Posts Tagged ‘ಬರಹ’

ಕನ್ನಡ ಬರಹಗಳಲ್ಲಿ ‘ಕರಣ’ದ ಹಾವಳಿ

ನುಡಿಯರಿಮೆಯ ಇಣುಕುನೋಟ – 32

ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತದ ‘ಕರಣ’ ಎಂಬ ಪದದ ಬಳಕೆ ತುಂಬಾ ಹೆಚ್ಚಾಗುತ್ತಿದೆ; ಅದನ್ನು ಬಳಸುವವರು ನಿಜಕ್ಕೂ ಅದು ಬೇಕೇ ಇಲ್ಲವೇ ಬೇಡವೇ ಎಂಬುದನ್ನು ಗಮನಿಸುವುದೇ ಇಲ್ಲ. ಹಲವೆಡೆಗಳಲ್ಲಿ ಅದಕ್ಕೆ ಬದಲು ಕನ್ನಡದ್ದೇ ಆದ ‘ಇಸು’ ಒಟ್ಟನ್ನು ಬಳಸುವುದೇ ಕನ್ನಡದ ಮಟ್ಟಿಗೆ ಒಳ್ಳೆಯದು. ಯಾಕೆಂದರೆ, ‘ಕರಣ’ ಪದದ ಬಳಕೆಯಿಂದಾಗಿ ಮೂಡುವ ಹಲವು ಬಗೆಯ ಗೊಂದಲಗಳು ‘ಇಸು’ ಒಟ್ಟಿನ ಬಳಕೆಯಲ್ಲಿ ಕಾಣಿಸುವುದಿಲ್ಲ. ಇದಲ್ಲದೆ, ಕನ್ನಡದ್ದೇ ಆದ ‘ಇಸು’ ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುತ್ತವೆ; ಹಾಗಾಗಿ, ‘ಕರಣ’ ಪದದ ಬಳಕೆಯ ಹಾಗೆ ಹೊಸ ಕಟ್ಟಲೆಗಳನ್ನು ಅವರು ಕಲಿಯಬೇಕಾಗುವುದಿಲ್ಲ.

ಸಂಸ್ಕ್ರುತದ ಎರವಲುಗಳೊಂದಿಗೆ ಮಾತ್ರವಲ್ಲದೆ ಇಂಗ್ಲಿಶ್, ಪರ್ಶಿಯನ್ ಮೊದಲಾದ ಬೇರೆ ಎರವಲು ಪದಗಳೊಂದಿಗೆ, ಮತ್ತು ಕನ್ನಡದವೇ ಆದ ಪದಗಳೊಂದಿಗೂ ಈ ‘ಕರಣ’ ಎಂಬುದನ್ನು ಬಳಸಲಾಗುತ್ತದೆ; ಸಬಲೀಕರಣ, ಉದಾರೀಕರಣ, ಪ್ರಮಾಣೀಕರಣ ಎಂಬ ಪದಗಳ ಹಾಗೆ, ಡಿಜಿಟಲೀಕರಣ, ಅಯಾನೀಕರಣ, ಕಾಸಗೀಕರಣ, ದಾಕಲೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ.

ಕನ್ನಡದ ಹಸಿರು ಪದದಿಂದ ಹಸಿರೀಕರಣ, ಅಗಲ ಪದದಿಂದ ಅಗಲೀಕರಣ, ಮತ್ತು ಕಯ್ಗಾರಿಕೆ ಪದದಿಂದ ಕಯ್ಗಾರಿಕೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ. ಇಂತಹ ಹಲವು ಕಡೆಗಳಲ್ಲಿ ಸಬಲಿಸು, ಪ್ರಮಾಣಿಸು, ಡಿಜಿಟಲಿಸು, ಅಯಾನಿಸು, ದಾಕಲಿಸು, ಹಸಿರಿಸು, ಅಗಲಿಸು ಎಂಬಂತಹ ಪದಗಳನ್ನು ಮತ್ತು ಅವುಗಳ ಹೆಸರುರೂಪಗಳಾದ ಪ್ರಮಾಣಿಸುವಿಕೆ, ದಾಕಲಿಸುವಿಕೆ, ಅಯಾನಿಸುವಿಕೆ, ಹಸಿರಿಸುವಿಕೆ ಎಂಬಂತಹ ಪದಗಳನ್ನೂ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ.

‘ಕರಣ’ ಎಂಬುದನ್ನು ಬಳಸುವವರಲ್ಲಿ ಹಲವರಿಗೆ ಅದರೊಂದಿಗೆ ಬರುವ ಹೆಸರುಪದದಲ್ಲಿ ಎಂತಹ ಮಾರ್ಪಾಡುಗಳನ್ನೆಲ್ಲ ಮಾಡಬೇಕು ಎಂಬ ವಿಶಯದಲ್ಲೂ ಗೊಂದಲಗಳಿವೆ; ಕೆಲವರು ಆದುನಿಕೀಕರಣ, ಜಾಗತಿಕೀಕರಣ, ಯಾಂತ್ರಿಕೀಕರಣ ಎಂದು ಬರೆದರೆ, ಇನ್ನು ಕೆಲವರು ಆದುನೀಕರಣ, ಜಗತೀಕರಣ, ಯಾಂತ್ರೀಕರಣ ಎಂಬುದಾಗಿ ಬರೆಯುತ್ತಾರೆ. ಸಾಮಾಜೀಕರಣವೂ ಇದೆ, ಸಮಾಜೀಕರಣವೂ ಇದೆ; ಸಾದ್ರುಶೀಕರಣವೂ ಇದೆ, ತುರ್ತುಕರಣವೂ ಇದೆ. ಮೇಲಿನ ಪದಗಳಲ್ಲಿ ಬಳಕೆಯಾಗಿರುವ ಮಹಾಪ್ರಾಣಾಕ್ಶರಗಳನ್ನು ಈ ಅಂಕಣದಲ್ಲಿ ಕಯ್ಬಿಡಲಾಗಿದೆ; ಆದರೆ, ಅದರ ಬಳಕೆಯಲ್ಲೂ ಸಾಕಶ್ಟು ಗೊಂದಲಗಳಿವೆ.

‘ಕರಣ’ ಪದವನ್ನು ಬಳಸುವವರೂ ಆ ಪದಗಳಿಂದ ಎಸಕ(ಕ್ರಿಯಾ)ಪದಗಳನ್ನು ಉಂಟುಮಾಡಬೇಕಿದ್ದಲ್ಲಿ ಕನ್ನಡದ ‘ಇಸು’ ಒಟ್ಟನ್ನು ಬಳಸಲೇಬೇಕಾಗುತ್ತದೆ; ಸಬಲೀಕರಣ, ದಾಕಲೀಕರಣ, ಡಿಜಿಟಲೀಕರಣ ಎಂಬಂತಹ ಪದಗಳನ್ನು ಬಳಸುವವರು ಅವುಗಳಿಂದ ಎಸಕಪದವನ್ನು ಪಡೆಯಬೇಕಿದ್ದಲ್ಲಿ ಸಬಲೀಕರಿಸು, ದಾಕಲೀಕರಿಸು, ಡಿಜಿಟಲೀಕರಿಸು ಎಂಬುದಾಗಿ ಇಸು ಒಟ್ಟನ್ನು ಸೇರಿಸಿಯೇ ಹೇಳಬೇಕಾಗುತ್ತದೆ; ಇದಕ್ಕೆ ಬದಲು ಸಬಲಿಸು, ದಾಕಲಿಸು, ಡಿಜಿಟಲಿಸು ಎಂದಶ್ಟೇ ಹೇಳಿದರೆ ಸಾಕಾಗುವುದಿಲ್ಲವೇ? ಅವುಗಳ ನಡುವೆ ಕರಣವನ್ನು ಯಾಕೆ ತಂದುಹಾಕಬೇಕು? ಸ್ತಿರೀಕರಣಗೊಳ್ಳು ಎಂಬುದೂ ಇಂತಹದೇ ಇನ್ನೊಂದು ಅನವಶ್ಯಕವಾದ ಕರಣ ಪದವನ್ನು ಸೇರಿಸಿರುವ ಪದರೂಪ; ಸ್ತಿರಗೊಳ್ಳು ಎಂಬುದು ಹೆಚ್ಚು ಅಡಕವಾಗಿ ಅದೇ ಹುರುಳನ್ನು ಕೊಡಬಲ್ಲುದು.

ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವಲ್ಲೂ ಕನ್ನಡದ ಅರಿವಿಗರು ಈ ‘ಕರಣ’ ಪದವನ್ನು ಹಲವೆಡೆಗಳಲ್ಲಿ ಬಳಸಿದ್ದಾರೆ; ಕಾರ್ಬನೀಕರಣ, ನಯ್ಟ್ರೀಕರಣ, ಪಾಲಿಮರೀಕರಣ ಎಂಬಂತಹ ಈ ಪದಗಳನ್ನು ಬಳಸಿದಲ್ಲಿ, ಅವಕ್ಕೆ ಸಂಬಂದಿಸಿದಂತೆ ಕರಿಸು (ಅಯಾನೀಕರಿಸು), ಕ್ರುತ (ಅಯಾನೀಕ್ರುತ), ಕಾರಕ (ಅಯಾನೀಕಾರಕ), ಕಾರಿ (ಅಯಾನೀಕಾರಿ) ಎಂಬಂತಹ ಕರಣ ಪದಕ್ಕೆ ಸಂಬಂದಿಸಿದಂತಹ ಬೇರೆ ಕೆಲವು ಪದಗಳನ್ನೂ ಬಳಸಬೇಕಾಗುತ್ತದೆ, ಮತ್ತು ಅವು ಕನ್ನಡದ್ದಲ್ಲವಾದ ಕಾರಣ, ಅವನ್ನು ಬಳಸುವಲ್ಲಿ ಹಲವಾರು ತಪ್ಪುಗಳೂ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದಲ್ಲಿ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಮತ್ತು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಇಸುವಿಕೆ (ಅಯಾನಿಸುವಿಕೆ), ಇಸಿದ (ಅಯಾನಿಸಿದ), ಇಸುವ (ಅಯಾನಿಸುವ) ಎಂಬಂತಹ ರೂಪಗಳನ್ನು ಬಳಸಲು ಬರುತ್ತದೆ.

ಇಂತಹ ಕಡೆಗಳಲ್ಲಿ ಅರಿವಿಗರು ಇನ್ನೂ ಒಂದು ತೊಡಕನ್ನು ಎದುರಿಸಬೇಕಾಗುತ್ತದೆ: ಇಂಗ್ಲಿಶ್ನ ಅಯ್ಸ್ ಎಂಬ ಒಟ್ಟು ಬಂದಿರುವಲ್ಲಿ ಕರಿಸು ಎಂಬುದನ್ನು ಬಳಸುವ (ಪೋಲರಯ್ಸ್ – ದ್ರುವೀಕರಿಸು, ಅನೊಡಯ್ಸ್ – ಅನೊಡೀಕರಿಸು) ಈ ಅರಿವಿಗರು ಇಂಗ್ಲಿಶ್ನ ಅಯ್ಸ್ ಎಂಬುದಕ್ಕಿರುವ ಮಾಡುವಿಕೆ ಮತ್ತು ಆಗುವಿಕೆ ಎಂಬ ಎರಡು ಹುರುಳುಗಳಲ್ಲಿ ಒಂದನ್ನು ಮಾತ್ರ ತಿಳಿಸಬಲ್ಲರು; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದರೆ ಆ ಎರಡು ಹುರುಳುಗಳನ್ನೂ ತಿಳಿಸಬಲ್ಲರು. ಯಾಕೆಂದರೆ, ಕರಣ ಎಂಬುದಕ್ಕೆ ಆಗುವಿಕೆ ಎಂಬ ಹುರುಳು ಸಿಗಲಾರದು; ಆದರೆ, ಇಸು ಎಂಬುದನ್ನು ಬಳಸಿರುವ ಅನೋಡಿಸು, ಅಲ್ಯೂಮಿನಿಸು ಎಂಬುವಕ್ಕೆ ಆಗುವಿಕೆಯ ಹುರುಳೂ ಸಿಗಬಲ್ಲುದು.

ಅರಿಮೆಯ (ಪಾರಿಬಾಶಿಕ)ಪದಗಳನ್ನು ಉಂಟುಮಾಡುವಲ್ಲಿ ಆತ್ಮಕ ಎಂಬುದನ್ನು ಬಳಸುವುದೂ ಇಂತಹದೇ ಒಂದು ಬೇಕಿಲ್ಲದ ಚಾಳಿ. ನುಡಿಯರಿಮೆಯ ಒಂದು ಪದನೆರಕೆಯಲ್ಲಿ ಈ ರೀತಿ ಆತ್ಮಕ ಎಂಬುದನ್ನು ಬಳಸಿರುವ ಇನ್ನೂರಯ್ವತ್ತಕ್ಕಿಂತಲೂ ಹೆಚ್ಚು (ಎಂದರೆ, ಸುಮಾರು ನೂರಕ್ಕೆ ಹದಿಮೂರರಶ್ಟು) ಪದಗಳಿವೆ! ಇವುಗಳಲ್ಲಿ ಹೆಚ್ಚಿನವುಗಳಲ್ಲಿಯೂ ಆತ್ಮಕ ಎಂಬುದನ್ನು ಬಳಸಬೇಕಾಗಿಯೇ ಇಲ್ಲ (ವ್ಯಾಕರಣಾತ್ಮಕ ನಿಯಮ – ವ್ಯಾಕರಣ ನಿಯಮ, ದ್ವನ್ಯಾತ್ಮಕ ರಚನೆ – ದ್ವನಿರಚನೆ, ಪ್ರೇರಣಾತ್ಮಕ ವಾಕ್ಯ – ಪ್ರೇರಣ ವಾಕ್ಯ). ಅರಿಮೆಯ ಪದಗಳು ಸಿಕ್ಕಲಾಗಿದ್ದಶ್ಟೂ ಒಳ್ಳೆಯದು ಎಂಬ ಅನಿಸಿಕೆ ಈ ಪದಗಳನ್ನು ಉಂಟುಮಾಡಿರುವ ಅರಿವಿಗರಲ್ಲಿರುವ ಹಾಗೆ ಕಾಣಿಸುತ್ತದೆ.

ಇದಲ್ಲದೆ, ತಮ್ಮ ಬರಹಗಳಲ್ಲಿ ಎಲ್ಲರಿಗೂ ಗೊತ್ತಾಗುವ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಿಸಿದರೆ ಅವುಗಳ ಮಟ್ಟ ಮೇಲೇರುತ್ತದೆಯೆಂದು ಕೆಲವರು ತಿಳಿದ ಹಾಗಿದೆ. ಆದರೆ, ಹಲವು ಮಂದಿ ಹೀಗೆ ಮಾಡುವಲ್ಲಿ ಹಲವು ಬಗೆಯ ತಪ್ಪುಗಳನ್ನೂ ಮಾಡಿ ನಗುವಿಗೆ ಎಡೆಮಾಡಿಕೊಡುತ್ತಾರೆ. ‘ಕಾರಣ’ ಎಂಬ ಪದದ ಬದಲು ಹಲವು ಮಂದಿ ‘ಸಕಾರಣ’ ಎಂಬ ಪದವನ್ನು ಬಳಸುತ್ತಾರೆ; ಆದರೆ, ಇವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಸಕಾರಣ ಎಂಬುದಕ್ಕೆ ‘ಕಾರಣವಿರುವ’ ಎಂಬ ಹುರುಳಿದೆ. ಇದನ್ನು ಗಮನಿಸದ ಕೆಲವರ ಬರಹಗಳಲ್ಲಿ ಸಕಾರಣವಿಲ್ಲದೆ, ಸಕಾರಣ ನೀಡದೆ, ಸಕಾರಣಗಳಿರಲಿಲ್ಲ ಎಂಬಂತಹ ಬಳಕೆಗಳನ್ನು ಕಾಣಬಹುದು! ಆದರೆ, ಇಂತಹದೇ ಬಳಕೆ ಮುಂದುವರಿದರೆ, ಸಕಾರಣ ಎಂಬುದಕ್ಕೆ ಕನ್ನಡದಲ್ಲಿ ಬರಿಯ ಕಾರಣ ಎಂಬುದರ ಹುರುಳೇ ಇರುವಂತಾದೀತು.

ಇಹಲೋಕ ಮತ್ತು ಪರಲೋಕ ಎಂಬ ಬೇರೆ ಎರಡು ಸಂಸ್ಕ್ರುತ ಎರವಲುಗಳ ಬಳಕೆಯೂ ಇಂತಹದೇ. ಅವುಗಳ ನಿಜವಾದ ಹುರುಳು ಏನೆಂದು ತಿಳಿಯದಿದ್ದರೂ ಬಳಸುವ ಆಸೆ. ಆತನನ್ನು ಕಚ್ಚಿದ ಹಾವೇ ಸತ್ತುಹೋಯಿತು ಎಂಬುದನ್ನು ಹೇಳಬೇಕಿರುವಲ್ಲಿ ಕಚ್ಚಿದ ಹಾವೇ ಇಹಲೋಕಕ್ಕೆ ಹೋಯಿತು ಎಂಬುದಾಗಿ ಬರೆದಿರುವುದನ್ನು ಕಾಣಬಹುದು! ಇಹಲೋಕ ಮತ್ತು ಪರಲೋಕಗಳೆಂಬ ಈ ಪದಗಳ ಬದಲು ಈ ಲೋಕ ಮತ್ತು ಬೇರೆ ಲೋಕ ಎಂಬ ಎಲ್ಲರಿಗೂ ಗೊತ್ತಾಗುವ ಪದಕಂತೆಗಳನ್ನು ಬಳಸಿದ್ದರೆ, ಇಂತಹ ತಪ್ಪು ಮಾಡಿ ನಗೆಪಾಟಲಾಗುವ ಹಾಗಾಗುತ್ತಿರಲಿಲ್ಲ.

ದಿನಪತ್ರಿಕೆಗಳಲ್ಲಿ ತಲೆಬರಹವನ್ನು ಬರೆಯುವವರೂ ಇಂತಹದೇ ಕೀಳರಿಮೆಯಿಂದ ಬಳಲುತ್ತಿರುವ ಹಾಗೆ ಕಾಣಿಸುತ್ತದೆ. ಒಂದು ಬರಹದಲ್ಲಿ ಉದ್ದಕ್ಕೂ ನಾಯಿ, ಬೆಕ್ಕು, ಕೋಳಿ, ಮೀನು ಎಂಬಂತಹ ಕನ್ನಡದವೇ ಆದ ಪದಗಳನ್ನು ಬರುತ್ತವೆ; ಆದರೆ, ತಲೆಬರಹದಲ್ಲಿ ಮಾತ್ರ ಶ್ವಾನ, ಮಾರ್ಜಾಲ, ಕುಕ್ಕುಟ, ಮತ್ಸ್ಯ ಎಂಬಂತಹ ಸಂಸ್ಕ್ರುತ ಎರವಲುಗಳು ಬರುತ್ತವೆ. ತಲೆಬರಹದಲ್ಲಿ ಎಲ್ಲರಿಗೂ ಗೊತ್ತಿರುವ ನಾಯಿ, ಬೆಕ್ಕು, ಮೀನು ಮೊದಲಾದ ಕನ್ನಡ ಪದಗಳು ಬಂದರೆ ದಿನಪತ್ರಿಕೆಯ ತಕ್ಕಮೆ ಇಲ್ಲವಾಗಬಹುದೆಂಬ ಹೆದರಿಕೆ ಅವರಿಗಿರುವಂತೆ ತೋರುತ್ತದೆ. ತನ್ನ ಮುದಿ ತಂದೆಯನ್ನು ಅಪ್ಪ ಎನ್ನಲು ಹಿಂಜರಿಯುವ ದೊಡ್ಡ ಅದಿಕಾರಿಯ ಕೀಳು ಸಂಸ್ಕ್ರುತಿಯಿದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು?

ನುಡಿಯರಿಮೆಯ ಇಣುಕುನೋಟ – 20

ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳುಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ ಬಳಸಬೇಕೆಂದು ಯಾರೂ ಹೇಳಬಹುದು. ಆದರೆ, ಇವತ್ತು ಹಲವು ಮಂದಿ ಕನ್ನಡದ ವಿದ್ವಾಂಸರಿಗೆ ಇದು ಒಪ್ಪಿಗೆಯಾಗುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸಂಸ್ಕ್ರುತದ ಕಟ್ಟಲೆಗಳನ್ನೇ ತಪ್ಪದೆ ಬಳಸಬೇಕೆಂಬುದಾಗಿ ಅವರು ಹೇಳುತ್ತಾರೆ. ಕನ್ನಡದ ವಿದ್ವಾಂಸರಲ್ಲಿ ಹಿಂದಿನ ಕಾಲದಿಂದಲೂ ಬೆಳೆದುಬಂದಿರುವ ಕನ್ನಡದ ಕುರಿತಾಗಿರುವ ಕೀಳರಿಮೆ ಮತ್ತು ಸಂಸ್ಕ್ರುತದ ಕುರಿತಾಗಿರುವ ಅತಿಯಾದ ಆದರ ಮತ್ತು ಅಬಿಮಾನಗಳೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಸೊಲ್ಲರಿಗರನ್ನು ಸೂಚಿಸಲು ಸಂಸ್ಕ್ರುತದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ‘ವಯ್ಯಾಕರಣಃ’ ಎಂಬುದು ಗಂಡಸರನ್ನು ಸೂಚಿಸುತ್ತದೆ ಮತ್ತು ‘ವಯ್ಯಾಕರಣೀ’ ಎಂಬುದು ಹೆಂಗಸರನ್ನು ಸೂಚಿಸುತ್ತದೆ. ಆದರೆ, ಕನ್ನಡದಲ್ಲಿ ಗಂಡಸರನ್ನು ಸೂಚಿಸುವುದಕ್ಕಾಗಿಯೂ ‘ವಯ್ಯಾಕರಣಿ’ ಎಂಬ ಪದವೇ ಬಳಕೆಗೆ ಬಂದಿದೆ. ಇದನ್ನು ಕಿಟ್ಟೆಲ್ ಅವರ ಡಿಕ್ಶನರಿಯಲ್ಲಿ ನೋಡಬಹುದು. ಆದರೆ ಇದು ತಪ್ಪು, ಗಂಡಸರನ್ನು ಸೂಚಿಸಲು ‘ವಯ್ಯಾಕರಣ’ ಎಂಬುದನ್ನೇ ಬಳಸಬೇಕು ಎಂಬುದಾಗಿ ಕೆಲವರು ಕನ್ನಡದ ವಿದ್ವಾಂಸರು ವಾದಿಸುತ್ತಾರೆ.

ಇದಕ್ಕೆ ಅವರಿಗೆ ಸಂಸ್ಕ್ರುತ ವ್ಯಾಕರಣದ ಕಟ್ಟಲೆಯೇ ಆದಾರ. ಆದರೆ ನಿಜಕ್ಕೂ ಇದು ಸರಿಯಲ್ಲ. ಯಾಕೆಂದರೆ, ಯಾವ ನುಡಿಯಿಂದಲೇ ಆಗಲಿ ಒಂದು ಪದವನ್ನು ಎರವಲಾಗಿ ಪಡೆದ ಮೇಲೆ, ಅದನ್ನು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಸಬೇಕು ಎಂಬುದಕ್ಕೆ ಎರವಲಾಗಿ ಪಡೆದ ನುಡಿಯಲ್ಲಿರುವ ಬಳಕೆಯ ಕಟ್ಟಲೆಗಳೇ ಆದಾರವಾಗಬೇಕಲ್ಲದೆ ಎರವಲು ಕೊಟ್ಟ ನುಡಿಯ ಕಟ್ಟಲೆಗಳಲ್ಲ.

ಎತ್ತುಗೆಗಾಗಿ, ಸಂಸ್ಕ್ರುತದಿಂದ ಹಲವು ನಾಮಪದಗಳನ್ನು ನಾವು ಕನ್ನಡಕ್ಕೆ ಎರವಲಾಗಿ ಪಡೆದು ಬಳಸುತ್ತೇವೆ. ಇವುಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಿ ಕ್ರಿಯಾಪದಗಳಾಗಿ ಮಾಡಿಯೂ ಬಳಸುತ್ತೇವೆ (ಜಪ-ಜಪಿಸು, ಕೋಪ-ಕೋಪಿಸು, ರುಚಿ-ರುಚಿಸು). ಆದರೆ, ಈ ಬಳಕೆಗೆ ಕನ್ನಡದ ಕಟ್ಟಲೆಗಳು ಆದಾರವಲ್ಲದೆ ಸಂಸ್ಕ್ರುತದ ಕಟ್ಟಲೆಗಳಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಲಿಂಗವನ್ನು ನಿರ‍್ದರಿಸುವಲ್ಲೂ ನಾವು ಕನ್ನಡದ ಕಟ್ಟಲೆಗಳನ್ನು ಬಳಸುತ್ತೇವಲ್ಲದೆ ಸಂಸ್ಕ್ರುತದ ಕಟ್ಟಲೆಗಳನ್ನಲ್ಲ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಪುಲ್ಲಿಂಗದಲ್ಲಿರುವ ದೇಶ, ಮಾರ‍್ಗ, ದೀಪ ಮೊದಲಾದ ಪದಗಳನ್ನು, ಮತ್ತು ಸ್ತ್ರೀಲಿಂಗದಲ್ಲಿರುವ ನದಿ, ಲಿಪಿ, ಚರ‍್ಚೆ ಮೊದಲಾದ ಪದಗಳನ್ನು ನಾವು ನಪುಂಸಕ ಲಿಂಗದಲ್ಲಿ ಬಳಸುತ್ತೇವಲ್ಲದೆ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಲ್ಲ. ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾದ ಗುಣಪದಗಳೆಂಬ ಪದಗಳಿಲ್ಲ.

ಹೀಗಿದ್ದರೂ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ವ್ಯಾವಹಾರಿಕ, ಸಾಮಾಜಿಕ, ಯಾಂತ್ರಿಕ ಮೊದಲಾದ ಹಲವು ಪದಗಳನ್ನು ನಾವು ನಾಮಪದಗಳಿಂದ ಬೇರಾಗಿರುವ ಗುಣಪದಗಳಾಗಿ ಬಳಸುತ್ತೇವೆ. ಹಾಗಾಗಿ, ವಯ್ಯಾಕರಣಿಯಂತಹ ಪದಗಳ ಮಟ್ಟಿಗೂ ನಾವು ಇದೇ ಕ್ರಮವನ್ನು ಅನುಸರಿಸುವುದು ಸರಿಯಾದ ದಾರಿ. ಕನ್ನಡದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಗೆ ಬಂದಿವೆ ಎಂಬುದು ನಮಗೆ ಮುಕ್ಯವಲ್ಲದೆ ಆ ಬಳಕೆ ಸಂಸ್ಕ್ರುತದ ನಿಯಮಗಳಿಗೆ ಅನುಸಾರವಾಗಿದೆಯೇ ಇಲ್ಲವೇ ಎಂಬುದು ಮುಕ್ಯವಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳು ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ; ಹಾಗಿದ್ದರೂ ‘ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು; ಇಲ್ಲವಾದರೆ ಅದು ತಪ್ಪಾಗುತ್ತದೆ’ ಎಂದು ಹೇಳುವುದೂ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದ ಮೇಲೆ ಹೊರಿಸುವ ತಪ್ಪು ದಾರಿಯಾಗಿದೆ. ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಈ ಎರವಲು ಪದಗಳು ಹೇಗೆ ಕಾಣಿಸುತ್ತವೆಯೋ ಹಾಗೆ ಬರೆಯುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ.

ಇನ್ನೊಂದು ಬಗೆಯ ‘ತಪ್ಪು’ಗಳು ಆಡುನುಡಿಯಿಂದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬರಹಕ್ಕೆ ತಂದು ಬಳಸುವಲ್ಲಿ ಕಾಣಿಸಿಕೊಳ್ಳುತ್ತವೆ. ಆಡುನುಡಿಯೆಂಬುದು ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ. ಆದರೆ, ಬರಹದ ನುಡಿ ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ, ಹಾಗಿಲ್ಲವಾದರೆ ಒಂದು ಊರಿನ ಮತ್ತು ಜಾತಿಯ ಬರಹಗಾರರು ಬರೆದುದನ್ನು ಇನ್ನೊಂದು ಊರಿನ ಮತ್ತು ಜಾತಿಯ ಜನರಿಗೆ ಓದಿ ಅರ‍್ತಮಾಡಿಕೊಳ್ಳಲು ಕಶ್ಟವಾಗುತ್ತದೆ.

ಈ ಸಮಾನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬರಹದ ನುಡಿಯಲ್ಲಿ ಎಂತಹ ಮಾರ‍್ಪಾಡನ್ನು ನಡೆಸುವುದಿದ್ದರೂ ಅದು ಎಲ್ಲಾ ಊರು ಮತ್ತು ಜಾತಿಗಳಿಗೆ ಸೇರಿದ ಜನರಿಗೂ ಒಪ್ಪಿಗೆಯಾಗುವಂತಹದಾಗಿರಬೇಕು. ಎಲ್ಲಾ ಬರಹಗಾರರೂ ತಮಗೆ ಅನಿಸಿದ ಹಾಗೆ ತಮ್ಮ ಬರಹದ ನುಡಿಯಲ್ಲಿ ಮಾರ‍್ಪಾಡುಗಳನ್ನು ಮಾಡಹೊರಟರೆ ಈ ಸಮಾನತೆ ಪೂರ‍್ತಿ ಅಳಿದು ಹೋದೀತು.

ಬರಹದಲ್ಲಿ ತಪ್ಪು-ಸರಿ ಎಂಬ ಪರಿಕಲ್ಪನೆಯನ್ನು ಈ ಅರ‍್ತದಲ್ಲಿ ಬಳಸಲು ಸಾದ್ಯವಿದೆ. ಕನ್ನಡದ ಕೆಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗಿದೆ; ಹಾಲು ಎಂಬುದು ಆಲು ಎಂದಾಗಿದೆ, ಹಣ್ಣು ಎಂಬುದು ಅಣ್ಣು ಎಂದಾಗಿದೆ, ಹುಳ ಎಂಬುದು ಉಳ ಎಂದಾಗಿದೆ. ಈ ರೀತಿ ಕೆಲವರು ಕನ್ನಡಿಗರು ತಮ್ಮ ಆಡುನುಡಿಯ ಪದಗಳಲ್ಲಿದ್ದ ಹಕಾರವನ್ನು ಕಳೆದುಕೊಂಡುದರಲ್ಲಿ ತಪ್ಪಾಗಿರುವಂತಹದು ಏನೂ ಇಲ್ಲ. ಅದು ಅವರ ಆಡುನುಡಿಯಲ್ಲಿ ಸ್ವಾಬಾವಿಕವಾಗಿ ನಡೆದಿರುವ ಒಂದು ಮಾರ‍್ಪಾಡು ಮಾತ್ರ. ಇದಲ್ಲದೆ, ಅದು ಅವರ ಆಡುನುಡಿಯನ್ನು ಕೆಡಿಸಿಲ್ಲ; ಅದರ ಜೀವಂತಿಕೆಯನ್ನು ಉಳಿಸಿದೆ.

ಆದರೆ, ಕನ್ನಡದ ಬೇರೆ ಹಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಈ ರೀತಿ ಬಿದ್ದುಹೋಗಿಲ್ಲ; ಹಾಗಾಗಿ, ಇವತ್ತು ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕಾದ ಬರಹದ ಕನ್ನಡದಲ್ಲಿ ಹಕಾರವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ಬಿದ್ದುಹೋಗಲು ಬಿಡಬೇಕೇ ಎಂಬುದನ್ನು ನಿರ‍್ದರಿಸಬೇಕಾಗುತ್ತದೆ. ಉಳಿಸಬೇಕೆಂದು ಹೆಚ್ಚಿನ ಕನ್ನಡಿಗರೂ ಬಯಸುವುದಾದರೆ, ಬರಹದಲ್ಲಿ ಹಕಾರವನ್ನು ಬಳಸದಿರುವುದು (ಇಲ್ಲವೇ ಬೇಡದಲ್ಲಿ ಬಳಸುವುದು) ‘ತಪ್ಪಾ’ಗುತ್ತದೆ.

ಇದೇ ರೀತಿಯಲ್ಲಿ, ಇವತ್ತು ಬಡಗ ಕರ‍್ನಾಟಕದ ಕೆಲವು ಆಡುನುಡಿಗಳಲ್ಲಿ ನಾಮಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿದೆ. ಮನೆ ಎಂಬುದು ಮನಿ ಎಂದಾಗಿದೆ, ಕಾಗೆ ಎಂಬುದು ಕಾಗಿ ಎಂದಾಗಿದೆ, ಕುದುರೆ ಎಂಬುದು ಕುದ್ರಿ ಎಂದಾಗಿದೆ. ಆದರೆ ಕನ್ನಡದ ಬೇರೆ ಆಡುನುಡಿಗಳಲ್ಲಿ ಈ ಮಾರ‍್ಪಾಡು ನಡೆದಿಲ್ಲ. ಇಲ್ಲೂ ಕೂಡ, ಎಲ್ಲರಿಗೂ ಸಮಾನವಾಗಿರಬೇಕಾದ ಬರಹದ ಕನ್ನಡಕ್ಕೆ ಈ ಮಾರ‍್ಪಾಡನ್ನು ತರಬೇಕೇ ಬೇಡವೇ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ, ಮತ್ತು ಬೇಡವೆಂದು ತೀರ‍್ಮಾನಿಸಿದಲ್ಲಿ ಹಾಗೆ ತರುವುದು ಬರಹದ ಮಟ್ಟಿಗೆ ‘ತಪ್ಪು’ ಎಂಬುದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಾಗುತ್ತದೆ.

ಆದರೆ, ಇಂತಹ ಯಾವ ಮಾರ‍್ಪಾಡೂ ಬರಹದ ಕನ್ನಡವನ್ನು ಕೆಡಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಆಲು ಇಲ್ಲವೇ ಮನಿ ಎಂಬ ಪದರೂಪದಲ್ಲಿಲ್ಲದಂತಹ ನುಡಿಯ ಬಳಕೆಗೆ ಅವಶ್ಯವಾಗಿರುವ ಯಾವ ಅಂಶವೂ ಹಾಲು ಇಲ್ಲವೇ ಮನೆ ಎಂಬ ಪದರೂಪದಲ್ಲಿಲ್ಲ. ಇಲ್ಲಿ ತಪ್ಪು ಮತ್ತು ಸರಿ ಎಂಬವುಗಳು ಎಂತಹ ಬರಹ ನಮ್ಮೊಳಗೆ ಸಮಾನವಾಗಿ ಉಳಿಯಬೇಕು ಎಂಬ ತೀರ‍್ಮಾನವನ್ನಶ್ಟೇ ಅವಲಂಬಿಸಿದೆ. ಇವತ್ತು ಬಳಕೆಯಲ್ಲಿರುವ ತೀರ‍್ಮಾನವನ್ನು ನಾವು ಅವಶ್ಯವೆಂದೆನಿಸಿದಲ್ಲಿ ಮಾರ‍್ಪಡಿಸಬಲ್ಲೆವು, ಮತ್ತು ಹಾಗೆ ಮಾರ‍್ಪಡಿಸಿದಾಗ ಇವತ್ತು ತಪ್ಪು ಎಂದು ತಿಳಿದಿರುವ ಪದರೂಪಗಳು ಸರಿಯೆಂದೆನಿಸಬಲ್ಲುವು.

ಸಂಸ್ಕ್ರುತ ಎರವಲುಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದುದು ಮಾತ್ರವಲ್ಲ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಸುಲಬವಾಗಿ ಕಲಿತು ತಮ್ಮದಾಗಿಸಿಕೊಳ್ಳುವಲ್ಲಿ ಒಂದು ದೊಡ್ಡ ತೊಡಕಾಗಿದೆ; ಕೆಲವೇ ಕೆಲವು ಜನರಶ್ಟೇ ಬರಹವನ್ನು ಬಳಸುತ್ತಿದ್ದ ಹಿಂದಿನ ಕಾಲದಲ್ಲಿ ಈ ಕಟ್ಟಲೆ ಹೆಚ್ಚು ತೊಡಕಿನದೆಂದು ಅನಿಸುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗಬೇಕಾಗಿದೆ; ಹಾಗಾಗಿ, ಕನ್ನಡಕ್ಕೆ ಬೇಡದ ಈ ಸಂಸ್ಕ್ರುತದ ಹೊರೆಯನ್ನು ತೆಗೆದುಹಾಕುವುದೇ ಒಳ್ಳೆಯದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ಬರೆಯಲು ಕಲಿಸುವ ಬಗೆ

ನುಡಿಯರಿಮೆಯ ಇಣುಕುನೋಟ – 17

ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು ಹೇಗೆ ಕಟ್ಟಬೇಕು, ಅವನ್ನು ಬರೆಯುವಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬುದನ್ನೆಲ್ಲ ಅವರು ಒಂದೇ ಬಾರಿಗೆ ತೀರ‍್ಮಾನಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಲು ಬರುವುದಿಲ್ಲವಾದಲ್ಲಿ, ಅವರ ಬರೆಯುವ ಕೆಲಸ ಮುಂದಕ್ಕೆ ಹೋಗುವುದೇ ಇಲ್ಲ.

ಹೆಚ್ಚಿನ ಮಕ್ಕಳಿಗೂ ಈ ತೊಡಕು ತೊಡಕಾದ ಕೆಲಸವನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಕಲಿಯುವಂತೆ ಯಾರಾದರೂ ಅವರಿಗೆ ನೆರವನ್ನಿತ್ತರೆ ಮಾತ್ರ, ಅವರು ಅದನ್ನು ಕಲಿಯಬಲ್ಲರು. ಇಲ್ಲವಾದರೆ, ಬರೆಯುವ ಕೆಲಸ ತಮಗೆ ಹೇಳಿದ್ದಲ್ಲ ಎಂಬುದಾಗಿ ಅವರು ಅದರಿಂದ ದೂರವೇ ಉಳಿಯುತ್ತಾರೆ. ಪರೀಕ್ಶೆಗಳಲ್ಲಿ ಬರೆಯಬೇಕಾದುದನ್ನೆಲ್ಲ ಉರುಹೊಡೆದು ಬರೆಯುವುದನ್ನಶ್ಟೇ ಅವರು ಮಾಡಬಲ್ಲರು.

ಹಾಗಾಗಿ, ಮಕ್ಕಳಿಗೆ ಬರೆಯಲು ಕಲಿಸುವವರು ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಹತೋಟಿಗೆ ತಂದುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಬರಿಗೆ(ಅಕ್ಶರ)ಗಳನ್ನು ಬರೆಯಲು ಕಲಿಯುವ ಸಮಯದಲ್ಲಿ ಅವರು ಈ ಕಲಿಕೆಯನ್ನು ಸರಿಯಾದ ಓರಣ(ಕ್ರಮ)ದಲ್ಲಿ ನಡೆಸುವ ಹಾಗೆ ನೋಡಿಕೊಳ್ಳಬೇಕು.

ಮಕ್ಕಳ ಕಯ್ಬರಹ ಓದಬಲ್ಲುದಾಗಿರಬೇಕು, ಮತ್ತು ಬರವಣಿಗೆ ಸಲೀಸಾಗಿರಬೇಕು. ಸಲೀಸಾಗಿ ಬರೆಯಲು ಬಾರದವರಿಗೆ ಬೇರೆ ವಿಶಯಗಳ ಕುರಿತು ಆಲೋಚಿಸಲು ಸಮಯವೇ ಸಿಗುವುದಿಲ್ಲ. ಸಲೀಸಾಗಿ ಬರೆಯಬೇಕಿದ್ದಲ್ಲಿ, ಮಕ್ಕಳು ಬರಿಗೆಗಳನ್ನು ಬರೆಯುವ ಬಗೆ, ಬಳಪವನ್ನು ಹಿಡಿಯುವ ಬಗೆ, ಮತ್ತು ಕಾಗದವನ್ನು ಎದುರು ಇರಿಸಿಕೊಳ್ಳುವ ಬಗೆ ಸರಿಯಾಗಿರಬೇಕು.

ಕೆಲವು ಮಕ್ಕಳು ಬರೆಯುವಾಗ ಬಲಗಯ್ಯನ್ನು ಬಳಸುವ ಬದಲು ಎಡಗಯ್ಯನ್ನು ಬಳಸುತ್ತಾರೆ. ಆದರೆ, ಇಂತಹ ಮಕ್ಕಳು ಬಲಗಯ್ಯಲ್ಲಿ ಬರೆಯುವವರನ್ನು ನೋಡಿ, ಅವರು ಬರೆಯುವ ಹಾಗೆಯೇ ಬರೆಯತೊಡಗುತ್ತಾರೆ. ಇದರಿಂದಾಗಿ ಅವರು ತೊಂದರೆಗೊಳಗಾಗುತ್ತಾರೆ. ಯಾಕೆಂದರೆ, ಹಾಗೆ ಬರೆಯುವಾಗ ಅವರಿಗೆ ತಮ್ಮ ಕಯ್ಬೆರಳು ಅಡ್ಡ ಬರುತ್ತದೆ, ಮತ್ತು ತಾವು ಬರೆದುದೇನೆಂಬುದು ಕಾಣಿಸುವುದಿಲ್ಲ. ಅದು ಕಾಣಿಸುವಂತೆ ಮಾಡಲು, ಅವರು ತಮ್ಮ ಮಣಿಗಂಟನ್ನು ಬಗ್ಗಿಸಿ ಬರೆಯಹೊರಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರ ಬರವಣಿಗೆ ತುಂಬಾ ತೊಡಕಿನದಾಗಿಬಿಡುತ್ತದೆ.

ಎಡಗಯ್ಯಲ್ಲಿ ಬರೆಯುವ ಮಕ್ಕಳಿಗೆ ಅವರು ಬರೆಯಬೇಕಾಗಿರುವ ಬಗೆ ಹೇಗೆ ಎಂಬುದನ್ನು ಕಲಿಸಿಕೊಡಬೇಕು. ಬರೆಯುವ ಕಾಗದವನ್ನು ಇಲ್ಲವೇ ಪುಸ್ತಕವನ್ನು ಅವರು ಬಲಗಯ್ಯವರ ಹಾಗೆ ಎಡಕ್ಕೆ ತಿರುಗಿಸಿ ಇರಿಸಿಕೊಳ್ಳುವ ಬದಲು, ಬಲಕ್ಕೆ ತಿರುಗಿಸಿ ಇರಿಸಿಕೊಳ್ಳುವ ಹಾಗೆ ಮಾಡಬೇಕು, ಮತ್ತು ಪೆನ್ನನ್ನು ತುದಿಯಿಂದ ತುಸು ಮೇಲೆ ಹಿಡಿದುಕೊಳ್ಳಲು ಹೇಳಬೇಕು. ಬರೆಯುವಾಗ ಅವರು ಮಣಿಗಂಟನ್ನು ಬಗ್ಗಿಸಬಾರದು. ಎಡಗಯ್ಯವರಿಗೆ ತಕ್ಕುದಾಗಿರುವಂತಹ ಈ ಬರೆಯುವ ಬಗೆಯನ್ನು ಕಲಿತುಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಬರೆಯಲು ಬರುತ್ತದೆ.

ಮಾತಿಗೂ ಬರಹಕ್ಕೂ ನಡುವೆ ಸೊಲ್ಲುಗಳ ರಚನೆಯಲ್ಲಿ ವ್ಯತ್ಯಾಸಗಳಿವೆಯಾದ ಕಾರಣ, ಬರೆಯಲು ಕಲಿಯುವ ಮಕ್ಕಳಿಗೆ ಬರಹಗಳಲ್ಲಿ ಎಂತಹ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನೂ ಕಲಿಸಬೇಕಾಗುತ್ತದೆ. ಇಡೀ ಸೊಲ್ಲುಗಳನ್ನು ಬರೆಯುವುದು ಹೇಗೆ, ಚಿಕ್ಕ ಚಿಕ್ಕ ಸೊಲ್ಲುಗಳನ್ನು ಜೋಡಿಸಿ ಉದ್ದ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ಸೊಲ್ಲಿನ ಒಳಗೆ ಬೇರೆ ಚಿಕ್ಕ ಸೊಲ್ಲುಗಳನ್ನು ಇರಿಸಿ ಸಿಕ್ಕಲು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ.

ಸೊಲ್ಲುಗಳನ್ನು ಸೇರಿಸಿ ಕುರಳು(ಪಾರಾ)ಗಳನ್ನು ರಚಿಸುವ ಬಗೆಯನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಕುರಳುಗಳಲ್ಲಿ ಮೊದಲಿಗೆ ಮುಕ್ಯ ವಿಶಯವನ್ನು ಮುಂದಿಡುವ ಚಿಕ್ಕ ಸೊಲ್ಲಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಶಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ಸೊಲ್ಲು ಬರುತ್ತದೆ. ಸೊಲ್ಲುಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಬರಹದಲ್ಲಿ ಬರುವ ಕುರಳುಗಳನ್ನು ಹೇಗೆ ಅಣಿಗೊಳಿಸುವುದು ಎಂಬುದನ್ನೂ ಅವರು ಕಲಿಯಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ನೆಗಳ್ತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಶಯದ ಮಟ್ಟಿಗೆ ಇನ್ನೊಬ್ಬರ ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಶಯವನ್ನು ಓದುಗರ ಮುಂದಿರಿಸುವ ಮತ್ತು ಅದನ್ನು ಬೆಂಬಲಿಸುವ ವಿಚಾರಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.

ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ಸೊಲ್ಲನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ‍್ಪಡಿಸುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ಸೊಲ್ಲಿನ ಇಟ್ಟಳ (ಒಳರಚನೆ) ಎಂತಹದು, ಆ ಸೊಲ್ಲನ್ನು ಬೇರೆ ಯಾವ ಇಟ್ಟಳಗಳಿಗೆ ಮಾರ‍್ಪಡಿಸಬಹುದು ಎಂಬಂತಹ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.

ಬರವಣಿಗೆಯಲ್ಲಿ ಮಾಡಿರುವ ತಪ್ಪನ್ನು ಬರೆದವರೇ ಓದಿ ನೋಡಿ ಕಂಡುಕೊಳ್ಳುವಂತೆ ಮಾಡಿದಲ್ಲಿ, ಮತ್ತು ಅವು ಯಾಕೆ ತಪ್ಪಾಗಿವೆ ಎಂಬುದನ್ನೂ ತಿಳಿಯುವಂತೆ ಮಾಡಿದಲ್ಲಿ ಅವರ ಬರವಣಿಗೆ ಬೇಗನೆ ಮುಂದೆ ಸಾಗುತ್ತದೆ. ಬರೆದಶ್ಟೂ ಬರವಣಿಗೆ ಚನ್ನಾಗುತ್ತಾ ಹೋಗುತ್ತದೆ. ಹಾಗಾಗಿ, ಬರೆಯುವ ಸಂದರ‍್ಬಗಳು ಮಕ್ಕಳಿಗೆ ಹೆಚ್ಚು ಹೆಚ್ಚು ದೊರಕುವಂತೆ ಮಾಡಬೇಕು.

ಮಕ್ಕಳಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟಬೇಕೆಂಬುದು ಎಲ್ಲಕ್ಕಿಂತಲೂ ಮುಕ್ಯವಾದ ವಿಶಯ. ಏನನ್ನೇ ಬರೆಯಲಿ, ಅದು ಅವರಿಗೆ ನಲಿವನ್ನು ಮತ್ತು ಮೆಚ್ಚುಗೆಯನ್ನು ಕೊಡುವಂತಿರಬೇಕು. ಬೇರೆಯವರ ಒತ್ತಾಯಕ್ಕೆ ಬರೆಯುವ ಬರಹದಿಂದ ಅವರ ಬರವಣಿಗೆ ಒಳ್ಳೆಯದಾಗಲಾರದು.

ಏನಾದರೂ ಒಂದು ವಿಶಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ತುಡಿತ ಮಕ್ಕಳಲ್ಲಿರುತ್ತದೆ. ಶಾಲೆಯಿಂದ ಮನೆಗೆ ಬಂದೊಡನೆ, ಶಾಲೆಯಲ್ಲಿ ಇಲ್ಲವೇ ಅಲ್ಲಿಂದ ಬರುವಾಗ ದಾರಿಯಲ್ಲಿ ಏನಾಯಿತು ಎಂಬುದನ್ನು ತಾಯಿಗೆ ಆದಶ್ಟು ಬೇಗನೆ ತಿಳಿಸಿಬಿಡಬೇಕೆಂಬ ಆತುರದಲ್ಲಿ ಮಕ್ಕಳಿರುತ್ತಾರೆ. ಗೆಳೆಯರನ್ನು ಕಂಡೊಡನೆ ತಮಗೆ ತಿಳಿದಿರುವ ಹೊಸ ವಿಶಯವೊಂದನ್ನು ಅವರಿಗೆ ತಿಳಿಸುವ ಆತುರವೂ ಅವರಿಗಿರುತ್ತದೆ.

ತಮ್ಮ ಮನಸ್ಸಿನಲ್ಲಿರುವ ಇಂತಹ ವಿಶಯಗಳನ್ನು ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸುವ ಹಾಗೆ ಬರಹದ ಮೂಲಕವೂ ತಿಳಿಸಲು ಬರುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಲ್ಲಿ, ಅವರು ಬಹಳ ಬೇಗನೆ ಬರವಣಿಗೆಯಲ್ಲಿ ಮುಂದೆ ಹೋಗುತ್ತಾರೆ. ಮೊದಲಿಗೆ ಅವರ ಹತ್ತಿರ ಮಾತಿನ ಮೂಲಕ ಒಂದು ವಿಶಯವನ್ನು ತಿಳಿಸಲು ಹೇಳಿ, ಅದನ್ನು ಕಲಿಸುವವರೇ ಬರೆದು ತೋರಿಸಬಹುದು, ಮತ್ತು ಹಾಗೆ ಬರೆದುದನ್ನು ಅವರಿಗೆ ಓದಲು ಕೊಡಬಹುದು. ಹೀಗೆ ಮಾಡುವುದರಿಂದ ಅವರಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟುತ್ತದೆ.

ಬರೆಯಲು ಕಲಿಯಬೇಕೆಂದಿರುವವರಿಗೆ ಎರಡು ಬಗೆಯ ಕಲಿಕೆಗಳು ನೆರವು ನೀಡಬಲ್ಲುವು: ಮೊದಲನೆಯದಾಗಿ, ಬರೆಯಲಿರುವ ವಿಶಯದ ಕುರಿತು ಅವರು ಏನೆಲ್ಲಾ ಹೇಳಬಲ್ಲರೋ ಅದನ್ನೆಲ್ಲ ಹೇಳಲು ಬಿಡಬೇಕು. ಇದರಿಂದ ಅವರಲ್ಲಿ ಆಲೋಚಿಸುವ ಕಸುವು ಬೆಳೆಯುತ್ತದೆ. ಎರಡನೆಯದಾಗಿ, ಅವರಿಗೆ ಬೇರೆ ಯಾವುದಾದರೂ ಬರಹವನ್ನು ಎತ್ತಿಬರೆಯಲು ಕಲಿಸಬೇಕು. ಹೀಗೆ ಬರೆಯುವಾಗ, ಅಂತಹ ಬರಹಗಳಲ್ಲಿ ಸೊಲ್ಲುಗಳನ್ನು ಮತ್ತು ಕುರಲುಗಳನ್ನು ಯಾವ ರೀತಿಯಲ್ಲಿ ಅಳವಡಿಸಲಾಗಿದೆ ಎಂಬುದನ್ನು ಅವರು ಗಮನಿಸುವ ಹಾಗೆಯೂ ಮಾಡಬೇಕು.

ಓದುವ ಮತ್ತು ಬರೆಯುವ ಕೆಲಸಗಳೆರಡೂ ಬಹಳ ಮಟ್ಟಿಗೆ ಒಂದನ್ನೊಂದು ಅವಲಂಬಿಸಿವೆ. ಹಾಗಾಗಿ, ಅವೆರಡನ್ನೂ ಮಕ್ಕಳು ಒಟ್ಟೊಟ್ಟಾಗಿ ಕಲಿತುಕೊಳ್ಳುವಂತೆ ಮಾಡಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ಓದಲು ಕಲಿಸುವ ಬಗೆ

ನುಡಿಯರಿಮೆಯ ಇಣುಕುನೋಟ – 16

ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಮಾತನಾಡಲು ಕಲಿಯದಿರುವುದಿಲ್ಲ.

ಹಾಗಾಗಿ, ಮಾತಿನ ಕಲಿಕೆಯನ್ನು ಮಕ್ಕಳು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಅಳವೆಂದು ಹೇಳಲಾಗುತ್ತದೆ. ಆದರೆ, ಓದಿನ ಕಲಿಕೆ ಆ ರೀತಿಯದಲ್ಲ; ಹೆಚ್ಚಿನ ಮಕ್ಕಳಿಗೂ ಓದುವ ಬಗೆಯನ್ನು ಯಾರಾದರೂ ಕಲಿಸಿಕೊಟ್ಟಲ್ಲಿ ಮಾತ್ರ ಅವರು ಅದನ್ನು ಕಲಿಯುತ್ತಾರೆ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಓದು ಹುಟ್ಟಿನಿಂದ ಬರುವ ಅಳವಲ್ಲ; ಕಲಿತು ಪಡೆಯುವ ಅಳವು.

ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಾದರೆ, ಮಕ್ಕಳು ಕೆಲವು ಚಳಕ(ಕವ್ಶಲ್ಯ)ಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ: ಮಾತಿನಲ್ಲಿ ಬರುವ ಪದಗಳನ್ನೆಲ್ಲ ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು, ಮತ್ತು ಪುಟಗಳಲ್ಲಿ ಬರುವ ಗುರುತುಗಳಿಗೂ ಈ ಮಾತಿನ ಉಲಿಗಳಿಗೂ ನಡುವೆ ಎಂತಹ ಸಂಬಂದವಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಇದಲ್ಲದೆ, ಪುಟಗಳಲ್ಲಿ ಬರುವ ಈ ಗುರುತುಗಳ ಜೋಡಣೆಗಳಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹಗಾರನು ಏನು ಹೇಳುತ್ತಿದ್ದಾನೆ ಎಂಬುದನ್ನು (ಎಂದರೆ ಬರಹದ ಹುರುಳನ್ನು) ತಿಳಿಯಲು ಅವರು ಕಲಿಯಬೇಕು.

ಮಾತಿನಲ್ಲಿ ಬರುವ ಪದಗಳು ಉಲಿಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಗಮನಿಸುವಂತೆ ಮಾಡಲು ಮಕ್ಕಳಿಗೆ ಕೆಲವು ಆಟಗಳನ್ನು ಕಲಿಸಬಹುದು: ಮನೆ, ಮಾತು, ಮೋಡ, ಮುಗಿಲು ಎಂಬಂತಹ ಪದಗಳಲ್ಲೆಲ್ಲ ಮೊದಲಿಗೆ ಮಕಾರ ಬಂದಿದೆ, ಕೆಲವು ಪದಗಳಿಂದ ಈ ಮಕಾರವನ್ನು ತೆಗೆದು ಹಾಕಿದರೆ ಬೇರೊಂದು ಪದ ಸಿಗುತ್ತದೆ (ಮತ್ತೆ-ಅತ್ತೆ, ಮಾಡು-ಆಡು, ಮಿಡಿ-ಇಡಿ), ಕೆಲವು ಪದಗಳಲ್ಲಿ ಮಕಾರದ ಬದಲು ಕಕಾರವನ್ನು ಬಳಸಿದರೆ ಬೇರೆ ಪದ ಸಿಗುತ್ತದೆ (ಮತ್ತೆ-ಕತ್ತೆ, ಮಾಡು-ಕಾಡು, ಮಿಡಿ-ಕಿಡಿ) ಎಂಬಂತಹ ವಿಶಯಗಳನ್ನು ಅವರು ಗಮನಿಸುವ ಹಾಗೆ ಮಾಡಬಹುದು, ಮತ್ತು ಪದಗಳನ್ನು ಉಲಿಗಳಾಗಿ ಒಡೆಯುವ ಬಗೆಯನ್ನು ಕಲಿಸಬಹುದು. ಇದರಿಂದ, ಪದಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಅವರು ತಿಳಿಯುವ ಹಾಗೆ ಮಾಡಬಹುದು.

ಕನ್ನಡ ಬರಹದ ಪುಟಗಳಲ್ಲಿ ಕಾಣಿಸುವ ಗುರುತು(ಬರಿಗೆ)ಗಳಿಗೂ ಅವನ್ನು ಓದುವಲ್ಲಿ ಬಳಕೆಯಾಗುವ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ; ಇಂಗ್ಲಿಶ್ ಬರಹದಲ್ಲಿರುವ ಹಾಗೆ ಅದು ತೊಡಕು ತೊಡಕಾಗಿಲ್ಲ. ಹಾಗಾಗಿ, ಕನ್ನಡ ಬರಹಗಳನ್ನು ಓದಲು ಕಲಿಯುವ ಮಕ್ಕಳು ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಂತೆ ಮಾಡುವುದು ಹೆಚ್ಚು ತೊಡಕಿನ ಕೆಲಸವಲ್ಲ. ಆದರೆ, ಸಂಸ್ಕ್ರುತದ ಎರವಲು ಪದಗಳಲ್ಲಿ ಬಳಕೆಯಾಗುತ್ತಿರುವ ಅಲ್ಪಪ್ರಾಣ-ಮಹಾಪ್ರಾಣ, ರು-ಋ, ಶ-ಷ ಮೊದಲಾದ ಹಲವು ವ್ಯತ್ಯಾಸಗಳು ಓದಿನಲ್ಲಿ ಕಾಣಿಸುವುದಿಲ್ಲ, ಮತ್ತು ಇವುಗಳಿಂದಾಗಿ ಉಲಿಗಳಿಗೂ ಬರಿಗೆಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಲ್ಲಿ ಹೆಚ್ಚಿನ ಮಕ್ಕಳೂ ಗೊಂದಲದಲ್ಲಿ ಬೀಳುತ್ತಾರೆ. ಹಾಗಾಗಿ, ಕನ್ನಡದ ಮಟ್ಟಿಗೆ ಅನವಶ್ಯಕವಾಗಿರುವ ಈ ವ್ಯತ್ಯಾಸಗಳನ್ನು ಮಕ್ಕಳ ಓದಿನಿಂದ ದೂರ ಇರಿಸುವುದು ಒಳ್ಳೆಯದು.

ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ತಿಳಿಯುವುದು ಬರಹವನ್ನು ಓದಲು ಕಲಿಯುವಲ್ಲಿ ತುಂಬಾ ಮುಕ್ಯವಾದ ಕೆಲಸ. ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ. ಈ ನಂಟನ್ನು ತಿಳಿಯದ ಮಕ್ಕಳು ಪದಗಳನ್ನು ಚಿತ್ರಗಳ ಹಾಗೆ ಇಡಿ ಇಡಿಯಾಗಿ ಓದಲು ಹೋಗುತ್ತಾರೆ, ಮತ್ತು ಇದರಿಂದಾಗಿ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವರ ಓದು ಮುಂದೆ ಸಾಗುವುದಿಲ್ಲ.

ಇತ್ತೀಚೆಗೆ ನಡೆಸಿದ ಹಲವು ಮಿದುಳಿನ ಅರಕೆಗಳು ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳಿಗೂ ಹಿಂದೆ ಬೀಳುವ ಮಕ್ಕಳಿಗೂ ನಡುವೆ ಅವರು ಪದಗಳನ್ನು ಓದುವ ಬಗೆಯಲ್ಲೇ ಇಂತಹ ವ್ಯತ್ಯಾಸವಿದೆಯೆಂಬುದನ್ನು ಸ್ಪಶ್ಟವಾಗಿ ತೋರಿಸಿಕೊಟ್ಟಿವೆ. ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಮೂರು ಜಾಗಗಳು ಮಿಂಚುತ್ತಿರುತ್ತವೆ: ಬರಿಗೆಗಳನ್ನು ಗುರುತಿಸುವ ಕಣ್ಣಿಗೆ ಸಂಬಂದಿಸಿದ ಜಾಗ, ಅವನ್ನು ಉಲಿಗಳೊಂದಿಗೆ ಜೋಡಿಸುವ ಕಿವಿಗೆ ಸಂಬಂದಿಸಿದ ಜಾಗ, ಮತ್ತು ಅವನ್ನು ಹುರುಳಿನೊಂದಿಗೆ ಸಂಬಂದಿಸುವ ಮಿದುಳಿನ ಹಿಂಬಾಗದಲ್ಲಿರುವ ಜಾಗ. ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಕಣ್ಣಿಗೆ ಮತ್ತು ಹುರುಳಿಗೆ ಸಂಬಂದಿಸಿದ ಜಾಗಗಳು ಮಾತ್ರ ಮಿಂಚುತ್ತಿರುತ್ತವಲ್ಲದೆ, ಕಿವಿಗೆ ಸಂಬಂದಿಸಿದ ಜಾಗ ಮಿಂಚುತ್ತಿರುವುದಿಲ್ಲ. ಎಂದರೆ, ಪದಗಳನ್ನು ಬರಿಗೆಗಳಾಗಿ ಒಡೆದು, ಅವನ್ನು ಉಲಿಗಳೊಂದಿಗೆ ಸಂಬಂದಿಸಿ ಓದುವುದು ಹೇಗೆ ಎಂಬುದನ್ನು ಅವರು ಕಲಿತಿಲ್ಲ.

ಒಮ್ಮೆ ಪದಗಳನ್ನು ಬರಿಗೆಗಳಾಗಿ ಬಿಡಿಸಿ, ಅವನ್ನು ಉಲಿಗಳೊಂದಿಗೆ ಸಂಬಂದಿಸಲು ಕಲಿತಮೇಲೆ, ಆಗಾಗ ಬರುವ ಪದಗಳನ್ನು ಇಡಿ ಇಡಿಯಾಗಿ ಗುರುತಿಸಿ ಓದುವ ಬಗೆಯನ್ನೂ ಮಕ್ಕಳು ಕಲಿತುಕೊಳ್ಳಬೇಕಾಗುತ್ತದೆ; ಯಾಕೆಂದರೆ, ಬರಹಗಳನ್ನು ಬೇಗನೆ ಮತ್ತು ಸಲೀಸಾಗಿ ಓದಲು ಇಂತಹ ಕಲಿಕೆಯೂ ಬೇಕಾಗುತ್ತದೆ. ಆದರೆ, ಆಮೇಲೆಯೂ, ಅಪರೂಪಕ್ಕೆ ಬರುವ ಪದಗಳನ್ನು ಮತ್ತು ಹೊಸ ಪದಗಳನ್ನು ಓದಲು ಅವನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಸಂಬಂದಿಸುವ ಬಗೆ ಅವರಿಗೆ ಬೇಕಾಗುತ್ತದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಕಲಿತರೆ ಸಾಲದು, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿ, ಅವುಗಳಿಂದ ಹುರುಳನ್ನು ಪಡೆಯುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯಬೇಕಾಗುತ್ತದೆ. ಅವರ ಓದು ಬೇಗನೆ ಮತ್ತು ಸಲೀಸಾಗಿ ನಡೆಯುತ್ತಿದೆಯಾದರೆ ಮಾತ್ರ ಅವರಿಗೆ ಈ ರೀತಿ ತಮ್ಮ ಓದಿನಿಂದ ಹುರುಳನ್ನು ಪಡೆಯಲು ಬರುತ್ತದೆ. ತುಂಬಾ ಮೆಲ್ಲಗೆ ಓದುವ ಮಕ್ಕಳಿಗೆ ಪದಗಳು ಮಾತ್ರ ಕಾಣಿಸುತ್ತವಲ್ಲದೆ ಪದಕಂತೆಗಳು ಇಲ್ಲವೇ ಸೊಲ್ಲುಗಳು ಕಾಣಿಸುವುದಿಲ್ಲ.

ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ (ಪದಕೋಶ) ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳುತ್ತವೆ; ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು. ಬಗೆ ಬಗೆಯ ಬರಹಗಳನ್ನು, ಮತ್ತು ಹೆಚ್ಚು ಹೆಚ್ಚು ಬರಹಗಳನ್ನು ಅವರು ಓದುವ ಹಾಗೆ ಮಾಡುವ ಮೂಲಕ ಅವರ ಈ ಓದಿನ ಪದನೆರಕೆಯನ್ನು ಹಿಗ್ಗಿಸಲು ಬರುತ್ತದೆ.

ಕೆಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ; ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಮಕ್ಕಳಿಗೆ ಹೇಳುತ್ತಿರುತ್ತಾರೆ. ಆದರೆ, ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಓದಿನ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಬರಹಗಳನ್ನೂ ಓದುತ್ತಿರಬೇಕು. ಹಾಗಾಗಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಅವರು ಓದುವಂತೆ ಮಾಡಬೇಕು.

ಓದಿನಲ್ಲಿ ತಮಗೆ ತಿಳಿಯದ ಪದ ಬಂದಾಗ, ಅದರ ಹುರುಳನ್ನು ಪದನೆರಕೆಯ ನೆರವಿನಿಂದ ಕಂಡುಹಿಡಿಯುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಪದನೆರಕೆಗಳಲ್ಲಿ ಪದಗಳಿಗೆ ಹಲವು ಹುರುಳುಗಳನ್ನು ಕೊಟ್ಟಿರುತ್ತಾರೆ. ಇವುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹದನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಈ ರೀತಿ ತಮ್ಮ ಓದಿಗೆ ಪದನೆರಕೆಯ ನೆರವನ್ನು ಪಡೆಯಲು ಕಲಿತ ಮಕ್ಕಳ ಓದಿನ ಪದನೆರಕೆಯೂ ಬೇಗನೆ ಹಿಗ್ಗುತ್ತದೆ.

ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಬೇರೆ ವಿಶಯಗಳಲ್ಲೂ ಹಿಂದೆ ಬೀಳುತ್ತಾರೆ; ಯಾಕೆಂದರೆ, ಈ ಎಲ್ಲಾ ವಿಶಯಗಳ ಕಲಿಕೆಯನ್ನೂ ಅವರು ಓದಿನ ಮೂಲಕವೇ ನಡೆಸಬೇಕಾಗುತ್ತದೆ. ಹಾಗಾಗಿ, ಮಕ್ಕಳು ಬೇಗನೆ ಮತ್ತು ಸಲೀಸಾಗಿ ಓದಲು ಕಲಿಯುವಂತೆ ಮಾಡುವುದು, ಮತ್ತು ಇದಕ್ಕಾಗಿ ಅವರ ಓದು ಸರಿಯಾದ ಕ್ರಮದಲ್ಲಿ ಮುಂದುವರಿಯುವಂತೆ ಮಾಡುವುದು ತುಂಬಾ ಮುಕ್ಯವಾದ ಕೆಲಸವಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹಕ್ಕೆ ಮೇಲ್ಮೆ ಬಂದುದು ಹೇಗೆ?

ನುಡಿಯರಿಮೆಯ ಇಣುಕುನೋಟ – 14

ಮೊನ್ನೆ ಮೊನ್ನೆಯ ವರೆಗೂ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತರೆ ಸಾಕಿತ್ತು; ಉಳಿದವರೆಲ್ಲ ಅದರಿಂದ ದೂರವೇ ಉಳಿಯಬಹುದಿತ್ತು, ಮತ್ತು ಹೀಗೆ ಬರಹದಿಂದ ದೂರ ಉಳಿದುದರಿಂದಾಗಿ ಅವರಿಗೆ ಜೀವನದಲ್ಲಿ ಯಾವ ತೊಂದರೆಯೂ ಉಂಟಾಗುತ್ತಿರಲಿಲ್ಲ.

ಆದರೆ, ಇವತ್ತು ಎಲ್ಲಾ ಜನರೂ ಬರಹವನ್ನು ಕಲಿಯಬೇಕಾಗಿದೆ, ಮತ್ತು ಕಲಿತು ಬಳಸುತ್ತಿರಬೇಕಾಗಿದೆ. ಯಾಕೆಂದರೆ, ಹಾಗೆ ಮಾಡದವರಲ್ಲಿ ಹೆಚ್ಚಿನವರೂ ಇವತ್ತು ತಮ್ಮ ಜೀವನದಲ್ಲಿ ಸೋತುಹೋಗುತ್ತಿದ್ದಾರೆ. ಒಂದು ಸಮಾಜದ ಏಳಿಗೆಯಾಗಬೇಕಿದ್ದರೂ ಅದಕ್ಕೆ ಸೇರಿದ ಜನರೆಲ್ಲ ಬರಹವನ್ನು ಕಲಿಯುವುದು ಮತ್ತು ಬಳಸುವುದು ಇವತ್ತಿನ ಮಟ್ಟಿಗೆ ಅತ್ಯವಶ್ಯವಾಗಿದೆ.

ಇದುವರೆಗೂ ಇಲ್ಲದಿದ್ದ ಈ ಮೇಲ್ಮೆ ಬರಹಕ್ಕೆ ಬಂದುದು ಹೇಗೆ? ಮಿಲಿಯಗಟ್ಟಲೆ ವರ‍್ಶಗಳಿಂದಲೂ ಜನರ ನಡುವಿನ ಸಂಪರ‍್ಕಕ್ಕೆ ಕೊಂಡಿಯಾಗಿ, ಮತ್ತು ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ಬೇರೆಯವರಿಗೆ ತಿಳಿಸಲು ಬೇಕಾಗುವ ಒಯ್ಯುಗೆಯಾಗಿ ಮಾತನ್ನೇ ಬಳಸಲಾಗುತ್ತಿತ್ತು. ಆದರೆ, ಸುಮಾರು ನಾಲ್ಕಯ್ದು ಸಾವಿರ ವರ‍್ಶಗಳಶ್ಟು ಹಿಂದೆ, ಮಾತನ್ನು ಬರಹಕ್ಕಿಳಿಸುವ ಬಗೆಯನ್ನು ಕಂಡುಹಿಡಿಯಲಾಯಿತು. ಮೊದಲಿಗೆ ಇದನ್ನು ನೆನಪಿಗೆ ನೆರವಾಗುವಂತಹ ಕೆಲಸಗಳಲ್ಲಿ ತೊಡಗಿಸಲಾಯಿತು; ಆದರೆ ಆಮೇಲೆ, ದೂರ ಇರುವವರನ್ನು ಸಂಪರ‍್ಕಿಸುವುದಕ್ಕಾಗಿಯೂ ಇದನ್ನು ಬಳಸಲು ತೊಡಗಲಾಯಿತು.

ಹೀಗಿದ್ದರೂ, ಬರಹವೆಂಬುದು ಮೊನ್ನೆ ಮೊನ್ನೆಯ ವರೆಗೂ ಕೆಲವೇ ಕೆಲವು ಜನರ ಸೊತ್ತಾಗಿ ಮಾತ್ರ ಉಳಿದಿತ್ತು, ಮತ್ತು ಕೆಲವೇ ಕೆಲವು ನುಡಿಗಳನ್ನು ಆಡುವವರಲ್ಲಿ ಮಾತ್ರ ಅದು ಬಳಕೆಯಲ್ಲಿತ್ತು. ಸುಮಾರು ಮುನ್ನೂರು-ನಾನ್ನೂರು ವರ‍್ಶಗಳಶ್ಟು ಹಿಂದೆ ಬರಹಗಳನ್ನು ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ವಿಶಯದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿತು; ಅದರಲ್ಲೂ ಬರಹದಲ್ಲಿ ಬರುವ ಒಂದೊಂದು ಬರಿಗೆಗೂ ಒಂದೊಂದು ಮೊಳೆಯನ್ನು ಬಳಸಿ ಅಚ್ಚುಹಾಕುವ ಬಗೆಯನ್ನು ಕಂಡುಹಿಡಿದುದು ಈ ಕ್ರಾಂತಿ ಇನ್ನಶ್ಟು ವೇಗವಾಗಿ ಹಲವಾರು ನುಡಿಗಳನ್ನು ಆವರಿಸುವ ಹಾಗೆ ಮಾಡಿತು.

ಈ ಕ್ರಾಂತಿ ನಡೆಯುವ ಮೊದಲು, ಬರಹಗಳನ್ನು ಕಯ್ಯಲ್ಲಿ ನಕಲುಮಾಡಬೇಕಾಗಿತ್ತು; ಇದು ತುಂಬಾ ತೊಡಕಿನ ಮತ್ತು ತುಂಬಾ ಸಮಯ ತಗಲುವ ಕೆಲಸವಾಗಿತ್ತು; ಕೆಲವು ಮಂದಿ ಮಾತ್ರ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು, ಮತ್ತು ಇದರಿಂದಾಗಿ, ಬರಹವನ್ನು ಬಳಸುವವರ ಎಣಿಕೆ ತುಂಬಾ ಕಡಿಮೆಯಾಗಿಯೇ ಉಳಿದಿತ್ತು.

ಆದರೆ, ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಮತ್ತು ಅದಕ್ಕಾಗಿ ತೊಗಲು, ತೊಗಟೆ ಮೊದಲಾದವುಗಳನ್ನು ಬಳಸುವ ಬದಲು ಕಾಗದವನ್ನು ಬಳಸಲು ತೊಡಗಿದುದರಿಂದಾಗಿ, ಅವನ್ನು ತುಂಬಾ ಕಡಿಮೆ ಬೆಲೆಗೆ ಉಂಟುಮಾಡಲು, ಮತ್ತು ತುಂಬಾ ಸುಲಬವಾಗಿ ಉಂಟುಮಾಡಲು ಸಾದ್ಯವಾಯಿತು. ಇದರಿಂದಾಗಿ, ಅವುಗಳ ಪ್ರತಿಗಳನ್ನು ಒಮ್ಮೆಗೇನೇ ಸಾವಿರಾರು ಜನರಿಗೆ ತಲುಪಿಸಲು ಸಾದ್ಯವಾಯಿತು. ಇದಲ್ಲದೆ, ಅವನ್ನು ಬಳಸುವ ಕೆಲಸವೂ ತುಂಬಾ ಸುಲಬವಾಯಿತು.

ಬರಹಗಳನ್ನು ಅಚ್ಚುಹಾಕಿಸಲು ತೊಡಗಿದುದರಿಂದಾಗಿ, ಬರಹಗಳಲ್ಲಿ ಬಳಕೆಯಾಗುವ ಬರಿಗೆ(ಅಕ್ಶರ)ಗಳು, ಪದಗಳು, ಸೊಲ್ಲುಗಳು ಮೊದಲಾದುವೆಲ್ಲ ಎಲ್ಲಾ ಕಡೆಗಳಲ್ಲೂ ಹೆಚ್ಚುಕಡಿಮೆ ಒಂದೇ ರೂಪದಲ್ಲಿ ಉಳಿಯುವಂತಾಯಿತು, ಮತ್ತು ಇದರಿಂದಾಗಿ, ನಾಡಿನ ಒಂದು ಮೂಲೆಯಲ್ಲಿ ಉಂಟುಮಾಡಿದ ಬರಹವನ್ನು ಎಲ್ಲಾ ಕಡೆಗಳಲ್ಲಿರುವ ಜನರೂ ಸುಲಬವಾಗಿ ಓದಿ ತಿಳಿದುಕೊಳ್ಳುವಂತೆ ಮಾಡಲು ಸಾದ್ಯವಾಯಿತು.

ಹಿಂದಿನ ಕಾಲದಲ್ಲಿ ಬರಹಗಳನ್ನು ಯಾರಾದರೂ ಒಬ್ಬರು ದೊಡ್ಡದಾಗಿ ಓದುತ್ತಿದ್ದರು, ಮತ್ತು ಉಳಿದವರು ಅವರ ಸುತ್ತಲೂ ಕುಳಿತು ಅದನ್ನು ಕೇಳುತ್ತಿದ್ದರು; ಎಲ್ಲರಿಗೂ ತಮ್ಮವೇ ಆದ ಬರಹಗಳ ಪ್ರತಿಗಳು ದೊರೆಯತೊಡಗಿದ ಮೇಲೆ, ಅವನ್ನು ಗಟ್ಟಿಯಾಗಿ ಓದುವ ಬದಲು ಮನಸ್ಸಿನಲ್ಲೇನೇ ಓದುವ ಬಗೆ ಬಳಕೆಗೆ ಬಂತು. ಇದಕ್ಕನುಗುಣವಾಗಿ, ಬರಹಗಳ ಬಗೆಗಳಲ್ಲೂ ಹಲವು ಮಾರ‍್ಪಾಡುಗಳು ನಡೆದುವು.

ದಿನಪತ್ರಿಕೆ, ವಾರಪತ್ರಿಕೆ ಮೊದಲಾದುವನ್ನು ಅಚ್ಚುಹಾಕಿಸಿ, ಅವು ಒಮ್ಮೆಗೇನೇ ಲಕ್ಶಾಂತರ ಜನರನ್ನು ತಲಪುವ ಹಾಗೆ ಮಾಡಲಾಯಿತು, ಮತ್ತು ಬರಹವನ್ನು ಕಲಿಯುವವರಿಗೆಲ್ಲ ಅವರದೇ ಆದ ಕಲಿಕೆಯ ಪುಸ್ತಕಗಳು ಸಿಗುವಂತೆ ಮಾಡಲಾಯಿತು. ಬರಹದ ಬಳಕೆಯಲ್ಲಿ ಮತ್ತು ಕಲಿಕೆಯಲ್ಲಿ ಇಂತಹ ಹಲವಾರು ಮಾರ‍್ಪಾಡುಗಳು ಅವನ್ನು ಕಾಗದದಲ್ಲಿ ಅಚ್ಚುಹಾಕಲು ತೊಡಗಿದ ಮೇಲೆ ನಡೆದುಹೋಗಿವೆ. ಹಲವಾರು ಒಳನುಡಿಗಳನ್ನಾಡುವ ಜನರ ನಡುವೆ ಒಂದೇ ಬಗೆಯ ಬರಹದ ನುಡಿ ಬಳಕೆಗೆ ಬಂದಿರುವುದಕ್ಕೂ ಈ ರೀತಿ ಬರಹಗಳನ್ನು ಅಚ್ಚುಹಾಕಲು ತೊಡಗಿದುದೇ ಕಾರಣವಾಗಿದೆ.

ಬರಹಕ್ಕೆ ಈ ರೀತಿ ಹೆಚ್ಚು ಹೆಚ್ಚು ಮೇಲ್ಮೆ ಸಿಗುತ್ತಿದ್ದಂತೆ, ಜನರ ನಡವಳಿಕೆಗಳಲ್ಲೂ ಹಲವು ಬಗೆಯ ಮಾರ‍್ಪಾಡುಗಳು ಉಂಟಾಗತೊಡಗಿದುವು: ಜನರು ತಿಳಿವನ್ನು ಕೂಡಿಡುವ ಬಗೆ ಬೇರಾಯಿತು; ಮೊದಲಿಗೆ ಎಲ್ಲವನ್ನೂ ನೆನಪಿನಲ್ಲಿಯೇ ಉಳಿಸಿಕೊಳ್ಳಬೇಕಾಗಿತ್ತು; ಆದರೆ ಬರಹ ಹೆಚ್ಚು ಹೆಚ್ಚು ಬಳಕೆಗೆ ಬಂದಂತೆ, ತಿಳಿವನ್ನು ಹಲವು ಬಗೆಯ ಬರಹಗಳಲ್ಲಿ ಮತ್ತು ಪುಸ್ತಕಗಳಲ್ಲಿ ಕೂಡಿಡಲಾಯಿತು.

ಗಾದೆಗಳು, ಹಾಡುಗಳು, ಸೂತ್ರಗಳು, ನೀತಿಕತೆಗಳು ಮೊದಲಾದುವೆಲ್ಲ ತಿಳಿವನ್ನು ನೆನಪಿನಲ್ಲಿ ಕೂಡಿಡಲು ಬೇಕಾಗುವಂತಹ ಬಗೆಗಳು; ಬರಹಗಳಲ್ಲಿ ಕೂಡಿಡುವುದಕ್ಕೆ ಇಂತಹ ನೆನಪಿಸಲು ನೆರವಾಗುವ ಬಗೆಗಳು ಬೇಕಾಗುವುದಿಲ್ಲ. ಇದಕ್ಕೆ ಬದಲು, ಪುಸ್ತಕಗಳಲ್ಲಿ ಕಾಣಿಸುವಂತಹ ತಲೆಬರಹಗಳು, ಪಸುಗೆಗಳು, ದಪ್ಪಬರಿಗೆ, ತೆಳುಬರಿಗೆ ಮೊದಲಾದ ಬರಿಗೆರೂಪಗಳು, ಪಟ್ಟಿಗಳು, ಸುಟ್ಟಗೆಗಳು ಮೊದಲಾದ ಓದುವಲ್ಲಿ ನೆರವಾಗುವ ಬೇರೆಯೇ ಹಲವು ಬಗೆಗಳನ್ನು ಬಳಕೆಗೆ ತರಬೇಕಾಯಿತು.

ತಿಳಿವನ್ನು ಕೂಡಿಡುವ ಬಗೆಯಲ್ಲಿ ಮಾರ‍್ಪಾಡಾದುದರಿಂದಾಗಿ, ತಿಳಿವಿಗೂ ವಯಸ್ಸಿಗೂ ನಡುವಿದ್ದ ಸಂಬಂದ ಇಲ್ಲವಾಯಿತು; ಯಾವ ವಿಶಯದಲ್ಲಿ ಬೇಕಿದ್ದರೂ ಪುಸ್ತಕಗಳನ್ನು ಓದುವ ಮೂಲಕ, ದೊಡ್ಡವರಿಗಿಂತ ಹೆಚ್ಚು ತಿಳಿವನ್ನು ಚಿಕ್ಕವರು ಪಡೆಯಬಲ್ಲವರಾದರು. ಇದಲ್ಲದೆ, ಎಶ್ಟು ತಿಳಿವನ್ನು ಮತ್ತು ಎಶ್ಟು ಬಗೆಯ ತಿಳಿವನ್ನು ಪುಸ್ತಕಗಳಲ್ಲಿ ಕೂಡಿಡಬಲ್ಲೆವು ಎಂಬುದಕ್ಕೆ ಒಂದು ಮಿತಿಯೇ ಇಲ್ಲದಿರುವ ಹಾಗಾಯಿತು. ಹೊಸ ಹೊಸ ತಿಳಿವುಗಳನ್ನು ಪಡೆಯುತ್ತಿರುವಾಗಲೂ ಹಳೆಯವನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳಲು ಸಾದ್ಯವಾಯಿತು.

ತಿಳಿವನ್ನು ಬರಹರೂಪದಲ್ಲಿ ಉಳಿಸಿಕೊಳ್ಳಲು ತೊಡಗಿದುದರಿಂದಾಗಿ ಜನರು ಅದನ್ನೊಂದು ವಸ್ತುವಿನ ಹಾಗೆ ಕಾಣಲು ತೊಡಗಿದರು, ಮತ್ತು ಅದನ್ನು ಕಂಡುಹಿಡಿದವರು ಅದರ ಮೇಲೆ ತಮ್ಮ ಒಡೆತನವನ್ನು ಹೇರಲು ತೊಡಗಿದರು. ತಾವು ಕಂಡುಹಿಡಿದ ತಿಳಿವನ್ನು ಒಂದು ಪುಸ್ತಕದ ರೂಪದಲ್ಲಿ ಅಚ್ಚುಹಾಕಿಸಿ, ಅದನ್ನು ಸಾವಿರಾರು ಜನರಿಗೆ ತಲಪಿಸುವ ಮೂಲಕ, ಕೆಲವರು ಸಾಕಶ್ಟು ಹಣವನ್ನೂ ಕಲೆಹಾಕಿದರು.

ತಿಳಿವು ಎಂಬುದು ಬರಹವನ್ನು ಬಳಸಲು ತಿಳಿಯದವರಲ್ಲಿ ಅವರು ಮಾಡುವ ಕೆಲಸದ ಅಂಗವಾಗಿರುತ್ತದೆ; ಕೆಲಸ ಮಾಡಿದ ಅನುಬವವೇ ಅವರಲ್ಲಿ ತಿಳಿವಿನ ರೂಪದಲ್ಲಿರುತ್ತದೆ; ಅದನ್ನು ಅವರು ಆ ಕೆಲಸದಿಂದ ಬೇರ‍್ಪಡಿಸಿ ಪರಿಶೀಲಿಸಲಾರರು; ಅದರ ಕುರಿತಾಗಿ ಅವರು ಆಡಬಲ್ಲ ಮಾತುಗಳೂ ಅದನ್ನು ಬಳಸಿ ನಡೆಸಬಲ್ಲ ಕೆಲಸದೊಂದಿಗೆ ಹೆಣೆದುಕೊಂಡಿರುತ್ತವೆ.

ಇದಕ್ಕೆ ಬದಲು, ಕಾಗದದಲ್ಲಿ ಬರೆದ ಇಲ್ಲವೇ ಅಚ್ಚುಹಾಕಿದ ತಿಳಿವು ಅದನ್ನು ಬಳಸಿ ನಡೆಸುವ ಕೆಲಸಕ್ಕಿಂತ ಬೇರಾಗಿ ಉಳಿಯುತ್ತದೆ; ಅದನ್ನು ತಿರುತಿರುಗಿ ಓದಿ, ಆ ತಿಳಿವು ಸರಿಯೋ ತಪ್ಪೋ ಎಂದು ವಿಮರ‍್ಶಿಸಲು ಬರುತ್ತದೆ. ಹಾಗಾಗಿ, ಬರಹವನ್ನು ಬಳಸುವವರಿಗೂ ಅವನ್ನು ಬಳಸದವರಿಗೂ ನಡುವೆ ಅವರು ಆಲೋಚಿಸುವ ಬಗೆಯಲ್ಲೇ ಹಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.

ನಿಜಕ್ಕೂ ಬರಹ ಬಾರದವರು ಬರಹ ಬಲ್ಲವರಿಗಿಂತ ಜಾಣ್ಮೆಯಲ್ಲಾಗಲಿ, ಬುದ್ದಿವಂತಿಕೆಯಲ್ಲಾಗಲಿ ಕಡಿಮೆಯೇನಲ್ಲ; ಬರಹ ಬಲ್ಲವರಶ್ಟೇ ಜಾಣ್ಮೆಯಿಂದ ಮತ್ತು ಅವರಶ್ಟೇ ಚನ್ನಾಗಿ ಬರಹ ಬಾರದವರೂ ತಮ್ಮ ಜೀವನವನ್ನು ನಡೆಸಬಲ್ಲರು. ಆದರೆ, ಈ ಎರಡು ಬಗೆಯ ಜನರೂ ಒಂದೇ ನಾಡಿನಲ್ಲಿ ನೆಲೆಸಿದ್ದು, ಆ ನಾಡಿನ ಆಡಳಿತವನ್ನು ನಡೆಸುವ ಮತ್ತು ಅದರ ಕುರಿತಾಗಿ ತೀರ‍್ಮಾನಗಳನ್ನು ಕಯ್ಗೊಳ್ಳುವ ಮಂದಿಯೆಲ್ಲ ಬರಹಬಲ್ಲವರಾಗಿದ್ದಲ್ಲಿ, ಆ ನಾಡಿನಲ್ಲಿರುವ ಬರಹ ಬಾರದ ಜನರಲ್ಲಿ ಹೆಚ್ಚಿನವರೂ ತಮ್ಮ ಜೀವನದಲ್ಲಿ ಸೋತುಹೋಗುತ್ತಲೇ ಇರಬೇಕಾಗುತ್ತದೆ.

ಅದರಲ್ಲೂ ನಮ್ಮ ನಾಡಿನಲ್ಲಿರುವ ಹಾಗೆ ಆಡಳಿತವು ಮಂದಿಯಾಳ್ವಿಕೆಯದಾಗಿದ್ದಲ್ಲಿ, ಎಲ್ಲಾ ಮಂದಿಯೂ ಅದರಲ್ಲಿ ಸರಿಯಾಗಿ ತಮ್ಮ ಹೊಣೆಯನ್ನರಿತು ಪಾಲ್ಗೊಳ್ಳಬೇಕಾಗುತ್ತದೆ; ಹಾಗಾಗಿ, ಒಂದು ನಾಡಿನ ಮಂದಿಯಾಳ್ವಿಕೆ (ಪ್ರಜಾಪ್ರಬುತ್ವ) ಚನ್ನಾಗಿ ನಡೆಯಬೇಕಿದ್ದಲ್ಲಿ, ಎಲ್ಲರಿಗೂ ಬರಹದ ತಿಳಿವಿರುವುದು ಅತ್ಯವಶ್ಯ. ಇಲ್ಲವಾದರೆ, ಆ ನಾಡಿನಲ್ಲಿರುವ ಬರಹ ಬಾರದವರು ತಮ್ಮ ಏಳಿಗೆಗೆ ಮಾತ್ರವಲ್ಲದೆ ಇಡೀ ನಾಡಿನ ಏಳಿಗೆಗೂ ತೊಡಕಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಹೆಚ್ಚು ಬರಿಗೆಗಳಿರುವುದು ಸಿರಿತನವಲ್ಲ

ನುಡಿಯರಿಮೆಯ ಇಣುಕುನೋಟ – 13

ಕನ್ನಡ ಪದಗಳನ್ನು ಹೆಚ್ಚಿನವರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ನಮಗೆ ಬೇಕಾಗುವುದು ಒಟ್ಟು 31 ಬರಿಗೆಗಳು ಮಾತ್ರ. ಆದರೆ, ಇವತ್ತು ನಾವು ಕನ್ನಡ ಬರಹಗಳಲ್ಲಿ 48 (ಇಲ್ಲವೇ ಅದಕ್ಕಿಂತಲೂ ಹೆಚ್ಚು) ಬರಿಗೆಗಳನ್ನು ಬಳಸುತ್ತಿದ್ದೇವೆ. ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗಬಲ್ಲುದು.

ಇದನ್ನು ವಿರೋದಿಸುವವರಲ್ಲಿ ಕೆಲವರ ವಾದ ಹೀಗಿರುತ್ತದೆ: ಕನ್ನಡ ಬರಹದಲ್ಲಿ ಈ ರೀತಿ ಹೆಚ್ಚು ಬರಿಗೆಗಳಿರುವುದು ಅದರ ಶ್ರೀಮಂತಿಕೆ; ಅವನ್ನು ಕಳೆದುಕೊಳ್ಳುವುದೆಂದರೆ, ಕನ್ನಡ ಬರಹವನ್ನು ಬಡತನಕ್ಕೆ ನೂಕಿದ ಹಾಗೆ, ಮತ್ತು ಅದರ ಸಂಸ್ಕ್ರುತಿಯನ್ನು ನಾಶಮಾಡಿದ ಹಾಗೆ.

ಆದರೆ, ಈ ವಾದ ನಿಜಕ್ಕೂ ಸರಿಯಲ್ಲ; ಪದಗಳನ್ನು ಓದುವ ಹಾಗೆಯೇ ಬರೆಯಲು ಎಶ್ಟು ಬರಿಗೆಗಳು ಬೇಕಾಗುತ್ತವೆಯೋ ಅಶ್ಟನ್ನು ಮಾತ್ರ ಉಳಿಸಿಕೊಂಡಿರುವ ಬರಹವೇ ತುಂಬಾ ಒಳ್ಳೆಯ ಬರಹವೆಂದೆನಿಸುತ್ತದೆ. ಬೇಕಾದುದಕ್ಕಿಂತ ಹೆಚ್ಚು ಬರಿಗೆಗಳನ್ನು ಬಳಸುವ ಬರಹವನ್ನು ಕಲಿಯುವುದೂ ಕಶ್ಟ, ಬಳಸುವುದೂ ಕಶ್ಟ.

ಹಳೆಗನ್ನಡದಲ್ಲಿ ಱ ಮತ್ತು ೞಗಳೆಂಬ ಎರಡು ಹೆಚ್ಚಿನ ಬರಿಗೆಗಳಿದ್ದುವು; ಆ ಕಾಲದಲ್ಲಿ ರ-ಱ ಮತ್ತು ಳ-ೞಗಳ ನಡುವೆ ಓದಿನಲ್ಲಿ ವ್ಯತ್ಯಾಸವಿದ್ದ ಕಾರಣ, ಅವನ್ನು ಬರಹದಲ್ಲಿ ಬಳಸುತ್ತಿದ್ದುದು ಹಳೆಗನ್ನಡದ ಮಟ್ಟಿಗೆ ಸಿರಿತನವಾಗಿತ್ತು; ಆದರೆ, ಇವತ್ತು ನಾವು ಅವೆರಡು ಬರಿಗೆಗಳನ್ನೂ ಬಿಟ್ಟುಕೊಟ್ಟಿದ್ದೇವೆ; ಯಾಕೆಂದರೆ, ನಮ್ಮ ಓದಿನಲ್ಲಿ ಅವುಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ.

ಈ ಹೆಚ್ಚಿನ ಬರಿಗೆಗಳಿರುವುದು ಸಿರಿತನವೆಂದು, ಇಲ್ಲವೇ ಕನ್ನಡ ಬರಹದ ಸಂಸ್ಕ್ರುತಿಯೆಂದು ಅವನ್ನು ಇವತ್ತಿಗೂ ಉಳಿಸಿಕೊಂಡಿದ್ದಲ್ಲಿ, ನಮ್ಮ ಓದಿನಲ್ಲಿಲ್ಲದ ಈ ಎರಡು ಬಗೆಯ ವ್ಯತ್ಯಾಸಗಳನ್ನು ಬರಹದಲ್ಲಿ ಕಾಣಿಸುವ ಒಂದು ದೊಡ್ಡ ತೊಡಕು ನಮ್ಮದಾಗುತ್ತಿತ್ತು. ಕರೆ ‘ಬರಹೇಳು’, ಕರೆ ‘ಹಾಲು ಕರೆ’, ಊರು ‘ಹಳ್ಳಿ’, ಊರು ‘ನಿಲ್ಲಿಸು’, ತೆರೆ ‘ಕಡಲಿನ ತೆರೆ’, ತೆರೆ ‘ಬಾಗಿಲು ತೆರೆ’ ಎಂಬಂತಹ ಹಲವಾರು ಪದಗಳನ್ನು ಬರೆಯುವಾಗ, ಯಾವ ಪದದಲ್ಲಿ ರಕಾರವನ್ನು ಬಳಸಬೇಕು, ಮತ್ತು ಯಾವುದರಲ್ಲಿ ಱಕಾರವನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು. ಯಾಕೆಂದರೆ, ಮೇಲಿನ ಪದಜೋಡಿಗಳಲ್ಲಿ ರಕಾರವನ್ನು ಮೊದಲನೆಯದರಲ್ಲೂ ಱಕಾರವನ್ನು ಎರಡನೆಯದರಲ್ಲೂ ಬಳಸಬೇಕಾಗುತ್ತಿತ್ತು.

ಇದೇ ರೀತಿಯಲ್ಲಿ, ಉಳಿ ‘ಕೆತ್ತುವ ಉಳಿ’, ಉಳಿ ‘ ಮನೆಯಲ್ಲಿ ಉಳಿ’, ಎಳೆ ‘ಎಳತು’, ಎಳೆ ‘ಎಳೆದಾಡು’, ಬಳಸು ‘ನೇರವಲ್ಲದ’, ಬಳಸು ‘ಉಪಯೋಗಿಸು’ ಎಂಬಂತಹ ಬೇರೆ ಹಲವಾರು ಪದಜೋಡಿಗಳಲ್ಲಿ ಳಕಾರವನ್ನು ಯಾವ ಪದದಲ್ಲಿ ಬಳಸಬೇಕು ಮತ್ತು ೞಕಾರವನ್ನು ಯಾವ ಪದದಲ್ಲಿ ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು (ಎರಡನೆಯ ಪದದಲ್ಲಿ ೞಕಾರವಿತ್ತು).

ಹೊಸಗನ್ನಡವನ್ನು ಬಳಕೆಗೆ ತಂದವರು ಈ ಸಿರಿತನದ ಇಲ್ಲವೇ ಸಂಸ್ಕ್ರುತಿಯ ಹೊರೆಯನ್ನು ನಮ್ಮ ಮೇಲೆ ಹೊರಿಸ ಹೋಗದೆ ಒಂದು ದೊಡ್ಡ ಉಪಕಾರವನ್ನೇ ಮಾಡಿದ್ದಾರೆ. ಆದರೆ, ಸಂಸ್ಕ್ರುತದಿಂದ ಬಂದ ಎರವಲು ಪದಗಳ ಮಟ್ಟಿಗೆ ಮಾತ್ರ, ಅವರು ಇಂತಹದೇ ಇನ್ನೊಂದು ಬಗೆಯ ತೊಡಕನ್ನು ಇಲ್ಲವಾಗಿಸದೆ ಹಾಗೆಯೇ ಉಳಿಸಿದ್ದಾರೆ. ಸಂಸ್ಕ್ರುತದ ವಿಶಯವಾಗಿ ಅವರಿಗಿದ್ದ ಮೇಲರಿಮೆಯೇ ಇದಕ್ಕೆ ಕಾರಣ.

ಈ ಎರವಲು ಪದಗಳಲ್ಲಿ ಬರುವ ರು-ಋ, ಶ-ಷ, ಅಲ್ಪಪ್ರಾಣ-ಮಹಾಪ್ರಾಣ ಮೊದಲಾದವುಗಳ ನಡುವಿನ ವ್ಯತ್ಯಾಸ ಹೆಚ್ಚಿನ ಕನ್ನಡಿಗರ ಓದಿನಲ್ಲೂ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಅವನ್ನು ಬರಹದಲ್ಲಿ ಕಾಣಿಸಬೇಕಿದ್ದರೆ, ಯಾವ ಪದದಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ. ಹಳೆಗನ್ನಡದ ರ-ಱ ಮತ್ತು ಳ-ೞ ವ್ಯತ್ಯಾಸಗಳ ಹಾಗೆಯೇ ಇವೂ ಕೂಡ ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಹೆಚ್ಚಿನ ಕನ್ನಡಿಗರಿಗೂ ಅನವಶ್ಯಕವಾಗಿ ತೊಡಕನ್ನು ಉಂಟುಮಾಡುತ್ತವೆ.

ಸಂಸ್ಕ್ರುತ ಎರವಲುಗಳಾದ ಅವಶ್ಯ-ಮನುಷ್ಯ, ವಿಶಾಲ-ಕಷಾಯ, ಕೃಶ-ಕೃಷಿ, ಶಿಶು-ವಿಷು, ನಶಿಸು-ದೂಷಿಸು, ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಶ-ಷ ವ್ಯತ್ಯಾಸ ಕಾಣಿಸುತ್ತದೆ, ಆದರೆ ಅವುಗಳ ಓದಿನಲ್ಲಿ ಕಾಣಿಸುವುದಿಲ್ಲ; ಇದೇ ರೀತಿಯಲ್ಲಿ ಬೋಧಿಸು-ಭೇದಿಸು, ವರ್ಧಿಸು-ಮರ್ದಿಸು, ವಿಧಾನ-ವಿದಾಯ, ಸಂಪಾದಿಸು-ಸಂಬಂಧಿಸು ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಕಾಣಿಸುವ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸವೂ ಓದಿನಲ್ಲಿಲ್ಲ.

ಹಳೆಗನ್ನಡದ ವ್ಯತ್ಯಾಸಗಳ ಹಾಗೆ, ಓದಿನಲ್ಲಿಲ್ಲದ ಈ ಸಂಸ್ಕ್ರುತ ಎರವಲುಗಳ ನಡುವಿನ ವ್ಯತ್ಯಾಸವನ್ನೂ ಬಿಟ್ಟುಕೊಡುವ ಮೂಲಕ ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುವ ಹಾಗೆ ಮಾಡಬೇಕಾಗಿದೆ, ಮತ್ತು ಅದು ಎಲ್ಲಾ ಕನ್ನಡಿಗರನ್ನೂ ತಲಪುವ ಹಾಗೆ ಮಾಡಬೇಕಾಗಿದೆ. ಓದಿನಲ್ಲಿ ಕಾಣಿಸಿಕೊಳ್ಳದ ಈ ಹೆಚ್ಚಿನ ಬರಿಗೆಗಳು ಕನ್ನಡ ಬರಹದ ಸಿರಿವಂತಿಕೆಯೂ ಅಲ್ಲ, ಸಂಸ್ಕ್ರುತಿಯೂ ಅಲ್ಲ. ಕನ್ನಡ ಬರಹವನ್ನು ಬಳಸುವಲ್ಲಿ ಅವು ಒಂದು ಅವಶ್ಯವಿಲ್ಲದ ಹೊರೆ ಮಾತ್ರ.

ಓದಿನಲ್ಲಿಲ್ಲದ ಬರಿಗೆ ಒಂದು ಬರಹಕ್ಕೆ ಬೇಕಾಗುವುದಿಲ್ಲವೆಂಬುದಕ್ಕೆ ಸಂಸ್ಕ್ರುತದಿಂದಲೇ ಒಂದು ಎತ್ತುಗೆಯನ್ನು ಕೊಡಬಹುದು: ಕನ್ನಡ ಬರಹದಲ್ಲಿ ಎ-ಏ ಮತ್ತು ಒ-ಓ ಎಂಬ ವ್ಯತ್ಯಾಸ ಇದೆ; ಆದರೆ, ಸಂಸ್ಕ್ರುತ ಬರಹದಲ್ಲಿ ಈ ವ್ಯತ್ಯಾಸವಿಲ್ಲ. ಆದರೆ ಈ ಕಾರಣಕ್ಕಾಗಿ, ಕನ್ನಡ ಬರಹ ಸಂಸ್ಕ್ರುತ ಬರಹಕ್ಕಿಂತ ಹೆಚ್ಚು ಶ್ರೀಮಂತವಾದುದೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಸಂಸ್ಕ್ರುತ ಪದಗಳ ಓದಿನಲ್ಲಿ ಕಾಣಿಸದಿರುವ ಈ ವ್ಯತ್ಯಾಸ ಸಂಸ್ಕ್ರುತ ಬರಹದಲ್ಲಿ ಇಲ್ಲದಿರುವುದು ಸಂಸ್ಕ್ರುತ ಬರಹದ ಸಿರಿತನವಲ್ಲದೆ ಬಡತನವಲ್ಲ.

ಪದಗಳಲ್ಲಿ ಎಶ್ಟು ಉಲಿಗಳು ಬಳಕೆಯಾಗುತ್ತವೆ, ಮತ್ತು ಯಾವ ಉಲಿಗಳು ಬಳಕೆಯಾಗುತ್ತವೆ ಎಂಬ ವಿಶಯದಲ್ಲಿ ನುಡಿಗಳು ಒಂದರಿಂದೊಂದು ತೀರಾ ಬೇರಾಗಿರಬಲ್ಲುವು. ಆಪ್ರಿಕಾದ ಬೊತ್ಸ್‌ವಾನಾದಲ್ಲಿ ಬಳಕೆಯಲ್ಲಿರುವ ಕೆಲವು ನುಡಿಗಳಲ್ಲಿ ನೂರಕ್ಕಿಂತಲೂ ಹೆಚ್ಚು ಉಲಿಗಳು ಬಳಕೆಯಲ್ಲಿದ್ದು, ಅವನ್ನು ಓದುವಂತೆ ಬರೆಯಲು ನೂರಕ್ಕಿಂತಲೂ ಹೆಚ್ಚು ಬರಿಗೆಗಳು ಬೇಕಾಗುತ್ತವೆ. ಇದಕ್ಕೆ ಬದಲು, ಪಾಪುವಾ ನ್ಯೂಗಿನಿಯ ರೋತೋಕಸ್ ಎಂಬ ನುಡಿಯಲ್ಲಿ ಹತ್ತು-ಹನ್ನೆರಡು ಉಲಿಗಳು ಮಾತ್ರ ಬಳಕೆಯಲ್ಲಿದ್ದು, ಅವನ್ನು ಓದುವ ಹಾಗೆ ಬರೆಯಲು ಹತ್ತು-ಹನ್ನೆರಡು ಬರಿಗೆಗಳು ಮಾತ್ರ ಸಾಕಾಗುತ್ತವೆ.

ಜಗತ್ತಿನಲ್ಲಿರುವ ಎಲ್ಲಾ ನುಡಿಗಳಲ್ಲೂ ಬಳಕೆಯಲ್ಲಿರುವ ಉಲಿಗಳನ್ನು ಬರೆಯಬೇಕಿದ್ದಲ್ಲಿ ನೂರಾರು ಬರಿಗೆಗಳು ಮತ್ತು ಇನ್ನೂ ಹಲವಾರು ಬಗೆಯ ಗುರುತುಗಳು ಬೇಕಾಗುತ್ತವೆ. ಹಾಗಾಗಿ, ಯಾವುದೇ ಒಂದು ನುಡಿಯಲ್ಲೂ ಬೇಕಾದುದಕ್ಕಿಂತ ಹತ್ತೋ ಇಪ್ಪತ್ತೋ ಹೆಚ್ಚು ಬರಿಗೆಗಳಿದ್ದಲ್ಲಿ, ಅವುಗಳ ನೆರವಿನಿಂದ ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವಂತೆಯೇ ಬರೆಯಲು ಬರುತ್ತದೆಯೆಂಬುದು ಪೊಳ್ಳು ವಾದ.

ನಿಜಕ್ಕೂ ಕನ್ನಡ ಬರಹದಲ್ಲಿರುವ ಈ ಹೆಚ್ಚಿನ ಬರಿಗೆಗಳು ಸಂಸ್ಕ್ರುತ ಎರವಲುಗಳನ್ನು ಮಾತ್ರ ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ನೆರವಾಗುತ್ತವೆ; ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವ ಹಾಗೆ ಬರೆಯಬೇಕಿದ್ದಲ್ಲಿ, ಅದಕ್ಕಾಗಿ ಬೇರೆಯೇ ಹೆಚ್ಚಿನ ಬರಿಗೆಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ. ತುಳು ನುಡಿಯ ಪದಗಳನ್ನು ಅದರಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗಿರುವ ಬರಿಗೆಗಳು ಸಾಕಾಗುವುದಿಲ್ಲ; ಇನ್ನೊಂದು ಹೆಚ್ಚಿನ ಉಕಾರ ಮತ್ತು ಇನ್ನೆರಡು ಹೆಚ್ಚಿನ ಎಕಾರಗಳು ಬೇಕಾಗುತ್ತವೆ.

ನಿಜಕ್ಕೂ ಕನ್ನಡದವೇ ಆದ ಆಡುನುಡಿಗಳನ್ನೂ ಅವುಗಳಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗ ಬಳಕೆಯಾಗುತ್ತಿರುವ ಬರಿಗೆಗಳು ಸಾಕಾಗುವುದಿಲ್ಲ; ಗುಲ್ಬರ‍್ಗ ಕನ್ನಡದಲ್ಲಿ ಬರುವ ಎರಡು ಬಗೆಯ ಅಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ, ಸುಳ್ಯದ ಗವ್ಡ ಕನ್ನಡದಲ್ಲಿ ಬರುವ ಎರಡು ಬಗೆಯ ಉಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ ಬರೆದು ತೋರಿಸಲು ಕನ್ನಡ ಬರಹದಲ್ಲಿ ಬರಿಗೆಗಳಿಲ್ಲ.

ಹಾಗಾಗಿ, ಕನ್ನಡ ಬರಹದಲ್ಲಿ ಬರುವ ಪದಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ಬೇಕಾಗುವ 31 ಬರಿಗೆಗಳನ್ನು ಮಾತ್ರ ಉಳಿಸಿಕೊಳ್ಳುವುದೇ ಜಾಣತನ; ಉಳಿದುವನ್ನೆಲ್ಲ ಹೆಚ್ಚಿನ ಕನ್ನಡಿಗರೂ ಓದಬೇಕಾಗಿರುವ ಬರಹಗಳಿಂದ ತೆಗೆದುಹಾಕಬೇಕಾಗಿದೆ, ಮತ್ತು ಹಾಗೆ ಮಾಡುವ ಮೂಲಕ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಬಳಸುವಂತೆ ಮಾಡಬೇಕಾಗಿದೆ. ಸಂಸ್ಕ್ರುತಿ, ಶ್ರೀಮಂತಿಕೆ ಎಂಬಂತಹ ದೊಡ್ಡ ದೊಡ್ಡ ಪದಗಳನ್ನು ಬಳಸಿ ಓದುಗರು ಗೊಂದಲದಲ್ಲಿ ಬೀಳುವ ಹಾಗೆ ಮಾಡುವುದರಿಂದ ಕನ್ನಡಿಗರಿಗೇನೇ ಅನ್ಯಾಯವಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹವನ್ನು ಮಾರ‍್ಪಡಿಸಿ ಗೆದ್ದವರು

ನುಡಿಯರಿಮೆಯ ಇಣುಕುನೋಟ – 8

ಜಗತ್ತಿನ ಹಲವು ನುಡಿಗಳಲ್ಲಿ ಇತ್ತೀಚೆಗೆ, ಎಂದರೆ ಕಳೆದ ನೂರು-ನೂರಯ್ವತ್ತು ವರ‍್ಶಗಳಲ್ಲಿ, ನೂರಾರು ವರ‍್ಶಗಳಿಂದ ಬಳಕೆಯಲ್ಲಿದ್ದ ಬರಹಗಳನ್ನು ಮಾರ‍್ಪಡಿಸಿ, ಅವುಗಳಲ್ಲಿ ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲಾಗಿದೆ, ಮತ್ತು ಇದರಿಂದಾಗಿ ಆ ನುಡಿಗಳನ್ನಾಡುವ ಜನರಲ್ಲಿ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆ.

ಜನರ ಜೀವನದಲ್ಲಿ ಇತ್ತೀಚೆಗೆ ಬರಹ ಹೆಚ್ಚು ಹೆಚ್ಚು ಮುಕ್ಯವಾಗುತ್ತಿರುವುದು, ಮತ್ತು ಒಂದು ನಾಡಿನಲ್ಲಿರುವ ಎಲ್ಲಾ ಜನರೂ ಬರಹಬಲ್ಲವರಾಗದೆ ಆ ನಾಡಿನ ಏಳಿಗೆಯಾಗಲಾರದೆಂಬ ಪರಿಸ್ತಿತಿ ಉಂಟಾಗಿರುವುದು ಅವರು ಇಂತಹ ಮಾರ‍್ಪಾಡುಗಳನ್ನು ನಡೆಸಲು ಮುಕ್ಯ ಕಾರಣ.

ಬರಹಗಳನ್ನು ಎರಡು ಬಗೆಗಳಲ್ಲಿ ಈ ಕಾರಣಕ್ಕಾಗಿ ಮಾರ‍್ಪಡಿಸಲಾಗಿದೆ: ಅವುಗಳ ಬರಿಗೆ(ಅಕ್ಶರ)ಗಳಲ್ಲಿ ಬೇಕಾದವುಗಳನ್ನು ಮಾತ್ರ ಉಳಿಸಿಕೊಂಡು ಬೇಡದವುಗಳನ್ನು ತೆಗೆದುಹಾಕಿರುವುದು ಒಂದು ಬಗೆಯ ಮಾರ‍್ಪಾಡು, ಮತ್ತು ಬಳಕೆಯಲ್ಲಿರುವ ಬರಿಗೆಗಳನ್ನೇ ಬಿಟ್ಟುಕೊಟ್ಟು, ಅವುಗಳ ಬದಲಿಗೆ ಬೇರೆ ಬಗೆಯ ಬರಿಗೆಗಳನ್ನು ಬಳಸತೊಡಗಿರುವುದು ಇನ್ನೊಂದು ಬಗೆಯ ಮಾರ‍್ಪಾಡು.

ಗ್ರೀಕ್ ಬರಹದಲ್ಲಿ ಪದಗಳನ್ನು ಹಿಂದಿನ ಕಾಲದಲ್ಲಿದ್ದಂತೆ ಬರೆಯಲು ಹಲವು ಹೆಚ್ಚಿನ ಬರಿಗೆಗಳನ್ನು ಬಳಸಲಾಗುತ್ತಿತ್ತು; ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡಲು, 1982ರಲ್ಲಿ ಬೇಡದಿರುವ ಬರಿಗೆಗಳನ್ನೆಲ್ಲ ಬಿಟ್ಟುಕೊಡಲಾಯಿತು. ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಬರಿಗೆಗಳ ಬಳಕೆಯಿಲ್ಲ; ಕೆಲವರು ಗ್ರೀಕ್ ಪಂಡಿತರು ಮಾತ್ರ ಅವನ್ನು ಬಳಸುತ್ತಿದ್ದಾರೆ.

ಜಪಾನೀಸ್ ಬರಹದ ಕನ ಬರಿಗೆಗಳು ಒಂಬತ್ತನೇ ಶತಮಾನದಲ್ಲಿ ಸರಿಯಾಗಿದ್ದುವು; ಆದರೆ, ಆಮೇಲೆ ಮಾತಿನಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಅವಕ್ಕೂ ಅವುಗಳ ಓದಿಗೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದುವು. 1946ರಲ್ಲಿ ಇವನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾರ‍್ಪಡಿಸಲಾಯಿತು, ಮತ್ತು ಓದಿನಲ್ಲಿಲ್ಲದ ಕೆಲವು ಬರಿಗೆಗಳನ್ನು ಬಿಟ್ಟುಕೊಡಲಾಯಿತು.

ಕೊರಿಯನ್ ಬರಹದಲ್ಲಿ ಅವರವೇ ಆದ ಪದಗಳನ್ನು ಬರೆಯಲು ಹಂಗುಲ್ ಎಂಬ ತುಂಬಾ ಚನ್ನಾಗಿರುವ ಬರಿಗೆಗಳನ್ನು ಬಳಸಲಾಗುತ್ತಿದೆ; ಆದರೆ, ಚಯ್ನೀಸ್‌ನಿಂದ ಎರವಲು ಪಡೆದ ಪದಗಳನ್ನು ಬರೆಯಲು ತೊಡಕು ತೊಡಕಾಗಿರುವ ಚಯ್ನೀಸ್ ಮೂಲದ ಹಂಜ ಎಂಬ ಬರಿಗೆಗಳನ್ನು ಬಳಸಲಾಗುತ್ತಿದೆ. 1949ರಲ್ಲಿ ಈ ಚಯ್ನೀಸ್ ಎರವಲು ಪದಗಳನ್ನೂ ಹಂಗುಲ್‌ನಲ್ಲಿಯೇ ಬರೆಯುವ ನಿರ‍್ದಾರವನ್ನು ಉತ್ತರ ಕೊರಿಯಾದಲ್ಲಿ ಮಾಡಲಾಯಿತು, ಮತ್ತು ಇದರಿಂದಾಗಿ ಆ ನಾಡಿನಲ್ಲಿ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಯಿತು.

ದಕ್ಶಿಣ ಕೊರಿಯಾದಲ್ಲೂ ಹಂಜ ಬರಿಗೆಗಳ ಎಣಿಕೆಯನ್ನು ಸಾಕಶ್ಟು ಕಡಿಮೆ ಮಾಡಲಾಗಿದೆ, ಮತ್ತು ಅವನ್ನು ಎಲಿಮೆಂಟರಿ ಶಾಲೆಗಳಲ್ಲಿ ಕಲಿಸದಿರುವಂತೆ, ಮತ್ತು ಮಕ್ಕಳ ಪುಸ್ತಕಗಳಲ್ಲಿ, ಮತ್ತು ಎಲ್ಲಾ ಜನರೂ ಓದಬೇಕಾಗಿರುವ ಬರಹಗಳಲ್ಲಿ ಬಳಸದಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡುವುದಕ್ಕಾಗಿ ಟರ‍್ಕಿ, ಇಂಡೊನೇಶ್ಯಾ, ಮಲಯೇಶ್ಯಾ, ಸೋಮಾಲಿಯಾ ಮೊದಲಾದೆಡೆಗಳಲ್ಲಿ, ಮತ್ತು ಸೋವಿಯಟ್ ಯೂನಿಯನ್‌ನ ಹಲವು ನಾಡುಗಳಲ್ಲಿ ಅರೇಬಿಕ್ ಮೂಲದ ಬರಿಗೆಗಳನ್ನು ಬಿಟ್ಟುಕೊಟ್ಟು ರೋಮನ್ ಮೂಲದ ಬರಿಗೆಗಳನ್ನು ಬಳಕೆಗೆ ತರಲಾಗಿದೆ. ಇದರಿಂದಾಗಿ ಈ ನಾಡುಗಳಲ್ಲಿಯೂ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತಿದೆ.

ಇದಕ್ಕೆ ಬದಲು, ಅರೇಬಿಕ್ ಬರಿಗೆಗಳನ್ನು ಬಳಸುತ್ತಿರುವ ಇರಾನ್, ಇರಾಕ್ ಮೊದಲಾದ ಹಲವು ನಾಡುಗಳಲ್ಲಿ ಇವತ್ತಿಗೂ ಬರಹ ಬಲ್ಲವರ ಎಣಿಕೆ ತುಂಬಾ ಕಡಿಮೆಯಿದೆ. ಇದಕ್ಕೆ ಕೆಲವು ಸಾಮಾಜಿಕ ತೊಡಕುಗಳೂ ಕಾರಣವಿರಬಹುದು; ಆದರೆ, ಬರಹಗಳಲ್ಲಿ ಪದಗಳನ್ನು ಓದುವ ಹಾಗೆ ಬರೆಯದಿರುವುದು, ಮತ್ತು ಇದರಿಂದಾಗಿ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿರುವುದೂ ಒಂದು ಕಾರಣವೆಂಬುದರಲ್ಲಿ ಸಂಶಯವಿಲ್ಲ.

ಪದಗಳನ್ನು ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲು ಇತ್ತೀಚೆಗೆ ಬೇರೆ ಹಲವಾರು ನುಡಿಗಳ ಬರಹಗಳಲ್ಲೂ ಮಾರ‍್ಪಾಡುಗಳನ್ನು ನಡೆಸಲಾಗಿದೆ. ವಿಯೆಟ್ನಾಮ್‌ನಲ್ಲಿ ಚಯ್ನೀಸ್ ಬರಿಗೆಗಳ ಬದಲು ರೋಮನ್ ಮೂಲದ ಬರಿಗೆಗಳನ್ನು ಬಳಸಲು ತೊಡಗಿದುದರಿಂದಾಗಿ ಇವತ್ತು ವಿಯೆಟ್ನಮೀಸ್ ಬರಹಗಳಲ್ಲಿ ಚಯ್ನೀಸ್ ಎರವಲುಗಳನ್ನೂ ಓದುವ ಹಾಗೆಯೇ ಬರೆಯಲು ಸಾದ್ಯವಾಗಿದೆ; ಈ ಮಾರ‍್ಪಾಡನ್ನು ನಡೆಸಿದ ಬಳಿಕ ಅಲ್ಲಿಯೂ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ.

ಯುರೋಪಿನ ಹಲವಾರು ನುಡಿಗಳಲ್ಲೂ ಇತ್ತೀಚೆಗೆ ಬರಹಗಳಲ್ಲಿ ಮಾರ‍್ಪಾಡುಗಳನ್ನು ನಡೆಸುವ ಮೂಲಕ ಓದಿಗೂ ಬರಹಕ್ಕೂ ನಡುವಿರುವ ಅಂತರವನ್ನು ಕಡಿಮೆ ಮಾಡಲಾಗಿದೆ. ಹೆಸರು(ನಾಮ)ಪದಗಳನ್ನು ಬರೆಯುವಾಗ ಅವುಗಳ ಮೊದಲಿಗೆ ದೊಡ್ಡ ಬರಿಗೆಯನ್ನು ಬಳಸಬೇಕೆಂಬ ಕಟ್ಟಲೆಯನ್ನು ಡೇನಿಶ್‌ನಲ್ಲಿ ಬಿಟ್ಟುಕೊಡಲಾಗಿದೆ; ಕೊಟ್ಟಹೆಸರುಗಳಲ್ಲಿ ಮಾತ್ರ ಈ ಕಟ್ಟಲೆಯನ್ನು ಉಳಿಸಿಕೊಳ್ಳಲಾಗಿದೆ.

ಜರ‍್ಮನಿ, ಆಸ್ಟ್ರಿಯಾ, ಮತ್ತು ಸ್ವಿಜರ್‌ಲೇಂಡ್‌ಗಳಲ್ಲಿಯೂ ಜರ‍್ಮನ್ ಬರಹಗಳಲ್ಲಿರುವ ಬರಿಗೆಗಳ ಬಳಕೆಯಲ್ಲಿ ಹಲವು ಮಾರ‍್ಪಾಡುಗಳನ್ನು ನಡೆಸಬೇಕೆಂಬ ತೀರ‍್ಮಾನಕ್ಕೆ ಇತ್ತೀಚೆಗೆ ಬರಲಾಗಿತ್ತು; ಪದಗಳನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯಬೇಕೆಂಬುದೇ ಈ ಮಾರ‍್ಪಾಡುಗಳ ಮುಕ್ಯ ಉದ್ದೇಶವಾಗಿತ್ತು. ಈ ತೀರ‍್ಮಾನವನ್ನು 1996ರಲ್ಲಿ ಬಳಕೆಗೆ ತರಲಾಯಿತು.
ಆದರೆ, ಇದನ್ನು ವಿರೋದಿಸುವವರೂ ಕೆಲವರಿದ್ದು, ಜರ‍್ಮನಿಯಲ್ಲಿ ಈ ಮಾರ‍್ಪಾಡುಗಳನ್ನು ಬಳಸುವುದು ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿದೆ. ಹೀಗಿದ್ದರೂ, ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಮಾರ‍್ಪಡಿಸಿದ ಬರಿಗೆಗಳೇ ಬಳಕೆಯಾಗುತ್ತಿವೆ; ಕೆಲವು ಪತ್ರಿಕೆಗಳು ಮತ್ತು ಪುಸ್ತಕಗಳು ಮಾತ್ರ ಹಳೇ ಬರಹಕ್ಕೆ ಜೋತುಬಿದ್ದಿವೆ.

ಪೋರ‍್ಚುಗೀಸ್ ಬರಹದಲ್ಲೂ ಅದನ್ನು ಬಳಸುವ ಹಲವು ನಾಡುಗಳು ಒಟ್ಟುಸೇರಿ ಇಂತಹದೇ ಮಾರ‍್ಪಾಡನ್ನು ಬಳಕೆಗೆ ತಂದಿವೆ; ಇದಕ್ಕೆ ಮೊದಲು, ಪದಗಳನ್ನು ಅವುಗಳ ಮೂಲರೂಪ ಎಂತಹದು ಎಂಬುದನ್ನು ಸೂಚಿಸುವಂತೆ ಬರೆಯಲಾಗುತ್ತಿತ್ತು; ಆದರೆ, ಈ ರೂಪಗಳಿಗೂ ಅವನ್ನು ಓದುವ ಬಗೆಗೂ ನಡುವೆ ಯಾವ ಹೊಂದಾಣಿಕೆಯೂ ಇರಲಿಲ್ಲ; ಹಾಗಾಗಿ, ಅವುಗಳ ಈ ಹಳೆಯ ರೂಪಗಳನ್ನು ಬಿಟ್ಟುಕೊಟ್ಟು, ಆದಶ್ಟು ಮಟ್ಟಿಗೆ ಇವತ್ತು ಅವನ್ನು ಹೇಗೆ ಓದಲಾಗುತ್ತದೆಯೋ ಹಾಗೆಯೇ ಬರೆಯುವಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಲಾಗಿದೆ.

ಒಂದು ನಾಡಿನಲ್ಲಿ ಓದು-ಬರಹ ಬಲ್ಲವರ ಎಣಿಕೆ ಎಶ್ಟಿದೆ ಎಂಬುದು ಆ ನಾಡಿನ ಬರಹಗಳಲ್ಲಿ ಬಳಕೆಯಾಗುತ್ತಿರುವ ಬರಿಗೆಗಳನ್ನು ಕಲಿಯಲು ಮತ್ತು ಬಳಸಲು ಎಶ್ಟು ಸುಲಬ ಎಂಬುದರ ಮೇಲೆ ಮಾತ್ರವಲ್ಲದೆ, ಅಲ್ಲಿನ ಜನರ ಮೇಲೆ ಓದಿನ ಕುರಿತಾಗಿ ಎಂತಹ ಆಳ್ವಿಕೆಯ ಒತ್ತಡ, ನೆರೆಹೊರೆಯ ಒತ್ತಡ, ಮತ್ತು ಮನೆಯವರ ಒತ್ತಡವಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ; ಹಾಗಾಗಿ, ಕನ್ನಡದ ಬರಿಗೆಗಳಲ್ಲಿ ಮಾರ‍್ಪಾಡುಗಳನ್ನು ಮಾಡದಿದ್ದರೂ ಬರಹ ಬಲ್ಲವರ ಎಣಿಕೆ ಹೆಚ್ಚಬಲ್ಲುದು ಎಂಬುದಾಗಿ ಕೆಲವರಿಗೆ ಅನಿಸಬಹುದು.

ಆದರೆ, ಬರಿಗೆಗಳ ತೊಡಕೂ ಬರಹ ಬಲ್ಲವರ ಎಣಿಕೆ ಕಡಿಮೆಯಿರಲು ಒಂದು ಕಾರಣ ಎಂಬುದನ್ನು ಕಂಡುಕೊಂಡು, ಮೇಲೆ ಕೊಟ್ಟಿರುವಂತಹ ಹಲವಾರು ನುಡಿಗಳ ಬರಹಗಳಲ್ಲಿ ಬರಿಗೆಗಳನ್ನು ಮಾರ‍್ಪಡಿಸಲಾಗಿದೆ, ಮತ್ತು ಹಾಗೆ ಮಾಡುವ ಮೂಲಕ ಬರಹ ಬಲ್ಲವರ ಎಣಿಕೆಯನ್ನು ಹೆಚ್ಚಿಸಿಕೊಳ್ಳಲಾಗಿದೆ ಎಂಬುದನ್ನು ಮರೆಯಬಾರದು.

ಇಂಗ್ಲಿಶ್‌ನಲ್ಲಿ ಉಲಿಕೆಗೂ ಬರಿಗೆಗೂ ನಡುವೆ ಹೊಂದಾಣಿಕೆ ತುಂಬಾ ಕಡಿಮೆಯಿದೆಯಾದರೂ ಅದನ್ನು ಕಲಿಯುವವರ ಎಣಿಕೆ ತುಂಬಾ ಹೆಚ್ಚಿದೆಯಲ್ಲ ಎಂದು ಕೆಲವರು ಹೇಳಬಹುದು. ಆದರೆ, ಇಂಗ್ಲಿಶ್ ಬರಹದ ಈ ಸ್ಪೆಲ್ಲಿಂಗ್ ತೊಡಕಿನಿಂದಾಗಿ, ಅದನ್ನು ಕಲಿಯುವ ಮಕ್ಕಳಿಗೆ ಬೇರೆ ಬರಹಗಳನ್ನು ಕಲಿಯಲು ಬೇಕಾಗುವ ಸಮಯದ ಮೂರು ಪಾಲಶ್ಟು ಸಮಯ ಬೇಕಾಗುತ್ತದೆ.

ಇದಲ್ಲದೆ, ಹಾಗೆ ಕಶ್ಟಪಟ್ಟು ಕಲಿತವರಲ್ಲಿಯೂ ಹಲವರಿಗೆ ಸರಿಯಾಗಿ ಓದುವುದು ಹೇಗೆ ಎಂಬುದೇ ಗೊತ್ತಾಗಿರುವುದಿಲ್ಲ, ಮತ್ತು ಇದರಿಂದಾಗಿ ಅವರು ಆದಶ್ಟು ಮಟ್ಟಿಗೆ ಓದಿನಿಂದ ದೂರವೇ ಉಳಿಯಲು ಬಯಸುತ್ತಾರೆ. ಅಮೆರಿಕಾದಂತಹ ಮುಂದುವರಿದ ನಾಡುಗಳಲ್ಲೂ ಈ ತೊಂದರೆಯಿದೆ.

ಕನ್ನಡದ ಮಕ್ಕಳು ಈ ರೀತಿ ಕನ್ನಡ ಬರಹಗಳನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ತೊಂದರೆಗೊಳಗಾಗದಂತೆ ಮಾಡಲು, ಮತ್ತು ಅವನ್ನು ಎಲ್ಲಾ ಮಕ್ಕಳೂ ಸುಲಬವಾಗಿ ಮತ್ತು ಸರಿಯಾಗಿ ಓದಲು ಸಾದ್ಯವಾಗುವಂತೆ ಮಾಡಲು ಋ, ಷ, ಮಹಾಪ್ರಾಣ ಮೊದಲಾದ ಕನ್ನಡದ ಮಟ್ಟಿಗೆ ಬೇಡದಿರುವ ಕೆಲವು ಬರಿಗೆಗಳನ್ನು ಇವತ್ತು ಬಿಟ್ಟುಕೊಡಬೇಕಾಗಿದೆ. ಕನ್ನಡಿಗರಿಗೆ ತಮ್ಮ ನುಡಿಯ ಮೇಲಿರುವ ಕೀಳರಿಮೆಯನ್ನು ಇಲ್ಲವಾಗಿಸುವಲ್ಲಿಯೂ ಇದು ನೆರವಾಗಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ತಮಿಳರ ದಾರಿ ಮತ್ತು ನಮ್ಮ ದಾರಿ

ನುಡಿಯರಿಮೆಯ ಇಣುಕುನೋಟ – 7

ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಒಂದು ಮಿತಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬುದಾಗಿ ಹೇಳಿದಾಗ, ಇದು ತಮಿಳಿನ ದ್ರಾವಿಡ ಕಳಗಂ ಹಿಡಿದ ದಾರಿ ಎಂಬ ಮರುನುಡಿ ಕೇಳಿಬರುತ್ತದೆ.

ಆದರೆ, ಈ ಮರುನುಡಿ ಸರಿಯಲ್ಲ. ನಾವು ತಮಿಳರಿಂದಕಲಿಯಬಹುದಾದ ವಿಶಯಗಳೂ ಕೆಲವಿವೆ; ಆದರೆ ಹಾಗೆಂದು, ಎಲ್ಲಾ ವಿಶಯಗಳಲ್ಲೂ ಅವರನ್ನು ಕಣ್ಣುಮುಚ್ಚಿ ಹಿಂಬಾಲಿಸಬೇಕೆಂದೇನಿಲ್ಲ. ನಮಗೆ ಸರಿಯೆಂದು ಕಂಡುದನ್ನು ಅವರಿಂದ ಕಲಿಯೋಣ, ಮತ್ತು ಬೇರೆ ವಿಶಯಗಳಲ್ಲಿ ನಮ್ಮದೇ ಆದ ದಾರಿಯನ್ನೂ ಕಂಡುಕೊಳ್ಳೋಣ.

ತಮ್ಮ ನುಡಿಯ ಕುರಿತಾಗಿ ತಮಿಳರಿಗೆ ಎಲ್ಲೆಯಿಲ್ಲದ ಹೆಮ್ಮೆ ಮತ್ತು ಒಲುಮೆಗಳಿವೆ; ಆದರೆ, ಕನ್ನಡದ ತಿಳಿವಿಗರಿಗೆ ತಮ್ಮ ನುಡಿಯ ಕುರಿತು ಕೀಳರಿಮೆಯಿದೆ. ಎಂತಹ ಹೊಸ ಪದವನ್ನು ಬೇಕಿದ್ದರೂ ತಮ್ಮ ನುಡಿಯಲ್ಲಿ ಉಂಟುಮಾಡಲು ಬರುತ್ತದೆ ಎಂಬುದನ್ನು ತಮಿಳರು ಕಂಡುಕೊಂಡಿದ್ದಾರೆ, ಮತ್ತು ಅದನ್ನು ಬಳಕೆಗೂ ತಂದಿದ್ದಾರೆ; ಆದರೆ, ಕನ್ನಡದ ತಿಳಿವಿಗರು ಹೊಸ ಪದಗಳನ್ನುಂಟುಮಾಡಲು ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಕಯ್ಚೆಲ್ಲಿ ಕುಳಿತಿದ್ದಾರೆ.

ತಮಿಳಿನ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ತಮಿಳು ಪದಗಳಿವೆ; ಆದರೆ, ಕನ್ನಡದ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಹತ್ತರಶ್ಟೂ ಕನ್ನಡದ ಪದಗಳಿಲ್ಲ! ಇಂತಹ ಕೆಲವು ವಿಶಯಗಳಲ್ಲಿ ನಾವು ತಮಿಳರನ್ನು ಹಿಂಬಾಲಿಸಿದಲ್ಲಿ, ಅದು ನಮ್ಮ ನುಡಿಯ ಮತ್ತು ಸಮಾಜದ ಏಳಿಗೆಗೆ ನೆರವಾಗಬಲ್ಲುದು.

ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವರು ಹಿಡಿದ ದಾರಿ ನಮಗೆ ಬೇಕಿಲ್ಲ. ದ್ರಾವಿಡ ಕಳಗಗಳು ನಡೆಸಿದ ಚಳವಳಿಯಿಂದಾಗಿ, ತಮಿಳು ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳು ತುಂಬಾ ಕಡಿಮೆಯಾದುವೇನೋ ನಿಜ; ಆದರೆ, ಇದರಿಂದ ಬರಹದ ತಮಿಳಿಗೂ ತಮಿಳಿನ ಆಡುನುಡಿಗಳಿಗೂ ನಡುವಿದ್ದ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ಯಾಕೆಂದರೆ, ಬರಹದಿಂದ ತೆಗೆದು ಹಾಕಿದ ಸಂಸ್ಕ್ರುತ ಪದಗಳಿಗೆ ಬದಲಾಗಿ ಇವರು ಹಳೆತಮಿಳಿನ ಪದಗಳನ್ನೇ ಬಳಕೆಗೆ ತಂದಿದ್ದಾರೆ; ಇವು ಹೊಸತಮಿಳಿನ ಪದಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಇದಲ್ಲದೆ, ಹೆಚ್ಚುಕಡಿಮೆ ಹದಿಮೂರನೇ ಶತಮಾನದ ತಮಿಳನ್ನೇ ಬರಹಗಳಲ್ಲಿ ಬಳಸಲು ತೊಡಗಿದ್ದಾರೆ. ಇದು ಕನ್ನಡ ಬರಹಗಳಲ್ಲಿ ಇವತ್ತು ಹೊಸಗನ್ನಡದ ಬದಲು ಹಳೆಗನ್ನಡವನ್ನು ಬಳಸಲು ಹೊರಡುವ ಹಾಗೆ ಎನ್ನಬಹುದು.

ಇಂತಹ ತಮಿಳರ ದಾರಿ ನಮಗೆ ಬೇಕಾಗಿಲ್ಲ. ಕನ್ನಡ ಬರಹದಲ್ಲಿ ಯಾವ ಮಾರ‍್ಪಾಡನ್ನು ಮಾಡುವುದಿದ್ದರೂ ಅದಕ್ಕೆ ಕನ್ನಡ ಬರಹಕ್ಕೂ ಕನ್ನಡದ ಆಡುನುಡಿಗಳಿಗೂ ನಡುವಿರುವ ವ್ಯತ್ಯಾಸವನ್ನು ಕಡಿಮೆಮಾಡುವುದೇ ಮುಕ್ಯ ಗುರಿಯಾಗಿರಬೇಕು. ಕನ್ನಡಕ್ಕೆ ಬೇಕಿಲ್ಲದ ಮಹಾಪ್ರಾಣ, ಋಕಾರ, ಷಕಾರಗಳನ್ನು ಬರಹದಲ್ಲಿ ಬಳಸದಿರುವುದು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವುದು ಎಂಬ ಈ ಎರಡು ಮಾರ‍್ಪಾಡುಗಳಿಗೂ ಇದೇ ಮುಕ್ಯ ಗುರಿಯಾಗಿದೆ.

ಇನ್ನು ತಮಿಳು ಬರಹದಲ್ಲಿ ಮಹಾಪ್ರಾಣ, ಋಕಾರ, ಗಜಡದಬ ಮೊದಲಾದ ಕೆಲವು ಬರಿಗೆಗಳು ಬಳಕೆಯಾಗದಿರುವುದಕ್ಕೆ ದ್ರಾವಿಡ ಕಳಗಗಳು ಕಾರಣವಲ್ಲ. ಇತ್ತೀಚೆಗೆ ನಡೆಸಿದ ಯಾವ ಮಾರ‍್ಪಾಡೂ ಅದಕ್ಕೆ ಕಾರಣವಲ್ಲ. ಬ್ರಾಹ್ಮೀಲಿಪಿಯನ್ನು ತಮಿಳಿಗೆ ಅಳವಡಿಸುವ ಸಮಯದಲ್ಲೇನೇ, ಎಂದರೆ ಸುಮಾರು ಎರಡು ಸಾವಿರ ವರ‍್ಶಗಳಶ್ಟು ಹಿಂದೆಯೇ ತಮಿಳು ಬರಹದಲ್ಲಿ ಈ ಬರಿಗೆಗಳನ್ನು ಬಳಸದಿರಲು ತೀರ‍್ಮಾನಿಸಲಾಗಿತ್ತು.

ಆವತ್ತಿನ ತಮಿಳು ಓದಿಗೆ ಈ ಬರವಣಿಗೆ ಸರಿಯಾಗಿಯೂ ಇದ್ದಿರಬೇಕು; ಆದರೆ, ಆಮೇಲೆ ತಮಿಳು ನುಡಿಯಲ್ಲಿ ಹಲವಾರು ಮಾರ‍್ಪಾಡುಗಳು ನಡೆದಿದ್ದು, ಇದರಿಂದಾಗಿ ಇವತ್ತಿನ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದಿವೆ. ಈ ವ್ಯತ್ಯಾಸಗಳನ್ನನುಸರಿಸಿ ತಮಿಳು ಬರಹದಲ್ಲಿ ಹೆಚ್ಚಿನ ಮಾರ‍್ಪಾಡನ್ನೇನೂ ನಡೆಸಿಲ್ಲವಾದ ಕಾರಣ, ಅದರ ಬಳಕೆಯಲ್ಲಿ ಇವತ್ತು ಕೆಲವು ತೊಡಕುಗಳು ಕಾಣಿಸಿಕೊಳ್ಳುತ್ತಿವೆ.

ಸಂಸ್ಕ್ರುತ ಕಾವ್ಯಗಳನ್ನು ಇಲ್ಲವೇ ಬೇರೆ ಸಂಸ್ಕ್ರುತ ಬರಹಗಳನ್ನು ಬರೆಯಲು ಬೇಕಾಗುವ ಹಲವು ಹೆಚ್ಚಿನ ಬರಿಗೆಗಳನ್ನು ತಮಿಳು ಬರಹದಲ್ಲೇನೇ ಉಳಿಸಿಕೊಳ್ಳುವ ಬದಲು, ಅವರು ಗ್ರಂತ ಲಿಪಿಯೆಂಬ ಬೇರೆಯೇ ಒಂದು ಬಗೆಯ ಬರಹವನ್ನು ಬಳಕೆಗೆ ತಂದಿದ್ದರು. ಹಾಗಾಗಿ, ಈ ಬರಿಗೆಗಳ ತೊಡಕು ಅವರ ಬರಹವನ್ನು ತಟ್ಟಿಲ್ಲ.

ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ; ಈ ಬ್ರಾಹ್ಮಣರು ಆರ‍್ಯರಾಗಿದ್ದು, ಸಂಸ್ಕ್ರುತದ ಮೇಲೆ ಅವರಿಗೆ ಹೆಚ್ಚಿನ ಮಮತೆ ಮತ್ತು ಪೂಜ್ಯಬಾವವಿತ್ತು. ಹಾಗಾಗಿ, ಅವರು ಕನ್ನಡದ ಬರಹದಲ್ಲಿ ಸಂಸ್ಕ್ರುತ ಬರಹಕ್ಕೆ ಬೇಕಾಗುವ ಎಲ್ಲಾ ಬರಿಗೆಗಳನ್ನೂ, ಅವು ಕನ್ನಡಕ್ಕೆ ಬೇಡವಾಗಿದ್ದರೂ, ಉಳಿಸಿಕೊಂಡಿದ್ದರು, ಮತ್ತು ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು.

ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು; ಕೆಳವರ‍್ಗದ ಜನರು ಅದರಿಂದ ದೂರವೇ ಉಳಿದಿದ್ದರು. ತುಂಬಾ ಸಂಸ್ಕ್ರುತ ಪದಗಳನ್ನು ಬಳಸುವ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹಲವು ಬರಿಗೆಗಳನ್ನು ಬಳಸುವ ಈ ಬರಹವೂ ಅವರು ಈ ರೀತಿ ಅದರಿಂದ ದೂರ ಉಳಿಯಲು ಒಂದು ಕಾರಣವಾಗಿತ್ತು.

ಆದರೆ, ಇವತ್ತು ಬರಹಕ್ಕೆ ಕಳೆದ ಎರಡು ಸಾವಿರ ವರ‍್ಶಗಳಲ್ಲೂ ಇಲ್ಲದಿದ್ದಂತಹ ಮೇಲ್ಮೆ ದೊರೆತಿದೆ; ಇವತ್ತಿನ ಸಮಾಜದಲ್ಲಿ ಬರಹದ ಅರಿವಿಲ್ಲದವರು ಯಾರೂ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಂತಹ ಪರಿಸ್ತಿತಿಯುಂಟಾಗಿದೆ; ಇದಲ್ಲದೆ, ಎಲ್ಲಾ ಜನರೂ ಬರಹಬಲ್ಲವರಾಗದೆ ಇವತ್ತು ಯಾವ ಸಮಾಜವೂ ಏಳಿಗೆಹೊಂದಲಾರದು. ಹಾಗಾಗಿ, ಕನ್ನಡಿಗರ, ಅವರ ಸಮಾಜದ, ಮತ್ತು ಅವರ ಬರಹದ ಏಳಿಗೆಗಾಗಿ, ಇವತ್ತು ಕನ್ನಡ ಬರಹ ಎಲ್ಲರನ್ನೂ ತಲಪುವಂತೆ ಮಾಡಬೇಕಾಗಿದೆ, ಮತ್ತು ಇದಕ್ಕಾಗಿ ಕನ್ನಡಕ್ಕೆ ಬೇಕಿಲ್ಲದ ಹಲವು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ.

ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ: ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಬೇಕು ಎಂದು ಹೇಳಿದರೆ, ದ್ರಾವಿಡ ಕಳಗಂನವರು ಹೇಳುತ್ತಿದ್ದ ಹಾಗೆ, ಸಂಸ್ಕ್ರುತ ಪದಗಳನ್ನು ಬರಹಗಳಲ್ಲಿ ಬಳಸಲೇ ಕೂಡದು ಎಂದು ಹೇಳಿದ ಹಾಗಾಗುವುದಿಲ್ಲ. ನಿಜಕ್ಕೂ ಹಾಗೆ ಹೇಳಲಾಗಿದೆಯಾದರೆ, ಸಂಸ್ಕ್ರುತ ಎರವಲುಗಳನ್ನು ಕನ್ನಡದಲ್ಲಿ ಬರೆಯುವಾಗ ಮಹಾಪ್ರಾಣ, ಋಕಾರ ಮೊದಲಾದವುಗಳನ್ನು ಬಳಸಬೇಕಾಗಿಲ್ಲ ಎಂಬ ಇನ್ನೊಂದು ಹೇಳಿಕೆ ಬೇಕಾಗುವುದೇ ಇಲ್ಲ!

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾದಾಗಲೆಲ್ಲ, ಅದನ್ನು ಕಡಿಮೆ ಮಾಡಬೇಕೆಂಬುದಾಗಿ ಹಿಂದಿನಿಂದಲೂ ಕನ್ನಡದ ಬರಹಗಾರರು ಹೇಳುತ್ತಾ ಬಂದಿದ್ದಾರೆ. ಕವಿರಾಜಮಾರ‍್ಗಕಾರನಿಂದ ಹಿಡಿದು ಬಿಎಂಶ್ರೀಯವರ ವರೆಗೂ ಹಲವು ಮಂದಿ ಈ ವಿಶಯದಲ್ಲಿ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.

ಇವತ್ತು ಅರಿಮೆಯ (ವಿಜ್ನಾನದ) ಬರಹಗಳಿಗೆ ಬೇಕಾಗುವ ಹೊಸ ಪದಗಳನ್ನೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸದಾಗಿ ಉಂಟುಮಾಡಿಕೊಳ್ಳಲಾಗುತ್ತಿದೆ; ಕನ್ನಡದ ಪದ ಮತ್ತು ಒಟ್ಟುಗಳನ್ನು ತುಂಬಾ ಅಪರೂಪವಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ, ಅರಿಮೆಯ ಪದನೆರಕೆಗಳಲ್ಲಿ ಕನ್ನಡದವೇ ಆದ ಪದಗಳಿರುವುದು ತೀರಾ ಕಡಿಮೆ.

ಇಂತಹ ಪದನೆರಕೆಗಳನ್ನು ‘ಕನ್ನಡ’ದವೆಂದು ಹೇಳುವುದೇ ವಿಚಿತ್ರವಾಗಿ ಕಾಣಿಸುತ್ತದೆ. ನಿಜಕ್ಕೂ ಈ ರೀತಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಬದಲು, ಇಂಗ್ಲಿಶ್ ಪದಗಳನ್ನು ಹಾಗೆಯೇ ಎರವಲು ಪಡೆಯುವುದೇ ಕನ್ನಡಿಗರ ಮಟ್ಟಿಗೆ ಹೆಚ್ಚು ನೆರವಾಗಬಲ್ಲುದು; ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಲು ಅವರು ಇಂಗ್ಲಿಶ್ ಬರಹಗಳನ್ನು ಓದಬೇಕಾಗುತ್ತದೆಯಲ್ಲದೆ, ಸಂಸ್ಕ್ರುತದಲ್ಲಿ ಅವರಿಗೆ ಇವತ್ತಿನ ಅರಿಮೆಗಳ ಕುರಿತಾಗಿ ಎಂತಹ ಓದೂ ದೊರಕಲಾರದು.

ಆದರೆ, ಈ ವಿಶಯಗಳ ಕುರಿತಾಗಿ ಮಕ್ಕಳಿಗೆ ಅಡಿಕಲಿಕೆ ದೊರೆಯುವಂತೆ ಮಾಡಲು, ಮತ್ತು ಆಳವಾದ ತಿಳಿವು ದೊರೆಯುವಂತೆ ಮಾಡಲು, ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸುವ ಬದಲು ನಮ್ಮವೇ ಆದ ಕನ್ನಡ ಪದಗಳನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳನ್ನು ಓದುವ ಹಾಗೆಯೇ ಬರೆಯಬೇಕು

ನುಡಿಯರಿಮೆಯ ಇಣುಕುನೋಟ – 3

ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತೇವೆ: ವಿಶೇಶ ಎಂಬುದಾಗಿ ಓದಿದರೂ ವಿಶೇಷ ಎಂಬುದಾಗಿ ಬರೆಯುತ್ತೇವೆ, ಮತ್ತು ಅದಿಕಾರಿ ಎಂಬುದಾಗಿ ಓದಿದರೂ ಅಧಿಕಾರಿ ಎಂಬುದಾಗಿ ಬರೆಯುತ್ತೇವೆ.

ಸಂಸ್ಕ್ರುತವನ್ನು ಹೊರತುಪಡಿಸಿ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳನ್ನೆಲ್ಲ ಓದುವ ಹಾಗೆ ಬರೆಯುತ್ತೇವಲ್ಲದೆ, ಆ ನುಡಿಗಳಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ. ಇಂಗ್ಲಿಶ್‌ನ ವಯ್ಪರ್ ಮತ್ತು ವಯ್ರಸ್ ಪದಗಳ ಮೊದಲ ಬರೆಗೆಗಳು ಇಂಗ್ಲಿಶ್‌ನಲ್ಲಿ ಬೇರಾಗಿವೆ, ಆದರೆ ಕನ್ನಡದಲ್ಲಿ ವ ಎಂಬ ಒಂದೇ ಬರಿಗೆಯನ್ನು ಬಳಸಲಾಗುತ್ತದೆ. ಅವೆರಡನ್ನೂ ಒಂದೇ ರೀತಿ ಓದುತ್ತಿರುವುದೇ ಇದಕ್ಕೆ ಕಾರಣ.

ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಬರೆಯಬೇಕಾಗಿದೆಯಾದರೆ, ಅದು ಅಂತಹ ಬರಹವನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತದೆ; ಕನ್ನಡ ಬರಹದ ಈ ಸಂಪ್ರದಾಯ ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ತೊಡಕುಗಳನ್ನು ಕೊಡುತ್ತಿದೆ:

(೧) ಓದಲು ಮತ್ತು ಬರೆಯಲು ಕಲಿಯಹೊರಡುವ ಮಕ್ಕಳು ಅನವಶ್ಯಕವಾಗಿ ಹದಿನೇಳು ಹೆಚ್ಚಿನ ಬರಿಗೆ(ಅಕ್ಶರ)ಗಳನ್ನು ಕಲಿಯಬೇಕಾಗುತ್ತದೆ.

(೨) ಸರಿಯಾಗಿ ಮತ್ತು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ (ಎತ್ತುಗೆಗೆ, ಮನೆ ಎಂಬುದನ್ನು ಮ್, ಅ, ನ್ ಮತ್ತು ಎ ಎಂಬ ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ) ಎಂಬುದನ್ನು ಗಮನಿಸಬೇಕು, ಮತ್ತು ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬರಿಗೆಗಳನ್ನು ಬಳಸಲಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇವೆರಡನ್ನು ಗಮನಿಸಿದವರು ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗಲೂ ಅವನ್ನು ಸುಲಬವಾಗಿ ಓದಬಲ್ಲವರಾಗುತ್ತಾರೆ.

ಪದಗಳನ್ನು ಓದುವ ಹಾಗೆಯೇ ಬರೆದಿದೆಯಾದರೆ ಮಾತ್ರ, ಈ ರೀತಿ ಓದುವಾಗ ಬಳಸುವ ಉಲಿಗೂ ಬರಹದಲ್ಲಿ ಕಾಣಿಸುವ ಬರಿಗೆಗಳಿಗೂ ನಡುವೆ ಸಂಬಂದವಿದೆ ಎಂಬುದು ಓದಲು ಕಲಿಯುವವರ ಗಮನಕ್ಕೆ ಸುಲಬವಾಗಿ ಬರುತ್ತದೆ.

ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಪದಗಳನ್ನು ಬರೆದಿದೆಯಾದರೆ, ಅವುಗಳಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವೆ ಇಂತಹದೊಂದು ಸಂಬಂದವಿದೆಯೆಂಬುದು ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ, ಮತ್ತು ಇದರಿಂದಾಗಿ ಎಶ್ಟು ಕಲಿತರೂ ಅವರಿಗೆ ಸಲೀಸಾಗಿ ಓದಲು ಬರುವುದೇ ಇಲ್ಲ. ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗ ಅವನ್ನು ಹೇಗೆ ಓದಬೇಕೆಂಬುದು ಅವರಿಗೆ ಗೊತ್ತಾಗುವುದೂ ಇಲ್ಲ.

(೩) ಓದುವ ಹಾಗೆ ಬರೆಯುವ ಪದಗಳನ್ನು ಬರಹಗಳಲ್ಲಿ ಬಳಸುವುದು ಸುಲಬ; ಬೇರೆ ಬಗೆಯಲ್ಲಿ ಬರೆಯುವ ಒಂದೊಂದು ಪದವನ್ನೂ ಅದನ್ನು ಬರೆಯುವುದು ಹೇಗೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಮನೆ ಎಂಬ ಪದವನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಹೇಗೆ ಬರೆಯುವುದೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿಲ್ಲ.
ಆದರೆ, ವಿಶೇಷ ಎಂಬ ಪದವನ್ನು ಬರೆಯುವಾಗ ಎರಡನೆಯ ಮುಚ್ಚುಲಿಯನ್ನು ಶ್ ಎಂಬುದಾಗಿ, ಮತ್ತು ಮೂರನೆಯ ಮುಚ್ಚುಲಿಯನ್ನು ಷ್ ಎಂಬುದಾಗಿ ಬರೆಯಬೇಕೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಯಾಕೆಂದರೆ, ಅವೆರಡನ್ನೂ ಒಂದೇ ರೀತಿಯಲ್ಲಿ ಓದಲಾಗುತ್ತದೆ.ಇದನ್ನು ನೆನಪಿನಲ್ಲಿಟ್ಟುಕೊಳ್ಳಲಾರದವರು ಬರವಣಿಗೆಯಲ್ಲಿ ತಪ್ಪು ಮಾಡುತ್ತಾರೆ.

ಇವತ್ತು ದಿನಪತ್ರಿಕೆಗಳಲ್ಲಿ, ಕತೆ-ಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸುವುದು ಓದುವ ಹಾಗೆ ಬರೆಯದಿರುವ ಮಹಾಪ್ರಾಣಾಕ್ಶರ, ಷಕಾರ, ಋಕಾರ ಮೊದಲಾದ ಬರಿಗೆಗಳಿರುವ ಸಂಸ್ಕ್ರುತ ಪದಗಳ ಬಳಕೆಯಲ್ಲಿ ಎಂಬುದನ್ನು ಗಮನಿಸಬಹುದು.

(೪) ಸಾಮಾನ್ಯವಾಗಿ ಜನರು ಪದಕೋಶಗಳನ್ನು ನೋಡಲು ಹೋಗುವುದು ಹೊಸದಾಗಿ ಅವರ ಓದಿನಲ್ಲಿ ಕಾಣಿಸಿಕೊಳ್ಳುವ ಪದಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಾಗಿ; ಆದರೆ, ಓದುವ ಹಾಗೆ ಬರೆಯದಿರುವ ವಿಶೇಷ, ಅಧಿಕಾರಿ ಮೊದಲಾದ ಪದಗಳನ್ನು ಅವುಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಿಂತಲೂ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ ಪದಕೋಶಗಳನ್ನು ನೋಡಬೇಕಾಗುತ್ತದೆ. ಓದುವ ಹಾಗೆಯೇ ಬರೆಯುವ ಯಾವ ಪದವನ್ನೂ ಈ ರೀತಿ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯಲು ಪದಕೋಶವನ್ನು ನೋಡಬೇಕಾಗುವುದಿಲ್ಲ.

(೫) ಕೆಳವರ‍್ಗದ ಮಕ್ಕಳಲ್ಲಿ ಇಂತಹ ಪದಗಳ ಕಲಿಕೆ ಕೀಳರಿಮೆಯನ್ನು ಉಂಟುಮಾಡುತ್ತದೆ; ಅವು ಕೊಡುವ ತೊಂದರೆಯಿಂದಾಗಿ ಕೆಲವರು ಬರಹದ ಕಲಿಕೆಯನ್ನು ನಡುವಿನಲ್ಲೇ ನಿಲ್ಲಿಸಿಬಿಡುತ್ತಾರೆ. ಓದಲು ಕಲಿತವರೂ ಅದನ್ನು ತುಂಬಾ ಅಪರೂಪವಾಗಿ ಮಾತ್ರ ಬಳಸುತ್ತಾರೆ. ಯಾಕೆಂದರೆ, ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.
ಸಮಾಜಗಳಲ್ಲಿ ಹಲವಾರು ಬಗೆಯ ಸಂಪ್ರದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಬಳಕೆಗೆ ಬರುತ್ತವೆ, ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನಗಳೇನೂ ಇಲ್ಲದಿದ್ದರೂ, ಹೆಚ್ಚಿನ ತೊಂದರೆಯಿಲ್ಲವಾದಲ್ಲಿ ಅವು ಹಾಗೆಯೇ ವರ‍್ಶಗಟ್ಟಲೆ ಸಮಯ ಮುಂದುವರಿಯುತ್ತಿರುತ್ತವೆ.

ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬುದೂ ಇಂತಹದೇ ಒಂದು ಸಂಪ್ರದಾಯ. ಅದರಿಂದ ಕನ್ನಡ ಬರಹದ ಮಟ್ಟಿಗೆ ಯಾವ ಪ್ರಯೋಜನವೂ ಇಲ್ಲ. ಹಳೆಗನ್ನಡದ ಸಮಯದಲ್ಲಿ ಇಂತಹ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು, ಇಲ್ಲವೇ ಕನ್ನಡದ ಸೊಗಡನ್ನು ಕೆಡಿಸದಂತೆ ಅವನ್ನು ಮಾರ‍್ಪಡಿಸಿ ತದ್ಬವಗಳನ್ನಾಗಿ ಮಾಡಿಯೂ ಬಳಸಬಹುದಿತ್ತು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಅಂತಹ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ.

ಆದರೆ, ಇವತ್ತು ಹೊಸಗನ್ನಡದಲ್ಲಿ ಬರಹಗಾರರು ಈ ಆಯ್ಕೆಯನ್ನು ಕಳೆದುಕೊಂಡಿದ್ದಾರೆ. ಬಳಕೆಯಲ್ಲಿರುವ ಕೆಲವೇ ಕೆಲವು ತದ್ಬವ ಪದಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಸ್ಕ್ರುತ ಪದಗಳನ್ನೂ ಇವತ್ತು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿದೆ. ಅವುಗಳಲ್ಲಿ ಯಾವುದೇ ಬಗೆಯ ಮಾರ‍್ಪಾಡನ್ನು ನಡೆಸಿದರೂ ಅದನ್ನು ತಪ್ಪೆಂದು ತಿಳಿಯಲಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೂ ಈ ಸಂಪ್ರದಾಯ ಹೆಚ್ಚಿನ ತೊಂದರೆಯನ್ನೇನೂ ಕೊಡುತ್ತಿರಲಿಲ್ಲ. ಯಾಕೆಂದರೆ, ಸಮಾಜದಲ್ಲಿ ಮೇಲ್ವರ‍್ಗಕ್ಕೆ ಸೇರಿದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸಬೇಕಾಗಿತ್ತು, ಮತ್ತು ಅವರಲ್ಲಿ ಹೆಚ್ಚಿನವರೂ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು; ಹಾಗಾಗಿ, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡುಹೋಗುವುದು ಅವರಿಗೆ ತೊಡಕಿನದಾಗಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರು ಮತ್ತು ಎಲ್ಲರೂ ಬರಹವನ್ನು ಬಳಸಬೇಕಾಗಿದೆ. ಯಾಕೆಂದರೆ, ಇವತ್ತು ಸಮಾಜದಲ್ಲಿ ಬರಹಕ್ಕೆ ಅಂತಹದೊಂದು ಪ್ರಾಮುಕ್ಯತೆ ಬಂದಿದೆ. ಬರಹವನ್ನು ಬಳಸಲು ತಿಳಿಯದವರು ಮುಂದೆ ಬರಲು ಸಾದ್ಯವೇ ಇಲ್ಲ, ಮತ್ತು ಅಂತಹ ಹಲವು ಮಂದಿ ಜನರಿರುವ ಸಮಾಜ ಏಳಿಗೆಯಾಗಲೂ ಸಾದ್ಯವೇ ಇಲ್ಲ ಎಂಬ ಪರಿಸ್ತಿತಿ ಇವತ್ತಿನದಾಗಿದೆ.

ಈ ರೀತಿ ಕನ್ನಡ ಬರಹವನ್ನು ಬಳಸಲು ಕಲಿಯಲೇ ಬೇಕಾಗಿರುವ ಜನರಲ್ಲಿ ಹೆಚ್ಚಿನವರಿಗೂ ಸಂಸ್ಕ್ರುತದ ಅರಿವು ಬೇಕಾಗಿಲ್ಲ; ಅದಕ್ಕಿಂತಲೂ ಅವರಿಗೆ ಇಂಗ್ಲಿಶ್ ನುಡಿಯ ಅರಿವು ಹೆಚ್ಚಿನ ನೆರವು ನೀಡಬಲ್ಲುದು. ಹಾಗಾಗಿ, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಸಂಪ್ರದಾಯ ಒಂದು ಹೆಚ್ಚಿನ ತೊಡಕನ್ನು ಮಾತ್ರ ತಂದೊಡ್ಡುತ್ತದಲ್ಲದೆ, ಅದರಿಂದ ಅವರು ಪಡೆಯಬಹುದಾದ ಪ್ರಯೋಜನ ಯಾವುದೂ ಇಲ್ಲ.

ಈ ರೀತಿ ಕನ್ನಡದ ಮಟ್ಟಿಗೆ ಯಾವ ಪ್ರಯೋಜನವನ್ನೂ ನೀಡದ, ಹಲವು ಮಂದಿ ಕನ್ನಡಿಗರಿಗೆ ತೊಡಕನ್ನು ಮಾತ್ರವೇ ಕೊಡುವ, ಮತ್ತು ನಮ್ಮ ಸಮಾಜದ ಏಳಿಗೆಗೂ ತೊಡಕಾಗಿರುವ ಈ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಜಾಣತನ. ಇದು ಒಂದೂವರೆ-ಎರಡು ಸಾವಿರ ವರ‍್ಶದ ಹಿಂದಿನ ಸಮಾಜಕ್ಕಾಗಿ ಮಾಡಿಕೊಂಡಿದ್ದ ಸಂಪ್ರದಾಯ. ಇಂದಿನ ಸಮಾಜ ಆಗಿನದಕ್ಕಿಂತ ತೀರ ಬೇರೆಯಾಗಿದೆ. ಹೀಗಿರುವಾಗಲೂ ಆ ಹಳೆಯ ಸಂಪ್ರದಾಯವನ್ನು ತೊರೆಯಲು ಹಿಂಜರಿಯುವುದೆಂದರೆ, ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳುವ ಹಾಗೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮನೆಯ ಹೊರಗಡೆ ಅಡಿಗೆಮನೆ ಪಾಕಶಾಲೆಯಾಗಬೇಕೇ?

ನುಡಿಯರಿಮೆಯ ಇಣುಕುನೋಟ – 2

ಕನ್ನಡಿಗರ ಪದಬಳಕೆಯ ವಿಶಯದಲ್ಲಿ ಒಂದು ಸೋಜಿಗದ ಸಂಗತಿಯಿದೆ. ಅದೇನೆಂದು ತಿಳಿಯಲು ಕೆಲವು ಎತ್ತುಗೆಗಳನ್ನು ತೆಗೆದುಕೊಳ್ಳೋಣ:

ಮನೆಯಲ್ಲಿ ಅಡಿಗೆಮನೆ, ಊಟದಕೋಣೆ ಎನ್ನುವ ನಾವು ಸಮ್ಮೇಳನಗಳಂತಹ ಸಂದರ‍್ಬಗಳಲ್ಲಿ ಅವುಗಳ ಬದಲಾಗಿ ಪಾಕಶಾಲೆ, ಬೋಜನಶಾಲೆ ಎನ್ನುತ್ತೇವೆ. ಬಟ್ಟೆಯಂಗಡಿಗೆ ಹೋಗುತ್ತೇನೆ ಎನ್ನುತ್ತೇವೆ; ಆದರೆ, ಅಂತಹ ಅಂಗಡಿಗಳಿಗೆ ಹೆಸರು ಕೊಡಬೇಕಾದಾಗ, ವಸ್ತ್ರಾಲಯ ಇಲ್ಲವೇ ವಸ್ತ್ರಬಂಡಾರ ಎಂಬ ಹೆಸರುಗಳಶ್ಟೇ ಹೊಳೆಯುತ್ತವೆ. ತಿಂಡಿಗಳನ್ನು ಮಾರುವ ಅಂಗಡಿ ತಿಂಡಿಮನೆಯಾಗಿಬಿಟ್ಟರೆ ಅದೇನೋ ಮುಜುಗರ, ಉಪಹಾರಗ್ರುಹವೇ ಆಗಬೇಕು.

ನಾಯಿಯ ಕುರಿತು ಬರೆದ ಬರಹದಲ್ಲಿ ಉದ್ದಕ್ಕೂ ನಾಯಿ ಎಂಬ ಪದವೇ ಬಳಕೆಯಾಗಿದೆಯಾದರೂ, ತಲೆಬರಹದಲ್ಲಿ ಮಾತ್ರ ಶ್ವಾನವಿದ್ದರಶ್ಟೇ ನೆಮ್ಮದಿ. ಮದುವೆಯ ಕರೆಯೋಲೆ ಕಳುಹಿಸುವ ಬದಲು ವಿವಾಹ ಆಮಂತ್ರಣ ಕಳಿಸಿದರೆ ಮಾತ್ರ ಮದುವೆಗೆ ಬರುತ್ತಾರೇನೋ ಎಂಬ ಅನಿಸಿಕೆ ನಮ್ಮಲ್ಲಿ ಹಲವರಲ್ಲಿದ್ದಂತಿದೆ.

ಹಾಗೆಯೇ, ಪುಸ್ತಕಗಳಿಗೆ ಹೆಸರು ಕೊಡುವಲ್ಲೂ ಬಳಕೆಯಲ್ಲಿರುವ ಪದಗಳಿಗಿಂತ ಬಳಕೆಯಲ್ಲಿಲ್ಲದ ಮತ್ತು ಹೆಚ್ಚು ಮಂದಿಗೆ ತಿಳಿಯದ ಪದಗಳೇ ಚಂದವೆಂದು ಹಲವು ಬರಹಗಾರರಿಗೆ ಅನಿಸುತ್ತದೆ. ಮನೆಗಳಿಗೆ, ಅಂಗಡಿಗಳಿಗೆ, ಕೂಟಗಳಿಗೆ, ಇಲ್ಲವೇ ಹಲವು ಬಗೆಯ ಹಮ್ಮುಗೆಗಳಿಗೆ ಹೆಸರು ಕೊಡಬೇಕಾಗಿರುವಲ್ಲೂ ನಮ್ಮ ಒಡಲಿನಿಂದ ನೇರವಾಗಿ ಬರುವ ಪದಗಳು ತಕ್ಕವೆಂದು ತೋರುವುದೇ ಇಲ್ಲ; ದೂರದರ‍್ಶನ, ದಿನಪತ್ರಿಕೆ, ಉಚ್ಚಶಿಕ್ಶಣ, ನಿರುದ್ಯೋಗ ಸಮಸ್ಯೆ, ಜನಗಣನೆ, ಲೋಕಾಯುಕ್ತ, ಪಟ್ಯಪುಸ್ತಕ ಮೊದಲಾದ ಹಲವು ಬಗೆಯ ಪದಗಳನ್ನು ಉಂಟುಮಾಡುವಲ್ಲಿ ಕೂಡ ಇದೇ ಸೋಜಿಗವನ್ನು ಕಾಣಬಹುದು.

ಇಂತಹ ಹಲವಾರು ‘ಮೇಲ್ಮಟ್ಟದ’ ಸನ್ನಿವೇಶಗಳಲ್ಲಿ ನಮ್ಮ ನಾಲಿಗೆಗಳಿಗೆ ತಂತಾನೇ ಬರುವ ಪದಗಳು – ಎಂದರೆ ಕನ್ನಡದವೇ ಆದ ಪದಗಳು – ಬಳಕೆಗೆ ತಕ್ಕವಲ್ಲ, ಮೇಲೆ ಕಾಣಿಸಿದಂತೆ ಸಂಸ್ಕ್ರುತದಿಂದ ಎರವಲು ಪಡೆದ ಪದಗಳೇ ತಕ್ಕವು ಎಂಬ ಕೀಳರಿಮೆ ನಮ್ಮಲ್ಲಿ ಹೆಚ್ಚಿನವರಲ್ಲಿದೆ. ಇದೊಂದು ಸೋಜಿಗವಲ್ಲದೆ ಮತ್ತೇನು?

ಹಿಂದಿನ ಕಾಲದಲ್ಲಿ ಕನ್ನಡ ನುಡಿ ಸಂಸ್ಕ್ರುತದ ಕಳೆಗೆಟ್ಟ ರೂಪ ಎಂಬ ಅನಿಸಿಕೆ ಹಲವು ಕನ್ನಡ ಪಂಡಿತರಲ್ಲಿತ್ತು; ಕನ್ನಡ ಪದಗಳಿಗಿಂತ ಸಂಸ್ಕ್ರುತ ಪದಗಳು ಮೇಲ್ಮಟ್ಟದವು ಎಂಬುದಾಗಿ ಅವರು ತಿಳಿಯುತ್ತಿದ್ದುದಕ್ಕೆ ಈ ತಪ್ಪು ಅನಿಸಿಕೆ ಕಾರಣವಾಗಿತ್ತು; ಆದರೆ, ನಿಜಕ್ಕೂ ಕನ್ನಡ ಸಂಸ್ಕ್ರುತದ ಕಳೆಗೆಟ್ಟ ರೂಪ ಅಲ್ಲ, ಅದಕ್ಕಿಂತ ತೀರ ಬೇರಾಗಿರುವ ಒಂದು ಸ್ವತಂತ್ರವಾದ ನುಡಿ ಎಂಬುದನ್ನು ಇವತ್ತು ನಾವು ಕಂಡುಕೊಂಡಿದ್ದೇವೆ. ಹಾಗಾಗಿ, ಇವತ್ತಿಗೂ ಸಂಸ್ಕ್ರುತ ಪದಗಳು ಕನ್ನಡ ಪದಗಳಿಂದ ಮೇಲ್ಮಟ್ಟದವು ಎಂದು ಬಾವಿಸುವುದಕ್ಕೆ ಯಾವ ಆದಾರವೂ ಇಲ್ಲ.

ಈ ರೀತಿ ಹೊಸಪದಗಳನ್ನು ಉಂಟುಮಾಡಬೇಕಾಗಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸದಿರುವುದಕ್ಕೆ ಅವುಗಳ ಕುರಿತಾಗಿ ಕೀಳರಿಮೆ ಇರುವುದು ಒಂದು ಕಾರಣವಾದರೆ, ತಮಗೆ ಬೇಕಾಗಿರುವ ಹೊಸ ಪದಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿಲ್ಲ ಎಂಬ ತಪ್ಪು ಕಲ್ಪನೆ ಇನ್ನೊಂದು ಕಾರಣ. ಸಂಸ್ಕ್ರುತದಲ್ಲಿರುವಶ್ಟು ಒಟ್ಟು(ಪ್ರತ್ಯಯ)ಗಳು ಮತ್ತು ಪದಗಳು ಕನ್ನಡದಲ್ಲಿಲ್ಲ; ಹಾಗಾಗಿ, ಹಲವು ಬಗೆಯ ಪದಗಳನ್ನು ಹೊಸದಾಗಿ ಉಂಟುಮಾಡುವಲ್ಲಿ ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬ ಅನಿಸಿಕೆ ಹಲವರಲ್ಲಿದೆ.

ಆದರೆ, ಇದು ತಪ್ಪು ಅನಿಸಿಕೆ. ಎಂತಹ ವಿಶಯವನ್ನು ಬೇಕಿದ್ದರೂ ತಿಳಿಸಲು ಬೇಕಾಗುವಂತಹ ಪದಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿದೆ. ಎಲ್ಲಾ ಸ್ವಾಬಾವಿಕವಾಗಿ ಬೆಳೆದುಬಂದ ನುಡಿಗಳಿಗೂ ಇಂತಹ ಅಳವು ಇರುತ್ತದೆ. ಕನ್ನಡದ ಈ ಅಳವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡು, ಅದನ್ನು ಬಳಸಿ, ಕನ್ನಡಕ್ಕೆ ಬೇಕಾಗಿರುವ ಹೊಸ ಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಅಂತಹ ಹೊಸ ಪದಗಳಿರುವ ಬರವಣಿಗೆಯನ್ನು ಹೆಚ್ಚು ಹೆಚ್ಚು ಕನ್ನಡಿಗರು ಸುಲಬವಾಗಿ ಓದಿ ತಿಳಿದುಕೊಳ್ಳಬಲ್ಲರು, ಮತ್ತು ಬರವಣಿಗೆಯ ಮೂಲಕ ನಡೆಯುವ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೂ ಬಲ್ಲರು. ಬರವಣಿಗೆಯ ಗುರಿಯೇ ಇದಲ್ಲವೆ?

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಪದಗಳ ಸೊಗಡು ಎಂಬುದಿರುತ್ತದೆ; ಕನ್ನಡ ಪದಗಳ ಸೊಗಡು ಸಂಸ್ಕ್ರುತ ಪದಗಳ ಸೊಗಡಿಗಿಂತ ತೀರ ಬೇರಾಗಿದೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿದಂತೆಲ್ಲ, ಅದರ ಪದಗಳ ಸೊಗಡು ಮರೆಯಾಗುತ್ತಾ ಹೋಗುತ್ತದೆ, ಮತ್ತು ಅದನ್ನು ಓದಿ ತಿಳಿಯುವ ಕೆಲಸ ಕನ್ನಡಿಗರಿಗೆ ಹೆಚ್ಚು ಹೆಚ್ಚು ತೊಡಕಿನದಾಗುತ್ತಾ ಹೋಗುತ್ತದೆ.

ಹಾಗಾಗಿ, ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಎರವಲು ಪದಗಳನ್ನು ಬಳಸಹೋಗದೆ, ಅದರ ಪದಗಳ ಸೊಗಡನ್ನು ಉಳಿಸಿಕೊಳ್ಳಬೇಕು ಎನ್ನುವುದು ಬರಿಯ ಅಬಿಮಾನದ ಪ್ರಶ್ನೆ ಮಾತ್ರ ಅಲ್ಲ; ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪಬೇಕು ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಬರಬೇಕೆಂಬ ಮುಕ್ಯವಾದ ಗುರಿಯನ್ನು ಮುಟ್ಟುವ ಪ್ರಶ್ನೆಯೂ ಹೌದು.

ಇತ್ತೀಚೆಗೆ ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವವರು ಈ ವಿಶಯವನ್ನು ಪೂರ‍್ತಿ ಮರೆತಿರುವಂತೆ ಕಾಣುತ್ತದೆ. ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಕಾಣಿಸದೆ ಹೋಗುತ್ತಿವೆ. ಅವರು ಉಂಟುಮಾಡಿರುವ ಪದಕೋಶಗಳಲ್ಲಿ ನೂರಕ್ಕೆ ತೊಂಬತ್ತರಶ್ಟು ಸಂಸ್ಕ್ರುತದಿಂದ ಎರವಲು ಪಡೆದ, ಇಲ್ಲವೇ ಸಂಸ್ಕ್ರುತದಲ್ಲಿ ಹೊಸದಾಗಿ ಉಂಟುಮಾಡಿ ಕನ್ನಡಕ್ಕೆ ಎರವಲು ತಂದ ಪದಗಳೇ ಕಾಣಿಸಿಕೊಳ್ಳುತ್ತವೆ; ಇಂತಹ ಪದಕೋಶಗಳನ್ನು ಕನ್ನಡ ಪದಕೋಶಗಳೆಂದು ಕರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ವಿಶಯವಾಗಿದೆ!

ಇಂಗ್ಲಿಶ್‌ನಲ್ಲಿರುವ ಹಲವು ಅರಿಮೆಯ ಪದಗಳು ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿ ಕಾಣಿಸಿಕೊಳ್ಳುತ್ತವೆ, ಮತ್ತು ಅವನ್ನು ಓದಿ ತಿಳಿದುಕೊಳ್ಳುವ ಕೆಲಸ ಕನ್ನಡಿಗರಿಗೆ ತುಂಬಾ ತೊಡಕಿನದಾಗುತ್ತದೆ. ಹಾಗಾಗಿ, ನಾವು ಅವುಗಳ ಬದಲು ಬೇರೆ ಕನ್ನಡದವೇ ಆದ ಅರಿಮೆಯ ಪದಗಳನ್ನು ಉಂಟುಮಾಡಲು ಹೋಗುತ್ತೇವೆ.

ಆದರೆ, ಹಾಗೆ ಪದಗಳನ್ನು ಉಂಟುಮಾಡಬೇಕಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಪದಗಳನ್ನು ಬಳಸಿದೆವಾದರೆ, ನಮ್ಮವೇ ಆದ ಪದಗಳನ್ನು ಉಂಟುಮಾಡುವುದರ ಹಿಂದಿರುವ ಮುಕ್ಯವಾದ ಗುರಿಯನ್ನು ನಾವು ತಲಪುವುದೇ ಇಲ್ಲ. ಯಾಕೆಂದರೆ, ಇಂಗ್ಲಿಶ್ ಎರವಲುಗಳ ಹಾಗೆ ಹಲವು ಸಂಸ್ಕ್ರುತ ಎರವಲುಗಳೂ ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಮತ್ತು ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿಯೇ ಉಳಿಯುತ್ತವೆ. ಅವನ್ನು ಓದಿ, ಅವು ತಿಳಿಸುವ ವಿಶಯಗಳನ್ನು ತಿಳಿದುಕೊಳ್ಳುವ ಕೆಲಸವೂ ತುಂಬಾ ತೊಡಕಿನದಾಗಿಯೇ ಉಳಿಯುತ್ತದೆ.

ಸಂಸ್ಕ್ರುತ ಪದಗಳನ್ನು ಬಳಸಿ ಪಳಗಿರುವ ಕನ್ನಡ ಬರಹಗಾರರಿಗೆ ಮತ್ತು ಓದುಗರಿಗೆ ತುಂಬಾ ಸಂಸ್ಕ್ರುತ ಪದಗಳನ್ನು ಬಳಸಿರುವ ಬರಹಗಳೂ ಅಶ್ಟೊಂದು ತೊಡಕಿನವೆಂದು ಅನಿಸದಿರಬಹುದು. ಇದಕ್ಕೆ ಕಾರಣವೇನೆಂದರೆ, ಅವರು ಕನ್ನಡ ಪದಗಳ ಸೊಗಡನ್ನು ಮಾತ್ರವಲ್ಲದೆ ಸಂಸ್ಕ್ರುತ ಪದಗಳ ಸೊಗಡನ್ನೂ ತಮ್ಮದಾಗಿಸಿಕೊಂಡಿರುತ್ತಾರೆ.

ಆದರೆ, ಹೆಚ್ಚಿನ ಕನ್ನಡಿಗರಿಗೂ ಅಂತಹ ಬರಹಗಳು ತೊಡಕಿನವಾಗಿ ಕಾಣಿಸುತ್ತವೆ; ಅವರ ಆಡುನುಡಿಗಳಲ್ಲಿ ತುಂಬಾ ಕಡಿಮೆ ಸಂಸ್ಕ್ರುತ ಎರವಲುಗಳು ಬಳಕೆಯಾಗುತ್ತಿರುವುದು, ಮತ್ತು ಹಾಗೆ ಬಳಕೆಯಾಗುತ್ತಿರುವವೂ ಕನ್ನಡ ಪದಗಳ ಸೊಗಡಿಗೆ ಹೊಂದಿಕೆಯಾಗುವಂತೆ ಮಾರ‍್ಪಟ್ಟಿರುವುದು ಇದಕ್ಕೆ ಕಾರಣ.

ಹಾಗಾಗಿ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪಬೇಕಿದ್ದಲ್ಲಿ, ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಹೊಮ್ಮಬೇಕಿದ್ದಲ್ಲಿ, ಅವುಗಳಲ್ಲಿ ಬಳಕೆಯಾಗುವ ಎರವಲು ಪದಗಳನ್ನು, ಅವು ಸಂಸ್ಕ್ರುತದವಿರಲಿ ಇಲ್ಲವೇ ಇಂಗ್ಲಿಶಿನವಿರಲಿ, ಆದಶ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು, ಮತ್ತು ಬಳಸಲೇಬೇಕೆಂದಿರುವವು ಕನ್ನಡದ ಸೊಗಡನ್ನು ಕೆಡಿಸದಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಿಕೊಳ್ಳಬೇಕು.

ಎಲ್ಲಾ ಮಟ್ಟದ ಬಳಕೆಗಳಿಗೂ ಕನ್ನಡ ಪದಗಳು ತಕ್ಕುದಾದುವು ಎಂಬುದನ್ನು ಕನ್ನಡದ ಬರಹಗಾರರು ಮತ್ತು ಕನ್ನಡದಲ್ಲಿ ಹೊಸ ಪದಗಳನ್ನು ಉಂಟುಮಾಡುವವರು ಮನಗಾಣಬೇಕು, ಮತ್ತು ಮೇಲ್ಮಟ್ಟದ ಬಳಕೆಗಳಿಗೆ ಕನ್ನಡದವೇ ಆದ ಪದಗಳನ್ನು ಬಳಸುವುದು ಹೆಮ್ಮೆಯ ವಿಶಯವಶ್ಟೇ ಅಲ್ಲ, ಬರವಣಿಗೆಯ ಮುಕ್ಯ ಗುರಿಯನ್ನು ಮುಟ್ಟುವ ಬಗೆಯೂ ಹೌದೆಂಬ ಅನಿಸಿಕೆ ಅವರಲ್ಲಿ ಬೆಳೆದುಬರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

1 2