Posts Tagged ‘ನುಡಿಯರಿಮೆ’

ಕನ್ನಡ ಬರಹಗಳಲ್ಲಿ ‘ಕರಣ’ದ ಹಾವಳಿ

ನುಡಿಯರಿಮೆಯ ಇಣುಕುನೋಟ – 32

ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತದ ‘ಕರಣ’ ಎಂಬ ಪದದ ಬಳಕೆ ತುಂಬಾ ಹೆಚ್ಚಾಗುತ್ತಿದೆ; ಅದನ್ನು ಬಳಸುವವರು ನಿಜಕ್ಕೂ ಅದು ಬೇಕೇ ಇಲ್ಲವೇ ಬೇಡವೇ ಎಂಬುದನ್ನು ಗಮನಿಸುವುದೇ ಇಲ್ಲ. ಹಲವೆಡೆಗಳಲ್ಲಿ ಅದಕ್ಕೆ ಬದಲು ಕನ್ನಡದ್ದೇ ಆದ ‘ಇಸು’ ಒಟ್ಟನ್ನು ಬಳಸುವುದೇ ಕನ್ನಡದ ಮಟ್ಟಿಗೆ ಒಳ್ಳೆಯದು. ಯಾಕೆಂದರೆ, ‘ಕರಣ’ ಪದದ ಬಳಕೆಯಿಂದಾಗಿ ಮೂಡುವ ಹಲವು ಬಗೆಯ ಗೊಂದಲಗಳು ‘ಇಸು’ ಒಟ್ಟಿನ ಬಳಕೆಯಲ್ಲಿ ಕಾಣಿಸುವುದಿಲ್ಲ. ಇದಲ್ಲದೆ, ಕನ್ನಡದ್ದೇ ಆದ ‘ಇಸು’ ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುತ್ತವೆ; ಹಾಗಾಗಿ, ‘ಕರಣ’ ಪದದ ಬಳಕೆಯ ಹಾಗೆ ಹೊಸ ಕಟ್ಟಲೆಗಳನ್ನು ಅವರು ಕಲಿಯಬೇಕಾಗುವುದಿಲ್ಲ.

ಸಂಸ್ಕ್ರುತದ ಎರವಲುಗಳೊಂದಿಗೆ ಮಾತ್ರವಲ್ಲದೆ ಇಂಗ್ಲಿಶ್, ಪರ್ಶಿಯನ್ ಮೊದಲಾದ ಬೇರೆ ಎರವಲು ಪದಗಳೊಂದಿಗೆ, ಮತ್ತು ಕನ್ನಡದವೇ ಆದ ಪದಗಳೊಂದಿಗೂ ಈ ‘ಕರಣ’ ಎಂಬುದನ್ನು ಬಳಸಲಾಗುತ್ತದೆ; ಸಬಲೀಕರಣ, ಉದಾರೀಕರಣ, ಪ್ರಮಾಣೀಕರಣ ಎಂಬ ಪದಗಳ ಹಾಗೆ, ಡಿಜಿಟಲೀಕರಣ, ಅಯಾನೀಕರಣ, ಕಾಸಗೀಕರಣ, ದಾಕಲೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ.

ಕನ್ನಡದ ಹಸಿರು ಪದದಿಂದ ಹಸಿರೀಕರಣ, ಅಗಲ ಪದದಿಂದ ಅಗಲೀಕರಣ, ಮತ್ತು ಕಯ್ಗಾರಿಕೆ ಪದದಿಂದ ಕಯ್ಗಾರಿಕೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ. ಇಂತಹ ಹಲವು ಕಡೆಗಳಲ್ಲಿ ಸಬಲಿಸು, ಪ್ರಮಾಣಿಸು, ಡಿಜಿಟಲಿಸು, ಅಯಾನಿಸು, ದಾಕಲಿಸು, ಹಸಿರಿಸು, ಅಗಲಿಸು ಎಂಬಂತಹ ಪದಗಳನ್ನು ಮತ್ತು ಅವುಗಳ ಹೆಸರುರೂಪಗಳಾದ ಪ್ರಮಾಣಿಸುವಿಕೆ, ದಾಕಲಿಸುವಿಕೆ, ಅಯಾನಿಸುವಿಕೆ, ಹಸಿರಿಸುವಿಕೆ ಎಂಬಂತಹ ಪದಗಳನ್ನೂ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ.

‘ಕರಣ’ ಎಂಬುದನ್ನು ಬಳಸುವವರಲ್ಲಿ ಹಲವರಿಗೆ ಅದರೊಂದಿಗೆ ಬರುವ ಹೆಸರುಪದದಲ್ಲಿ ಎಂತಹ ಮಾರ್ಪಾಡುಗಳನ್ನೆಲ್ಲ ಮಾಡಬೇಕು ಎಂಬ ವಿಶಯದಲ್ಲೂ ಗೊಂದಲಗಳಿವೆ; ಕೆಲವರು ಆದುನಿಕೀಕರಣ, ಜಾಗತಿಕೀಕರಣ, ಯಾಂತ್ರಿಕೀಕರಣ ಎಂದು ಬರೆದರೆ, ಇನ್ನು ಕೆಲವರು ಆದುನೀಕರಣ, ಜಗತೀಕರಣ, ಯಾಂತ್ರೀಕರಣ ಎಂಬುದಾಗಿ ಬರೆಯುತ್ತಾರೆ. ಸಾಮಾಜೀಕರಣವೂ ಇದೆ, ಸಮಾಜೀಕರಣವೂ ಇದೆ; ಸಾದ್ರುಶೀಕರಣವೂ ಇದೆ, ತುರ್ತುಕರಣವೂ ಇದೆ. ಮೇಲಿನ ಪದಗಳಲ್ಲಿ ಬಳಕೆಯಾಗಿರುವ ಮಹಾಪ್ರಾಣಾಕ್ಶರಗಳನ್ನು ಈ ಅಂಕಣದಲ್ಲಿ ಕಯ್ಬಿಡಲಾಗಿದೆ; ಆದರೆ, ಅದರ ಬಳಕೆಯಲ್ಲೂ ಸಾಕಶ್ಟು ಗೊಂದಲಗಳಿವೆ.

‘ಕರಣ’ ಪದವನ್ನು ಬಳಸುವವರೂ ಆ ಪದಗಳಿಂದ ಎಸಕ(ಕ್ರಿಯಾ)ಪದಗಳನ್ನು ಉಂಟುಮಾಡಬೇಕಿದ್ದಲ್ಲಿ ಕನ್ನಡದ ‘ಇಸು’ ಒಟ್ಟನ್ನು ಬಳಸಲೇಬೇಕಾಗುತ್ತದೆ; ಸಬಲೀಕರಣ, ದಾಕಲೀಕರಣ, ಡಿಜಿಟಲೀಕರಣ ಎಂಬಂತಹ ಪದಗಳನ್ನು ಬಳಸುವವರು ಅವುಗಳಿಂದ ಎಸಕಪದವನ್ನು ಪಡೆಯಬೇಕಿದ್ದಲ್ಲಿ ಸಬಲೀಕರಿಸು, ದಾಕಲೀಕರಿಸು, ಡಿಜಿಟಲೀಕರಿಸು ಎಂಬುದಾಗಿ ಇಸು ಒಟ್ಟನ್ನು ಸೇರಿಸಿಯೇ ಹೇಳಬೇಕಾಗುತ್ತದೆ; ಇದಕ್ಕೆ ಬದಲು ಸಬಲಿಸು, ದಾಕಲಿಸು, ಡಿಜಿಟಲಿಸು ಎಂದಶ್ಟೇ ಹೇಳಿದರೆ ಸಾಕಾಗುವುದಿಲ್ಲವೇ? ಅವುಗಳ ನಡುವೆ ಕರಣವನ್ನು ಯಾಕೆ ತಂದುಹಾಕಬೇಕು? ಸ್ತಿರೀಕರಣಗೊಳ್ಳು ಎಂಬುದೂ ಇಂತಹದೇ ಇನ್ನೊಂದು ಅನವಶ್ಯಕವಾದ ಕರಣ ಪದವನ್ನು ಸೇರಿಸಿರುವ ಪದರೂಪ; ಸ್ತಿರಗೊಳ್ಳು ಎಂಬುದು ಹೆಚ್ಚು ಅಡಕವಾಗಿ ಅದೇ ಹುರುಳನ್ನು ಕೊಡಬಲ್ಲುದು.

ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವಲ್ಲೂ ಕನ್ನಡದ ಅರಿವಿಗರು ಈ ‘ಕರಣ’ ಪದವನ್ನು ಹಲವೆಡೆಗಳಲ್ಲಿ ಬಳಸಿದ್ದಾರೆ; ಕಾರ್ಬನೀಕರಣ, ನಯ್ಟ್ರೀಕರಣ, ಪಾಲಿಮರೀಕರಣ ಎಂಬಂತಹ ಈ ಪದಗಳನ್ನು ಬಳಸಿದಲ್ಲಿ, ಅವಕ್ಕೆ ಸಂಬಂದಿಸಿದಂತೆ ಕರಿಸು (ಅಯಾನೀಕರಿಸು), ಕ್ರುತ (ಅಯಾನೀಕ್ರುತ), ಕಾರಕ (ಅಯಾನೀಕಾರಕ), ಕಾರಿ (ಅಯಾನೀಕಾರಿ) ಎಂಬಂತಹ ಕರಣ ಪದಕ್ಕೆ ಸಂಬಂದಿಸಿದಂತಹ ಬೇರೆ ಕೆಲವು ಪದಗಳನ್ನೂ ಬಳಸಬೇಕಾಗುತ್ತದೆ, ಮತ್ತು ಅವು ಕನ್ನಡದ್ದಲ್ಲವಾದ ಕಾರಣ, ಅವನ್ನು ಬಳಸುವಲ್ಲಿ ಹಲವಾರು ತಪ್ಪುಗಳೂ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದಲ್ಲಿ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಮತ್ತು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಇಸುವಿಕೆ (ಅಯಾನಿಸುವಿಕೆ), ಇಸಿದ (ಅಯಾನಿಸಿದ), ಇಸುವ (ಅಯಾನಿಸುವ) ಎಂಬಂತಹ ರೂಪಗಳನ್ನು ಬಳಸಲು ಬರುತ್ತದೆ.

ಇಂತಹ ಕಡೆಗಳಲ್ಲಿ ಅರಿವಿಗರು ಇನ್ನೂ ಒಂದು ತೊಡಕನ್ನು ಎದುರಿಸಬೇಕಾಗುತ್ತದೆ: ಇಂಗ್ಲಿಶ್ನ ಅಯ್ಸ್ ಎಂಬ ಒಟ್ಟು ಬಂದಿರುವಲ್ಲಿ ಕರಿಸು ಎಂಬುದನ್ನು ಬಳಸುವ (ಪೋಲರಯ್ಸ್ – ದ್ರುವೀಕರಿಸು, ಅನೊಡಯ್ಸ್ – ಅನೊಡೀಕರಿಸು) ಈ ಅರಿವಿಗರು ಇಂಗ್ಲಿಶ್ನ ಅಯ್ಸ್ ಎಂಬುದಕ್ಕಿರುವ ಮಾಡುವಿಕೆ ಮತ್ತು ಆಗುವಿಕೆ ಎಂಬ ಎರಡು ಹುರುಳುಗಳಲ್ಲಿ ಒಂದನ್ನು ಮಾತ್ರ ತಿಳಿಸಬಲ್ಲರು; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದರೆ ಆ ಎರಡು ಹುರುಳುಗಳನ್ನೂ ತಿಳಿಸಬಲ್ಲರು. ಯಾಕೆಂದರೆ, ಕರಣ ಎಂಬುದಕ್ಕೆ ಆಗುವಿಕೆ ಎಂಬ ಹುರುಳು ಸಿಗಲಾರದು; ಆದರೆ, ಇಸು ಎಂಬುದನ್ನು ಬಳಸಿರುವ ಅನೋಡಿಸು, ಅಲ್ಯೂಮಿನಿಸು ಎಂಬುವಕ್ಕೆ ಆಗುವಿಕೆಯ ಹುರುಳೂ ಸಿಗಬಲ್ಲುದು.

ಅರಿಮೆಯ (ಪಾರಿಬಾಶಿಕ)ಪದಗಳನ್ನು ಉಂಟುಮಾಡುವಲ್ಲಿ ಆತ್ಮಕ ಎಂಬುದನ್ನು ಬಳಸುವುದೂ ಇಂತಹದೇ ಒಂದು ಬೇಕಿಲ್ಲದ ಚಾಳಿ. ನುಡಿಯರಿಮೆಯ ಒಂದು ಪದನೆರಕೆಯಲ್ಲಿ ಈ ರೀತಿ ಆತ್ಮಕ ಎಂಬುದನ್ನು ಬಳಸಿರುವ ಇನ್ನೂರಯ್ವತ್ತಕ್ಕಿಂತಲೂ ಹೆಚ್ಚು (ಎಂದರೆ, ಸುಮಾರು ನೂರಕ್ಕೆ ಹದಿಮೂರರಶ್ಟು) ಪದಗಳಿವೆ! ಇವುಗಳಲ್ಲಿ ಹೆಚ್ಚಿನವುಗಳಲ್ಲಿಯೂ ಆತ್ಮಕ ಎಂಬುದನ್ನು ಬಳಸಬೇಕಾಗಿಯೇ ಇಲ್ಲ (ವ್ಯಾಕರಣಾತ್ಮಕ ನಿಯಮ – ವ್ಯಾಕರಣ ನಿಯಮ, ದ್ವನ್ಯಾತ್ಮಕ ರಚನೆ – ದ್ವನಿರಚನೆ, ಪ್ರೇರಣಾತ್ಮಕ ವಾಕ್ಯ – ಪ್ರೇರಣ ವಾಕ್ಯ). ಅರಿಮೆಯ ಪದಗಳು ಸಿಕ್ಕಲಾಗಿದ್ದಶ್ಟೂ ಒಳ್ಳೆಯದು ಎಂಬ ಅನಿಸಿಕೆ ಈ ಪದಗಳನ್ನು ಉಂಟುಮಾಡಿರುವ ಅರಿವಿಗರಲ್ಲಿರುವ ಹಾಗೆ ಕಾಣಿಸುತ್ತದೆ.

ಇದಲ್ಲದೆ, ತಮ್ಮ ಬರಹಗಳಲ್ಲಿ ಎಲ್ಲರಿಗೂ ಗೊತ್ತಾಗುವ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಿಸಿದರೆ ಅವುಗಳ ಮಟ್ಟ ಮೇಲೇರುತ್ತದೆಯೆಂದು ಕೆಲವರು ತಿಳಿದ ಹಾಗಿದೆ. ಆದರೆ, ಹಲವು ಮಂದಿ ಹೀಗೆ ಮಾಡುವಲ್ಲಿ ಹಲವು ಬಗೆಯ ತಪ್ಪುಗಳನ್ನೂ ಮಾಡಿ ನಗುವಿಗೆ ಎಡೆಮಾಡಿಕೊಡುತ್ತಾರೆ. ‘ಕಾರಣ’ ಎಂಬ ಪದದ ಬದಲು ಹಲವು ಮಂದಿ ‘ಸಕಾರಣ’ ಎಂಬ ಪದವನ್ನು ಬಳಸುತ್ತಾರೆ; ಆದರೆ, ಇವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಸಕಾರಣ ಎಂಬುದಕ್ಕೆ ‘ಕಾರಣವಿರುವ’ ಎಂಬ ಹುರುಳಿದೆ. ಇದನ್ನು ಗಮನಿಸದ ಕೆಲವರ ಬರಹಗಳಲ್ಲಿ ಸಕಾರಣವಿಲ್ಲದೆ, ಸಕಾರಣ ನೀಡದೆ, ಸಕಾರಣಗಳಿರಲಿಲ್ಲ ಎಂಬಂತಹ ಬಳಕೆಗಳನ್ನು ಕಾಣಬಹುದು! ಆದರೆ, ಇಂತಹದೇ ಬಳಕೆ ಮುಂದುವರಿದರೆ, ಸಕಾರಣ ಎಂಬುದಕ್ಕೆ ಕನ್ನಡದಲ್ಲಿ ಬರಿಯ ಕಾರಣ ಎಂಬುದರ ಹುರುಳೇ ಇರುವಂತಾದೀತು.

ಇಹಲೋಕ ಮತ್ತು ಪರಲೋಕ ಎಂಬ ಬೇರೆ ಎರಡು ಸಂಸ್ಕ್ರುತ ಎರವಲುಗಳ ಬಳಕೆಯೂ ಇಂತಹದೇ. ಅವುಗಳ ನಿಜವಾದ ಹುರುಳು ಏನೆಂದು ತಿಳಿಯದಿದ್ದರೂ ಬಳಸುವ ಆಸೆ. ಆತನನ್ನು ಕಚ್ಚಿದ ಹಾವೇ ಸತ್ತುಹೋಯಿತು ಎಂಬುದನ್ನು ಹೇಳಬೇಕಿರುವಲ್ಲಿ ಕಚ್ಚಿದ ಹಾವೇ ಇಹಲೋಕಕ್ಕೆ ಹೋಯಿತು ಎಂಬುದಾಗಿ ಬರೆದಿರುವುದನ್ನು ಕಾಣಬಹುದು! ಇಹಲೋಕ ಮತ್ತು ಪರಲೋಕಗಳೆಂಬ ಈ ಪದಗಳ ಬದಲು ಈ ಲೋಕ ಮತ್ತು ಬೇರೆ ಲೋಕ ಎಂಬ ಎಲ್ಲರಿಗೂ ಗೊತ್ತಾಗುವ ಪದಕಂತೆಗಳನ್ನು ಬಳಸಿದ್ದರೆ, ಇಂತಹ ತಪ್ಪು ಮಾಡಿ ನಗೆಪಾಟಲಾಗುವ ಹಾಗಾಗುತ್ತಿರಲಿಲ್ಲ.

ದಿನಪತ್ರಿಕೆಗಳಲ್ಲಿ ತಲೆಬರಹವನ್ನು ಬರೆಯುವವರೂ ಇಂತಹದೇ ಕೀಳರಿಮೆಯಿಂದ ಬಳಲುತ್ತಿರುವ ಹಾಗೆ ಕಾಣಿಸುತ್ತದೆ. ಒಂದು ಬರಹದಲ್ಲಿ ಉದ್ದಕ್ಕೂ ನಾಯಿ, ಬೆಕ್ಕು, ಕೋಳಿ, ಮೀನು ಎಂಬಂತಹ ಕನ್ನಡದವೇ ಆದ ಪದಗಳನ್ನು ಬರುತ್ತವೆ; ಆದರೆ, ತಲೆಬರಹದಲ್ಲಿ ಮಾತ್ರ ಶ್ವಾನ, ಮಾರ್ಜಾಲ, ಕುಕ್ಕುಟ, ಮತ್ಸ್ಯ ಎಂಬಂತಹ ಸಂಸ್ಕ್ರುತ ಎರವಲುಗಳು ಬರುತ್ತವೆ. ತಲೆಬರಹದಲ್ಲಿ ಎಲ್ಲರಿಗೂ ಗೊತ್ತಿರುವ ನಾಯಿ, ಬೆಕ್ಕು, ಮೀನು ಮೊದಲಾದ ಕನ್ನಡ ಪದಗಳು ಬಂದರೆ ದಿನಪತ್ರಿಕೆಯ ತಕ್ಕಮೆ ಇಲ್ಲವಾಗಬಹುದೆಂಬ ಹೆದರಿಕೆ ಅವರಿಗಿರುವಂತೆ ತೋರುತ್ತದೆ. ತನ್ನ ಮುದಿ ತಂದೆಯನ್ನು ಅಪ್ಪ ಎನ್ನಲು ಹಿಂಜರಿಯುವ ದೊಡ್ಡ ಅದಿಕಾರಿಯ ಕೀಳು ಸಂಸ್ಕ್ರುತಿಯಿದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ

ನುಡಿಯರಿಮೆಯ ಇಣುಕುನೋಟ – 31

ಕೆಲಸ ಮಾಡಿದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ, ಇಲ್ಲವೇ ‘ಕೆಲಸ ಮಾಡದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ? ಕೆಲವರು ಮೊದಲನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ, ಮತ್ತು ಬೇರೆ ಕೆಲವರು ಎರಡನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ. ಇಲ್ಲಿ ‘ಹಣ ಕೊಡುವುದು’ ಎಂಬ ಒಂದು ಎಸಕಕ್ಕೆ (ಕ್ರಿಯೆಗೆ) ‘ಕೆಲಸ ಮಾಡುವುದು’ ಎಂಬ ಇನ್ನೊಂದು ಎಸಕವನ್ನು ಬೇಡಿಕೆಯಾಗಿ ಮಾಡಲಾಗಿದೆ. ಇದನ್ನೇ ‘ಕೆಲಸ ಮಾಡದಿದ್ದರೆ ಹಣ ಸಿಗುವುದಿಲ್ಲ’ ಎಂಬುದಾಗಿ ಇನ್ನೊಂದು ಬಗೆಯಲ್ಲೂ ಹೇಳಲು ಬರುತ್ತದೆ.

ಈ ಎರಡನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದೆ (ಇದ್ದರೆ)’ ಎಂಬ ಪದವನ್ನೇ ಬಳಸಬೇಕಾಗುತ್ತದೆ; ಆದರೆ, ಅದರೊಂದಿಗೆ ‘ಹೊರತು’ ಎಂಬುದನ್ನು ಬಳಸಿರುವ ಮೊದಲನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದ’ ಎಂಬುದನ್ನು ಬಳಸಬೇಕೇ, ಇಲ್ಲವೇ ‘ಮಾಡಿದ’ ಎಂಬುದನ್ನು ಬಳಸಬೇಕೇ ಎಂಬುದೇ ಇಲ್ಲಿ ನಮ್ಮ ಮುಂದಿರುವ ಕೇಳ್ವಿ.

‘ಹೊರತು’ ಎಂಬ ಪದಕ್ಕೆ ಅಲ್ಲಗಳೆಯುವ ಹುರುಳಿದೆ; ಹಾಗಾಗಿ, ಅದರೊಂದಿಗೆ ‘ಮಾಡದ’ ಎಂಬ ಇನ್ನೊಂದು ಅಲ್ಲಗಳೆಯುವ ಹುರುಳಿರುವ ಪದವನ್ನು ಬಳಸಿದಲ್ಲಿ, ಒಂದು ಅಲ್ಲಗಳೆತ ಇನ್ನೊಂದು ಅಲ್ಲಗಳೆತವನ್ನು ಹೊಡೆದು ಹಾಕುವುದರಿಂದ, ಒಟ್ಟಾರೆಯಾಗಿ ಅಲ್ಲಗಳೆಯುವ ಹುರುಳು ಇಲ್ಲವಾಗುತ್ತದೆ, ಮತ್ತು ಈ ಕಾರಣಕ್ಕಾಗಿ ‘ಮಾಡದ ಹೊರತು’ ಎಂಬುದರ ಬಳಕೆ ಸರಿಯಲ್ಲ ಎಂಬುದಾಗಿ ಮೊದಲನೆಯ ಸೊಲ್ಲೇ ಸರಿ ಎಂದು ಹೇಳುವವರು ಅದಕ್ಕೆ ಉನ್ನೋಜೆಯ (ತರ‍್ಕದ) ಬೆಂಬಲವನ್ನು ಕೊಡಬಹುದು.

ಆದರೆ, ಇಲ್ಲಿ ತೊಡಕೇನೆಂದರೆ, ಸೊಲ್ಲರಿಮೆಯ ಕಟ್ಟಲೆಗಳು ಉನ್ನೋಜೆಯ ಕಟ್ಟಲೆಗಳಿಗೆ ಬೆಲೆ ಕೊಡಲೇ ಬೇಕೆಂದೇನೂ ಇಲ್ಲ. ಒಂದು ನುಡಿಯಲ್ಲಿ ಎಂತಹ ಸೊಲ್ಲು ಸರಿ ಎಂಬುದು ಎಂತಹದು ಬಳಕೆಯಲ್ಲಿದೆ ಎಂಬುದರ ಮೇಲೆ ಮಾತ್ರ ಅವಲಂಬಿಸಿರುತ್ತದೆ. ಕಿಟ್ಟೆಲ್ ಡಿಕ್ಶನರಿಯಲ್ಲಿ ಈ ಎರಡು ಬಗೆಯ ಸೊಲ್ಲುಗಳನ್ನೂ ಕೊಡಲಾಗಿದೆ; ಎಂದರೆ, ಈ ಎರಡು ಬಗೆಯ ಸೊಲ್ಲುಗಳೂ ಕನ್ನಡದಲ್ಲಿ ಬಳಕೆಯಲ್ಲಿವೆ. ಹಾಗಾಗಿ, ಎರಡೂ ಸರಿಯೆಂದೇ ಹೇಳಬೇಕಾಗುತ್ತದೆ.

ಉನ್ನೋಜೆಯ ಕಟ್ಟಲೆಗಳಿಗೂ ಸೊಲ್ಲರಿಮೆಯ ಕಟ್ಟಲೆಗಳಿಗೂ ನಡುವೆ ಹೊಂದಾಣಿಕೆಯಿಲ್ಲದಿರುವುದನ್ನು ಹಲವಾರು ಕಡೆಗಳಲ್ಲಿ ಕಾಣಬಹುದು. ‘ನಾನು ಅವನಿಗೆ ಹೊಡೆದಿದ್ದೇನೆ’ ಎಂಬುದೂ ‘ನಾನು ಅವನಿಗೆ ಹೊಡೆಯಲಿಲ್ಲವೆಂದಿಲ್ಲ’ ಎಂಬುದೂ ಉನ್ನೋಜೆಯ ಮಟ್ಟಿಗೆ ಒಂದೇ; ಆದರೆ, ಮಾತಿನಲ್ಲಿ ಅವು ಒಂದೇ ಅಲ್ಲ; ಯಾಕೆಂದರೆ, ಆ ಎರಡು ಸೊಲ್ಲುಗಳ ಹುರುಳಿನಲ್ಲಿ ವ್ಯತ್ಯಾಸವಿದೆ: ಅವುಗಳಲ್ಲಿ ಎರಡನೆಯ ಸೊಲ್ಲಿಗೆ ಮೊದಲನೆಯದು ತಿಳಿಸದಂತಹ ಕೆಲವು ಹೆಚ್ಚಿನ ಹುರುಳುಗಳಿವೆ; ‘ಹೊಡೆದಿದ್ದೇನೆ; ಆದರೆ, ಅದು ಅವನ ಒಳ್ಳೆಯದಕ್ಕೆ’ ಎಂಬುದು ಇಂತಹ ಒಂದು ಹೆಚ್ಚಿನ ಹುರುಳು.

ಅಲ್ಲಗಳೆತವನ್ನು ಒತ್ತಿಹೇಳುವುದಕ್ಕಾಗಿಯೂ ಎರಡು ಅಲ್ಲಗಳೆತಗಳನ್ನು ಒಟ್ಟಿಗೆ ಬಳಸಲಾಗುತ್ತದೆ; ‘ಬೇಡ ಬೇಡ’ ಇಲ್ಲವೇ ‘ಬೇಡವೇ ಬೇಡ’ ಎನ್ನುವುದಕ್ಕೆ ‘ಬೇಕು’ ಎಂಬ ಹುರುಳಿಲ್ಲ; ‘ಬೇಡ’ ಎಂಬುದನ್ನೇ ಒತ್ತಿಹೇಳುವ ಹುರುಳಿದೆ. ‘ಮಾಡದ ಹೊರತು’ ಎಂಬುದರ ಬಳಕೆಯಲ್ಲಿಯೂ ಇಂತಹದೇ ಎರಡು ಅಲ್ಲಗಳೆತಗಳ ಕೂಡಿಕೆ ನಡೆದಿರಬಹುದಲ್ಲವೇ?

ಹಿಂದೆ, ಈಗ, ಮತ್ತು ಮುಂದೆ ಎಂಬುದಾಗಿ ಮೂರು ಹೊತ್ತುಗಳನ್ನು ತಿಳಿಸುವ ಎಸಕ(ಕ್ರಿಯಾ)ರೂಪಗಳು ನುಡಿಗಳಲ್ಲಿರಬೇಕು ಎಂಬುದಾಗಿ ಹಿಂದಿನ ಸೊಲ್ಲರಿಗರು ಒಂದು ಉನ್ನೋಜೆಯ ಕಟ್ಟಲೆಯನ್ನು ತಮ್ಮ ಮುಂದಿರಿಸಿಕೊಂಡಿರುವ ಹಾಗೆ ಕಾಣಿಸುತ್ತದೆ; ಆದರೆ, ಕನ್ನಡದಲ್ಲಿ ‘ಇರು’ ಎಂಬ ಒಂದು ಎಸಕಪದಕ್ಕೆ ಮಾತ್ರ ‘ಇದ್ದ’, ‘ಇದ್ದಾನೆ’, ಮತ್ತು ‘ಇರುತ್ತಾನೆ’ ಎಂಬುದಾಗಿ ಮೂರು ಬಗೆಯ ಹೊತ್ತುಗಳನ್ನು ತಿಳಿಸುವ ರೂಪಗಳಿವೆ.

ಉಳಿದ ಎಸಕಪದಗಳಿಗೆಲ್ಲ ಹಿಂದಿನ ಮತ್ತು ಮುಂದಿನ ಎಸಕಗಳನ್ನು ತಿಳಿಸಬಲ್ಲ ‘ಬಂದ’ ಮತ್ತು ‘ಬರುತ್ತಾನೆ’ ಇಲ್ಲವೇ ‘ಹೋದ’ ಮತ್ತು ‘ಹೋಗುತ್ತಾನೆ’ ಎಂಬಂತಹ ಎರಡೆರಡು ಹೊತ್ತಿನ ರೂಪಗಳು ಮಾತ್ರ ಇವೆ. ಇವುಗಳಲ್ಲಿ ಎರಡನೆಯ ರೂಪಕ್ಕೆ ಈಗಿನ ಎಸಕವನ್ನು ಮಾತ್ರವಲ್ಲದೆ ಮುಂದಿನ ಎಸಕವನ್ನು ತಿಳಿಸುವ ಹುರುಳೂ ಇದೆ; ‘ನನಗೆ ಆ ರೀತಿ ಅನಿಸುತ್ತದೆ’ ಎಂಬ ಸೊಲ್ಲಿನಲ್ಲಿ ಅದು ನನ್ನಲ್ಲಿ ಈಗ ಇರುವ ಅನಿಸಿಕೆಯನ್ನು ತಿಳಿಸುತ್ತದೆ, ಮತ್ತು ‘ಅವನು ನಾಳೆ ಬರುತ್ತಾನೆ’ ಎಂಬ ಸೊಲ್ಲಿನಲ್ಲಿ ಅದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ.

ನುಡಿಯಲ್ಲಿಲ್ಲದಿರುವ ಮೂರು ಹೊತ್ತುಗಳನ್ನು ಕನ್ನಡದ ಎಸಕಪದಗಳಲ್ಲಿ ಕಾಣಿಸುವುದಕ್ಕಾಗಿ ಸೊಲ್ಲರಿಗರು ‘ಬರುತ್ತಾನೆ’ ಎಂಬುದು ಈಗ ನಡೆಯುವ ಎಸಕವನ್ನು ತಿಳಿಸುತ್ತದೆ, ಮತ್ತು ‘ಬರುವನು’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ ಎಂಬಂತಹ ಕಲ್ಪನೆಗೆ ಮೊರೆಹೋಗಿದ್ದಾರೆ. ಆದರೆ, ಉನ್ನೋಜೆಯ ಕಟ್ಟಲೆಯನ್ನು ನುಡಿಯ ಮೇಲೆ ಹೊರಿಸಲು ಹೊರಟಿರುವ ಈ ಪ್ರಯತ್ನ ನಿಜಕ್ಕೂ ತಪ್ಪಾಗಿದೆ. ಯಾಕೆಂದರೆ, ‘ಬರುತ್ತಾನೆ’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸಬಲ್ಲುದು, ಮತ್ತು ‘ಬರುವನು’ ಎಂಬುದನ್ನು ಕನ್ನಡ ಬರಹಗಳಲ್ಲಿ ತುಂಬಾ ಅಪರೂಪವಾಗಿ ಬಳಸಲಾಗುತ್ತಿದ್ದು, ಅದರ ಹುರುಳಿಗೂ ‘ಬರುತ್ತಾನೆ’ ಎಂಬುದರ ಹುರುಳಿಗೂ ನಡುವಿರುವ ವ್ಯತ್ಯಾಸ ಹೊತ್ತಿನ ವ್ಯತ್ಯಾಸವೇ ಅಲ್ಲ. ಕೆಲವೆಡೆಗಳಲ್ಲಿ ಬರುವನು ಎಂಬುದಕ್ಕೆ ಬಳಕೆಯ ಹುರುಳಿದೆ.

‘ಅಕ್ಕ’ ಎಂಬ ಪದವನ್ನು ಬರಹದಲ್ಲಿ ಬಳಸುವಾಗ ‘ಅಕ್ಕಳನ್ನು’, ‘ಅಕ್ಕಳಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಇಲ್ಲವೇ ‘ಅಕ್ಕನನ್ನು’, ‘ಅಕ್ಕನಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಎಂಬ ವಿಶಯದಲ್ಲಿಯೂ ಹಲವರಿಗೆ ಗೊಂದಲವಿರುವ ಹಾಗೆ ಕಾಣಿಸುತ್ತದೆ; ‘ಅಕ್ಕ’ ಎಂಬ ಪದ ಒಬ್ಬ ಹೆಂಗುಸನ್ನು ಗುರುತಿಸುವ ಕಾರಣ, ಅದರ ಬಳಿಕ ನಕಾರದ ಬದಲು ಳಕಾರವನ್ನು ಬಳಸಬೇಕೆಂಬ ಅನಿಸಿಕೆಯೇ ಈ ಗೊಂದಲಕ್ಕೆ ಕಾರಣ. ಅಕಾರದಲ್ಲಿ ಕೊನೆಗೊಳ್ಳುವ ‘ಕಿರಣ’, ‘ರಮ್ಯ’ ಮೊದಲಾದ ಹೆಣ್ಣುಗುರ‍್ತಿನ ಇಂತಹ ಬೇರೆ ಪದಗಳನ್ನು ಬಳಸುವಲ್ಲೂ ಇಂತಹದೇ ಗೊಂದಲ ಕಾಣಿಸುತ್ತದೆ. ಆದರೆ, ‘ಅಮ್ಮ’ ಎಂಬ ಇನ್ನೊಂದು ಪದವನ್ನು ಬಳಸುವಲ್ಲಿ ಗೊಂದಲವಿರುವ ಹಾಗೆ ಕಾಣಿಸುವುದಿಲ್ಲ; ಯಾಕೆಂದರೆ, ಯಾರೂ ‘ಅಮ್ಮಳನ್ನು’ ಇಲ್ಲವೇ ‘ಅಮ್ಮಳಿಗೆ’ ಎಂಬಂತಹ ರೂಪಗಳನ್ನು ಬಳಸಿದ ಹಾಗೆ ಕಾಣಿಸುವುದಿಲ್ಲ.

ಅಕಾರದಲ್ಲಿ ಕೊನೆಗೊಳ್ಳುವ ಕೊಟ್ಟಹೆಸರುಗಳ ಬಳಕೆಯಲ್ಲಿ ಇಂತಹ ಗೊಂದಲ ಕಾಣಿಸಿಕೊಳ್ಳಲು ಬೇರೊಂದು ಕಾರಣವೂ ಇದೆ: ಇಂತಹ ಕೆಲವು ಹೆಸರುಗಳು ಹುಡುಗಿಯರನ್ನು ಮಾತ್ರವಲ್ಲದೆ ಹುಡುಗರನ್ನು ಗುರುತಿಸುವಲ್ಲೂ ಬಳಕೆಯಾಗುತ್ತಿದ್ದು, ‘ಕಿರಣನನ್ನು’ ಎಂಬುದು ಹುಡುಗರನ್ನು ಗುರುತಿಸಬಲ್ಲುದಾಗಿದ್ದು, ಹುಡುಗಿಯರನ್ನು ಗುರುತಿಸುವಲ್ಲಿ ಅದಕ್ಕಿಂತ ಬೇರಾಗಿರುವ ‘ಕಿರಣಳನ್ನು’ ಎಂಬುದನ್ನು ಬಳಸುವುದೇ ಸರಿಯೆಂದು ಕೆಲವರಿಗೆ ಅನಿಸಬಹುದು.

‘ಅವನನ್ನು’ ಮತ್ತು ‘ಅವಳನ್ನು’ ಎಂಬ ಪದಗಳ ನಡುವಿರುವ ವ್ಯತ್ಯಾಸವೇ ಇಂತಹ ಪದಗಳ ನಡುವೆಯೂ ಇರಬೇಕೆಂಬ ಅನಿಸಿಕೆಯೂ ಈ ರೀತಿ ‘ಅಕ್ಕಳನ್ನು’, ‘ರಮ್ಯಳನ್ನು’ ಎಂಬಂತಹ ರೂಪಗಳನ್ನು ಬಳಸುವುದಕ್ಕೆ ಕಾರಣವಿರಬಹುದು. ಆದರೆ, ಕನ್ನಡದಲ್ಲಿ ‘ಅನ್ನು’ ಎಂಬ ಪತ್ತುಗೆ (ವಿಬಕ್ತಿ) ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆ ಬೇರೆಯೇ ಇದೆ: ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಗಂಡುಗುರ‍್ತ(ಪುಲ್ಲಿಂಗ)ದವಾಗಲಿ, ಹೆಣ್ಣುಗುರ‍್ತ(ಸ್ತ್ರೀಲಿಂಗ)ದವಾಗಲಿ ಅವುಗಳ ಬಳಿಕ ‘ಅನ್ನು’ ಒಟ್ಟು ಸೇರುವ ಮೊದಲು ನಕಾರವೇ ಬರುತ್ತದಲ್ಲದೆ ಳಕಾರ ಬರುವುದಿಲ್ಲ.

ಹಲವೆಣಿಕೆಯ (ಬಹುವಚನದ) ‘ರು’ ಒಟ್ಟು ಮನುಶ್ಯರನ್ನು ಗುರುತಿಸುವ ಹುಡುಗ, ಹುಡುಗಿ, ಕುರುಡ, ಕುರುಡಿ, ಮುದುಕ ಮೊದಲಾದ ಪದಗಳೊಂದಿಗೆ ಬರುತ್ತದೆ, ಮತ್ತು ‘ಗಳು’ ಒಟ್ಟು ಮನುಶ್ಯರಿಗಿಂತ ಬೇರಾಗಿರುವ ಮರ, ಕಲ್ಲು, ಮನೆ, ಎಮ್ಮೆ, ಹಕ್ಕಿ ಮೊದಲಾದವುಗಳೊಂದಿಗೆ ಬರುತ್ತದೆ; ಆದರೆ, ಇಂತಹದೊಂದು ಕಟ್ಟಲೆಗೂ ಹೊರಪಡಿಕೆಗಳಿವೆ: ಇಕಾರ ಇಲ್ಲವೇ ಉಕಾರದಲ್ಲಿ ಕೊನೆಗೊಳ್ಳುವ ಗಂಡುಗುರ‍್ತದ ಪದಗಳ ಬಳಿಕ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ಹೆಣ್ಣುಗುರ‍್ತದ ಪದಗಳ ಬಳಿಕ ‘ಗಳು’ ಎಂಬುದೇ ಬರುತ್ತದೆ (ಕಿಡಿಗೇಡಿಗಳು, ಎದುರಾಳಿಗಳು, ಗುರುಗಳು, ಮುಂದಾಳುಗಳು; ಹೆಣ್ಣಾಳುಗಳು, ಹೆಣ್ಣುಗಳು). ಇಲ್ಲಿಯೂ ಕೂಡ, ಉನ್ನೋಜೆಯ ಕಟ್ಟಲೆಗಳಿಗೆ ಎಡೆಯಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳ ಹುರುಳು ಮತ್ತು ತಿಳಿವು

ನುಡಿಯರಿಮೆಯ ಇಣುಕುನೋಟ – 30

ಒಂದು ಪದವನ್ನು ಕೇಳಿದಾಗ ಅದರ ಅರ‍್ತವೇನೆಂದು ನಮಗೆ ಗೊತ್ತಾಗುತ್ತದೆ; ಆದರೆ, ನಿಜಕ್ಕೂ ಈ ‘ಅರ‍್ತ’ ಎಂದರೇನು? ಪದನೆರಕೆ(ಪದಕೋಶ)ಗಳಲ್ಲಿ ಪದಗಳ ಅರ‍್ತವೇನೆಂದು ಕೊಡಲಾಗುತ್ತದೆ; ಆದರೆ ಅವು ಇದಕ್ಕಾಗಿ ಒಂದು ಪದದ ಬದಲು ಅದೇ ಅರ‍್ತದ ಇಲ್ಲವೇ ಅದಕ್ಕೆ ಹತ್ತಿರದ ಅರ‍್ತದ ಬೇರೊಂದು ಪದವನ್ನು ಕೊಡುತ್ತವೆ. ‘ಎಲ್ಲೆ’ ಎಂಬ ಪದಕ್ಕೆ ಕನ್ನಡದ ಒಂದು ಪದಕೋಶ ‘ಗಡಿ’ ಎಂಬ ಇನ್ನೊಂದು ಪದವನ್ನು ಅದರ ಅರ‍್ತವೆಂದು ಕೊಡಬಹುದು.

ಆದರೆ ‘ಗಡಿ’ ಎಂಬುದೂ ಕನ್ನಡದಲ್ಲಿ ಬಳಕೆಯಾಗುವ ಒಂದು ಪದವಾದ ಕಾರಣ, ಅದಕ್ಕೂ ಅದರದೇ ಆದ ಅರ‍್ತ ಇದೆ. ಹಾಗಾಗಿ, ನಿಜಕ್ಕೂ ಅದು ‘ಎಲ್ಲೆ’ ಪದದ ಅರ‍್ತ ಏನು ಎಂಬುದನ್ನು ನಮಗೆ ತಿಳಿಸುವುದಿಲ್ಲ. ಆ ಎರಡು ಪದಗಳ ಅರ‍್ತ ಒಂದೇ ಎಂದಶ್ಟೇ ಅದು ತಿಳಿಸುತ್ತದೆ. ಹಾಗಾಗಿ, ‘ಎಲ್ಲೆ’ ಎಂಬುದಕ್ಕೆ ‘ಗಡಿ’ ಎಂಬ ಅರ‍್ತವನ್ನು ಕೊಡುವ ಪದನೆರಕೆ ‘ಗಡಿ’ ಎಂಬುದಕ್ಕೆ ‘ಎಲ್ಲೆ’ ಎಂಬ ಅರ‍್ತವನ್ನೂ ಕೊಟ್ಟಿರಬಹುದು!

ಕನ್ನಡ ಪದಕ್ಕೆ ಇಂಗ್ಲಿಶ್ ಪದ ಇಲ್ಲವೇ ಪದಕಂತೆಯ ಮೂಲಕವಾಗಲಿ ಇಲ್ಲವೇ ಬೇರೊಂದು ನುಡಿಯ ಪದದ ಮೂಲಕವಾಗಲಿ ಅರ‍್ತ ಹೇಳುವ ಪದನೆರಕೆಗಳೂ ಇವೆ. ಆದರೆ, ಇಂತಹ ಪದನೆರಕೆಗಳೂ ಎರಡು ಪದಗಳ ಅರ‍್ತ ಹೆಚ್ಚುಕಡಿಮೆ ಒಂದೇ ಎಂಬುದಾಗಿ ತಿಳಿಸುತ್ತವಲ್ಲದೆ ನಿಜಕ್ಕೂ ಆ ಅರ‍್ತ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ನಾನು ಹೇಳಿದ್ದು ಅರ‍್ತವಾಯಿತೋ? ಎಂದು ಯಾರಾದರೂ ಕೇಳಿದರೆ ನಾವು ಅರ‍್ತವಾಯಿತು ಎಂದು ಹೇಳಬಹುದು. ಆದರೆ ಏನು ಅರ‍್ತವಾಯಿತು? ಎಂದು ಕೇಳಿದರೆ ಅಂತಹದೇ ಇನ್ನೊಂದು ಮಾತನ್ನು ಹೇಳಬಲ್ಲೆವಲ್ಲದೆ ಬೇರೇನೂ ಮಾಡಲಾರೆವು.

ಒಂದು ಮಾತನ್ನು ಕೇಳಿದ ಮೇಲೆ ನಾವು ಏನು ಮಾಡುತ್ತೇವೆ ಎಂಬುದರಿಂದ ನಮಗೆ ಆ ಮಾತು ಅರ‍್ತವಾಗಿದೆಯೋ ಇಲ್ಲವೋ ಎಂಬುದು ತಿಳಿದೀತು. ‘ಕುಳಿತುಕೊಳ್ಳಿ’ ಎಂದು ಹೇಳಿದಾಗ ಎದುರಿಗಿದ್ದವನು ಕುಳಿತುಕೊಂಡನಾದರೆ ಅವನಿಗೆ ಆ ಮಾತು ಅರ‍್ತವಾಗಿದೆಯೆಂದು ಹೇಳಬಹುದು. ಆದರೆ, ಆತ ಕುಳಿತುಕೊಳ್ಳದಿದ್ದರೂ ಆ ಮಾತು ಅವನಿಗೆ ಅರ‍್ತವಾಗಿಲ್ಲವೆಂದು ಹೇಳಲು ಬರುವುದಿಲ್ಲ. ಇದಲ್ಲದೆ ಹಾಗೆ ಮಾಡಬೇಕೆಂಬುದು ಆ ಮಾತಿನ ಅರ‍್ತವಲ್ಲದೆ ಹಾಗೆ ಮಾಡುವುದು ಅದರ ‘ಅರ‍್ತ’ವಲ್ಲ.

ಮೇಲಿನಿಂದ ಮೇಲೆ ನೋಡುವಾಗ ತೀರ ಸುಲಬವೆಂದು ಕಾಣಿಸಿದರೂ ವಿವರಿಸಹೊರಟಾಗ ತೀರ ತೊಡಕಿನದಾಗುವ ಈ ‘ಅರ‍್ತ’ ಎಂಬುದರ ಕುರಿತು ಹಲವಾರು ಮಂದಿ ತತ್ವಜ್ನಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿ ನಮಗೆದುರಾಗುವ ಈ ತೊಡಕಿಗೆ ಮುಕ್ಯ ಕಾರಣವೇನೆಂದರೆ, ನಾವು ಬಳಸುವ ‘ಅರ‍್ತ’ ಇಲ್ಲವೇ ‘meaning’ ಎಂಬ ಪದ ಎರಡು ತೀರ ಬೇರಾಗಿರುವ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಒಂದು ಮಾತನ್ನು ಕೇಳಿದಾಗ ನಮಗೆ ಅದು ಅರ‍್ತವಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವ ಅರ‍್ತ.

ಈ ರೀತಿ ನಾವು ಮಾಡಿಕೊಂಡಿರುವ ಅರ‍್ತವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂದಿದ್ದಲ್ಲಿ ಅದನ್ನು ಬೇರೊಂದು ರೀತಿಯ ಮಾತಿನ ಮೂಲಕವಾಗಲಿ ಇಲ್ಲವೇ ಸನ್ನೆ, ಚಿತ್ರ ಮೊದಲಾದವುಗಳ ಮೂಲಕವಾಗಲೀ ಸೂಚಿಸಬೇಕಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕುವ ರೂಪದಲ್ಲಿರುವ ಅರ‍್ತ. ಈ ರೀತಿ ‘ಅರಿವಿಗೆ ಎಟಕದಿರುವ ಅರ‍್ತ’ ಮತ್ತು ‘ಅರಿವಿಗೆ ಎಟಕುವ ಅರ‍್ತ’ ಎಂಬುದಾಗಿ ಎರಡು ರೀತಿಯ ‘ಅರ‍್ತ’ಗಳು ಪದಗಳಿಗಿವೆ.

ಪದನೆರಕೆಗಳು ಕೊಡುವುದು ಅರಿವಿಗೆ ಎಟಕುವ ಅರ‍್ತಗಳನ್ನು ಮಾತ್ರ. ಅರಿವಿಗೆ ಎಟಕದ ಅರ‍್ತಗಳು ಅವಕ್ಕೂ ಎಟಕಲಾರವು. ಈ ಎರಡು ರೀತಿಯ ‘ಅರ‍್ತ’ಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿದ್ದು ಅವನ್ನು ಸರಿಯಾಗಿ ತಿಳಿದುಕೊಳ್ಳದುದರಿಂದಾಗಿ ಅರಿವಿಗರು ಹಲವು ಬಗೆಯ ಗೊಂದಲಗಳಿಗೆ ಒಳಗಾಗಿದ್ದಾರೆ. ಅರಿವಿಗೆ ಎಟಕದ ಅರ‍್ತವನ್ನು ‘ತಿಳಿವು’ ಎಂಬುದಾಗಿ, ಮತ್ತು ಅರಿವಿಗೆ ಎಟಕುವ ಅರ‍್ತವನ್ನು ‘ಹುರುಳು’ ಎಂಬುದಾಗಿ ಹೆಸರಿಸಿದಲ್ಲಿ ಈ ಗೊಂದಲ ತಾನಾಗಿಯೇ ಇಲ್ಲವಾಗುತ್ತದೆ.

ಪದಗಳ ‘ತಿಳಿವು’ ಎನ್ನುವುದು ಅವನ್ನು ತಿಳಿದಿರುವವರ ಮಿದುಳಿನಲ್ಲಿ ಕೆಲವು ವಿಶಿಶ್ಟವಾದ ನರಗಳ ವಿನ್ಯಾಸಗಳಾಗಿ ಉಂಟಾಗಿರುತ್ತವೆ. ಯಾರಾದರೊಬ್ಬ ಆಡುಗನು ಒಂದು ಪದವನ್ನು ಬಳಸಿದಾಗ ಕೇಳುಗನ ಮಿದುಳಿನಲ್ಲಿ ಆ ಪದಕ್ಕಿರುವ ನರಗಳ ವಿನ್ಯಾಸ ಜೀವಂತವಾಗುತ್ತದೆ; ಎಂದರೆ ಅದು ಮಿಂಚುತ್ತದೆ. ನರಗಳ ವಿನ್ಯಾಸವೊಂದು ಈ ರೀತಿ ಮಿಂಚಿದಾಗ ಆತನಿಗೆ ತನಗೆ ತಿಳಿದಿರುವ ಪದವೊಂದನ್ನು ಕೇಳಿದಹಾಗಾಗುತ್ತದೆ.

ಒಂದು ನುಡಿಯನ್ನು ಕಲಿಯುವುದೆಂದರೆ ಮಿದುಳಿನಲ್ಲಿ ಇಂತಹ ಹಲವಾರು ನರಗಳ ವಿನ್ಯಾಸಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುವುದಲ್ಲದೆ ಬೇರೇನಲ್ಲ. ಒಬ್ಬ ವ್ಯಕ್ತಿ ಕಲಿಯದಿರುವ ನುಡಿಯ ಪದಗಳನ್ನು ಕೇಳಿದಾಗ ಅವನ ಮಿದುಳಿನಲ್ಲಿರುವ ನರಗಳ ವಿನ್ಯಾಸಗಳಲ್ಲಿ ಯಾವುದೂ ಮಿಂಚುವುದಿಲ್ಲ. ಅಂತಹ ಪದಗಳಿಗೆ ಮಿಂಚಬಲ್ಲ ನರಗಳ ವಿನ್ಯಾಸಗಳು ಆತನ ಮಿದುಳಿನಲ್ಲಿ ಉಂಟಾಗಿಲ್ಲವೆಂಬುದೇ ಇದಕ್ಕೆ ಕಾರಣ.

ಒಂದು ಪದದ ಹುರುಳು ಇದಕ್ಕಿಂತ ತೀರ ಬೇರಾದುದು. ‘ಎಲ್ಲೆ’ ಎಂಬ ಪದದ ಹುರುಳನ್ನು ‘ಗಡಿ’ ಎಂಬುದಾಗಿ ಕೊಡಬಹುದು. ಇಲ್ಲಿ ಎರಡು ಪದಗಳಿವೆ; ಅವುಗಳಲ್ಲಿ ಒಂದು ಇನ್ನೊಂದರ ಹುರುಳು. ಎರಡೂ ಪದಗಳೇ. ಆದರೆ ಅವುಗಳಲ್ಲಿ ಒಂದು ಪದದ (‘ಗಡಿ’ ಎಂಬುದರ) ತಿಳಿವು ಕೇಳುಗನಲ್ಲಿದೆ ಮತ್ತು ಇನ್ನೊಂದರ (‘ಎಲ್ಲೆ’ ಎಂಬುದರ) ತಿಳಿವು ಆತನಲ್ಲಿಲ್ಲ ಎಂಬ ಕಾರಣಕ್ಕಾಗಿ ಒಂದನ್ನು ಇನ್ನೊಂದರ ಹುರುಳು ಎಂಬುದಾಗಿ ಪರಿಗಣಿಸಲಾಗಿದೆ.

ಕೇಳುಗನಲ್ಲಿ ತಿಳಿವಿಲ್ಲದಿರುವ ಪದಕ್ಕೆ ಆತನಲ್ಲಿ ತಿಳಿವಿರುವ ಪದದ ಮೂಲಕ ಪದನೆರಕೆಗಳು ತಿಳಿವನ್ನು ಕೊಡಲು ಪ್ರಯತ್ನಿಸುತ್ತವೆ. ‘ಎಲ್ಲೆ’ ಪದದ ತಿಳಿವಿಲ್ಲದವರು ಮಾತ್ರವೇ ಪದನೆರಕೆಗಳಲ್ಲಿ ಅದರ ಅರ‍್ತವನ್ನು ಹುಡುಕಲು ಹೋಗುತ್ತಾರೆ. ಹಾಗೆ ಹುಡುಕುವವರಿಗೆ ‘ಗಡಿ’ ಎಂಬುದರ ತಿಳಿವು ಇರಬಹುದು ಎಂಬುದಾಗಿ ಪದನೆರಕೆಯನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಇದಕ್ಕೆ ಬದಲು, ‘ಗಡಿ’ ಪದದ ತಿಳಿವಿಲ್ಲದವರು ಆ ಪದದ ಅರ‍್ತವನ್ನು ಪದನೆರಕೆಗಳಲ್ಲಿ ಹುಡುಕುತ್ತಾರೆ ಮತ್ತು ಅವರಿಗೆ ‘ಎಲ್ಲೆ’ ಎಂಬ ಪದದ ತಿಳಿವಿರಬಹುದೆಂದು ಪದನೆರಕೆಗಳನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಎರಡರ ತಿಳಿವೂ ಇಲ್ಲದವರಿಗೆ ಅಂತಹ ಪದನೆರಕೆ ಯಾವ ನೆರವನ್ನೂ ನೀಡಲಾರದು.

ತಿಳಿವು ಮತ್ತು ಹುರುಳುಗಳ ನಡುವಿರುವ ಈ ವ್ಯತ್ಯಾಸ ಹುರುಳುಗಳ ನಡುವಿನ ಸಂಬಂದವೆಂತಹದು ಎಂಬುದನ್ನು ತಿಳಿಯುವಲ್ಲಿ ಬಹಳ ಪ್ರಯೋಜನಕ್ಕೆ ಬರುತ್ತದೆ. ಎರಡು ಪದಗಳಿಗೆ (‘ಎಲ್ಲೆ’ ಮತ್ತು ‘ಗಡಿ’ ಎಂಬವುಗಳಿಗೆ) ಒಂದೇ ಅರ‍್ತವಿದೆ ಎಂದು ಹೇಳುವಾಗ ನಾವು ಅವುಗಳಲ್ಲಿ ಒಂದನ್ನು ಇನ್ನೊಂದರ ಹುರುಳಾಗಿ ಬಳಸಬಲ್ಲೆವು ಎಂದಶ್ಟೇ ಹೇಳುತ್ತೇವಲ್ಲದೆ ನಿಜಕ್ಕೂ ಆ ಎರಡು ಪದಗಳಿಗೆ ನಮ್ಮಲ್ಲಿ ಒಂದೇ ರೀತಿಯ ತಿಳಿವಿದೆ ಎಂದೇನೂ ಹೇಳುವುದಿಲ್ಲ. ಯಾಕೆಂದರೆ, ಒಂದು ಪದದ ತಿಳಿವಿಗೆ ಹಲವು ಆಯಾಮಗಳಿದ್ದು ಅವೆಲ್ಲವುಗಳಲ್ಲೂ ಅದು ಇನ್ನೊಂದು ಪದದ ಹಾಗೆಯೇ ಇರಲು ಸಾದ್ಯವೇ ಇಲ್ಲ. ಎತ್ತುಗೆಗಾಗಿ, ‘ಗಡಿ’ ಪದವನ್ನು ಹೊತ್ತಿಗೆ ಸಂಬಂದಿಸಿದಂತೆಯೂ ‘ಗಡಿ’ ಇಲ್ಲವೇ ‘ಗಡುವು’ ಎಂಬ ರೂಪದಲ್ಲಿ ಬಳಸಲು ಬರುತ್ತದೆ; ಆದರೆ, ‘ಎಲ್ಲೆ’ ಎಂಬ ಪದಕ್ಕೆ ಅಂತಹ ಹೊತ್ತಿಗೆ ಸಂಬಂದಿಸಿದ ಬಳಕೆಯಿಲ್ಲ. ಇವೆರಡರೊಳಗೆ ಇಂತಹ ಇನ್ನೂ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಅವೆರಡರ ಅರ‍್ತ ಒಂದೇ ಎನ್ನುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲದೆ ತಿಳಿವಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲ.

ಒಂದು ಪದದ ಹುರುಳನ್ನು ಪದಕಂತೆ ಇಲ್ಲವೇ ಸೊಲ್ಲಿನ ಮೂಲಕ ವಿವರಿಸುವಲ್ಲೂ ಇಂತಹದೇ ಸಮಸ್ಯೆ ನಮ್ಮೆದುರಿಗಿದೆ. ನಾವು ಕೊಡುವ ಪದಕಂತೆ ಇಲ್ಲವೇ ಸೊಲ್ಲು ಆ ಪದದ ತಿಳಿವಿನ ಕೆಲವು ಅಂಶಗಳನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ ಎಲ್ಲಾ ಅಂಶಗಳನ್ನೂ ಸೂಚಿಸಲಾರದು. ಕೆಲವು ಪದಗಳ ಹಿಂದಿರುವ ತಿಳಿವನ್ನು ಸರಿಯಾಗಿ ತಿಳಿಸಬೇಕಿದ್ದಲ್ಲಿ ಒಂದು ದೊಡ್ಡ ಪ್ರಬಂದವನ್ನೇ ಬರೆಯಬೇಕಾದೀತು. ಹಾಗಾಗಿ, ಇಲ್ಲೂ ನಮ್ಮೆದುರಿಗಿರುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯೇ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

ನುಡಿಯರಿಮೆಯ ಇಣುಕುನೋಟ – 29

ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.

ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.

ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.

ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್‍ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್‍ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್‍ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್‍ಪಡಿಸಬಹುದು. ಇಂತಹ ಹಲವು ಬಗೆಯ ಮಾರ್‍ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.

ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್‍ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್‍ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್‍ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳು ನಡೆದಿವೆ.

ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ‍್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್‍ಪಾಡುಗಳು.

ಇವು ಉಲಿಗಳ ಮಾರ್‍ಪಾಡುಗಳಲ್ಲದೆ ಪದಗಳ ಮಾರ್‍ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್‍ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್‍ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್‍ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್‍ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್‍ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್‍ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್‍ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್‍ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.

ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ‍್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್‍ಪಾಡುಗಳಲ್ಲಿ ಉಲಿಗಳ ಮಾರ್‍ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್‍ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್‍ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್‍ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.

ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್‍ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.

ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್‍ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.

ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್‍ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್‍ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.

ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಎಣಿಕೆಯಲ್ಲೂ ಹಲವು ಬಗೆಗಳಿವೆ

ನುಡಿಯರಿಮೆಯ ಇಣುಕುನೋಟ – 28

ಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಒಂದು ಎಣಿಕೆಪದವನ್ನು ನೇರವಾಗಿ ಇನ್ನೊಂದು ಎಣಿಕೆಪದದೊಂದಿಗೆ ಸೇರಿಸಿ ಹೇಳುವುದು ಒಂದು ಹೊಲಬು; ಇದನ್ನು ಇಪ್ಪತ್ತು (ಎರಡು+ಹತ್ತು), ಇನ್ನೂರು (ಎರಡು+ನೂರು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು. ಒಂದು ಎಣಿಕೆಪದದ ಪತ್ತುಗೆ(ಸಂಬಂದ)ರೂಪವನ್ನು ಇನ್ನೊಂದು ಎಣಿಕೆಪದಕ್ಕೆ ಸೇರಿಸಿ ಹೇಳುವುದು ಇನ್ನೊಂದು ಹೊಲಬು; ಇದನ್ನು ಇಪ್ಪತ್ತಾರು (ಇಪ್ಪತ್ತರ+ಆರು), ನೂರ ಹತ್ತು (ನೂರರ+ಹತ್ತು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು.

ಇವುಗಳಲ್ಲಿ ಮೊದಲನೆಯದನ್ನು ಪೆಚ್ಚಿಸುವ (ಗುಣಿಸುವ) ಹುರುಳಿನಲ್ಲೂ, ಎರಡನೆಯದನ್ನು ಕೂಡಿಸುವ ಹುರುಳಿನಲ್ಲೂ ಬಳಸಲಾಗುತ್ತದೆ. ಆದರೆ, ಈ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಒಂಬತ್ತು (ಒಂದು+ಹತ್ತು) ಎಂಬುದರಲ್ಲಿ ಮೊದಲನೆಯ ಹೊಲಬು ಬಳಕೆಯಾಗಿದೆಯಾದರೂ ಅದಕ್ಕೆ ‘ಹತ್ತರಿಂದ ಒಂದು ಕಡಿಮೆ’ ಎಂಬ ಕಳೆತದ ಹುರುಳಿದೆ.

ಒಂದರಿಂದ ಎಂಟರ ವರೆಗಿನ ಎಣಿಕೆಪದಗಳು, ಮತ್ತು ಹತ್ತು, ನೂರು ಎಂಬ ಪದಗಳು ಒತ್ತೆ ಪದಗಳು; ಹನ್ನೊಂದರಿಂದ ಹತ್ತೊಂಬತ್ತರ ವರೆಗಿನ ಪದಗಳಲ್ಲಿ ಹತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರವರೆಗಿನ ಪದಗಳನ್ನು ಸೇರಿಸಲಾಗಿದೆ. ಅದಕ್ಕೆ ಮೇಲೆ, ಇಪ್ಪತ್ತು ಎಂಬುದರಲ್ಲಿ ಎರಡು (ಇಪ್) ಪದಕ್ಕೆ ಹತ್ತು (ಪತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ. ಇದೇ ರೀತಿಯಲ್ಲಿ, ಮುಂದೆಯೂ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಪದಗಳಲ್ಲಿ ಇಪ್ಪತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರ ವರೆಗಿನ ಪದಗಳನ್ನು ಸೇರಿಸಲಾಗಿದೆ (ಇಪ್ಪತ್ತೊಂದು, ಇಪ್ಪತ್ತೆರಡು), ಮತ್ತು ಮೂವತ್ತು ಪದದಲ್ಲಿ ಮೂರು ಪದಕ್ಕೆ ಹತ್ತು (ವತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ.

ಮುಂದೆ ತೊಂಬತ್ತೊಂಬತ್ತರ ವರೆಗೂ ಇದೇ ರೀತಿಯಲ್ಲಿ ಈ ಎರಡು ಹೊಲಬುಗಳ ಬಳಕೆಯಾಗಿದೆ: ಮೊದಲ ಒಂಬತ್ತು ಎಣಿಕೆಪದಗಳನ್ನು ಪತ್ತುಗೆರೂಪದ ಮೂಲಕ ಉಂಟುಮಾಡಲಾಗಿದೆ, ಮತ್ತು ಹತ್ತನೆಯ ಪದವನ್ನು ನಾಲ್ಕು, ಅಯ್ದು, ಆರು ಮೊದಲಾದ ಪದಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ಉಂಟುಮಾಡಲಾಗಿದೆ. ನೂರು ಎಂಬುದನ್ನು ತಿಳಿಸಲು ಮಾತ್ರ ಒತ್ತೆ ಪದದ ಬಳಕೆಯಾಗಿದೆ.

ನೂರರ ಬಳಿಕವೂ ಇವೇ ಎರಡು ಹೊಲಬುಗಳನ್ನು ಬಳಸಲಾಗಿದೆ: ನೂರ ಒಂದು, ನೂರ ಎರಡು, … ನೂರ ಹತ್ತು, … ನೂರ ಮೂವತ್ತೆಂಟು … ಎಂಬುದಾಗಿ ಒಟ್ಟು ನೂರು ಎಣಿಕೆಗಳನ್ನು ನೂರು ಎಂಬ ಪದದ ಪತ್ತುಗೆ ರೂಪಕ್ಕೆ ಒಂದರಿಂದ ತೊಂಬತ್ತೊಂಬತ್ತರ ವರೆಗಿನ ಪದಗಳನ್ನು ಸೇರಿಸಿ ಹೇಳಲಾಗಿದೆ, ಮತ್ತು ಮುಂದಿನ ಎಣಿಕೆಪದಗಳನ್ನು ಎರಡು, ಮೂರು ಮೊದಲಾದ ಒಂಬತ್ತು ಪದಗಳಿಗೆ ನೇರವಾಗಿ ನೂರು ಪದವನ್ನು ಸೇರಿಸಿ ಇನ್ನೂರು, ಮುನ್ನೂರು ಮೊದಲಾದ ಪದಗಳನ್ನು ಉಂಟುಮಾಡಲಾಗಿದೆ. ಇದು ಕನ್ನಡತಮಿಳುತೆಲುಗು ಮೊದಲಾದ ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬಾಗಿದೆ.

ಈ ಎಣಿಕೆಪದಗಳಲ್ಲಿ ಬರುವ ಪದಗಳ ಓರಣ ಅಂಕೆಗಳಲ್ಲಿ ಕಾಣಿಸುವ ಓರಣವನ್ನೇ ಹೋಲುತ್ತದೆ; ಎತ್ತುಗೆಗಾಗಿ, ‘ಮೂವತ್ತೆಂಟು’ ಎಂಬುದರಲ್ಲಿ ‘3(ಹತ್ತು)8’ ಎಂಬ ಓರಣವಿದೆ, ಮತ್ತು ಅದನ್ನು 38 ಎಂಬುದಾಗಿ ಅಂಕೆಯಲ್ಲಿ ಬರೆಯುವಾಗಲೂ 3 ಮೊದಲು ಬರುತ್ತದೆ, ಮತ್ತು 8 ಬಳಿಕ ಬರುತ್ತದೆ. ಇದೇ ರೀತಿಯಲ್ಲಿ, ‘ಎರಡು ಸಾವಿರದ ಮುನ್ನೂರ ನಲುವತ್ತಾರು’ ಎಂಬುದರಲ್ಲಿ ಕಾಣಿಸುವ ‘2(ಸಾವಿರ)3(ನೂರು)4(ಹತ್ತು)6’ ಎಂಬ ಓರಣವೇ 2346 ಎಂಬ ಅಂಕೆಯಲ್ಲೂ ಕಾಣಿಸುತ್ತದೆ.

ಆದರೆ, ಸಂಸ್ಕ್ರುತದಲ್ಲಿ ಮತ್ತು ಅದರಿಂದ ಬೆಳೆದು ಬಂದಿರುವ ಹಿಂದಿಮರಾಟಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳಲ್ಲಿ ಎಣಿಕೆಯ ಪದಗಳನ್ನು ಬೇರೆಯೇ ಬಗೆಯಲ್ಲಿ ಕಟ್ಟಲಾಗಿದ್ದು, ಅವಕ್ಕೂ ಅಂಕೆಗಳಿಗೂ ನಡುವೆ ಇಂತಹ ಹೊಂದಾಣಿಕೆ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಹಿಂದಿಯಲ್ಲಿ ‘ಅಡ್ತೀಸ್’ ಎಂಬ ಎಣಿಕೆಪದದಲ್ಲಿ ‘8-3(ಹತ್ತು)’ ಎಂಬ ಓರಣವಿದೆ; ಈ ಓರಣ 38 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ; ಸಂಸ್ಕ್ರುತದಲ್ಲೂ ಎಪ್ಪತ್ತಯ್ದು ಎಂಬ ಹುರುಳನ್ನು ಕೊಡುವ ‘ಪಂಚಸಪ್ತತಿ’ ಎಂಬ ಎಣಿಕೆಪದದಲ್ಲಿ 5-7(ಹತ್ತು) ಎಂಬ ಓರಣವಿದ್ದು, ಅದು 75 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ.

ಕನ್ನಡ ಮತ್ತು ಸಂಸ್ಕ್ರುತಗಳೆರಡರಲ್ಲೂ ಹತ್ತರ ಹೊಲಬು ಬಳಕೆಯಲ್ಲಿದೆ. ಆದರೆ, ಬೇರೆ ಕೆಲವು ನುಡಿಗಳಲ್ಲಿ ಬೇರೆಯೇ ಬಗೆಯ ಹೊಲಬುಗಳು ಬಳಕೆಯಾಗುತ್ತವೆ. ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೋಡೊ (ಇಲ್ಲವೇ ಬೋರೊ) ಎಂಬ ನುಡಿಯಲ್ಲಿ ಎಣಿಕೆಯನ್ನು ನಾಲ್ಕರ ಗುಂಪುಗಳಲ್ಲಿ ಮಾಡಲಾಗುತ್ತದೆ. ಈ ನುಡಿಯಲ್ಲಿ ಒಂದರಿಂದ ನಾಲ್ಕರ ವರೆಗೆ ಎಣಿಸಿ, ಮುಂದಕ್ಕೆ ಒಂದ್ನಾಲ್ಕು ಒಂದು (ಎಂದರೆ ಐದು), ಒಂದ್ನಾಲ್ಕು ಎರಡು (ಎಂದರೆ ಆರು), ಒಂದ್ನಾಲ್ಕು ಮೂರು (ಎಂದರೆ ಏಳು), ಎರಡ್ನಾಲ್ಕು (ಎಂದರೆ ಎಂಟು) ಎಂಬುದಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ನುಡಿಯಲ್ಲಿ ಎರಡ್ನಾಲ್ಕು ಮೂರು ಎನ್ನಬೇಕು, ಮತ್ತು ಹದಿನಾಲ್ಕು ಎನ್ನಲು ಮೂರ್ನಾಲ್ಕು ಎರಡು ಎನ್ನಬೇಕು.

ಬೋಡೊ ನುಡಿಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಹೊಲಬಿನಲ್ಲಿ ಇಪ್ಪತ್ತರವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಹೊಲಬು ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಹೊಲಬಿರುವಂತೆ, ಬೋಡೊ ನುಡಿಯಲ್ಲಿ ಇಪ್ಪತ್ತರ ಹೊಲಬಿದೆ. ಈ ಹೊಲಬಿನಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕು ಎರಡು’ ಎನ್ನಬೇಕು, ಮತ್ತು ಎಪ್ಪತ್ತಮೂರು ಎನ್ನಲು ‘ಮೂರಿಪ್ಪತ್ತು ಮೂರ್ನಾಲ್ಕು ಒಂದು’ (3 x 20) + (3 x 4) + 1 ಎನ್ನಬೇಕು. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೊ ನುಡಿಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಹೊಲಬಿಗಿಂತ ಅವರ ನಾಲ್ಕರ ಹೊಲಬೇ ಒಳ್ಳೆಯದೆಂದು ಅನಿಸದಿರದು.

ನಮ್ಮಲ್ಲಿ ಎಣಿಕೆಯ ಪದಗಳನ್ನು ಉಂಟುಮಾಡುವಲ್ಲಿ ಹತ್ತರ ಹೊಲಬು ಬಳಕೆಯಲ್ಲಿದೆಯಾದ ಕಾರಣ, ಅದೇ ಹತ್ತರ ಹೊಲಬಿನಲ್ಲಿ ಉಂಟುಮಾಡಿರುವ ಲೀಟರ್, ರುಪಾಯಿ, ಗ್ರಾಮ್ ಮೊದಲಾದ ಅಳತೆಪದಗಳ ಬಳಕೆ ಮೊದಲಿಗಿದ್ದ ರಾತಲು, ಸೇರು, ಅಡಿ ಮೊದಲಾದವುಗಳಿಗಿಂತ ಒಳ್ಳೆಯವೆಂದು ಅನಿಸುತ್ತದೆ; ಆದರೆ, ನಾಲ್ಕರ ಹೊಲಬನ್ನು ಬಳಸುವವರಿಗೆ ಅವು ಹಿಂದಿನವಕ್ಕಿಂತ ಒಳ್ಳೆಯವೆಂದೇನೂ ಅನಿಸಬೇಕಾಗಿಲ್ಲ.

ಎಣಿಕೆಪದಗಳ ಬಳಕೆಯಲ್ಲೂ ನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳನ್ನು ಕಾಣಬಹುದು: ಕನ್ನಡದಲ್ಲಿ ಎಣಿಕೆಪದಗಳನ್ನು ಮರ, ಮನೆ, ಹುಡುಗ, ಚೆಂಡು ಮೊದಲಾದ ಪದಗಳಿಗೆ ನೇರವಾಗಿ ಸೇರಿಸಲು ಬರುತ್ತದೆ (ಮೂರು ಮನೆಗಳು, ಇಪ್ಪತ್ತೊಂದು ಚೆಂಡುಗಳು); ಆದರೆ, ನೀರು, ಅಕ್ಕಿ, ಎಣ್ಣೆ, ಹಾಲು ಮೊದಲಾದ ಪದಗಳಿಗೆ ಎಣಿಕೆಪದಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಅವಕ್ಕೆ ಅಳತೆಯನ್ನು ತಿಳಿಸುವ ಪದಗಳನ್ನು ಸೇರಿಸಬೇಕಾಗುತ್ತದೆ (ಮೂರು ಕಿಲೋ ಅಕ್ಕಿ, ಎರಡು ಲೀಟರ್ ಹಾಲು). ಇದಕ್ಕೆ ಬದಲು, ಬೋಡೊ ನುಡಿಯಲ್ಲಿ ಯಾವ ಪದಕ್ಕೂ ಎಣಿಕೆಪದಗಳನ್ನು ನೇರವಾಗಿ ಸೇರಿಸಲು ಬರುವುದಿಲ್ಲ; ಒಂದು ಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತು ಎಂತಹದು ಎಂಬುದನ್ನು ಅಡಕವಾಗಿ ತಿಳಿಸುವ ಪದವನ್ನು ಅದಕ್ಕೆ ಮೊದಲು ಸೇರಿಸಿ, ಆಮೇಲೆ ಎಣಿಕೆ ಪದಗಳನ್ನು ಸೇರಿಸಬೇಕಾಗುತ್ತದೆ.

ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬುಗಳ ನಡುವೆ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಎಣಿಕೆಯನ್ನು ಬಳಸುವಲ್ಲಿ ಮಾನವನು ಕಂಡುಕೊಂಡಿರುವ ಜಾಣ್ಮೆಯ ಹೊಲಬುಗಳೆಂದು ಹೇಳಬಹುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದ ಮತ್ತು ಅದರ ಹುರುಳು

ನುಡಿಯರಿಮೆಯ ಇಣುಕುನೋಟ – 27

ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.

ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.

ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.

ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.

ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.

ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.

ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.

ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.

ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಉಲಿ ಮಾರ‍್ಪಾಡಿನ ಗೆರೆಗಳು

ನುಡಿಯರಿಮೆಯ ಇಣುಕುನೋಟ – 26

ಕನ್ನಡ ನುಡಿ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿದೆಯೆಂಬುದು ನಮಗೆಲ್ಲ ಗೊತ್ತಿದೆ. ಮಯ್ಸೂರಿನವರ ಕನ್ನಡ ಒಂದು ತರವಾದರೆ ಮಂಗಳೂರಿನವರದು ಇನ್ನೊಂದು ತರ, ಮತ್ತು ದಾರವಾಡದವರದು ಮತ್ತೊಂದು ತರ. ಇಶ್ಟೇ ಅಲ್ಲ, ಮಯ್ಸೂರಿನಂತಹ ಒಂದೇ ಜಿಲ್ಲೆಯಲ್ಲೂ ಎಲ್ಲಾ ಕಡೆ ಒಂದೇ ರೀತಿಯ ಕನ್ನಡ ಬಳಕೆಯಲ್ಲಿಲ್ಲ. ಕೊಳ್ಳೇಗಾಲದ ಕನ್ನಡಕ್ಕೂ ನಂಜನಗೂಡಿನ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ, ಮತ್ತು ಹೆಗ್ಗಡದೇವನ ಕೋಟೆಯ ಕನ್ನಡಕ್ಕೂ ಕೆ. ಆರ್. ನಗರದ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಇದಲ್ಲದೆ, ಒಂದೇ ಹಳ್ಳಿಯಲ್ಲಿ ವಾಸಿಸುವ ಜನರಲ್ಲೂ ಬ್ರಾಹ್ಮಣರ ಕನ್ನಡ, ಒಕ್ಕಲಿಗರ ಕನ್ನಡ, ಆದಿಕರ‍್ನಾಟಕರ ಕನ್ನಡ ಎಂದೆಲ್ಲಾ ವ್ಯತ್ಯಾಸಗಳು ಕಾಣಿಸುತ್ತವೆ. ಆಡುಗನ್ನಡದಲ್ಲಿ ಇಂತಹ ಹಲವು ವ್ಯತ್ಯಾಸಗಳಿವೆಯೆಂಬುದನ್ನು ನಾವೆಲ್ಲ ತಿಳಿದಿರುವೆವಾದರೂ ಈ ವ್ಯತ್ಯಾಸಗಳು ನಿಜಕ್ಕೂ ಎಂತಹವು ಎಂಬುದನ್ನು ಇದುವರೆಗೆ ಯಾರೂ ಸರಿಯಾಗಿ ಮತ್ತು ವಿವರವಾಗಿ ತಿಳಿದುಕೊಳ್ಳಲು ಹೋಗಿಲ್ಲ. ಹಾಗೆ ತಿಳಿಯಲು ಹೋದಲ್ಲಿ, ಅವುಗಳ ಹಿಂದೆ ಹಲವಾರು ಕಟ್ಟುನಿಟ್ಟಾದ ಕಟ್ಟಲೆಗಳೇ ಅಡಗಿವೆ ಎಂಬುದರ ಅರಿವು ನಮಗಾಗದಿರದು.

ಎತ್ತುಗೆಗಾಗಿ, ಮಯ್ಸೂರಿನವರು ಮನೆ ಎನ್ನುವರಾದರೆ, ದಾರವಾಡದವರು ಮನಿ ಎನ್ನುತ್ತಾರೆ; ಮಯ್ಸೂರಿನ ಹಣೆ ದಾರವಾಡದಲ್ಲಿ ಹಣಿಯಾಗುತ್ತದೆ; ಕೆರೆ ಎಂಬುದು ಕೆರಿಯಾಗುತ್ತದೆ, ಗೆರೆ ಎಂಬುದು ಗೆರಿಯಾಗುತ್ತದೆ. ಎಕಾರದಲ್ಲಿ ಕೊನೆಗೊಳ್ಳುವ ಹೆಸರು(ನಾಮ)ಪದಗಳೆಲ್ಲ ದಾರವಾಡ ಕನ್ನಡದಲ್ಲಿ ಇಕಾರದಲ್ಲಿ ಕೊನೆಗೊಳ್ಳುತ್ತವೆ ಎಂಬ ಕಟ್ಟಲೆಯೊಂದು ಈ ವ್ಯತ್ಯಾಸದ ಹಿಂದೆ ಅಡಗಿದೆ. ಮಯ್ಸೂರು ಜಿಲ್ಲೆಯೊಳಗೇನೇ ಕೊಳ್ಳೇಗಾಲದಲ್ಲಿ ಬರೆ ಎಂದಿರುವುದು ನಂಜನಗೂಡಿನಲ್ಲಿ ಬರಿ ಎಂದಾಗುತ್ತದೆ, ಅಗೆ ಎಂಬುದು ಅಗಿಯಾಗುತ್ತದೆ, ಕರೆ ಎಂಬುದು ಕರಿಯಾಗುತ್ತದೆ, ಒಡೆ ಎಂಬುದು ಒಡಿಯಾಗುತ್ತದೆ. ಇದು ಅಂತಹದೇ ಇನ್ನೊಂದು ಮಾರ‍್ಪಾಡು.

ಆದರೆ ಈ ಮಾರ‍್ಪಾಡು ಎಕಾರದಲ್ಲಿ ಕೊನೆಗೊಳ್ಳುವ ಎಸಕ(ಕ್ರಿಯಾ)ಪದಗಳನ್ನು ಮಾತ್ರ ನಾಟುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು ಮಯ್ಸೂರಿನಲ್ಲಿ ಎಲ್ಲ ಕಡೆಗಳಲ್ಲೂ (ನಂಜನಗೂಡಿನಲ್ಲೂ) ಬದಲಾಗದೆ ಉಳಿದಿವೆ. ಇದಲ್ಲದೆ, ದಾರವಾಡ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಹಾಗೆ ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳೂ ಇಕಾರದಲ್ಲಿ ಕೊನೆಗೊಳ್ಳುವವುಗಳಾಗಿ ಮಾರ‍್ಪಟ್ಟಿವೆ. ಎಂದರೆ, ಹೆಸರುಪದಗಳ ಮಟ್ಟಿಗೆ ಕೊಳ್ಳೇಗಾಲದೊಂದಿಗೆ ಸೇರುವ ನಂಜನಗೂಡಿನ ಕನ್ನಡ ಎಸಕಪದಗಳ ಮಟ್ಟಿಗೆ ದಾರವಾಡ ಕನ್ನಡದೊಂದಿಗೆ ಸೇರುತ್ತದೆ.

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ಕಟ್ಟಲೆಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಎತ್ತುಗೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ಕಟ್ಟಲೆಯನ್ನು ಗಮನಿಸಬಹುದು. ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಎಂಬುದು ಅಂಬು ಎಂದಾಗುತ್ತದೆ, ಹಾವು ಎಂಬುದು ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಬಿದ್ದುಹೋಗಿವೆ ಎಂಬ ಕಟ್ಟಲೆ ಈ ವ್ಯತ್ಯಾಸದ ಹಿಂದೆ ಅಡಗಿದೆ.

ಹಕಾರ ಬಿದ್ದುಹೋಗುವ ಈ ಮಾರ‍್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಲಿಯುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿದೆ.

ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು ‘ಹಕಾರದ ಗೆರೆ’ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವ ದಿಕ್ಕಿಗಾಗಿ ಹಾಯ್ದೀತು.

ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಎತ್ತುಗೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ. ಆಡುನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಇಂತಹ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು.

ಯಾಕೆಂದರೆ, ಎರಡು ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ಕಟ್ಟಲೆಗಳೇ ಕಾಣಿಸುತ್ತವೆ. ಎತ್ತುಗೆಗಾಗಿ, ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ಕಟ್ಟಲೆ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ಕಟ್ಟಲೆಯ ಹಾಗೆಯೇ ಇದೆ.

ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳು ಪದಗಳ ವ್ಯತ್ಯಾಸಗಳಲ್ಲ, ಉಲಿಗಳ ವ್ಯತ್ಯಾಸಗಳು ಎಂಬುದನ್ನು ಗಮನಿಸುವುದು ಅವಶ್ಯ. ಪದಗಳ ಮೊದಲಿನ ಪಕಾರ ಹಕಾರವಾಗುವ ಕಟ್ಟಲೆ ಹಳೆಗನ್ನಡದಲ್ಲಿ ಅಂತಹ ಪಕಾರವಿರುವ ಎಲ್ಲಾ ಎಂದರೆ ಸಾವಿರಕ್ಕೂ ಹೆಚ್ಚು ಪದಗಳನ್ನು ಮಾರ‍್ಪಡಿಸಿದೆ. ಇವತ್ತು ಈ ಕಟ್ಟಲೆಗೆ ಹೊರಪಡಿಕೆಗಳಾಗಿ ಕಾಣಿಸುವ ಪಾಲು, ಪಾರೆ, ಪೂನು ಮೊದಲಾದ ಪದಗಳು ಹಿಂದಿನ ಬರಹಗಳಿಂದ ಇಲ್ಲವೇ ಮಾರ‍್ಪಡದ ಆಡುನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲದೆ ನಿಜಕ್ಕೂ ಆ ಕಟ್ಟಲೆಗೆ ಹೊರಪಡಿಕೆಗಳಲ್ಲ.

ಒಂದು ತಲೆಮಾರಿನ ಮಕ್ಕಳು ತಮ್ಮ ತಾಯ್ನುಡಿಯನ್ನು ತಮ್ಮದಾಗಿಸಿಕೊಳ್ಳುವ ಸಮಯದಲ್ಲಿ ಇಂತಹ ಮಾರ‍್ಪಾಡುಗಳು ಅವರು ಪಡೆಯುವ ಆಡುನುಡಿಯಲ್ಲಿ ನಡೆದುಹೋಗುತ್ತವೆಯೆಂದು ತೋರುತ್ತದೆ. ಈ ಮಕ್ಕಳ ನಡುವೆ ಯಾವ ರೀತಿಯ ಜಾತಿ, ಜಾಗ ಮೊದಲಾದ ಕಟ್ಟುಗಳಿದ್ದುವೋ ಅವು ಈ ಮಾರ‍್ಪಾಡುಗಳ ಹರವನ್ನು ನಿರ‍್ದರಿಸುತ್ತವೆ.

ನುಡಿಗಳಲ್ಲಿ ನಡೆಯುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳು ನುಡಿಗಳ ಹಿನ್ನಡವಳಿ(ಚರಿತ್ರೆ)ಯನ್ನು ತಿಳಿಯುವಲ್ಲಿ ಹೆಚ್ಚಿನ ನೆರವನ್ನು ನೀಡುತ್ತವೆ. ಒಂದು ಮೂಲ ನುಡಿಯಿಂದ ಹಲವಾರು ನುಡಿಗಳು ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರಾಗಿವೆ ಎಂಬುದನ್ನು ಮುಕ್ಯವಾಗಿ ಆ ನುಡಿಗಳಲ್ಲಿ ನಡೆದಿರುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳ ನೆರವಿನಿಂದ ತೀರ‍್ಮಾನಿಸಲಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಂಗಗಳು ಯಾಕೆ ಮಾತನಾಡಲಾರವು?

ನುಡಿಯರಿಮೆಯ ಇಣುಕುನೋಟ – 25

ಮಂಗಗಳಿಗೆ ಮಾತನ್ನು ಕಲಿಸಬೇಕೆಂದು ಪ್ರಯತ್ನಿಸುವವರು ಅದಕ್ಕಾಗಿ ಉಲಿಗಳನ್ನು ಬಳಸುವುದಿಲ್ಲ. ಯಾಕೆಂದರೆ, ಮಂಗಗಳು ಎರಡು ಮೂರು ಉಲಿಗಳನ್ನಶ್ಟೇ ಉಲಿಯಬಲ್ಲುವು. ಆದರೆ, ಒಂದು ನುಡಿಯಲ್ಲಿ ಮಾತನಾಡಬೇಕೆಂದಿದ್ದಲ್ಲಿ, ಅದಕ್ಕಾಗಿ ಹಲವಾರು ಉಲಿಗಳನ್ನು ಉಲಿಯಲು ತಿಳಿದಿರಬೇಕಾಗುತ್ತದೆ. ಎತ್ತುಗೆಗಾಗಿ, ಕನ್ನಡದಲ್ಲಿ ನುಡಿಯಲು ಹೆಚ್ಚುಕಡಿಮೆ ಮೂವತ್ತೊಂದು ಉಲಿಗಳು ಬೇಕಾಗುತ್ತವೆ. ಹಾಗಾಗಿ, ಮಂಗಗಳಿಗೆ ಮಾತನ್ನು ಕಲಿಸುವವರು ಉಲಿಗಳ ಬದಲು ಸನ್ನೆಗಳನ್ನು ಬಳಸಬೇಕಾಗಿದೆ.

ನಮಗಿರುವಂತಹ ನೂರಾರು ಉಲಿಗಳನ್ನು ಉಲಿಯುವ ಅಳವು ಮಂಗಗಳಿಗಿಲ್ಲದಿರಲು ನಮ್ಮ ಬಾಯಿಯ ರಚನೆಗೂ ಮಂಗಗಳ ಬಾಯಿಯ ರಚನೆಗೂ ನಡುವಿರುವ ವ್ಯತ್ಯಾಸವೇ ಮುಕ್ಯ ಕಾರಣ. ಮಂಗಗಳ ಬಾಯಿಯ ಬುಡದಲ್ಲೇನೇ ದಪ್ಪವಾದ ಎಲುಬಿರುವ ಎಪಿಗ್ಲೋಟಿಸ್ ಎಂಬ ಅಂಗವಿದೆ. ಮೂಗಿನಿಂದ ಶ್ವಾಸಕೋಶದೊಳಕ್ಕೆ ಉಸಿರು ನೇರವಾಗಿ ಹೋಗುವಂತೆ ಇದು ನೋಡಿಕೊಳ್ಳುತ್ತದೆ; ತಿನ್ನುವ ಸಮಯದಲ್ಲಿ ಈ ಅಂಗ ಉಸಿರಿನ ನಾಳವನ್ನು ಪೂರ‍್ತಿ ಮುಚ್ಚಿಬಿಡುತ್ತದೆ, ಮತ್ತು ತಿಂದ ತಿಂಡಿ ನೇರವಾಗಿ ಹೊಟ್ಟೆಗೆ ಹೋಗುವಂತೆ ಮಾಡುತ್ತದೆ. ಆದರೆ, ನಮ್ಮ ಬಾಯಿಯಲ್ಲಿರುವ ಎಪಿಗ್ಲೋಟಿಸ್‌ಗೆ ಈ ಕಸುವಿಲ್ಲ. ಯಾಕೆಂದರೆ, ಅದರೊಳಗೆ ಮಂಗನ ಎಪಿಗ್ಲೋಟಿಸ್‌ನಲ್ಲಿರುವ ಹಾಗೆ ದಪ್ಪವಾದ ಎಲುಬಿಲ್ಲ.

ಇದಲ್ಲದೆ, ಈ ಅಂಗ ನಮ್ಮ ಗಂಟಲಿನಲ್ಲಿ ಬಹಳ ಕೆಳಗೆ ಉಲಿಪೆಟ್ಟಿಗೆಯ ಹತ್ತಿರ ಇದೆ. ಈ ಕಾರಣಕ್ಕಾಗಿ, ಕೆಲವೊಮ್ಮೆ ನಾವು ತಿಂದ ತಿಂಡಿ ನೇರವಾಗಿ ಹೊಟ್ಟೆಯೊಳಕ್ಕೆ ಹೋಗುವ ಬದಲು ಉಲಿಪೆಟ್ಟಿಗೆಯಿರುವಲ್ಲಿಗೆ ಹೋಗಿ ನಮಗೆ ಉಸಿರುಕಟ್ಟಿದ ಹಾಗಾಗುತ್ತದೆ. ಇದರಿಂದಾಗಿ ಕೆಲವು ಮಂದಿ ಸತ್ತು ಹೋಗುವುದೂ ಇದೆ. ಮಾತಿಗೆ ಬೇಕಾಗುವ ಹಲವಾರು ಉಲಿಗಳನ್ನು ಉಂಟುಮಾಡಲು ಬಾಯಿಯಲ್ಲಿ ಹೆಚ್ಚು ಜಾಗ ಬೇಕಾಗುತ್ತದೆಯೆಂಬ ಒಂದೇ ಕಾರಣಕ್ಕಾಗಿ, ಹೀಗೆ ನಮ್ಮ ಬಾಯಿಯಲ್ಲಿ ಉಸಿರುನಾಳ ಮತ್ತು ಆಹಾರನಾಳಗಳನ್ನು ಬೇರ‍್ಪಡಿಸುವ ಜಾಗ ತುಂಬಾ ಅಪಾಯಕರವಾದ ರೀತಿಯಲ್ಲಿ ರಚಿತವಾಗಿದೆ.

ಉಲಿಗಳ ಬದಲು ಕಯ್ಸನ್ನೆ, ಕಣ್ಣುಸನ್ನೆ ಮೊದಲಾದವುಗಳನ್ನು ಬಳಸಿಯೂ ‘ಮಾತ’ನಾಡಲು ಬರುತ್ತದೆ ಎಂಬುದನ್ನು ಕಿವುಡರ ಸನ್ನೆನುಡಿ ತೋರಿಸಿಕೊಟ್ಟಿದೆ; ಮಂಗಗಳು ಇಂತಹ ಸನ್ನೆಗಳನ್ನು ಬಳಸಬಲ್ಲುವಾದರೂ ಬೇರೆ ಕೆಲವು ಕಾರಣಗಳಿಗಾಗಿ ಅವಕ್ಕೆ ನಮ್ಮ ಹಾಗೆ ಮಾತನ್ನು ಇಲ್ಲವೇ ನುಡಿಯನ್ನು ಬಳಸಲು ಸಾದ್ಯವಾಗದು. ಎತ್ತುಗೆಗಾಗಿ, ಮಾತನ್ನು ಮತ್ತು ಅದಕ್ಕೆ ಬೇಕಾಗುವ ಸಾವಿರಾರು ಪದಗಳನ್ನು ಮತ್ತು ಸೊಲ್ಲರಿಮೆಯ ಕಟ್ಟಲೆಗಳನ್ನು ಇರಿಸಿಕೊಳ್ಳಲು, ಮತ್ತು ಬೇಕಾದಾಗ ಬೇಕಾದಂತೆ ಅವನ್ನು ಬಳಸಿಕೊಳ್ಳಲು ಮಿದುಳು ಸಾಕಶ್ಟು ದೊಡ್ಡದಾಗಿರಬೇಕಾಗುತ್ತದೆ; ಆದರೆ, ಮಂಗಗಳಿಗಿರುವ ಮಿದುಳು ನಮ್ಮ ಮಿದುಳಿನ ಕಾಲಂಶದಶ್ಟೂ ಇಲ್ಲ.

ಮಾನವನಿಗೂ ಇತರ ಪ್ರಾಣಿಗಳಿಗೂ ನಡುವೆ ಒಂದು ಮಾತನ್ನು ಯಾವಾಗ ಮತ್ತು ಎಲ್ಲಿ ಬಳಸಲು ಸಾದ್ಯ ಎಂಬ ವಿಶಯದಲ್ಲಿ ದೊಡ್ಡ ವ್ಯತ್ಯಾಸವಿದೆ. ಶಾಲೆಯಿಂದ ಬಂದ ಹುಡುಗ ಆವತ್ತು ಶಾಲೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ತನ್ನ ತಾಯಿಗೆ ಹೇಳಬಲ್ಲ; ಮಾರನೆಯ ದಿವಸ ತನ್ನ ತರಗತಿಗೆ ಯಾರು ಬರಲಿದ್ದಾರೆ, ಅದಕ್ಕಾಗಿ ತಾನು ಏನು ಮಾಡಬೇಕು ಎಂಬುದನ್ನೂ ತಿಳಿಸಬಲ್ಲ; ತನ್ನ ಗೆಳೆಯ ಈಗ ತನ್ನ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂಬುದನ್ನೂ ಕಲ್ಪಿಸಿ ಹೇಳಬಲ್ಲ. ಬೇರೆ ಪ್ರಾಣಿಗಳು ಇದೊಂದನ್ನೂ ಮಾಡಲಾರವು.

ಬೆಕ್ಕು ಹಸಿವಾದಾಗ ಮಾತ್ರ ಮಿಯಾಂ ಎನ್ನಬಹುದಲ್ಲದೆ ತನಗೆ ಬೆಳಿಗ್ಗೆ ಹಸಿವಾಗಿತ್ತು ಎಂಬುದನ್ನು ಸೂಚಿಸಲಾರದು. ಜೇನುಹುಳುಗಳು ಮಾತ್ರ ಇದಕ್ಕೆ ಸ್ವಲ್ಪಮಟ್ಟಿಗಿನ ಹೊರಪಡಿಕೆಗಳಾಗಿವೆಯೆಂದು ಹೇಳಬಹುದು; ಅವು ತುಂಬಾ ಹೂಬಿಟ್ಟಿರುವ ಮರವೊಂದನ್ನು ನೋಡಿ ಗೂಡಿಗೆ ಮರಳಿ ಬಂದ ಮೇಲೆ ಅದು ಎಲ್ಲಿದೆಯೆಂಬುದನ್ನು ಉಳಿದ ಜೇನುಹುಳುಗಳಿಗೆ ತಮ್ಮ ಕುಣಿತದ ಮೂಲಕ ತಿಳಿಸಬಲ್ಲುವು. ಆದರೆ, ಅವುಗಳ ಈ ಕಸುವಿಗೂ ಒಂದು ಮಿತಿಯಿದೆ: ಅವು ನಮ್ಮ ಹಾಗೆ ಮುಂದೆ ಏನು ನಡೆಯಬಹುದೆಂಬುದನ್ನು ಊಹಿಸಿ ತಿಳಿಸಲಾರವು.

ಮಾತನ್ನು ಬಳಸಲು ನಮಗೆ ಹೊರಗಿನ ಉತ್ತೇಜನ ಬೇಕಾಗಿಲ್ಲ. ಕೋಪ ಬರದಿದ್ದರೂ ಕೋಪದಿಂದ ಮಾತನಾಡಬಲ್ಲೆವು; ಹೋಳಿಗೆಯನ್ನು ತಿನ್ನದಿದ್ದರೂ ಅದರ ಸವಿಯನ್ನು ತಿಂದವನ ಹಾಗೆ ವರ‍್ಣಿಸಬಲ್ಲೆವು; ಸ್ವರ‍್ಗ ನರಕಗಳನ್ನು ಕಾಣದಿದ್ದರೂ ಅಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಬಲ್ಲೆವು. ಮಾನವನ ಮಾತಿನ ಬಳಕೆಯಲ್ಲಿ ಮಾತ್ರವೇ ಕಾಣಿಸುವ ಈ ಕಾಲ ಮತ್ತು ಜಾಗಗಳ ಕಟ್ಟಿಲ್ಲದಿರುವಿಕೆ ಅವನ ಮಾತಿಗೆ ಒಂದು ದೊಡ್ಡ ಕಸುವನ್ನು ತಂದುಕೊಟ್ಟಿದೆ. ನಮ್ಮ ಇಡೀ ಸಂಸ್ಕ್ರುತಿಯೇ ಈ ಕಸುವನ್ನು ಅವಲಂಬಿಸಿದೆ. ಅದಿಲ್ಲದೆ ನಾವು ಯಾವ ಸಂಶೋದನೆಯನ್ನೂ ಮಾಡಲಾರೆವು; ಸಾಹಿತ್ಯ, ನಾಟಕ, ಸಿನೆಮಾ, ಮೊದಲಾದ ನಮ್ಮ ಸಂಸ್ಕ್ರುತಿಯ ಯಾವ ಅಂಶವೂ ಅದಿಲ್ಲದೆ ಬೆಳೆದಿರಲಾರದು.

ಸಾಮಾನ್ಯವಾಗಿ, ನಾವು ನಡೆಸುವ ಹಲವಾರು ಬಗೆಯ ಕೆಲಸಗಳ ಕುರಿತಾಗಿರುವ ತಿಳುವಳಿಕೆಗಳು ನಮ್ಮ ಮಿದುಳಿನಲ್ಲಿ ಅರಿವಿಗೆ ಬಾರದ ರೂಪದಲ್ಲಿರುತ್ತವೆ. ಅವು ಎಂತಹವೆಂದು ನಮಗೆ ತಿಳಿಯದಿದ್ದರೂ ನಮ್ಮ ಕೆಲಸಗಳ ಮೇಲೆ ಅವುಗಳ ಕಯ್ವಾಡವಿದ್ದೇ ಇರುತ್ತದೆ. ಇಂತಹ ತಿಳುವಳಿಕೆಗಳಲ್ಲಿ ಹಲವನ್ನು ನಾವು ನಮ್ಮ ಅರಿವಿಗೆ ಬರುವಂತೆ ಮಾಡಬಲ್ಲೆವು, ಮತ್ತು ಮಾತಿನ ಮೂಲಕ ವಿವರಿಸಬಲ್ಲೆವು; ಆದರೆ ಬೇರೆ ಪ್ರಾಣಿಗಳು ಹಾಗೆ ಮಾಡಲಾರವು ಎಂಬುದು ಅವನ್ನು ನಮ್ಮಿಂದ ಬೇರ‍್ಪಡಿಸುವ ಇನ್ನೊಂದು ದೊಡ್ಡ ಪರಿಚೆಯಾಗಿದೆ.

ಈ ಪರಿಚೆ ನಮ್ಮ ಮಾತಿಗೆ ಒಂದು ದೊಡ್ಡ ಕಸುವನ್ನೂ ತಂದುಕೊಟ್ಟಿದೆ. ಎತ್ತುಗೆಗಾಗಿ, ಮನಸ್ಸಿಗೆ ಬಂದುದನ್ನು ನಾವು ಬರಬರನೆ ಉಸಿರಬಲ್ಲೆವು; ಇಲ್ಲವೇ ಅದನ್ನು ಮೊದಲಿಗೆ ನಮ್ಮ ಅರಿವಿಗೆ ತಂದುಕೊಂಡು, ಕೇಳುಗನ ಮೇಲೆ ಅದು ಎಂತಹ ಪರಿಣಾಮವನ್ನು ಬೀರಬಹುದು ಎಂಬುದನ್ನು ಆಲೋಚಿಸಿ, ಅನಂತರ ಅದನ್ನು ಆತನಿಗೆ ತಿಳಿಸಬಲ್ಲೆವು; ಇಲ್ಲವೇ ತಿಳಿಸದೆಯೂ ಇರಬಲ್ಲೆವು.

ಇತರ ಕೆಲಸಗಳಲ್ಲೂ ನಮ್ಮ ತಿಳುವಳಿಕೆಯನ್ನು ಅರಿವಿಗೆ ಬರುವಂತೆ ಮಾಡುವ ಮೂಲಕ ಆ ಕೆಲಸ ಮಾಡುವ ಕ್ರಮವನ್ನು ನಾವು ಹಲವು ರೀತಿಯಲ್ಲಿ ಬದಲಿಸಿನೋಡಬಲ್ಲೆವು ಮತ್ತು ಅದನ್ನು ಮಾಡಲು ಹೊಸ ಹೊಸ ಹೊಲಬುಗಳನ್ನು ಕಂಡುಹಿಡಿಯಬಲ್ಲೆವು. ಎತ್ತುಗೆಗಾಗಿ, ಕಣ್ಣಿನಿಂದ ಕಾಣಲು ಕಣ್ಣಿನ ಮಸೂರವನ್ನು ಹೇಗೆ ಹಿಗ್ಗಿಸುತ್ತೇವೆ ಇಲ್ಲವೇ ಕುಗ್ಗಿಸುತ್ತೇವೆ ಎಂಬುದನ್ನು ಅರಿವಿಗೆ ಎಟಕುವ ತಿಳುವಳಿಕೆಯಾಗಿ ಬದಲಿಸಿರುವ ಕಾರಣ, ಕಣ್ಣಿನ ದೋಶವನ್ನು ನಿವಾರಿಸುವುದಕ್ಕಾಗಿ ಕನ್ನಡಕವನ್ನು ಬಳಸುವ ಹೊಲಬನ್ನು ಕಂಡುಹಿಡಿಯಲು ನಮಗೆ ಸಾದ್ಯವಾಗಿದೆ.

ನಮ್ಮ ಮಾತಿನ ಬಳಕೆಯಲ್ಲೂ ಈ ಪರಿಚೆಯ ನೆರವಿನಿಂದ ಹಲವಾರು ಬಗೆಯ ಬದಲಾವಣೆಗಳನ್ನು ನಾವು ನಮ್ಮ ಜೀವನದಲ್ಲಿ ಮಾಡಿಕೊಂಡಿದ್ದೇವೆ. ಎತ್ತುಗೆಗಾಗಿ, ಈ  ಪರಿಚೆಯಿಲ್ಲದಿದ್ದಲ್ಲಿ ಮಾತನ್ನು ನಮಗೆ ಬರಹ ರೂಪಕ್ಕಿಳಿಸಲು ಆಗುತ್ತಿರಲಿಲ್ಲ. ನಮ್ಮ ನುಡಿಯಲ್ಲಿ ಬೇರೆ ಬೇರೆ ರೀತಿಯ ಅರಿಮೆಗಳ (ಶಾಸ್ತ್ರ ಮತ್ತು ವಿಜ್ನಾನಗಳ) ಬೆಳವಣಿಗೆಗಳುಂಟಾಗುವುದಕ್ಕೂ ಈ ಪರಿಚೆಯೇ ಕಾರಣ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಕಿವುಡರ ಸನ್ನೆನುಡಿಯೂ ಒಂದು ನುಡಿಯೇ

ನುಡಿಯರಿಮೆಯ ಇಣುಕುನೋಟ – 24

ನಾವು ಮಾತನಾಡುವಾಗ ಉಲಿಗಳನ್ನು ಬಳಸುತ್ತೇವೆ. ಈ ಉಲಿಗಳು ಕಿವುಡರಿಗೆ ಕೇಳಿಸುವುದಿಲ್ಲವಾದ ಕಾರಣ, ಕಿವುಡರಾಗಿರುವ ಚಿಕ್ಕ ಮಕ್ಕಳು ಉಲಿಗಳಿರುವ ಮಾತುಗಳನ್ನು ಕಲಿಯಲಾರರು. ಹಾಗಾಗಿ, ದೊಡ್ಡವರಾಗುತ್ತಿರುವಂತೆ ಅಂತಹ ಮಾತುಗಳನ್ನು ಬಳಸಲೂ ಅವರಿಗೆ ಸಾದ್ಯವಾಗುವುದಿಲ್ಲ. ಹೆಚ್ಚು ಕಿವುಡಿಲ್ಲದ ಮಕ್ಕಳಿಗೆ ಚಿಕ್ಕಂದಿನಲ್ಲೇನೇ ಕೇಳಿಸುವ ಉಪಕರಣವನ್ನು ತೊಡಿಸಿದಲ್ಲಿ ಅವರೂ ಇತರ ಮಕ್ಕಳ ಹಾಗೆ ಮಾತನಾಡಲು ಕಲಿಯಬಲ್ಲರು. ಆದರೆ ಏನೂ ಕೇಳಿಸದ ಮಕ್ಕಳಿಗೆ ಹೀಗೆ ಮಾಡಲು ಸಾದ್ಯವಾಗುವುದಿಲ್ಲ. ಹೀಗಿದ್ದರೂ, ಅಂತಹ ಮಕ್ಕಳಿಗೆ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಮಾತನ್ನು ಕಲಿಸಿದಲ್ಲಿ ಅವರು ಅದನ್ನು ಕಲಿಯಬಲ್ಲರು. ಈ ರೀತಿ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಕಿವುಡರ ನುಡಿಯನ್ನು ಸನ್ನೆನುಡಿಯೆಂದು ಕರೆಯಬಹುದು.

ಕಿವುಡರ ಈ ಸನ್ನೆನುಡಿ ನಾವಾಡುವ ಉಲಿನುಡಿಗಿಂತ ಒಂದು ಮುಕ್ಯವಾದ ವಿಶಯದಲ್ಲಿ ಬೇರಾಗಿದೆ. ಅದು ಕಣ್ಣಿಗೆ ಕಾಣಿಸುವ ಸನ್ನೆಗಳ ನುಡಿಯಾದ ಕಾರಣ, ಅದರಲ್ಲಿ ಒಂದೇ ಬಾರಿಗೆ ಕಯ್ಸನ್ನೆ, ಕಣ್ಣುಸನ್ನೆ, ಹುಬ್ಬುಗಳ ಕುಣಿತ, ತುಟಿಗಳ ಚಲನೆ, ನಿಲ್ಲುವ ಕ್ರಮ ಮೊದಲಾದ ಹಲವು ಬಗೆಯ ಸನ್ನೆಗಳನ್ನು ಒಟ್ಟಾಗಿ ಬಳಸಿಕೊಳ್ಳಲಾಗುತ್ತದೆ. ನಮ್ಮ ಮಾತುಗಳಲ್ಲಿ ಬಳಕೆಯಾಗುವ ಉಲಿಗಳು ಒಂದರ ಅನಂತರ ಒಂದರಂತೆ ಬರಬಲ್ಲುವಲ್ಲದೆ ಹಾಗೆ ಒಟ್ಟಾಗಿ ಬರಲಾರವು. ಈ ವಿಶಯದಲ್ಲಿ ಸನ್ನೆನುಡಿಗೆ ಉಲಿನುಡಿಗಿಂತ ಹೆಚ್ಚಿನ ಕಸುವಿದೆ. ಆದರೆ, ಇನ್ನೊಂದು ವಿಶಯದಲ್ಲಿ ಉಲಿನುಡಿಗೇನೇ ಹೆಚ್ಚಿನ ಕಸುವಿದೆ; ಸನ್ನೆನುಡಿಯಲ್ಲಿ ಒಬ್ಬರು ನುಡಿದ ಮಾತನ್ನು ಇನ್ನೊಬ್ಬರು ತಿಳಿಯಬೇಕಿದ್ದಲ್ಲಿ ಅವರಿಬ್ಬರೂ ಎದುರೆದುರಿಗೇನೇ ಇರಬೇಕಾಗುತ್ತದೆ; ಆದರೆ, ಉಲಿನುಡಿಯಲ್ಲಿ ಆ ರೀತಿ ಎದುರೆದುರಿಗಿರಬೇಕಾಗಿಲ್ಲ.

ಈ ಎರಡು ವಿಶಯಗಳನ್ನು ಹೊರತುಪಡಿಸಿ, ಬೇರೆಲ್ಲಾ ವಿಶಯಗಳಲ್ಲೂ ಕಿವುಡರ ಸನ್ನೆನುಡಿಗೆ ಕಿವಿ ಕೇಳುವವರ ಉಲಿನುಡಿಯಂತಹದೇ ಕಸುವಿದೆ. ಅದರಲ್ಲಿ ಬಳಕೆಯಾಗುವ ಸನ್ನೆಗಳಿಗೆ ಉಲಿನುಡಿಯ ಉಲಿಗಳ ಹಾಗೆ ನೇರವಾದ ಅರ‍್ತವಿರುವುದಿಲ್ಲ, ಮತ್ತು ಅಂತಹ ಅರ‍್ತವಿಲ್ಲದ ಸನ್ನೆಗಳ ಮೂಲಕ ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಸಾವಿರಾರು ಅರ‍್ತವಿರುವ ಪದಗಳನ್ನು ರಚಿಸಿಕೊಳ್ಳಲಾಗುತ್ತದೆ. ಇದಲ್ಲದೆ, ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಬಹಳ ಸಿಕ್ಕಲು ಸಿಕ್ಕಲಾದ ನೂರಾರು ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಲಾಗುತ್ತದೆ. ಅವುಗಳ ಮೂಲಕ ಎಂತಹ ವಿಶಯವನ್ನು ಬೇಕಿದ್ದರೂ ಸನ್ನೆನುಡಿಯಲ್ಲಿ ತಿಳಿಸಿ ಹೇಳಲು ಬರುತ್ತದೆ.

ಆದರೆ ಒಂದೇ ಸಮಾಜದಲ್ಲಿ ಬಳಕೆಯಾಗುವ ಉಲಿನುಡಿಯ ಕಟ್ಟಲೆಗಳಿಗೂ ಸನ್ನೆನುಡಿಯ ಕಟ್ಟಲೆಗಳಿಗೂ ನಡುವೆ ಯಾವ ಸಂಬಂದವೂ ಇರುವುದಿಲ್ಲ. ಅವೆರಡು ಒಂದಕ್ಕಿಂತ ಒಂದು ತೀರಾ ಬೇರಾಗಿರುತ್ತವೆ. ಎತ್ತುಗೆಗಾಗಿ, ಅಮೆರಿಕಾದ ಕಿವುಡರು ಬಳಸುವ ಸನ್ನೆನುಡಿಗಿರುವ ಸೊಲ್ಲರಿಮೆಯ ಕಟ್ಟಲೆಗಳು ಅಲ್ಲಿ ಇತರರು ಬಳಸುವ ಇಂಗ್ಲಿಶ್ ನುಡಿಯ ಕಟ್ಟಲೆಗಳಿಗಿಂತ ತೀರ ಬೇರಾಗಿವೆ. ಇಂಗ್ಲಿಶ್ ನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಹೆಚ್ಚು ಸಿಕ್ಕಲಾದ ರೂಪಾವಳಿಗಳಿಲ್ಲ. ಆದರೆ, ಅಮೆರಿಕಾದ ಸನ್ನೆನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಬಹಳ ಸಿಕ್ಕಲಾದ ರೂಪಾವಳಿಗಳಿವೆ. ಅವುಗಳಲ್ಲಿ ಬರುವ ಎಸಕ(ಕ್ರಿಯಾ)ಪದಗಳ ರೂಪಗಳಿಂದ ಒಂದು ಇಡೀ ಸೊಲ್ಲಿನಲ್ಲಿ ಬರುವ ವಿಶಯಗಳೆಲ್ಲವನ್ನೂ ಸೂಚಿಸಲು ಬರುತ್ತದೆ: ಒಂದು ಕೆಲಸವನ್ನು ಮಾಡಿದವನು, ಅದರಿಂದ ತೊಂದರೆಗೊಳಗಾದವನು, ಆ ಕೆಲಸಕ್ಕೆ ಬಳಸಿದ ವಸ್ತು, ಸಮಯ, ಜಾಗ ಮೊದಲಾದ ಹಲವು ವಿಶಯಗಳನ್ನು ಅಂತಹ ಒಂದೇ ಒಂದು ಎಸಕರೂಪದೊಳಗೆ ಹಿಡಿಸಲು ಬರುತ್ತದೆ.

ಇದಲ್ಲದೆ, ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳನ್ನು ಜೋಡಿಸಿ ಸೊಲ್ಲುಗಳನ್ನಾಗಿ ಮಾಡುವ ಬಗೆ ಇಂಗ್ಲಿಶ್ ನುಡಿ ಬಳಸುವ ಹೊಲಬಿಗಿಂತ ತೀರ ಬೇರಾಗಿದೆ: ಅದರಲ್ಲಿ ಒಂದು ವಿಶಯವನ್ನು ಮೊದಲು ತಿಳಿಸಿ, ಅದರ ಕುರಿತಾಗಿ ಹೇಳಬೇಕಾಗಿರುವುದನ್ನು ಆಮೇಲೆ ಹೇಳಲಾಗುತ್ತದೆ; ಎತ್ತುಗೆಗಾಗಿ, ಆ ನುಡಿಯ ಒಂದು ಸೊಲ್ಲು ‘ಮನೆ, ನಾನು ಹೋಗುತ್ತೇನೆ’ ಎಂದಿರಬಲ್ಲುದು, ಮತ್ತು ಇನ್ನೊಂದು ‘ಹಣ್ಣು, ನಾನು ತಿಂದಿದ್ದೇನೆ’ ಎಂದಿರಬಲ್ಲುದು. ಇವುಗಳಲ್ಲಿ ಯಾವುದರ ಕುರಿತಾಗಿ ಮಾತನಾಡಬೇಕಾಗಿದೆ ಎಂಬುದನ್ನು (‘ಮನೆ’ ಇಲ್ಲವೇ ‘ಹಣ್ಣು’ ಎಂಬುದನ್ನು) ಮೊದಲು ತಿಳಿಸಲಾಗಿದೆ, ಮತ್ತು ಆಮೇಲೆ ಅದರ ಕುರಿತಾಗಿ ಏನು ಹೇಳಬೇಕಾಗಿದೆಯೋ ಅದನ್ನು ಹೇಳಲಾಗಿದೆ.

ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳು ಸನ್ನೆರೂಪದಲ್ಲಿದ್ದು, ಅವುಗಳಿಗೆ ಸೇರಿಸಬೇಕಾಗಿರುವ ಒಟ್ಟು(ಪ್ರತ್ಯಯ)ಗಳು ಚಲನೆಗಳ ರೂಪದಲ್ಲಿರುತ್ತವೆ. ಅದರಲ್ಲಿ ಬಳಕೆಯಾಗುವ ಕಟ್ಟಲೆಗಳು ಆ ದೇಶದ ಬುಡಕಟ್ಟಿನ ಜನಾಂಗಗಳಲ್ಲಿ ಬಳಕೆಯಲ್ಲಿರುವ ಹೋಪಿ, ನವಹೋ ಮೊದಲಾದ ಕೆಲವು ಉಲಿನುಡಿಗಳ ಕಟ್ಟಲೆಗಳನ್ನು ಹೋಲುತ್ತವೆ. ಈ ಸನ್ನೆನುಡಿಯಲ್ಲಿ ಈಗಾಗಲೇ ಕತೆ, ಕವಿತೆ, ನಾಟಕ, ಪ್ರಬಂದ ಮೊದಲಾದುವನ್ನು ರಚಿಸಲಾಗಿದೆ. ಕಣ್ಣಿಗೆ ಕಾಣಿಸುವಂತಹ ಕಯ್ಸನ್ನೆ, ಕಯ್ಯ ಚಲನೆ, ಹುಬ್ಬಿನ ಕುಣಿತ, ಮೋರೆಯಲ್ಲಿ ಕಾಣಿಸುವ ಅನಿಸಿಕೆಗಳು ಮೊದಲಾದ ಉಲಿನುಡಿಗಳಿಗಿಂತ ತೀರ ಬೇರಾಗಿರುವ ಅಂಶಗಳನ್ನು ಈ ನುಡಿಗಳು ಬಳಸುವುವಾದ ಕಾರಣ, ಸಾಹಿತ್ಯ ರಚನೆಯಲ್ಲಿ ಅವುಗಳಿಗಿರುವ ಕಸುವು ಉಲಿನುಡಿಗಳ ಕಸುವಿಗಿಂತ ತೀರ ಬೇರಾದುದಾಗಿದೆ.

ಎಲ್ಲಾ ಸಮಾಜಗಳಲ್ಲಿರುವ ಕಿವುಡರೂ ಸನ್ನೆನುಡಿಯನ್ನು ಬಳಸಲು ಕಲಿತಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಆ ರೀತಿ ಕಲಿಯಲು ಹಲವು ಮಂದಿ ಕಿವುಡು ಮಕ್ಕಳು ಚಿಕ್ಕಂದಿನಲ್ಲಿ ಒಟ್ಟಿಗೆ ವಾಸಿಸುತ್ತಿರುವುದು ಅವಶ್ಯ. ಬೇರೆ ಬೇರಾಗಿ ಉಲಿನುಡಿಯನ್ನು ಬಳಸುವ ತಾಯಿತಂದೆಯರೊಂದಿಗೆ ಮತ್ತು ಒಡಹುಟ್ಟಿದವರೊಂದಿಗೆ ಬೆಳೆಯುವ ಕಿವುಡು ಮಗುವಿಗೆ ಸನ್ನೆನುಡಿಯನ್ನು ಕಲಿಯಲು ಸಂದರ‍್ಬವೇ ಸಿಗುವುದಿಲ್ಲ. ಕಿವುಡರಿಗೇನೇ ಬೇರೆ ಶಾಲೆಗಳನ್ನು ತೆರೆದು ಕಿವುಡು ಮಕ್ಕಳು ಚಿಕ್ಕಂದಿನಲ್ಲೇನೇ ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಮ್ಮೊಳಗೆ ಸನ್ನೆನುಡಿಯನ್ನು ಬಳಸಲು ಕಲಿತುಕೊಳ್ಳಬಲ್ಲರು ಮತ್ತು ಅದರ ಮೂಲಕ ಅವರ ಜೀವನ ಹೆಚ್ಚು ಅರ‍್ತವತ್ತಾಗಬಲ್ಲುದು.

ಚಿಕ್ಕಂದಿನಲ್ಲೇನೇ ಈ ರೀತಿ ಕಿವುಡು ಮಕ್ಕಳು ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಾವಾಗಿಯೇ ತಮಗೊಂದು ಸನ್ನೆನುಡಿಯನ್ನು ಉಂಟುಮಾಡಿಕೊಳ್ಳಬಲ್ಲರು ಎಂಬುದನ್ನು ನಿಕಾರಗುವಾದ ಕಿವುಡು ಮಕ್ಕಳು ತೋರಿಸಿಕೊಟ್ಟಿದ್ದಾರೆ. ಆ ನಾಡಿನಲ್ಲಿ ಒಂದು ಕಿವುಡು ಮಕ್ಕಳ ಶಾಲೆಯನ್ನು ೧೯೮೧ರಲ್ಲಿ ಹೊಸದಾಗಿ ತೆರೆಯಲಾಗಿತ್ತು; ಅಲ್ಲಿದ್ದ ದೊಡ್ಡ ಮಕ್ಕಳು ತಮ್ಮ ನಡುವೆ ಕೆಲವು ಸನ್ನೆಗಳನ್ನು ಬಳಸುತ್ತಿದ್ದರಾದರೂ ಅವುಗಳ ಹಿಂದೆ ನಿಶ್ಚಿತವಾದ ಕಟ್ಟಲೆಗಳಿರಲಿಲ್ಲ. ಹಾಗಾಗಿ, ಅದನ್ನೊಂದು ಸನ್ನೆನುಡಿ ಎನ್ನಲು ಬರುವಂತಿರಲಿಲ್ಲ.

ಅದರೆ, ಅವರೊಂದಿಗೆ ಬೆಳೆಯುತ್ತಿದ್ದ ಚಿಕ್ಕ ಮಕ್ಕಳು ದೊಡ್ಡವರು ಬಳಸುತ್ತಿದ್ದ ಸನ್ನೆಗಳನ್ನೇ ಬಳಸಿ ಹೊಸದಾದ ಮತ್ತು ಸಂಪೂರ‍್ಣವಾದ ಒಂದು ಸನ್ನೆನುಡಿಯನ್ನೇ ಉಂಟುಮಾಡಿಕೊಂಡಿದ್ದರು. ಈ ಚಿಕ್ಕ ಮಕ್ಕಳ ಸನ್ನೆನುಡಿಯನ್ನು ಪರಿಶೀಲಿಸಿದ ಅರಿವಿಗರು ನಿಜಕ್ಕೂ ದಂಗಾಗಿದ್ದಾರೆ. ದೊಡ್ಡ ಮಕ್ಕಳು ಬಳಸುತ್ತಿದ್ದ ಸನ್ನೆಗಳಲ್ಲಿಲ್ಲದಿದ್ದ ನೂರಾರು ಸಿಕ್ಕಲು ಸಿಕ್ಕಲಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಈ ಚಿಕ್ಕ ಮಕ್ಕಳು ಎಲ್ಲಿಂದ ಪಡೆದರು? ಹುಟ್ಟಿನಿಂದಲೇ ಮಕ್ಕಳು ಪಡೆದುಕೊಂಡು ಬರುವಂತಹ ‘ಮಾತು ಪಡೆಯುವ ಅಳವೇ’ ಅವರಿಗೆ ಈ ಸನ್ನೆನುಡಿಯನ್ನು ಹುಟ್ಟಿಸುವಲ್ಲಿ ನೆರವಾಗಿರಬೇಕು ಎಂಬ ತೀರ‍್ಮಾನಕ್ಕೆ ಅರಿವಿಗರು ಬರಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಕನ್ನಡ ನುಡಿ ಎಶ್ಟು ಹಳೆಯದು?

ನುಡಿಯರಿಮೆಯ ಇಣುಕುನೋಟ – 23

ಕನ್ನಡ ನುಡಿ ಎಶ್ಟು ಹಳೆಯದು ಎಂಬುದನ್ನು ತಿಳಿಯಲು ಹೆಚ್ಚಿನ ಅರಿವಿಗರೂ ಕನ್ನಡದ ಶಾಸನಗಳು ಇಲ್ಲವೇ ಕನ್ನಡ ಪದಗಳನ್ನು ಬಳಸಿರುವ ಪಳೆಯುಳಿಕೆಗಳು ಎಶ್ಟು ಹಳೆಯವು ಎಂಬುದನ್ನು ತಿಳಿಯಲು ಹೊರಡುತ್ತಾರೆ. ಆದರೆ, ಇಂತಹ ಪುರಾವೆಗಳು ಕನ್ನಡ ಬರಹ ಎಶ್ಟು ಹಳೆಯದು ಎಂಬುದನ್ನು ತಿಳಿಸಬಲ್ಲುವಲ್ಲದೆ ಕನ್ನಡ ನುಡಿ ಎಶ್ಟು ಹಳೆಯದು ಎಂಬುದನ್ನು ತಿಳಿಸಲಾರವು. ಯಾಕೆಂದರೆ, ಕನ್ನಡ ನುಡಿ ಎಂಬುದು ಮುಕ್ಯವಾಗಿ ಕನ್ನಡಿಗರ ಮಾತಲ್ಲದೆ ಬರಹವಲ್ಲ. ಎಲ್ಲಾ ನುಡಿಗಳಲ್ಲೂ ಮಾತು ಬರಹದಿಂದ ತುಂಬಾ ಹಿಂದೆಯೇ ಬಳಕೆಗೆ ಬಂದಿರುತ್ತದೆ. ಹಾಗಾಗಿ, ನಾವಿಲ್ಲಿ ಬರಹಕ್ಕಿಂತ ಬೇರಾಗಿರುವ ಪುರಾವೆಗಳನ್ನು ಹುಡುಕಿಹಿಡಿಯಬೇಕಾಗುತ್ತದೆ.

ನುಡಿಗಳ ಹುಟ್ಟು ಮನುಶ್ಯರ ಇಲ್ಲವೇ ಬೇರೆ ಉಸಿರಿಗಳ ಹುಟ್ಟಿಗಿಂತ ತೀರ ಬೇರಾದುದು: ಒಂದು ನುಡಿಯನ್ನಾಡುವ ಮಂದಿ ದೂರದ ಎರಡು ಊರುಗಳಲ್ಲಿ ನೆಲೆಸಿದಾಗ, ಅವರ ನಡುವೆ ಮೊದಲಿಗಿದ್ದ ಸಂಪರ‍್ಕ ಇಲ್ಲವಾಗುತ್ತದೆ, ಮತ್ತು ಇದರಿಂದಾಗಿ ಅವರಾಡುವ ನುಡಿಯಲ್ಲಿ ನಡೆಯುವ ಮಾರ‍್ಪಾಡುಗಳು ಒಂದೇ ಬಗೆಯವಾಗಿರುವುದಿಲ್ಲ. ಹಾಗಾಗಿ, ಸಮಯ ಕಳೆದಂತೆ ಅವರಾಡುವ ನುಡಿಗಳು ಬೇರಾಗುತ್ತಾ ಹೋಗುತ್ತವೆ, ಮತ್ತು ಕೊನೆಗೆ ಅವು ಎರಡು ಬೇರೆಯೇ ನುಡಿಗಳೆಂಬ ಅನಿಸಿಕೆಯನ್ನು ಕೊಡಲು ತೊಡಗುತ್ತವೆ.

ಒಂದು ನುಡಿ ಈ ರೀತಿ ಎರಡು ನುಡಿಗಳಾಗಿ ಕವಲೊಡೆದಾಗ, ಅವುಗಳಲ್ಲಿ ಯಾವುದು ಮೂಲ ನುಡಿ ಮತ್ತು ಯಾವುದು ಹೊಸದಾಗಿ ಹುಟ್ಟಿಕೊಂಡಿರುವ ನುಡಿ ಎಂದು ಬೇರ‍್ಪಡಿಸಿ ಹೇಳಲು ಬರುವುದಿಲ್ಲ. ಯಾಕೆಂದರೆ, ಮಾರ‍್ಪಾಡುಗಳು ಅವೆರಡರಲ್ಲೂ ನಡೆದಿರುತ್ತವೆ; ಒಂದರಲ್ಲಿ ನಡೆದ ಮಾರ‍್ಪಾಡುಗಳು ಇನ್ನೊಂದರಲ್ಲಿ ನಡೆದಿಲ್ಲವೆಂಬುದೇ ಅವೆರಡು ಬೇರೆ ಬೇರಾಗಿ ಕಾಣಿಸಿಕೊಳ್ಳಲು ಕಾರಣ. ಆದರೆ, ಇಂತಹ ಕಡೆಗಳಲ್ಲಿ ಒಂದು ಮೂಲ ನುಡಿ ಎರಡು ಹೊಸ ನುಡಿಗಳಾಗಿ ಕವಲೊಡೆದಿದೆಯೆಂದು ಹೇಳಲು ಬರುತ್ತದೆ, ಮತ್ತು ಎಶ್ಟು ಸಮಯಕ್ಕೆ ಹಿಂದೆ ಅವು ಆ ರೀತಿ ಕವಲೊಡೆದುವೋ ಅಶ್ಟು ಹಳೆಯವು ಆ ನುಡಿಗಳು ಎಂದು ತಿಳಿಯಲು ಬರುತ್ತದೆ.

ಕನ್ನಡ, ತಮಿಳು, ತೆಲುಗು, ಮಲಯಾಳ ಮೊದಲಾದ ಒಟ್ಟು ಸುಮಾರು ಇಪ್ಪತ್ತಯ್ದು ನುಡಿಗಳು ಮೂಲದ್ರಾವಿಡವೆಂಬ ಒಂದು ನುಡಿಯಿಂದ ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರೆ ನುಡಿಗಳಾಗಿ ಮಾರ‍್ಪಟ್ಟಿರಬೇಕು ಎಂಬುದನ್ನು ತಿಳಿದುಕೊಂಡಲ್ಲಿ, ಅವುಗಳಲ್ಲಿ ಕನ್ನಡ ಎಶ್ಟು ಹಿಂದೆ ಕವಲೊಡೆದಿದೆ ಎಂಬುದನ್ನು ತಿಳಿಯಲು ಬರುತ್ತದೆ.

ಮೂಲದ್ರಾವಿಡ ನುಡಿ ಮೊದಲಿಗೆ ತೆಂಕುದ್ರಾವಿಡ, ಬಡಗುದ್ರಾವಿಡ, ಮತ್ತು ನಡುದ್ರಾವಿಡ ಎಂಬ ಮೂರು ನುಡಿಗಳಾಗಿ ಕವಲೊಡೆದಿರಬೇಕು, ಮತ್ತು ಈ ಮೂರು ನುಡಿಗಳು ಆಮೇಲೆ ಬೇರೆ ಹಲವು ನುಡಿಗಳಾಗಿ ಕವಲೊಡೆಯುತ್ತಾ ಹೋಗಿ ಇವತ್ತಿನ ಇಪ್ಪತ್ತಯ್ದು ನುಡಿಗಳು ಬಳಕೆಗೆ ಬಂದಿರಬೇಕು ಎಂಬುದಾಗಿ ಕಲ್ಪಿಸಲಾಗಿದೆ. ಈ ಕಲ್ಪನೆಗೆ ಇವತ್ತಿನ ದ್ರಾವಿಡ ನುಡಿಗಳ ನಡುವೆ ಎಂತಹ ವ್ಯತ್ಯಾಸಗಳಿವೆ ಮತ್ತು ಎಶ್ಟು ವ್ಯತ್ಯಾಸಗಳಿವೆ ಎಂಬುದೇ ಆದಾರವಾಗಿರುತ್ತದೆ. ಎರಡು ನುಡಿಗಳ ನಡುವೆ ವ್ಯತ್ಯಾಸಗಳು ಹೆಚ್ಚಿದ್ದಶ್ಟೂ ಅವು ಕವಲೊಡೆದಿರುವ ಸಮಯ ಹೆಚ್ಚು ಹಿಂದಕ್ಕೆ ಹೋಗುತ್ತದೆ.

ದ್ರಾವಿಡ ನುಡಿಯ ಮೂರು ಕವಲುಗಳಲ್ಲಿ ಒಂದಾದ ತೆಂಕುದ್ರಾವಿಡ ನುಡಿ ಇವತ್ತು ಕನ್ನಡ, ತಮಿಳು, ಮಲಯಾಳ, ತುಳು, ಕೊಡಗು, ತೊದ, ಕೋತ ಮತ್ತು ಕೊರಗ ಎಂಬ ಒಟ್ಟು ಎಂಟು ಸ್ವತಂತ್ರ ನುಡಿಗಳಾಗಿ ಕವಲೊಡೆದಿದೆಯೆಂದು ಹೇಳಲಾಗುತ್ತದೆ; ಈ ಎಂಟು ನುಡಿಗಳಲ್ಲಿ, ಕೊರಗ ನುಡಿಯನ್ನು ಸದ್ಯಕ್ಕೆ ತೆಂಕುದ್ರಾವಿಡದಲ್ಲಿ ಗುಂಪಿಸಲಾಗಿದೆಯಾದರೂ, ನಿಜಕ್ಕೂ ಅದು ಯಾವ ರೀತಿಯಲ್ಲಿ ಉಳಿದ ನುಡಿಗಳೊಂದಿಗೆ ಸಂಬಂದಿಸಿದೆ ಎಂಬುದನ್ನು ಹೇಳಲು ಇನ್ನೂ ಸಾದ್ಯವಾಗಿಲ್ಲ. ಕೆಲವು ವಿಶಯಗಳಲ್ಲಿ ಅದು ಬಡಗುದ್ರಾವಿಡ ನುಡಿಗಳನ್ನು ಹೋಲುತ್ತಿರುವುದೇ ಇದಕ್ಕೆ ಕಾರಣ.

ಉಳಿದ ಏಳು ತೆಂಕುದ್ರಾವಿಡ ನುಡಿಗಳಲ್ಲಿ, ತುಳು ನುಡಿ ಮೊದಲಿಗೆ ಬೇರ‍್ಪಟ್ಟಿರಬೇಕು; ಯಾಕೆಂದರೆ, ಉಳಿದ ಎಲ್ಲಾ ತೆಂಕುದ್ರಾವಿಡ ನುಡಿಗಳಲ್ಲೂ ನಡೆದಿರುವ ಹಲವು ಮಾರ‍್ಪಾಡುಗಳು ತುಳುವಿನಲ್ಲಿ ನಡೆದಿಲ್ಲ. ಉಳಿದ ಆರು ತೆಂಕುದ್ರಾವಿಡ ನುಡಿಗಳಲ್ಲಿ ಮೊದಲಿಗೆ ಕವಲೊಡೆದು ಸ್ವತಂತ್ರ ನುಡಿಯೆನಿಸಿದುದು ಕನ್ನಡ ನುಡಿ. ಇದನ್ನೂ ಉಳಿದ ತೆಂಕುದ್ರಾವಿಡ ನುಡಿಗಳಲ್ಲಿ ನಡೆದಿರುವ, ಮತ್ತು ಕನ್ನಡದಲ್ಲಿ ನಡೆಯದಿರುವ (ಇಲ್ಲವೇ ಬೇರೆ ಬಗೆಯಲ್ಲಿ ನಡೆದಿರುವ) ಹಲವು ಮಾರ‍್ಪಾಡುಗಳ ಆದಾರದ ಮೇಲೆ ಹೇಳಲು ಬರುತ್ತದೆ.

ಇಂತಹ ಮಾರ‍್ಪಾಡುಗಳಲ್ಲಿ ಒಂದನ್ನು ಹಳೆಗನ್ನಡದ ಬೇಂಟೆ, ತೋಂಟ, ಎಂಟು, ತೆಂಕು ಮೊದಲಾದ ಪದಗಳನ್ನು ತಮಿಳಿನ ವೇಟ್ಟಯ್, ತೋಟ್ಟಮ್, ಎಟ್ಟು, ತೆಕ್ಕು ಮೊದಲಾದ ಪದಗಳೊಂದಿಗೆ ಹೋಲಿಸುವ ಮೂಲಕ ತಿಳಿಯಬಹುದು; ಇವುಗಳಲ್ಲಿ ಮೊದಲಿಗಿದ್ದ ಮೂಗುಲಿ(ಅನುನಾಸಿಕ)ಯನ್ನು ಕನ್ನಡ ಉಳಿಸಿಕೊಂಡಿದೆ; ಆದರೆ, ತಮಿಳು, ಕೊಡಗು (ಎಟ್ಟ್, ತೆಕ್ಕ್), ತೊದ ಮೊದಲಾದ ಉಳಿದ ನುಡಿಗಳು ಕಳೆದುಕೊಂಡಿವೆ. ಇನ್ನೊಂದು ವ್ಯತ್ಯಾಸವನ್ನು ಕನ್ನಡದ ಆಡಿದೆ, ನಂಬಿದೆ, ಕಟ್ಟಿದೆ, ಅಮುಕಿದೆ ಎಂಬ ಎಸಕ(ಕ್ರಿಯಾ)ರೂಪಗಳನ್ನು ತಮಿಳಿನ ಆಟಿನೇನ್, ನಂಪಿನೇನ್, ಕಟ್ಟಿನೇನ್, ಅಮುಕ್ಕಿನೇನ್ ಎಂಬವುಗಳೊಂದಿಗೆ ಹೋಲಿಸುವ ಮೂಲಕ ತಿಳಿಯಬಹುದು.

ಈ ರೂಪಗಳಲ್ಲಿ ಬಂದಿರುವ ಹಿಂಬೊತ್ತಿನ ಒಟ್ಟು (ಪ್ರತ್ಯಯ) ಕನ್ನಡದಲ್ಲಿ ನಕಾರವನ್ನು ಕಳೆದುಕೊಂಡಿದೆ; ಆದರೆ, ತಮಿಳು, ಕೊಡಗು, ತೊದ ಮೊದಲಾದ ಉಳಿದ ನುಡಿಗಳಲ್ಲಿ ಅದನ್ನು ಉಳಿಸಿಕೊಂಡಿದೆ. ಮತ್ತೊಂದು ವ್ಯತ್ಯಾಸವೆಂದರೆ, ತೆಂಕುದ್ರಾವಿಡದಲ್ಲಿದ್ದ ಅ ಮತ್ತು ಅಯ್‌ಗಳಲ್ಲಿ ಕೊನೆಗೊಳ್ಳುವ ಎರಡು ಬಗೆಯ ಎಸಕಪದಗಳು ಕನ್ನಡದಲ್ಲಿ ಒಂದೇ ಬಗೆಯವಾಗಿವೆ; ಕನ್ನಡದ ನಡೆದೆ ಮತ್ತು ತಡೆದೆ ಎಂಬ ರೂಪಗಳನ್ನು ತಮಿಳಿನ ನಟನ್ತೇನ್ ಮತ್ತು ತಟಯ್‌ನ್ತೇನ್ ಎಂಬ ರೂಪಗಳೊಂದಿಗೆ ಹೋಲಿಸಿನೋಡಿದಾಗ ಈ ವ್ಯತ್ಯಾಸ ಕಾಣಿಸುತ್ತದೆ. ಕೊಡಗು, ತೊದ ಮೊದಲಾದ ಉಳಿದ ನುಡಿಗಳೂ ಈ ವ್ಯತ್ಯಾಸವನ್ನು ತಮಿಳಿನ ಹಾಗೆ ಉಳಿಸಿಕೊಂಡಿವೆ.

ಉಳಿದ ಅಯ್ದು ತೆಂಕುದ್ರಾವಿಡ ನುಡಿಗಳಲ್ಲಿ ಮೊದಲಿಗೆ ಕೊಡಗು ನುಡಿ ಬೇರಾಗಿರಬೇಕು, ಮತ್ತು ಆಮೇಲೆ ತೊದ ಮತ್ತು ಕೋತ ನುಡಿಗಳು ಬೇರಾಗಿರಬೇಕು. ತಮಿಳು ಮತ್ತು ಮಲಯಾಳ ನುಡಿಗಳು ಮೂಲನುಡಿಯಿಂದ ಬೇರ‍್ಪಟ್ಟು ಸ್ವತಂತ್ರ ನುಡಿಗಳಾಗುವ ಮೊದಲೇ ಈ ಮೂರು ನುಡಿಗಳೂ ಬೇರ‍್ಪಟ್ಟಿರಬೇಕೆಂದು ಹೇಳುವುದಕ್ಕೆ ತಮಿಳು ಮತ್ತು ಮಲಯಾಳಗಳಲ್ಲಿ ನಡೆದ, ಮತ್ತು ಈ ಮೂರು ನುಡಿಗಳಲ್ಲಿ ನಡೆಯದಿದ್ದ (ಇಲ್ಲವೇ ಬೇರೆ ಬಗೆಯಲ್ಲಿ ನಡೆದ) ಹಲವು ಮಾರ‍್ಪಾಡುಗಳನ್ನು ಎತ್ತುಗೆಯಾಗಿ ಕೊಡಬಹುದು.

ಮೇಲೆ ಕೊಟ್ಟಿರುವ ವಿಶಯಗಳ ಮೇಲೆ, ತಮಿಳು ಬರಹ ಕನ್ನಡ ಬರಹದಿಂದ ಹಳೆಯದಾಗಿದೆಯಾದರೂ ತಮಿಳು ನುಡಿ ಕನ್ನಡ ನುಡಿಗಿಂತ ಹಳೆಯದಲ್ಲ; ಅದು ಸ್ವತಂತ್ರ ನುಡಿಯಾಗುವುದಕ್ಕಿಂತ (ಎಂದರೆ ಅದು ತನ್ನದೇ ಆದ ಪರಿಚೆಗಳನ್ನು ಪಡೆದುಕೊಳ್ಳುವುದಕ್ಕಿಂತ) ಎಶ್ಟೋ ಮೊದಲೇ ಕನ್ನಡ ನುಡಿ ಒಂದು ಸ್ವತಂತ್ರ ನುಡಿಯಾಗಿ ಬೇರ‍್ಪಟ್ಟಿತ್ತೆಂದು ಹೇಳಲು ಬರುತ್ತದೆ. ಆದರೆ, ಇದರಿಂದಾಗಿ ಕನ್ನಡಕ್ಕೊಂದು ‘ಮೇಲ್ತನ’ ದೊರೆತಿದೆಯೆಂದೇನೂ ನನಗೆ ಅನಿಸುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

1 2 3 4 5 6