಹ ತೊಡಕಿನ ಸಂಗತಿಯೆಂದು ಯಾರಿಗೂ ಅನಿಸಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರೂ ಕನ್ನಡ ಬರಹವನ್ನು ಕಲಿತು ಬಳಸಲು ತೊಡಗಬೇಕಾಗಿದೆ; ಯಾಕೆಂದರೆ, ಬರಹವನ್ನು ಬಳಸಲಾರದವರು ತಮ್ಮ ಜೀವನದಲ್ಲಿ ಒಂದು ಅತ್ಯಮೂಲ್ಯವಾದ ಸಾದನದಿಂದ ವಂಚಿತರಾಗುತ್ತಾರೆ. ಒಂದು ನಾಡಿನಲ್ಲಿ ಅಂತಹ ಜನ ಹೆಚ್ಚು ಇದ್ದಶ್ಟೂ ಆ ನಾಡು ಹಿಂದೆಯೇ ಉಳಿದಿರುತ್ತದೆ. ಇವತ್ತು ಬರಹಕ್ಕೆ ಅಂತಹ ಪ್ರಾಮುಕ್ಯತೆ ಬಂದಿದೆ.

ಹಾಗಾಗಿ, ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಒಂದು ದೊಡ್ಡ ತೊಡಕಾಗಿರುವ ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡುವುದೇ ಇವತ್ತು ನಮ್ಮ ಮುಂದಿರುವ ಸರಿಯಾದ ದಾರಿ. ಹಾಗೆ ಮಾಡುವುದರಿಂದ ಕನ್ನಡ ಬರಹದ ಸೊಗಡು ಇಲ್ಲವೇ ಸಂಸ್ಕ್ರುತಿ ಉಳಿಯುತ್ತದೆಯಲ್ಲದೆ ಅಳಿಯುವುದಿಲ್ಲ; ಅದರ ಮೇಲೆ ಹೊರಿಸಲಾಗಿರುವ ಬೇರೊಂದು ಸಂಸ್ಕ್ರುತಿಯ ಹೊರೆ ಮಾತ್ರ ಇಲ್ಲವಾಗುತ್ತದೆ.

ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಮದ್ಯ-ಮಧ್ಯ, ದನ-ಧನ ಎಂಬಂತಹ ಹಲವು ಪದಗಳ ನಡುವಿನ ವ್ಯತ್ಯಾಸ ಇಲ್ಲವಾಗಿ, ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ; ಆದರೆ, ಈ ವಾದದಲ್ಲಿ ನಿಜಕ್ಕೂ ತಿರುಳಿಲ್ಲ. ಯಾಕೆಂದರೆ, ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿ, ಮೇಲೆ ವಿವರಿಸಿದ ಹಾಗೆ, ಈ ವ್ಯತ್ಯಾಸ ಹೇಗಿದ್ದರೂ ಇಲ್ಲ, ಮತ್ತು ಇದರಿಂದಾಗಿ ಯಾವ ಗೊಂದಲವೂ ಆಗುತ್ತಾ ಇಲ್ಲ.

ಇದಲ್ಲದೆ, ಯಾವುದೇ ಒಂದು ನುಡಿಯ ಪದನೆರಕೆಯನ್ನು ಬಿಡಿಸಿ ನೋಡಿದರೂ ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳಿರುವ ನೂರಾರು ಪದಗಳು ಕಾಣಲು ಸಿಗುತ್ತವೆ. ಸಂಸ್ಕ್ರುತದಲ್ಲಂತೂ ಇದು ಇನ್ನೂ ಹೆಚ್ಚು; ಅದರ ಹೆಚ್ಚಿನ ಪದಗಳಿಗೂ ಅಯ್ದು ಇಲ್ಲವೇ ಹೆಚ್ಚು ಹುರುಳುಗಳಿವೆಯೆಂದು ಹೇಳಲಾಗುತ್ತದೆ.

ಸಂಸ್ಕ್ರುತದ ಅರ್ಥ ಪದಕ್ಕೆ ‘ಹುರುಳು’ ಮತ್ತು ‘ಹಣ’ ಎಂಬವುಗಳು ಮಾತ್ರವಲ್ಲದೆ, ‘ಉದ್ದೇಶ’, ‘ಕಾರಣ’, ‘ವಸ್ತು’ ಮೊದಲಾದ ಬೇರೆಯೂ ಹಲವು ಹುರುಳುಗಳಿವೆ; ವಿಷ ಪದಕ್ಕೆ ‘ನಂಜು’ ಎಂಬ ಹುರುಳು ಮಾತ್ರವಲ್ಲದೆ, ‘ನೀರು’ ಮತ್ತು ‘ಸೇವಕ’ ಎಂಬ ಹುರುಳುಗಳೂ ಇವೆ (ಮೋನಿಯರ್ ವಿಲ್ಲಿಯಂಸ್ ಅವರ ಸಂಸ್ಕ್ರುತ-ಇಂಗ್ಲಿಶ್ ಡಿಕ್ಶ್‌ನರಿ ನೋಡಿ). ಆದರೆ, ಈ ರೀತಿ ಒಂದೇ ಪದಕ್ಕೆ ಹಲವು ಹುರುಳುಗಳಿರುವುದನ್ನು ಯಾರೂ ಸಂಸ್ಕ್ರುತದ ಕೊರತೆಯೆಂದು ಹೇಳುವುದಿಲ್ಲ; ಅದಕ್ಕೆ ಬದಲಾಗಿ, ಅದು ಸಂಸ್ಕ್ರುತದ ಶ್ರೀಮಂತಿಕೆಯೆಂದು ಹೇಳುತ್ತಾರೆ.

ಸಾಮಾನ್ಯವಾಗಿ ಪದಗಳನ್ನು ಬಳಸಿರುವ ಸಂದರ‍್ಬವೇ ಅವುಗಳನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಸುತ್ತದೆ; ‘ಹುಡುಗ ಮಾರ‍್ಗದ ಮದ್ಯದಲ್ಲಿ ನಿಂತಿದ್ದಾನೆ’ ಎಂದು ಬರೆದರೆ, ಅದರಲ್ಲಿ ಮದ್ಯದಲ್ಲಿ ಎಂಬುದನ್ನು ‘ನಡುವೆ’ ಎಂಬ ಹುರುಳಿನಲ್ಲಿ ಬಳಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ; ಇಲ್ಲಿ ಮದ್ಯ ಎಂಬುದಕ್ಕೆ ‘ಸಾರಾಯಿ’ ಎಂಬ ಹುರುಳಿರಬಹುದೆಂದು ಯಾರಿಗೂ ಅನಿಸುವುದಿಲ್ಲ. ಇದನ್ನು ಮಧ್ಯದಲ್ಲಿ ಎಂಬುದಾಗಿ ನೋಡಿ ಬಳಕೆಯಾದವರಿಗೆ ಮಾತ್ರ ಇದು ತಪ್ಪೆಂದು ಅನಿಸುತ್ತದೆ, ಅಶ್ಟೆ. ಹುರುಳಿನ ಗೊಂದಲವೇನೂ ಉಂಟಾಗುವುದಿಲ್ಲ.

ಎರಡು ಹುರುಳುಗಳಿರುವ ಪದಗಳನ್ನು ಅವುಗಳ ಎರಡು ಹುರುಳೂ ಒಟ್ಟಿಗೆ ಬರುವ ಹಾಗೆ ಬರೆಯುವುದು ಕವಿಗಳು, ಮತ್ತು ಬೇಕೆಂದೇ ತಮ್ಮ ಓದುಗರನ್ನು ಗೊಂದಲದಲ್ಲಿ ಸಿಲುಕಿಸಲು ಬಯಸುವವರು ಮಾತ್ರ. ಬಾಕಿ ಉಳಿದವರೆಲ್ಲ ಓದುಗರ ಗಮನಕ್ಕೆ ತಮ್ಮ ಮನಸ್ಸಿನಲ್ಲಿರುವ ಒಂದು ಹುರುಳು ಮಾತ್ರ ಬರುವ ಹಾಗೆ ಬರೆಯುತ್ತಾರೆ; ಈ ವಿಶಯದಲ್ಲಿ ಗೊಂದಲವೇನಾದರೂ ಉಂಟಾಗಬಹುದೆಂಬ ಸಂಶಯ ಅವರಿಗೆ ಇದೆಯಾದಲ್ಲಿ, ಅವರು ಬೇರೆಯೇ ಪದವನ್ನು ಬಳಸುತ್ತಾರೆ, ಇಲ್ಲವೇ ಗೊಂದಲವಾಗದಂತೆ ಸೊಲ್ಲನ್ನು ಮಾರ‍್ಪಡಿಸಿ ಬರೆಯುತ್ತಾರೆ.

ಇದಲ್ಲದೆ, ಸಾಮಾನ್ಯವಾಗಿ ಅಂತಹ ಪದಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಸಂದರ‍್ಬಕ್ಕೆ ಹೊಂದಿಕೆಯಾಗುವಂತಹ ಒಂದು ಹುರುಳು ಮಾತ್ರ ಓದುಗರ ಗಮನಕ್ಕೆ ಬರುತ್ತದೆ. ಅವಕ್ಕೆ ಇನ್ನೊಂದು ಹುರುಳೂ ಇದೆಯೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಕೆಲವೊಮ್ಮೆ ಈ ವಿಶಯವನ್ನು ಅವರ ಗಮನಕ್ಕೆ ತರಬೇಕಿದ್ದಲ್ಲಿ, ಆ ಪದಗಳನ್ನು ಅವುಗಳ ಇನ್ನೊಂದು ಹುರುಳಿಗೆ ಹೊಂದಿಕೆಯಾಗುವಂತಹ ಬೇರೊಂದು ಸೊಲ್ಲಿನಲ್ಲಿ ಬಳಸಿ ತೋರಿಸಬೇಕಾಗುತ್ತದೆ.

ಮಹಾಪ್ರಾಣ, ಷಕಾರ, ಋಕಾರ ಮೊದಲಾದವುಗಳನ್ನು ಬಳಸದಿದ್ದರೆ ಹುರುಳಿನ ಮಟ್ಟಿಗೆ ಯಾವ ಗೊಂದಲವೂ ಉಂಟಾಗುವುದಿಲ್ಲ ಎಂಬ ಈ ಮಾತನ್ನು ಬೆಂಬಲಿಸುವ ಇನ್ನೊಂದು ವಿಶಯವೇನೆಂದರೆ, 2006 ರ ಬಳಿಕ ನಾನು ಬರೆದ ಎಲ್ಲಾ ಒಂಬತ್ತು ಪುಸ್ತಕಗಳಲ್ಲೂ (ಒಟ್ಟು 2600 ಪುಟಗಳು) ಈ ಬರಿಗೆಗಳನ್ನು ಬಳಸಿಲ್ಲ; ಹಾಗಿದ್ದರೂ, ಇದುವರೆಗೆ ಅವನ್ನು ಓದಿದವರಲ್ಲಿ ಯಾರೊಬ್ಬರೂ ಅದರಿಂದಾಗಿ ವಿಶಯವನ್ನು ತಿಳಿದುಕೊಳ್ಳುವಲ್ಲಿ ತಮಗೆ ತೊಂದರೆಯಾಗಿದೆಯೆಂದು ಹೇಳಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter